ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯದ ರೈತ ಸಂಘ ‘ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಿ – ರೈತ ಸಮುದಾಯವನ್ನು ಉಳಿಸಿ’ ಎಂಬ ಅಭಿಯಾನ ನಡೆಸುತ್ತಿದೆ. ಏ.17ರಂದು ಅಮೃತ ಭೂಮಿಯಲ್ಲಿರುವ ಪ್ರೊ. ನಂಜುಂಡಸ್ವಾಮಿಯವರ ಸಮಾಧಿ ಬಳಿ ರೈತ ಸಂಕಲ್ಪ ಸ್ವೀಕರಿಸಿ ಅಭಿಯಾನವನ್ನು ಪ್ರಾರಂಭಿಸಿತ್ತು. ರಾಜ್ಯದ 130 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ. ಅಭಿಯಾನದ ಭಾಗವಾಗಿ ನಿನ್ನೆ ರೈತರು ಚಾಮರಾಜನಗರದ ಬೀದಿಗಳಲ್ಲಿ ಪ್ರಚಾರ ಜಾಥಾ ನಡೆಸಿದ್ದಾರೆ. ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮಹೇಶ್ ಪ್ರಭು ಹಾಗೂ ಕೆಲವು ಮುಖಂಡರ ಮೇಲೆ ಬಿಜೆಪಿಗರು ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಬಿಜೆಪಿ ವಿರುದ್ಧ ರೈತ ಸಂಘ ಆಕ್ರೋಶ ವ್ಯಕ್ತಪಡಿದ್ದು, ಬಿಜೆಪಿ ವಿರುದ್ಧ ತನ್ನ ಅಭಿಯಾನವನ್ನು ತೀವ್ರಗೊಳಿಸಲು ಮುಂದಾಗಿದೆ. ನಮ್ಮ ಅಭಿಯಾನವನ್ನು ನಾವು ಮತ್ತಷ್ಟು ತೀವ್ರಗೊಳಿಸುತ್ತೇವೆ. ಈ ಬಾರಿ ರೈತರೆಲ್ಲರೂ ಕೂಡಿ ಈ ದ್ರೋಹಿ ಪಕ್ಷಗಳಿಗೆ ಓಟಿನ ಏಟು ನೀಡುತ್ತೇವೆ. ಎರಡನೇ ಸುತ್ತಿನ ಮತದಾನ ನಡೆಯಲಿರುವ ಉತ್ತರ ಭಾಗದ ಕ್ಷೇತ್ರಗಳಲ್ಲೂ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುತ್ತೇವೆ. ರೈತ ಕುಲದ ಈ ಹೋರಾಟಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.