Homeಅಂಕಣಗಳುನಿಲ್ಲದ ಮಹಾವಲಸೆ - ಪ್ರಧಾನಸೇವಕ ಕೈಯಾರೆ ನಿರ್ಮಿಸಿದ ದುರಂತ

ನಿಲ್ಲದ ಮಹಾವಲಸೆ – ಪ್ರಧಾನಸೇವಕ ಕೈಯಾರೆ ನಿರ್ಮಿಸಿದ ದುರಂತ

- Advertisement -
- Advertisement -

ಹವಾಯಿ ಚಪ್ಪಲ್ ಧರಿಸುವ ಗರೀಬರು ಹವಾಯಿ ಜಹಜಿನಲ್ಲಿ (ವಿಮಾನ) ವಿಹರಿಸಬೇಕೆಂಬುದು ನನ್ನ ಕನಸು ಎಂದು ಭಾರೀ ಸಾರ್ವಜನಿಕ ಸಭೆಗಳಲ್ಲಿ ಭರಪೂರ ಭಾಷಣ ಬಿಗಿದು ಚಪ್ಪಾಳೆ ಕೇಕೆ ಗಿಟ್ಟಿಸುತ್ತಿದ್ದರು ಪ್ರಧಾನಮಂತ್ರಿ ನರೇಂದ್ರ ಮೋದಿ. ಅಮಾಯಕರಿಗೆ ವಿಮಾನ ವಿಹಾರದ ಕನಸು ತೋರಿಸಿ ವಲಸೆ ಕಾರ್ಮಿಕರ ‘ಕಫನ್’ ಗಳನ್ನೂ (ಹೆಣಕ್ಕೆ ಹೊದಿಸುವ ಬಟ್ಟೆ) ಕಿತ್ತುಕೊಂಡಿದ್ದಾರೆ. ಬದುಕಿರುವವರಿಂದ ಬದುಕಿನ ಘನತೆಯನ್ನು ಕಿತ್ತುಕೊಂಡಿದ್ದಾರೆ. ಇನ್ನು ಕಿತ್ತು ಕೊಳ್ಳಲು ಬಡವರ ಬಳಿ ಏನೂ ಉಳಿದಿಲ್ಲ.

ದುಃಖ, ಹಸಿವು, ನೀರಡಿಕೆ, ಅವಮಾನ, ನೋವು, ಅಸಹಾಯಕತೆಗಳು ಉತ್ತರಭಾರತದ ಹೆದ್ದಾರಿಗಳಲ್ಲಿ ನದಿಗಳ ರೂಪ ಧರಿಸಿ ಹರಿಯುತ್ತಿವೆ. ಈ ಹರಿವಿನಲ್ಲಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ನೂರಾರು- ಸಾವಿರಾರು ಕಿ.ಮೀ. ನಡೆಯವು ಎದೆ ಒಡೆವ ದೃಶ್ಯಗಳು. ಇವರ ದುರ್ಮರಣಗಳ ಸುದ್ದಿ ನಿತ್ಯ ಸತ್ಯ. ಆದರೆ ಅವುಗಳನ್ನು ಸುಳ್ಳೆಂದೂ, ಮೋದಿ ಸರ್ಕಾರದ ವಿರುದ್ಧ ದುಷ್ಪ್ರಚಾರವೆಂದೂ ಭಕ್ತ ಸಮೂಹ ಮತ್ತು ಮೀಡಿಯಾ ಭಜನಾ ಮಂಡಳಿ ಗಂಟಲು ಹರಿದುಕೊಳ್ಳುತ್ತಿದೆ. ಮೊನ್ನೆ ಘಾಜಿಯಾಬಾದ್ ನಲ್ಲಿ ಭಾರೀ ಜನಸ್ತೋಮ. ರಾಜಕಾರಣಿಗಳು ತಮ್ಮ ಬಹಿರಂಗ ಸಭೆಗಳನ್ನು ಭರ್ತಿ ಮಾಡಲು ದಿನಗೂಲಿ ಕೊಟ್ಟು, ಊಟ ಉಣಿಸಿ, ಬಸ್ಸುಗಳಲ್ಲಿ ಬಡವರನ್ನು ಕರೆತಂದು ವಾಪಸು ಬಿಟ್ಟೂ ಬರುತ್ತಿದ್ದರು. ಆದರೆ ಇದೀಗ ರಾಜಕೀಯ ರ್ಯಾಲಿಗಳಿಲ್ಲವಲ್ಲ. ದೂರ ದೂರದ ಊರುಗಳ ತಮ್ಮ ಮನೆಗಳಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ ಜನದಟ್ಟಣೆಯಿದು. ಸತ್ತರೂ ನನ್ನೂರಿನ ಮಣ್ಣಿನಲ್ಲಿ ಸಾಯುತ್ತೇನೆ ಎಂದ ವ್ಯಕ್ತಿ ಕಿಕ್ಕಿರಿದು ಅಲ್ಲಿ ನೆರೆದಿದ್ದ ಎಲ್ಲರ ಮನದ ಮಾತು ಆಡಿದ್ದ.

ಹೆದ್ದಾರಿಯ ಪಕ್ಕ ಕುಳಿತು ನೋವು ತಾಳಲಾರದೆ ಮಗುವಿನಂತೆ ರೋದಿಸುತ್ತಿದ್ದ ಯುವಕನೊಬ್ಬ. ಹೆದ್ದಾರಿಯಲ್ಲಿ ನಡೆಯುವವರಿಗೆ ಪೊಲೀಸರ ಕಾಟ. ಕಳ್ಳದಾರಿಗಳಲ್ಲಿ ನಡೆಯುವ ದೇಶದ ದರೋಡೆಕೋರರು ಹಾಯಾಗಿದ್ದಾರೆ. ಆದರೆ ಹೆದ್ದಾರಿಗಳಲ್ಲಿ ಮನೆ ಮುಟ್ಟಲೆಂದು ನಡೆಯುವ ಬಡವರು ಆಳುವವರ ಕಣ್ಣ ಕಿಸುರು. ಹಸಿವು ನೋವಿನಿಂದ ಕಂಗೆಟ್ಟ ಅವರ ಮೇಲೆ ಪೊಲೀಸರನ್ನು ಛೂ ಬಿಟ್ಟಿದ್ದಾರೆ. ಹೆದ್ದಾರಿಗಳಲ್ಲಿ ನಡೆಯುವುದು ಮಹಾನ್ ದೇಶದ್ರೋಹ ಎಂಬಂತೆ ಪೊಲೀಸರ ಲಾಠಿಗಳು ಬಡವರ ಮೈಮೇಲೆ ಕುಣಿಯತೊಡಗಿವೆ. ಹೆದ್ದಾರಿಯ ಪಕ್ಕ ಕುಳಿತು ನೋವು ತಾಳಲಾರದೆ ಮಗುವಿನಂತೆ ರೋದಿಸುತ್ತಿದ್ದ ಯುವಕನ ಅಳಲಿಗೆ ಕಿವಿಗೊಡುವಿರಾ- ಸುಡುಬಿಸಿಲಿನಲ್ಲಿ ನಡೆ ನಡೆದು ಕೆಲ ಕಾಲ ಫ್ಲೈಓವರ್ ನೆರಳಿಗೆ ಸರಿದು ಕುಳಿತದ್ದೇ ಆತನ ಅಪರಾಧವಂತೆ. ಮೊಣಕೈ ಮತ್ತು ತೊಡೆಗಳ ಮೇಲೆ ಬಿದ್ದಿರುವ ಏಟುಗಳು ಆತನನ್ನು ನಡೆಯಗೊಡುತ್ತಿಲ್ಲ. ಲಾಠಿ ಏಟಿಗಿಂತ ಹೆಚ್ಚಾಗಿ ತನ್ನ ಯಾವ ಅಪರಾಧಕ್ಕೆ ಈ ಶಿಕ್ಷೆ ಎಂಬುದು ಆತನ ದುಃಖ.

ಮಧ್ಯಪ್ರದೇಶದ ರೀವಾದಲ್ಲಿ ರೊಟ್ಟಿ ಕೇಳಿದರೆಂದು ಹಸಿದಿದ್ದ ಕೂಲಿ ಕಾರ್ಮಿಕರ ಮೇಲೆ ಲಾಠಿಯ ಮಳೆಗರೆದಿದ್ದಾರೆ ಪೊಲೀಸರು. ಹರಿಯಾಣಾದ ಯಮುನಾನಗರದಲ್ಲಿ ರಸ್ತೆಗಿಳಿದಿದ್ದ ಕಾರ್ಮಿಕರನ್ನು ಥಳಿಸಿ ಶೆಲ್ಟರ್ ಹೋಮ್ ಗಳಿಗೆ ಅಟ್ಟಲಾಗಿದೆ. ಬಿಹಾರದ ಸಮಷ್ಟೀಪುರದ ಕ್ವಾರಂಟೈನ್ ಕೇಂದ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ಪೊಲೀಸರಿಂದ ಲಾಠಿ ಪ್ರಯೋಗ. ದೆಹಲಿ- ಯು.ಪಿ. ಗಡಿಯ ನೋಯ್ಡಾದಲ್ಲಿ ದಿನಸಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಬಡ ಮಹಿಳೆಯನ್ನು ವಿನಾಕಾರಣ ಲಾಠಿಯಿಂದ ಬಾರಿಸುತ್ತಾನೆ ಸಬ್ ಇನ್ಸ್ ಪೆಕ್ಟರ್.

ಸಾವಿರಾರು ಕಿ.ಮೀ. ದೂರವನ್ನು ಸುಡುಗೆಂಡದ ಬಿಸಿಲಿನಲ್ಲಿ ನಡೆಯುತೊಡಗಿದ್ದಾರೆ. ಕಾಲುಗಳು ಜರ್ಝರಿತವಾಗಿವೆ. ಮೂಳೆಗಳು ದಣಿದಿವೆ. ಪಾದಗಳಲ್ಲಿ ಬೊಬ್ಬೆ ಕಿತ್ತಿವೆ. ಇದು ವಿವಿಧ ವಿನೋದಾವಳಿಯಂತೆ ತೋರುತ್ತಿದೆ ಆಳುವವರಿಗೆ. ಅನ್ನ ನೀರಿಲ್ಲದೆ ಬಸವಳಿದ ಒಡಲುಗಳು. ಕಣ್ಣ ಮುಂದೆ ಹೊಳೆವ ಮನೆಗಳೆಂಬ ಮೃಗಜಲಗಳು. ಯಾರಾದರೂ ಅನ್ನ ನೀರು ನೀಡಿದರೆ ಅದೇ ಭಾಗ್ಯ. ನೆರವಿಗಾಗಿ ಚಾಚುವ ಹಸ್ತಗಳ ಮೇಲೆ ಬಾರಿಸುತ್ತಿದೆ ಸರ್ಕಾರ. ಪೊಲೀಸ್ ಕೇಸುಗಳನ್ನು ಹೆಟ್ಟಿ ಬೆನ್ನಟ್ಟಲಾಗುತ್ತಿದೆ.

ಇಲ್ಲಿ ಸತ್ತವರಿಗೂ ಬದುಕಿರುವವರಿಗೂ ವ್ಯತ್ಯಾಸವಿಲ್ಲ. ಸರ್ಕಾರಗಳ ಪಾಲಿಗೆ ಬದುಕಿರುವವರೂ ಸತ್ತವರಂತೆಯೇ ಲೆಕ್ಕ. ಅಪಘಾತದಲ್ಲಿ ಸತ್ತ ವಲಸೆ ಕಾರ್ಮಿಕರ ಕಳೇಬರಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿ ತೆರೆದ ಟ್ರಕ್ ನಲ್ಲಿ ಮಂಜುಗಡ್ಡೆಯ ಮೇಲೆ ಎಸೆದು ಹೊದೆಸಿ ಸಾಗಿಸಲಾಗುತ್ತದೆ. ಈ ಕಳೇಬರಗಳ ಪಕ್ಕದಲ್ಲೇ ಗಾಯಗೊಂಡವರೂ ಮೈಮನ ಮರಗಟ್ಟಿದವರಂತೆ ಬಿದ್ದಿದ್ದಾರೆ. ಬದುಕಿದ್ದಾಗ ನಿರಾಕರಿಸಲಾದ ಘನತೆಯನ್ನು ಸತ್ತ ಮೇಲೆ ನೀಡುವರೆಂದು ಹೇಗೆ ನಿರೀಕ್ಷಿಸಲು ಬಂದೀತು?

ವಲಸೆ ಕಾರ್ಮಿಕರನ್ನು ರೇಲ್ವೆ ಹಳಿಗಳು ಹೆದ್ದಾರಿಗಳ ಮೇಲೆ ಕತ್ತರಿಸಿ ಹಾಕಲಾಗುತ್ತಿದೆ. ಈ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೆಜ್ಜೆ ಹಾಕುವ ಕಾರ್ಮಿಕರ ಹೊಟ್ಟೆ ಸಂಕಟ ಸುಡು ಶಾಪದ ಮಾತುಗಳಾಗಿ ಹೊರಬೀಳುತ್ತಿವೆ.

ಹದಿಮೂರು ವರ್ಷದ ಜ್ಯೋತಿ ಕುಮಾರಿ ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹರಿಯಾಣದ ಗುರುಗ್ರಾಮದಿಂದ ಹೊರಟು ಮೇ.15ರಂದು ಬಿಹಾರದ ದರ್ಭಂಗಾ ತಲುಪಿದ್ದಾಳೆ. ತಂದೆ ಮೋಹನ್ ಪಾಸ್ವಾನ್ ಬ್ಯಾಟರಿ ರಿಕ್ಷಾ ನಡೆಸುತ್ತಿದ್ದ. ಜನವರಿಯಲ್ಲಿ ನಡೆದ ಅಪಘಾತದಿಂದ ಎಡಗಾಲು ಊನವಾಗಿದೆ. ಲಾಕ್ ಡೌನ್ ನಂತರ ಹಣವಿಲ್ಲದೆ ಉಪವಾಸದ ಸ್ಥಿತಿ. ಔಷಧಿಗೂ ಗತಿಯಿಲ್ಲ. ಸೈಕಲ್ ಮೇಲೆ ಊರಿಗೆ ಹೋಗೋಣವೆಂಬುದು ಜ್ಯೋತಿಯ ಮನೋನಿರ್ಧಾರ. ಕಡೆಗೂ ಒಪ್ಪಿದ ಅಪ್ಪ. ಅವರಿವರ ನೆರವು ಪಡೆದು, 1,200 ರುಪಾಯಿ ತೆತ್ತು ಸೈಕಲ್ ಖರೀದಿಸಿ ಪ್ರಯಾಣ ಆರಂಭಿಸಿದಳು ಜ್ಯೋತಿ. ರಸ್ತೆಯಲ್ಲಿ ಮಂದಿ ನೀಡಿದ ಅನ್ನ ಉಣ್ಣುತ್ತಿದ್ದರು. ನಡುವೆ ಎರಡು ದಿನಗಳ ಉಪವಾಸ. ಏಳು ದಿನಗಳ ನಂತರ ದರ್ಭಾಂಗ ತಲುಪಿದರು. ಮಗಳ ಬಗ್ಗೆ ಹೆಮ್ಮೆಯಿಂದ ತಂದೆಯ ಎದೆ ಉಬ್ಬುತ್ತದೆ. ಮಸಿಬಟ್ಟೆಯೇ ಮನುಷ್ಯರೂಪ ಧರಿಸಿದಂತೆ ಮರುಕು ಸೈಕಲ್ ಮೇಲೆ ಎಂಬತ್ತು ವರ್ಷದ ತಾಯಿಯನ್ನು ಸೈಕಲ್ ಕ್ಯಾರಿಯರ್ ಮೇಲೆ ಮತ್ತು ಏಳು ವರ್ಷದ ಮಗಳನ್ನು ಮುಂದೆ ಕಂಬಿಯ ಮೇಲೆ ಕುಳ್ಳಿರಿಸಿಕೊಂಡು ಬೆಂಗಳೂರಿನಿಂದ ರಾಜಸ್ತಾನದ ಕೋಟಾಕ್ಕೆ ಹೊರಟಿದ್ದಾನೆ ಮತ್ತೊಬ್ಬ ವ್ಯಕ್ತಿ. ಇವರು ಮನೆ ತಲುಪುವರೇ?

ಸತ್ಯೇಂದ್ರ ಕುಮಾರ್ ಎಂಬ ಕೂಲಿಯಾಳು ರಸ್ತೆಯ ಪಕ್ಕ ಬಟ್ಟೆ ಹಾಸಿ ಬೊಂಬೆಯಂತಹ ತನ್ನ ಹಸುಳೆಯನ್ನು ಅಂಗಾತ ಮಲಗಿಸಿ ಅದರ ಪಾದಗಳನ್ನು ಮಸಾಜ್ ಮಾಡುತ್ತಿರುವ ನೋಟ ಕಟುಕರೆದೆಯನ್ನೂ ಕರಗಿಸಬಲ್ಲದು. ಆದರೆ ಆಳುವವರ ಎದೆಯನ್ನು ಕರಗಿಸಲಾರದು.
ದುರಂತದ ಈ ಕತೆಗಳು ನಿತ್ಯ ಸಾವಿರ ಸಂಖ್ಯೆಯಲ್ಲಿ ಜನಿಸಿ ಸಾಯುತ್ತಿವೆ. ಅವುಗಳಿಗಾಗಿ ಅಳುವವರಿಲ್ಲ. ಅಂತ್ಯ ಸಂಸ್ಕಾರ ಮಾಡುವವರೂ ದಿಕ್ಕಿಲ್ಲ.

ಕಾಂಗ್ರೆಸ್ ಪಕ್ಷದ ಶಾಸಕರಿಗೆ ಕೆಂಪು ನಡೆಮುಡಿ ಹಾಸಿ ಪಕ್ಷಕ್ಕೆ ಸೇರಿಸಿಕೊಂಡು ಸರ್ಕಾರ ರಚಿಸುತ್ತದೆ ಬಿಜೆಪಿ. ಆದರೆ ವಲಸೆ ಕಾರ್ಮಿಕರು ಮನೆಗೆ ಮರಳಲು ಕಾಂಗ್ರೆಸ್ ಪಕ್ಷ ವ್ಯವಸ್ಥೆ ಮಾಡಿದ ನೂರಾರು ಬಸ್ಸುಗಳು ಉತ್ತರಪ್ರದೇಶದ ಆದಿತ್ಯನಾಥ ಯೋಗಿ ಸರ್ಕಾರಕ್ಕೆ ಅಸ್ಪೃಶ್ಯ. ನಿರ್ಗತಿಕರ ಸಂಕಟದ ಬೆಂಕಿಯಲ್ಲೂ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತೀಟೆಯನ್ನು ಏನೆಂದು ಕರೆಯಬೇಕು?

ಸೂರತ್ ನ ಮೋರ ಮತ್ತು ಹಜೀರಾದಲ್ಲಿ ರಿಲಯನ್ಸ್, ಲಾರ್ಸನ್ ಅಂಡ್ ಟೂಬ್ರೋ, ಎನ್.ಟಿ.ಪಿ.ಸಿ., ಹಾಗೂ ಎಸ್ಸಾರ್ ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಸುಮಾರು 70 ಸಾವಿರ ವಲಸೆ ಕಾರ್ಮಿಕರನ್ನು ಊರಿಗೆ ಹೋಗಲು ಬಿಡದೆ ಅಕ್ರಮವಾಗಿ ಕೂಡಿ ಹಾಕಿವೆ. ಲಾಕ್ ಡೌನ್ ಅವಧಿಯಲ್ಲಿ ಇವರಿಗೆ ಕೂಲಿಯನ್ನೂ ನೀಡಿಲ್ಲ, ಅನ್ನವನ್ನೂ ಒದಗಿಸಿಲ್ಲ. ಈ ದುರಾಚಾರಕ್ಕೆ ಗುಜರಾತ್ ಸರ್ಕಾರದ ಕುಮ್ಮಕ್ಕು ಇದೆಯೆಂದು ಜಿಗ್ನೇಶ್ ಮೇವಾನಿ ಅಪಾದಿಸಿದ್ದಾರೆ.

ನಡೆಯುವವರನ್ನು ತಡೆಯಲು ಹೇಗೆ ಬಂದೀತು ಎನ್ನುವ ಸುಪ್ರೀಮ್ ಕೋರ್ಟು ತಾಯಿ ಹೃದಯವನ್ನು ಕಳೆದುಕೊಂಡಿದೆ. ದೇಶದ ಅತ್ಯುನ್ನತ ನ್ಯಾಯಾಲಯ ಆಡಬೇಕಿದ್ದ ಮಾತನ್ನು ಮದ್ರಾಸ್ ಹೈಕೋರ್ಟ್ ಆಡಿತ್ತು- ತಿಂಗಳೊಪ್ಪತ್ತಿನಿಂದ ವಲಸೆ ಕಾರ್ಮಿಕರ ದಯನೀಯ ಪರಿಸ್ಥಿತಿಯನ್ನು ನೋಡಿದರೆ ಕಣ್ಣುಗಳಲ್ಲಿ ನೀರು ಬರುತ್ತದೆ. ಇದು ಮಾನವೀಯ ದುರಂತವಲ್ಲದೆ ಮತ್ತೇನೂ ಅಲ್ಲ.

ವಲಸೆ ಕಾರ್ಮಿಕರನ್ನು ಕಾಂಗ್ರೆಸ್ ತಲೆಯಾಳು ಮಾತಾಡಿಸಿದ್ದನ್ನು ಮಹಾನ್ ನಾಟಕವೆಂದು ಜರೆಯುತ್ತಾರೆ ನಿರ್ಮಲಾ ಸೀತಾರಾಮನ್ ಎಂಬ ಮಂತ್ರಿ. ಅಲಹಾಬಾದ್ ಕುಂಭಮೇಳದಲ್ಲಿ ಕೊಳೆ ತೊಳೆದವರ ಪಾದಗಳನ್ನು ಮುಟ್ಟಿ ತೊಳೆದ ಮತ್ತು ದೆಹಲಿಯಲ್ಲಿ ಚಿಂದಿ ಆಯುವ ಮಹಿಳೆಯರ ನಡುವೆ ಕುಳಿತ ಪ್ರಧಾನಿ ಮೋದಿಯವರು ಆಡಿದ್ದು ಯಾವ ನಾಟಕ? ಈ ದೇಶದ ಹೆದ್ದಾರಿಗಳಲ್ಲಿ ಬಸವಳಿದು ಸಾಯುತ್ತಿರುವ ಶ್ರಮಿಕ ಕೋಟಿಯ ಕುರಿತು ಅವರು ಒಂದೇ ಒಂದು ವಾಕ್ಯದ ಮನ್ ಕೀ ಬಾತ್ ನ್ನು ಕೂಡ ಆಡಿಲ್ಲವಲ್ಲ ಯಾಕೆ?

ನರಕದ ಬೆಂಕಿ ಎಂಬುದಿದ್ದರೆ ಭರತಖಂಡದ ಪಾಷಾಣ ಹೃದಯಿಗಳು ಅದರಲ್ಲಿ ಬೇಯುವುದು ನಿಶ್ಚಿತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...