ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ‘ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ)’ ಸಮುದಾಯದ ‘ಲಾಯಿಲ ವೆಂಕಟರಮಣ ದೇವಸ್ಥಾನ’ದ ದೇವರ ಪಲ್ಲಕ್ಕಿಯನ್ನು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಇತ್ತೀಚೆಗೆ ಹೊತ್ತಿದ್ದರು. ಈ ವಿಡಿಯೊ ಇದೀಗ ವೈರಲ್ ಆಗಿದ್ದು, ದೇವಸ್ಥಾನದ ಈ ಕ್ರಮದ ವಿರುದ್ದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ‘ಆಲ್ ಟೆಂಪರ್ ಅಸೋಸಿಯೇಷನ್’ ತಕರಾರು ಎತ್ತಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ಅಸೋಷಿಯೇಷನ್ ದೇವಸ್ಥಾನ ಸಮಿತಿ ಬಳಿ ಮಾಹಿತಿ ಕೇಳಿದೆ ಎನ್ನಲಾಗಿದೆ. ಜೊತಗೆ ಬಂಟ ಸಮುದಾಯದ ಶಾಸಕರಾದ ಹರೀಶ್ ಪೂಂಜಾ ಕೈಯ್ಯಲ್ಲಿ ಪಲ್ಲಕ್ಕಿ ಹೊರಿಸಿದ ‘ ಜಿಎಸ್ಬಿ’ ಯುವಕರಿಬ್ಬರ ವಿರುದ್ದ ಕೂಡಾ ಕ್ರಮಕೈಗೊಳ್ಳಲು ಇದೀಗ ತಯಾರಿ ನಡೆಯುತ್ತಿದೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ. ಈ ನಡುವೆ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕಾಶಿ ಮಠದ ಸ್ವಾಮಿಗೂ ದೂರು ನೀಡಲಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೆಳ್ತಂಗಡಿ ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಡಳಿತಕ್ಕೆ ಒಳಪಟ್ಟ ಲಾಯಿಲ ವೆಂಕಟರಮಣ ದೇವಾಲಯದಲ್ಲಿ ಪ್ರತಿ ವರ್ಷ ಕಾರ್ತಿಕ ಹುಣ್ಣಿಮೆಯಂದು ದೀಪೋತ್ಸವ ನಡೆಯುತ್ತದೆ. ಈ ಸಂಧರ್ಭದಲ್ಲಿ ದೇವರ ಪೇಟೆ ಸವಾರಿ ಉತ್ಸವವಿರುತ್ತದೆ. ಈ ಉತ್ಸವದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವಕರು ಮಾತ್ರ ದೇವರ ಪಲ್ಲಕ್ಕಿ ಹೊರುತ್ತಿದ್ದರು. ಆದರೆ ಈ ಬಾರಿ, ಶೂದ್ರ ಸಮುದಾಯದ ಬಂಟ ಜಾತಿಯ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರಿಂದ ದೇವರ ಪಲ್ಲಕ್ಕಿಯನ್ನು ಹೊರಿಸಲಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ
ಆದರೆ, ಸಂಪ್ರದಾಯ ಮುರಿದು ಹಿಂದುಳಿದ ಸಮಾಜದ ವ್ಯಕ್ತಿಯೊಬ್ಬ ಪಲ್ಲಕ್ಕಿಯನ್ನು ಹೊರುವಂತೆ ಮಾಡಿರುವುದು ಸಮುದಾಯದ ಒಳಗೆ ತಕರಾರು ಎದ್ದಿದೆ ಎನ್ನಲಾಗಿದೆ. ಈ ಬಗ್ಗೆ ಸಮುದಾಯದ ದೇವಾಲಯಗಳ ಒಕ್ಕೂಟವಾದ ‘ಆಲ್ ಟೆಂಪಲ್ ಅಸೋಷಿಯೇಷನ್’ ತಕರಾರು ಎತ್ತಿದೆ ಎನ್ನಲಾಗಿದ್ದು, ವಿವಾದದ ಬಗ್ಗೆ ವಿವರ ಕೇಳಿದೆ ಎನ್ನಲಾಗಿದೆ. ಜೊತಗೆ ಸಮುದಾಯದ ಕಾಶಿ ಮಠದ ಸ್ವಾಮಿಗಳ ಬಳಿಯು ದೂರು ನೀಡಲಾಗಿದೆ ಎಂದು ಸಂದೇಶ ಹರಿದಾಡುತ್ತಿದೆ. ಶಾಸಕರಿಗೆ ಪಲ್ಲಕ್ಕಿ ಹೊರುವಂತೆ ಮಾಡಿದ್ದ ಸಮುದಾಯದ ಇಬ್ಬರು ಯುವಕರ ವಿರುದ್ದವು ಕ್ರಮಕೈಗೊಳ್ಳಲು ಮತ್ತು ಪಲ್ಲಕ್ಕಿ ಶುದ್ದೀಕರಣಕ್ಕೆ ತಯಾರಿ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ನಡುವೆ ದೇವಸ್ಥಾನದ ಈ ಕ್ರಮವನ್ನು, ದಲಿತ ಹಕ್ಕುಗಳ ಹೋರಾಟದ ರಾಜ್ಯ ಸಮಿತಿ ಸದಸ್ಯರಾಗಿರುವ ಶೇಖರ್ ಲಾಯಿಲ ಅವರು ಸ್ವಾಗತಿಸಿದ್ದಾರೆ. ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಶಾಸಕರಿಗೆ ದೇವರ ಪಲ್ಲಕ್ಕಿ ಹೊರಲು ಅವಕಾಶ ಕೊಟ್ಟಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಕ್ರಮವನ್ನು ದಲಿತ ಸಮುದಾಯಕ್ಕೂ ವಿಸ್ತರಿಸಬೇಕು. ಮುಂದಿನ 24 ರ ಬುಧವಾರದಂದು ‘ಪಂಚಮಿ ಉತ್ಸವ’ ನಡೆಯಲಿದ್ದು, ಅಂದು ದಲಿತರಿಗೆ ದೇವರ ಪಲ್ಲಕ್ಕಿ ಹೊರಲು ಅವಕಾಶ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹುಕ್ಕೇರಿ: ಶಿಕ್ಷಕಿಯಿಂದ ಅಸ್ಪೃಶ್ಯತೆ ಆಚರಣೆ; ಶಾಲಾ ಆವರಣದಲ್ಲಿ ಪೋಷಕರ ಪ್ರತಿಭಟನೆ
ಈ ಬಗ್ಗೆ ದೇವಾಲಯದ ಆಡಳಿತ ಮೋಕ್ತೇಸರರಾಗಿರುವ ಸುಧೀರ್ ಪ್ರಭು ನಾನುಗೌರಿ.ಕಾಂ ಜೊತೆ ಮಾತನಾಡಿ, “ದೇವಾಲಯದ ಆಡಳಿತ ಸಮಿತಿಯ ಗಮನಕ್ಕೆ ತರದೆ ಶಾಸಕ ಹರೀಶ್ ಪೂಂಜಾ ಅವರ ಕೈಯ್ಯಲ್ಲಿ ಪಲ್ಲಕ್ಕಿ ಹೊರಿಸಲಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವಂತೆ, ಆಲ್ ಟೆಂಪಲ್ ಅಸೋಷಿಯೇಷನ್ ಕಡೆಯಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ. ಹೀಗೊಂದು ಘಟನೆ ನಡೆದಿದೆ ಎಂದಷ್ಟೇ ಈಗ ತಿಳಿದುಬಂದಿದೆ. ಜೊತೆಗೆ ಉತ್ಸವ ಇನ್ನೂ ಮುಗಿದಿಲ್ಲ, ಎಲ್ಲವೂ ಮುಗಿದ ನಂತರ ನಡೆಯುವ ಸಭೆಯಲ್ಲಿ ಪಲ್ಲಕ್ಕಿ ಹೊರಿಸಿದ ವಿಷಯವೂ ಚರ್ಚೆಗೆ ಬರಬಹುದು. ಆದ್ದರಿಂದ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ದಲಿತರಿಗೂ ದೇವರ ಪಲ್ಲಕ್ಕಿ ಹೊರಲು ಅವಕಾಶ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶಾಸಕರಿಗೆ ಪಲ್ಲಕ್ಕಿ ಹೊರಲು ಅವಕಾಶವನ್ನು ಆಡಳಿತ ಮಂಡಳಿ ನೀಡಿಲ್ಲ. ಆ ಸಂದರ್ಭದಲ್ಲಿ ಶಾಸಕರು ಇದ್ದರು, ಆಗ ಅವರಿಗೆ ಪಲ್ಲಕ್ಕಿ ಹೊರಲು ಅವಕಾಶ ನೀಡಲಾಗಿದೆ. ನಮ್ಮ ಜಿಎಸ್ಬಿ ಸಮುದಾಯದ ಕೆಲವು ಸಂಪ್ರದಾಯವಿದೆ. ದಲಿತರಿಗೆ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಹಿರಿಯರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದು ಅವರ ಸಂಪರ್ಕ ಲಭ್ಯವಾಗಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ಕೂಡಲೇ ಅದನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು.
ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ