ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಐತಿಹಾಸಿಕ ಅನ್ಯಾಯವೆಸಗಿದೆ ಮತ್ತು ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡಿದೆ ಎಂದು ಬಿಜೆಪಿ ಹೇಳಿದೆ.
"ಹಿಂದುಳಿದ ವರ್ಗಕ್ಕೆ ಮುಸ್ಲಿಮರು ಸೇರ್ಪಡೆ"
ರಾಜ್ಯದಲ್ಲಿ @siddaramaiah ಸರ್ಕಾರ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಒಟ್ಟು 36 ಜಾತಿಗಳಿಗೆ ಅನ್ಯಾಯ ಮಾಡಿದ್ದು ಅಲ್ಲದೆ, ಮುಸ್ಲಿಮರ ಓಲೈಕೆಯಲ್ಲಿ ಪರಾಕಾಷ್ಠೆಗೆ ತಲುಪಿದೆ.@INCKarnataka #ModiKiGuarantee4OBC pic.twitter.com/GuRVJZiVf8
— BJP Karnataka (@BJP4Karnataka) April 24, 2024
ಇದಕ್ಕೂ ಮುನ್ನ ಹೇಳಿಕೆ ಕೊಟ್ಟಿದ್ದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (ಎನ್ಸಿಬಿಸಿ) ಅಧ್ಯಕ್ಷ ಹಂಸರಾಜ್ ಅಹಿರ್, ರಾಜ್ಯದಲ್ಲಿ ಮೀಸಲಾತಿ ಉದ್ದೇಶಗಳಿಗಾಗಿ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸಾಮಾಜಿಕ ನ್ಯಾಯದ ತತ್ವಗಳನ್ನು ಹಾಳು ಮಾಡಿದೆ ಎಂದಿದ್ದರು. ಸಾಮಾಜಿಕ ನ್ಯಾಯದ ಒಟ್ಟಾರೆ ಚೌಕಟ್ಟಿನ ಮೇಲೆ, ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಇಂತಹ ಮೀಸಲಾತಿಗಳ ಪ್ರಭಾವವನ್ನು ಅವರು ಪ್ರಶ್ನಿಸಿದ್ದರು.
VIDEO | Here’s what National Commission for Backward Classes (NCBC) Chairman Hansraj Ahir (@ahir_hansraj) said on the categorisation of Muslims as backward caste in Karnataka.
“In Karnataka, currently there is a 32 per cent reservation for the OBCs. The Karnataka government has… pic.twitter.com/pfR215ARsR
— Press Trust of India (@PTI_News) April 24, 2024
ಹಾಗಾದರೆ, ಸಿದ್ದರಾಮಯ್ಯ ಸರ್ಕಾರ ನಿಜವಾಗಿಯೂ ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕನ್ನು ಕಸಿದು ಮುಸ್ಲಿಮರಿಗೆ ನೀಡಿದೆಯಾ? ಎಂಬುವುದರ ವಾಸ್ತವ ಇಲ್ಲಿದೆ.
ಫ್ಯಾಕ್ಟ್ಚೆಕ್ : ವಾಸ್ತವ ಏನೆಂದರೆ, 1977ರಿಂದ ಕರ್ನಾಟಕದಲ್ಲಿ ಮುಸ್ಲಿಮರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿಯ ಇತಿಹಾಸ :
ಕರ್ನಾಟಕ ಹಿಂದುಳಿದ ವರ್ಗಗಳ ಕುರಿತು ಎಲ್ಜಿ ಹಾವನೂರ್ ಅವರು 1975 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದು ಗುರುತಿಸಲಾಗಿತ್ತು. ವರದಿಯ ಶಿಫಾರಸುಗಳ ಆಧಾರದ ಮೇಲೆ, ಮುಸ್ಲಿಮರನ್ನು ಹಿಂದುಳಿದ ಸಮುದಾಯಗಳ ಅಡಿಯಲ್ಲಿ ವರ್ಗೀಕರಿಸಲಾಯಿತು (ಇತರ ವರ್ಗಗಳು ಹಿಂದುಳಿದ ಜಾತಿ, ಹಿಂದುಳಿದ ಬುಡಕಟ್ಟು ಮತ್ತು ವಿಶೇಷ ಗುಂಪು) ಮತ್ತು ಮುಸ್ಲಿಮರು ಸೇರಿದಂತೆ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಲು ಮಾರ್ಚ್ 1977 ರಲ್ಲಿ ಆದೇಶ ನೀಡಲಾಯಿತು. ಮೇ 1979 ರಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಮುಸ್ಲಿಮರನ್ನು ಹಿಂದುಳಿದ ಸಮುದಾಯಗಳ ಗುಂಪಿನಲ್ಲಿ ಇರಿಸಲಾಯಿತು.
ನಂತರ ವೆಂಕಟ ಸ್ವಾಮಿ ನೇತೃತ್ವದ ಆಯೋಗವು ಮುಸ್ಲಿಮರನ್ನು ಮೀಸಲಾತಿಗೆ ಅರ್ಹರಾದ ಹಿಂದುಳಿದ ವರ್ಗ ಎಂದು ಗುರುತಿಸಿದಾಗ ಗುಂಪುಗಳನ್ನು ಬದಲಾಯಿಸಲಾಯಿತು. ಈ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮುಸ್ಲಿಮರನ್ನು ಸಿ ಗುಂಪಿನ ಅಡಿಯಲ್ಲಿ ವರ್ಗೀಕರಿಸಲಾಯಿತು.
ನಂತರ, ನ್ಯಾಯಮೂರ್ತಿ ಒ.ಚಿನಪ್ಪ ರೆಡ್ಡಿ ನೇತೃತ್ವದ ಆಯೋಗವು ಹಿಂದುಳಿದ ವರ್ಗಗಳನ್ನು ಪ್ರವರ್ಗ 1 (ಅತ್ಯಂತ ಹಿಂದುಳಿದ), ಪ್ರವರ್ಗ 2ಎ (ತುಲನಾತ್ಮಕವಾಗಿ ಹೆಚ್ಚು ಹಿಂದುಳಿದ), ಪ್ರವರ್ಗ 2ಬಿ (ಹೆಚ್ಚು ಹಿಂದುಳಿದ), ಪ್ರವರ್ಗ 3ಎ (ಹಿಂದುಳಿದ), ಪ್ರವರ್ಗ 3ಬಿ (ತುಲನಾತ್ಮಕವಾಗಿ ಹಿಂದುಳಿದ) ಮತ್ತು ವರ್ಗ 4 (ಔದ್ಯೋಗಿಕ ಗುಂಪು) ಎಂದು ವರ್ಗೀಕರಿಸಿತ್ತು. ಸೆಪ್ಟೆಂಬರ್ 1994 ರಲ್ಲಿ ಈ ಸಂಬಂಧ ಆದೇಶವನ್ನು ಹೊರಡಿಸಲಾಯಿತು. ಅಲ್ಲಿ ಮುಸ್ಲಿಮರನ್ನು ವರ್ಗ 2 ಬಿ ಅಡಿಯಲ್ಲಿ ಇರಿಸಲಾಯಿತು. ಅಂದರೆ, ಪ್ರಸ್ತುತ ಇರುವ ಮೀಸಲಾತಿಯನ್ನು 30 ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿದೆ.
ಮುಸ್ಲಿಂಮರಿಗಿರುವ 4% ಮೀಸಲಾತಿಯನ್ನು ರಾಜಕೀಯ ಲಾಭಕ್ಕಾಗಿ ತೆಗೆದುಹಾಕಿದ್ದ ಬಸವರಾಜ ಬೊಮ್ಮಾಯಿ ಅವರ ಸರ್ಕಾರವೇ ಮೀಸಲಾತಿ ಹೇಗಿತ್ತು ಹಾಗೆಯೇ ಮುಂದುವರೆಸುತ್ತೇವೆ ಎಂದು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿತ್ತು.#BJPagainstSocialJustice pic.twitter.com/ywDrr04Zpm
— Siddaramaiah (@siddaramaiah) April 25, 2024
ನಂತರ ಪ್ರೊ.ರವಿವರ್ಮ ಕುಮಾರ್ ನೇತೃತ್ವದ ಆಯೋಗವು ಔದ್ಯೋಗಿಕ ಗುಂಪು ವರ್ಗವನ್ನು ತೆಗೆದು ಹಾಕಿತು ಮತ್ತು ಅದನ್ನು ಇತರ ಗುಂಪುಗಳಿಗೆ ಒಳಪಡಿಸಲಾಯಿತು. ಮುಸ್ಲಿಮರನ್ನು 2 ಬಿ ವರ್ಗದಲ್ಲಿ ಇರಿಸಲಾಯಿತು. ಹದಿನೇಳು ಮುಸ್ಲಿಂ ಸಮುದಾಯಗಳನ್ನು ವರ್ಗ 1 (ಅತ್ಯಂತ ಹಿಂದುಳಿದ) ಮತ್ತು 19 ಮುಸ್ಲಿಂ ಸಮುದಾಯಗಳನ್ನು 2ಎ (ತುಲನಾತ್ಮಕವಾಗಿ ಹೆಚ್ಚು ಹಿಂದುಳಿದ) ಅಡಿಯಲ್ಲಿ ವರ್ಗೀಕರಿಸಲಾಗಿದೆ.
ರಾಜ್ಯದಲ್ಲಿ ಒಬಿಸಿ ವರ್ಗವು 32% ಮೀಸಲಾತಿಯನ್ನು ಹೊಂದಿದೆ. ವಿಭಾಗ 1 ಮತ್ತು 2ಎ ನಲ್ಲಿ ಪಟ್ಟಿ ಮಾಡಲಾದ 36 ಮುಸ್ಲಿಂ ಸಮುದಾಯಗಳು ಕೂಡ ಒಬಿಸಿಗಳ ಮೂಲ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿದೆ. ‘ಕ್ರೀಮಿ ಲೇಯರ್’ (8 ಲಕ್ಷ ವಾರ್ಷಿಕ ಆದಾಯ ಅಥವಾ ಅದಕ್ಕಿಂತ ಹೆಚ್ಚು) ಇರಬಾರದು ಎಂದು ನಿರ್ಧರಿಸಿದವರು ಮಾತ್ರ ಒಬಿಸಿ ವರ್ಗದ ಅಡಿಯಲ್ಲಿ ಮೀಸಲಾತಿಗೆ ಅರ್ಹರಾಗಿರುತ್ತಾರೆ.
2023ರಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಬಸವರಾಜ ಬೊಮ್ಮಾಯಿ ಸರ್ಕಾರ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿ ಒಕ್ಕಲಿಗರನ್ನು 2ಸಿ ವರ್ಗದಲ್ಲಿ ಮತ್ತು ಲಿಂಗಾಯತರನ್ನು 2ಡಿ ವರ್ಗದಲ್ಲಿ ವಿಭಜಿಸಿ ಅವರ ಮೀಸಲಾತಿ ಹೆಚ್ಚಿಸಲು ನಿರ್ಧರಿಸಿತು. ವರ್ಗ 1 ಮತ್ತು 2ಎ ಅಡಿಯಲ್ಲಿ ಮುಸ್ಲಿಮರು ಒಬಿಸಿ ಮೀಸಲಾತಿಯ ಪ್ರಯೋಜನ ಪಡೆಯುವುದನ್ನು ಮುಂದುವರಿಸಲಿದ್ದಾರೆ ಎಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು.
ಮುಸ್ಲಿಮರ 4% ಮೀಸಲಾತಿ ರದ್ದುಗೊಳಿಸಿರುವುದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಆಗ ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಸರ್ಕಾರ ಮೀಸಲಾತಿ ರದ್ದುಗೊಳಿಸುವುದಿಲ್ಲ ಹಿಂದಿನ ನೀತಿಯು ಮುಂದಿನ ಆದೇಶಗಳವರೆಗೆ ಮುಂದುವರಿಯಲಿದೆ ಎಂದು ಭರವಸೆ ನೀಡಿತ್ತು. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಕಾರಣ, ಸಿದ್ದರಾಮಯ್ಯ ಸರ್ಕಾರ ಅದೇ ಆದೇಶದ ಅಡಿಯಲ್ಲಿ ಮೀಸಲಾತಿಯನ್ನು ಮುಂದುವರೆಸಿದೆ.
ಸಾಂವಿಧಾನಿಕ ಬಲ :
ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಮೀಸಲಾತಿ ಒದಗಿಸುವುದು ರಾಜ್ಯ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಮೀಸಲಾತಿಯ ಶೇಕಡಾವಾರು ಪ್ರತಿ ರಾಜ್ಯದಲ್ಲಿ ಬದಲಾಗುತ್ತದೆ. ಮೀಸಲಾತಿಯು ಧರ್ಮಾಧಾರಿತವಲ್ಲ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿದೆ. ಕೆಲವು ರಾಜ್ಯಗಳು ಒಟ್ಟಾರೆಯಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿದರೆ, ಇತರ ರಾಜ್ಯಗಳು ಕೆಲವು ವರ್ಗದ ಮುಸ್ಲಿಮರಿಗೆ ಮಾತ್ರ ಮೀಸಲಾತಿಯನ್ನು ಒದಗಿಸುತ್ತವೆ.
ಯಾವುದೇ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರ ಅಥವಾ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪ್ರಗತಿಗಾಗಿ ವಿಶೇಷ ನಿಬಂಧನೆಗಳನ್ನು ರೂಪಿಸಲು ಸಂವಿಧಾನದ 15 (4) ನೇ ವಿಧಿ ರಾಜ್ಯಕ್ಕೆ ಅವಕಾಶ ನೀಡುತ್ತದೆ.
ಸಂವಿಧಾನ ವಿಧಿ 16 (4) ಕೂಡ ರಾಜ್ಯಕ್ಕೆ ಈ ಅವಕಾಶ ನೀಡುತ್ತದೆ. ಈ ವಿಧಿಯು ರಾಜ್ಯವು ಯಾವುದೇ ಹಿಂದುಳಿದ ವರ್ಗದ ನಾಗರಿಕರ ಪರವಾಗಿ ನೇಮಕಾತಿಗಳು ಅಥವಾ ಹುದ್ದೆಗಳ ಮೀಸಲಾತಿಗೆ ಯಾವುದೇ ನಿಬಂಧನೆ ರೂಪಿಸುವುದನ್ನು ತಡೆಯುವುದಿಲ್ಲ.
ಮಾಹಿತಿ ಕೃಪೆ : ದಿ ನ್ಯೂಸ್ ಮಿನಿಟ್
ಇದನ್ನೂ ಓದಿ : FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ