ಪ್ರಸ್ತುತ ಕೊರೋನಾ ಎಂಬುದು ವಿಶ್ವದ ಬಹುತೇಕ ರಾಷ್ಟ್ರಗಳನ್ನು ಬಾಧಿಸಿದೆ. ಈ ಮಾರಣಾಂತಿಕ ವೈರಸ್ ಬಾಧಿತ ರಾಷ್ಟ್ರಗಳಲ್ಲಿ ಜನ ಸಾಲು ಸಾಲಾಗಿ ಸಾವನ್ನಪ್ಪಿದ್ದನ್ನು ಕಂಡಿದ್ದೇವೆ. ಇಂತಹ ಸುದ್ದಿಗಳನ್ನು ಕಳೆದ ಮೂರು ತಿಂಗಳಿನಿಂದ ಸಾಕಷ್ಟು ಕೇಳಿದ್ದೇವೆ.
ಆದರೆ, ಅಮೆರಿಕಾ, ಚೀನಾ, ಇಟಲಿ, ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್ ಅಷ್ಟೇ ಏಕೆ ತೀರಾ ಬಡ ಮತ್ತು ಹಿಂದುಳಿದ ಆಫ್ರಿಕಾ ಖಂಡದ ದೇಶಗಳಲ್ಲೂ ಸಹ ಓರ್ವ ವಲಸೆ ಕಾರ್ಮಿಕ ಊರಿಗೆ ಹೋಗಲು ನಡೆದೇ ಸತ್ತ ಸುದ್ದಿಯನ್ನು ಭಾಗಶಃ ಯಾರೂ ಕೇಳಿರಲಿಕ್ಕಿಲ್ಲವೇನೋ. ಆದರೆ, ಭಾರತ ಇಂತಹ ಸಾಲು ಸಾಲು ಸುದ್ದಿಯನ್ನೂ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಗೊಳಗಾಗುವಂತೆ ಮಾಡಿದ್ದು ಈ ದೇಶದ ಆಳುವ ವರ್ಗದ ಹೆಚ್ಚುಗಾರಿಕೆಯೇ ಸರಿ!
ನೋಟು ರದ್ದತಿ ಹೆಸರಿನಲ್ಲಿ ಸುಮಾರು 126ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದ್ದಾಗ ಈ ಪ್ರಭುತ್ವ ಅದೆಂತಹಾ ದಿವ್ಯ ಮೌನಕ್ಕೆ ಶರಣಾಗಿತ್ತೋ? ಅದೇ ಮೌನ ಕೊರೋನಾ ಕಾಲದಲ್ಲೂ ಮುಂದುವರೆದಿರುವುದು ದಿಟ. ಬಡ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಕನಿಷ್ಟ 60 ಕೋಟಿಯನ್ನು ಸಹಾ ಖರ್ಚು ಮಾಡಲಿಲ್ಲ.
ಆದರೆ, ಕಳೆದ ಮೂರು ತಿಂಗಳಿನಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾದ ವಿರೋಧ ಪಕ್ಷ ಕಾಂಗ್ರೆಸ್ ಮಾಡಿದ್ದಾದರೂ ಏನು? ಎಂಬ ಪ್ರಶ್ನೆ ಬಹು ಮುಖ್ಯವಾದದ್ದು. ಪ್ರಜಾಪ್ರಭುತ್ವದಲ್ಲಿ ಆಡಳಿತದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವಷ್ಟೇ ಉತ್ತರದಾಯಿಯಾದರೂ, ವಿರೋಧ ಪಕ್ಷದ ಪಾತ್ರವೂ ಮಹತ್ವದ್ದು ಎಂಬುದನ್ನು ಅಲ್ಲಗಳೆಯಲಾಗದು.
ಹಾಗೆ ನೋಡಿದರೆ ರಾಹುಲ್ ಗಾಂಧಿ ಫೆಬ್ರವರಿ ತಿಂಗಳಿಂದಲೇ ಕೊರೋನಾ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ನೀಡುತ್ತಾ ಬಂದಿದ್ದರು. ಒಮ್ಮೆ ಮಾತ್ರವಲ್ಲದೇ, ಮುಂದಿನ ದಿನಗಳು ಕಠೋರವಾಗಿರುತ್ತದೆ ಎಂದು ಸಾಕಷ್ಟು ಮುಂಚೆಯೇ ಹೇಳಿದ್ದರು. ಲಾಕ್ಡೌನ್ನ ನಂತರವೂ ಆರ್ಥಿಕತೆಯ ಕುರಿತು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಜೊತೆಗೆ ಚರ್ಚೆಗಳನ್ನು ನಡೆಸಿದರು. ಅಷ್ಟೇ ಅಲ್ಲ ವಲಸೆ ಕಾರ್ಮಿಕರ ಕುರಿತು ದ್ವನಿ ಎತ್ತಿದ್ದರು. ಆದರೆ, ಇದು ಎಷ್ಟು ಪರಿಣಾಮಕಾರಿ ಎಂದು ಅವಲೋಕಿಸಿದರೆ, ಸಿಗುವ ಉತ್ತರ ಶೂನ್ಯ.
ಕಾಂಗ್ರೆಸ್ನದ್ದು ಆರಂಭ ಶೂರತ್ವವೇ?
ಈ ಕುರಿತು ಫೆಬ್ರವರಿ 12ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, “ಕೊರೋನಾ ವೈರಸ್ ಭಾರತೀಯರಿಗೆ ಮತ್ತು ದೇಶದ ಆರ್ಥಿಕತೆಗೆ ಮಾರಕವಾಗುವ ಎಲ್ಲಾ ಸೂಚನೆಗಳನ್ನೂ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ಕುರಿತು ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ” ಎಂದು ಎಚ್ಚರಿಕೆ ನೀಡಿದ್ದರು.
ಆದರೆ, ಅದೇ ಫೆಬ್ರವರಿ ತಿಂಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂಬುದೇ ಭಾರತದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕೇಂದ್ರ ಸರ್ಕಾರದ ಹಾಗೂ ಕಮಲ ಪಾಳಯದಲ್ಲಿ ಅದು ಸಡಗರದ ವಿಚಾರವೂ ಆಗಿತ್ತು. ಅಮೆರಿಕದಲ್ಲಿ ಆಯೋಜಿಸಲಾಗಿದ್ದ ಹೌಡಿ-ಮೋದಿ ಕಾರ್ಯಕ್ರಮದಂತೆಯೇ ಫೆಬ್ರವರಿ 23ರಂದು ಗುಜರಾತ್ನ ಅಹಮದಾಬಾದ್ ನಗರದ ಮೊಟೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊರೋನಾ ಉಂಟು ಮಾಡಬಹುದಾಗಿದ್ದ ಭೀತಿ ಹಾಗೂ ರಾಹುಲ್ ಗಾಂಧಿ ಟ್ವೀಟ್ ಕುರಿತು ಕೇಂದ್ರ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ರಾಜ್ಯ ಸರ್ಕಾರಗಳಿಗೆ ಅದರ ಅಗತ್ಯ ಇರಲಿಲ್ಲ.
ಆದರೆ, ಮಾರ್ಚ್ ಅಂತ್ಯದ ವೇಳೆಗೆ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಿತ್ತು. ಕೋಟೆ ಕೊಳ್ಳೆ ಹೋದ ನಂತರ ದಿಡ್ಡಿ ಬಾಗಿಲು ಮುಚ್ಚಿದಂತೆ, ವಿಮಾನಗಳಲ್ಲಿ ಲಕ್ಷಾಂತರ ಜನರು ಇಳಿದು ಬಂದ ನಂತರ ವಿಮಾನನಿಲ್ದಾಣಗಳ ಲಾಕ್ಡೌನ್ ಘೋಷಣೆ ಮಾಡಿತ್ತು. ಆ ನಂತರವಾದರೂ ಕಾಂಗ್ರೆಸ್ ಪಕ್ಷಕ್ಕೆ ತಾನು ಎಂತಹ ಬಲಿಷ್ಠ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷ ಎಂಬುದನ್ನು ಸಾಬೀತು ಪಡಿಸಲು ಒಂದು ಅವಕಾಶವಿತ್ತು. ಆದರೆ, ಅದನ್ನೂ ಸಹ ಕಾಂಗ್ರೆಸ್ ಕಳೆದುಕೊಂಡದ್ದು ವಿಪರ್ಯಾಸ.
ಅಗತ್ಯ ಸಂದರ್ಭದಲ್ಲಿ ಸುದೀರ್ಘ ಮೌನ!;
ಲಾಕ್ಡೌನ್ನಿಂದಾಗಿ ನಿಜಕ್ಕೂ ಸಂಕಷ್ಟಕ್ಕೆ ಎದುರಾದದ್ದು ವಲಸೆ ಮತ್ತು ಕೂಲಿ ಕಾರ್ಮಿಕರು. ಲಾಕ್ಡೌನ್ ಘೋಷಣೆ ಮಾಡಿದಾಗಲೇ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನೇಕ ಕಾರ್ಮಿಕರು ನೂರಾರು ಕಿ.ಮೀ ನಡೆದೇ ತಮ್ಮ ಊರಿಗೆ ಕ್ರಮಿಸಿದ್ದರು. ಈ ವೇಳೆ ಹಲವರು ಸಾವಿನ ಮನೆ ಸೇರಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ, ಕಾಂಗ್ರೆಸ್ ಮಾತ್ರ ಈ ಕುರಿತು ಸರ್ಕಾರದ ಮೇಲೆ ಒತ್ತಡ ತರುವ ಕೆಲಸಕ್ಕೆ ಆರಂಭದಲ್ಲೇ ಮುಂದಾಗಲಿಲ್ಲ.
ಕಾಂಗ್ರೆಸ್ ಮನಸ್ಸು ಮಾಡಿದ್ದರೆ, ವಲಸೆ ಕಾರ್ಮಿಕರನ್ನು ಕನಿಷ್ಟ ಮನೆಗೆ ಸೇರಿಸುವಂತೆ ಆಡಳಿತ ಪಕ್ಷದ ಮೇಲೆ ಒತ್ತಡ ಹೇರಬಹುದಿತ್ತು. ರಾಜಕೀಯ ಬದಿಗಿಟ್ಟು ಕಾರ್ಮಿಕರ ಸೇವೆಗೆ ಮುಂದಾಗಬಹುದಿತ್ತು. ಆದರೆ, ರಾಷ್ಟ್ರೀಯ ಕಾಂಗ್ರೆಸ್ ಇದ್ಯಾವ ಕೆಲಸಕ್ಕೂ ಮುಂದಾಗಲೇ ಇಲ್ಲ.
ಆದರೆ, ಎರಡನೇ ಹಂತದ ಲಾಕ್ಡೌನ್ ಮುಕ್ತಾಯವಾಗುತ್ತಿದ್ದಂತೆ ವಲಸೆ ಕಾರ್ಮಿಕರನ್ನು ವಿಶೇಷ ರೈಲು ಮತ್ತು ಬಸ್ಸುಗಳ ಮೂಲಕ ಅವರವರ ತವರು ಜಿಲ್ಲೆಗಳಿಗೆ ಕಳುಹಿಸಲು ಕೊನೆಗೂ ಕೇಂದ್ರ ಅನುಮತಿ ನೀಡಿತ್ತು. ಆದರೆ, ಬಸ್ಸು ಮತ್ತು ರೈಲಿನ ಪ್ರಯಾಣಕ್ಕೆ ದರವನ್ನು ನಿಗದಿ ಮಾಡಿತ್ತು.
ಕರ್ನಾಟಕದ ಬಿಜೆಪಿ ಸರ್ಕಾರವಂತೂ ಜನರಿಂದ ಮೂರು ನಾಲ್ಕು ಪಟ್ಟು ಹಣ ಸುಲಿಗೆಗೆ ಮುಂದಾಗಿತ್ತು. ರಾಜ್ಯ ಸರ್ಕಾರದ ಈ ನೀತಿಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೀದಿಗೆ ಇಳಿದಿದ್ದರು. ಕಾರ್ಮಿಕರನ್ನು ಉಚಿತವಾಗಿ ತವರಿಗೆ ಕಳುಹಿಸುವಂತೆ ಪಟ್ಟು ಹಿಡಿದಿದ್ದರು. ಕರ್ನಾಟಕದ ಕಾಂಗ್ರೆಸ್ ಪಕ್ಷವು ಚುರುಕಾಗಿ ಕಾರ್ಯನಿರ್ವಹಿಸಿ 1 ಕೋಟಿ ರೂ.ಗಳ ಚೆಕ್ಅನ್ನು ತೆಗೆದುಕೊಂಡು ಬಸ್ಸ್ಟಾಂಡ್ಗೆ ತೆರಳಿತ್ತು. ಅದರ ಪರಿಣಾಮವನ್ನು ಊಹಿಸಿ ಕರ್ನಾಟಕದ ಮುಖ್ಯಮಂತ್ರಿ ಕಾರ್ಮಿಕರಿಗಾಗಿ ಮೂರು ದಿನಗಳ ಕಾಲ ಉಚಿತವಾಗಿ ಬಸ್ ಓಡಿಸುವುದಾಗಿ ಹೇಳಬೇಕಾಯಿತು. ಆವರೆಗೆ ದೀರ್ಘ ಮೌನಕ್ಕೆ ಶರಣಾಗಿದ್ದ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಎಚ್ಚೆತ್ತುಕೊಂಡಿದ್ದೇ ಆಗ.
ಕಾಂಗ್ರೆಸ್ ನಾಯಕರದ್ದು ಬರಿ ಘೋಷಣೆ ಅಷ್ಟೆ:
ಬಸ್ ಮತ್ತು ರೈಲಿಗೆ ಬಿಜೆಪಿ ಸರ್ಕಾರ ಬಡ ವಲಸೆ ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ನಾಯಕರು ಪ್ರತಿಭಟಿಸಿದ ಬೆನ್ನಿಗೆ ಕಾಂಗ್ರೆಸ್ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಖುದ್ದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ದೇಶದಾದ್ಯಂತ ಕಾರ್ಮಿಕರ ರೈಲಿನ ಪ್ರಯಾಣ ದರವನ್ನು ತಮ್ಮ ಪಕ್ಷ ತುಂಬುವುದಾಗಿ ತಿಳಿಸಿದ್ದರು. ಅಲ್ಲದೆ, ರಾಜ್ಯ ಕಾಂಗ್ರೆಸ್ ಘಟಕ ಕಾರ್ಮಿಕರಿಗೆ ಈ ವ್ಯವಸ್ಥೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದರು. ಆಗ ಕೇಂದ್ರ ಸರ್ಕಾರವು ರೈಲುಗಳನ್ನೂ ಉಚಿತವಾಗಿ ಓಡಿಸುವುದಾಗಿ ಹೇಳಿತು ಆದರೆ ಆ ನಂತರ ರೈಲು ಪ್ರಯಾಣ ದರದ ಕತೆ ಏನಾಯ್ತು ಈ ಕುರಿತು ಕಾಂಗ್ರೆಸ್ ಯೋಚನೆಯೇ ಮಾಡಿದಂತಿಲ್ಲ.
ಕಳೆದ ಎರಡು ವಾರದಿಂದ ಕೇಂದ್ರ ಸರ್ಕಾರ ರಾಷ್ಟ್ರದ ನಾನಾ ಮೂಲೆಗಳಲ್ಲಿ ಶ್ರಮಿಕ್ ರೈಲುಗಳ ಸಂಚಾರ ಆರಂಭಿಸಿದೆ. ಸಾವಿರಾರು ವಲಸೆ ಕಾರ್ಮಿಕರು ಈ ರೈಲಿನ ಮೂಲಕ ತಮ್ಮ ತವರು ರಾಜ್ಯವನ್ನು ಸೇರಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿ ಉಲ್ಲೇಖಿಸಲೇಬೇಕಾದ ಅಂಶ ಎಂದರೆ ಎಲ್ಲಾ ಪ್ರಯಾಣಿಕರೂ ಸ್ವತಃ ತಮ್ಮ ಕೈಯಿಂದಲೇ ಪ್ರಯಾಣ ದರ ನೀಡಿ ಮನೆ ತಲುಪುತ್ತಿದ್ದಾರೆ. ಸರ್ಕಾರವೂ ಇವರಿಗೆ ಉಚಿತ ಸೇವೆ ನೀಡಲಿಲ್ಲ. ಇನ್ನು ಪ್ರಯಾಣ ದರವನ್ನು ತಾನು ತುಂಬುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷವೂ ಆ ಕೆಲಸಕ್ಕೆ ಮುಂದಾಗಿಲ್ಲ.
ಪಂಜಾಬ್ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ವಲಸೆ ಕಾರ್ಮಿಕರ ರೈಲಿನ ಪ್ರಯಾಣ ದರ ನೀಡಿದ್ದು, ಅಲ್ಲಿನ ಸ್ಥಳೀಯ ನಾಯಕರು “ನಿಮ್ಮ ಪ್ರಯಾಣ ದರವನ್ನು ಕಾಂಗ್ರೆಸ್ ನೀಡಿದೆ” ಎಂಬ ಭಿತ್ತಿ ಪತ್ರವನ್ನು ರೈಲಿನಲ್ಲಿ ಅಂಟಿಸುತ್ತಿದ್ದಾರೆ. ಪಂಜಾಬ್ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಆಶ್ವಾಸನೆ ಸಂದರ್ಭದ ಆಶ್ವಾಸನೆಯಂತೆ ಮುಗಿದು ಹೋದದ್ದು ಮಾತ್ರ ವಿಪರ್ಯಾಸ.
ಪ್ರಿಯಾಂಕ-ರಾಹುಲ್ ಎಂಬ ಎರಡು ವೈರುಧ್ಯ:
ಇಡೀ ದೇಶಕ್ಕೆ ಕಾರ್ಮಿಕರನ್ನು ಪೂರೈಸುತ್ತಿರುವ ಪ್ರಮುಖ ರಾಜ್ಯ ಎಂದರೆ ಉತ್ತರ ಪ್ರದೇಶ. ಇಲ್ಲಿಂದ ಸಾವಿರಾರು ಜನ ದೇಶದ ನಾನಾ ಮೂಲೆಗಳಲ್ಲಿ ಕೂಲಿ ಅರಸಿ ಚದುರಿ ಹೋಗಿದ್ದಾರೆ. ಲಾಕ್ಡೌನ್ನಿಂದಾಗಿ ಇದೀಗ ಎಲ್ಲರೂ ಮನೆಗೆ ಮರಳುತ್ತಿದ್ದಾರೆ. ಆದರೆ, ಹಣವಿಲ್ಲ. ಅಲ್ಲಿನ ಸರ್ಕಾರವೂ ಇವರ ನೆರವಿಗೆ ನಿಂತಿಲ್ಲ.
ಈ ವೇಳೆ ಮಧ್ಯ ಪ್ರವೇಶಿಸಿರುವ ಉತ್ತರಪ್ರದೇಶದ ಉಸ್ತುವಾರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, “ರಾಜಕೀಯವನ್ನು ಬದಿಗಿಟ್ಟು ಕಾರ್ಮಿಕರಿಗಾಗಿ ಒಟ್ಟಿಗೆ ಹೋರಾಡೋಣ. ಕಾರ್ಮಿಕರಿಗೆ ತಾವು ವಾಹನ ವ್ಯವಸ್ಥೆ ಮಾಡುತ್ತೇವೆ ಆದರೆ ಅವರಿಗೆ ರಾಜ್ಯದ ಪ್ರವೇಶಕ್ಕೆ ಅನುಮತಿ ನೀಡಿ” ಎಂದು ಸಿಎಂ ಯೋಗಿ ಆದಿತ್ಯಾನಾಥ್ ಅವರಲ್ಲಿ ಮನವಿ ಮಾಡಿದ್ದಾರೆ.
ಯೋಗಿ ಆದಿತ್ಯಾನಾಥ್ ಅನುಮತಿ ನೀಡುತ್ತಿದ್ದಂತೆ ಸ್ವತಃ ವಾಹನ ವ್ಯವಸ್ಥೆ ಮಾಡಿ ಉತ್ತರಪ್ರದೇಶದ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳುತ್ತಿದ್ದಾರೆ ಪ್ರಿಯಾಂಕ ಗಾಂಧಿ. ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆದರೆ, ರಾಹುಲ್ ಗಾಂಧಿ ಮಾತ್ರ ಇಂತಹ ಯಾವುದೇ ಕೆಲಸಕ್ಕೆ ಮುಂದಾಗುತ್ತಿಲ್ಲ. ಅಸಲಿಗೆ ಕಾಂಗ್ರೆಸ್ ಕಾರ್ಮಿಕರ ಪ್ರಯಾಣ ದರ ನೀಡಲು ಮುಂದಾದಾಗ ಕೇಂದ್ರ ಸರ್ಕಾರ ತಾನೇ ಉಚಿತ ರೈಲು ಬಿಡುವ ಮಾತುಗಳನ್ನಾಡಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್ ಸುಮ್ಮನಾಗಿತ್ತು. ಆದರೆ, ಕನಿಷ್ಟ ನಂತರದ ದಿನಗಳಲ್ಲಿ ಈ ಕುರಿತು ವಿಚಾರಿಸುವ ಕೆಲಸಕ್ಕೂ ಕಾಂಗ್ರೆಸ್ ಮುಂದಾಗದೆ ಹೋದದ್ದು. ಸ್ವತಃ ರಾಹುಲ್ ಗಾಂಧಿ ಈ ಕುರಿತು ಗಮನವಹಿಸದೆ ಹೋದದ್ದು ವಿಪರ್ಯಾಸವೇ ಸರಿ.
ಒಟ್ಟಿನಲ್ಲಿ ಕೊರೋನಾದಂತಹ ಸಂದಿಗ್ಧ ಕಾಲದಲ್ಲಿ ವಲಸೆ ಕಾರ್ಮಿಕರ ವಿಚಾರದಲ್ಲಿ ಆಡಳಿತ ಪಕ್ಷ ಎಷ್ಟರಮಟ್ಟಿಗೆ ವೈಫಲ್ಯ ಅನುಭವಿಸಿದೆಯೋ? ವಿರೋಧ ಪಕ್ಷವೂ ಅಷ್ಟೇ ಮುಖಭಂಗಕ್ಕೆ ಒಳಗಾಗಿರುವುದು ಈ ದೇಶದ ಆಡಳಿತ ವ್ಯವಸ್ಥೆಗೆ ಬಡಿದ ಶಾಪವೇ ಸರಿ!


