ಯೋಗ ಗುರು ರಾಮದೇವ್ ಅವರ ಕಂಪನಿ ಪತಂಜಲಿಯ ವಿವಾದಾತ್ಮಕ ‘ಆಯುರ್ವೇದ ಔಷಧಿ’ ಕೊರೊನಿಲ್ನ 1 ಲಕ್ಷ ಕಿಟ್ಗಳನ್ನು ಕೋವಿಡ್ ರೋಗಿಗಳಿಗೆ ಉಚಿತವಾಗಿ ನೀಡಲು ಹರಿಯಾಣದ ಬಿಜೆಪಿ ಸರ್ಕಾರ ನಿರ್ಧರಿಸಿದೆ.
ಸೋಮವಾರ ಸಂಜೆ ರಾಜ್ಯ ಸಚಿವ ಅನಿಲ್ ವಿಜ್ ಈ ನಿರ್ಧಾರವನ್ನು ಟ್ವೀಟ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
“ಹರಿಯಾಣದ ಕೋವಿಡ್ ರೋಗಿಗಳಿಗೆ ಒಂದು ಲಕ್ಷ ಪತಂಜಲಿ ಕೊರೊನಿಲ್ ಕಿಟ್ಗಳನ್ನು ಉಚಿತವಾಗಿ ವಿತರಿಸಲಾಗುವುದು. ಕೊರೊನಿಲ್ ವೆಚ್ಚದ ಅರ್ಧದಷ್ಟು ಭಾಗವನ್ನು ಪತಂಜಲಿ ಮತ್ತು ಅರ್ಧವನ್ನು ಹರಿಯಾಣ ಸರ್ಕಾರದ ಕೋವಿಡ್ ರಿಲೀಫ್ ಫಂಡ್ ಭರಿಸಲಿವೆ” ಎಂದು ಸಚಿವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ
ಹರಿಯಾಣದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ರೈತರು ನಿರಂತರವಾಗಿ ಭಾಗವಹಿಸುವುತ್ತಿರುವುದೇ ಇದಕ್ಕೆ ಕಾರಣ ಎಂದು ರಾಜ್ಯದ ಬಿಜೆಪಿ ಸರ್ಕಾರವು ಹೇಳಿದೆ. ಇಂತಹ ಸಭೆಗಳು ಸೂಪರ್ ಸ್ಪ್ರೆಡರ್ ಘಟನೆಗಳಿಗೆ ಸಮನಾಗಿವೆ ಎಂದು ರಾಜ್ಯ ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಕೊರೊನಿಲ್ ಬಿಡುಗಡೆ ಸಮಾರಂಭದಲ್ಲಿ, “ಕೋವಿಡ್ ನಿರ್ಮೂಲನೆಗೆ ಮೊದಲ ಸಾಕ್ಷ್ಯ ಆಧಾರಿತ ಔಷಧ” ಎಂದು ರಾಮದೇವ್ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರ ಸಮ್ಮುಖದಲ್ಲೇ ಹೇಳಿದಾಗ ಅದು ವಿವಾದಕ್ಕೆ ಈಡಾಗಿತ್ತು.
ಭಾರತೀಯ ವೈದ್ಯಕೀಯ ಸಂಘವು ತೀವ್ರ ಟೀಕೆ ಮಾಡಿ, ಆರೋಗ್ಯ ಮಂತ್ರಿ ಸ್ವತಃ ವೈದ್ಯರಾಗಿ ದೇಶದ ಮುಂದೆ “ಸುಳ್ಳು, ಕಟ್ಟುಕಥೆ, ಅವೈಜ್ಞಾನಿಕ ಉತ್ಪನ್ನ”ವನ್ನು ಹೇಗೆ ಉತ್ತೇಜಿಸಿದರು ಎಂದು ಪ್ರಶ್ನಿಸಿತ್ತು. ಔಷಧೀಯ ಉತ್ಪನ್ನದ ಪ್ರಮಾಣಪತ್ರ (coPP) ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ವಿಧಾನದ ಪ್ರಮಾಣಪತ್ರವನ್ನು ಕೊರೊನಿಲ್ ಹೊಂದಿದೆ ಎಂದು ರಾಮ್ದೇವ್ ಹೇಳಿಕೊಂಡಿದ್ದರು. (coPP – ಔಷಧೀಯ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆ ನೀಡುತ್ತದೆ)
ಇದನ್ನೂ ಓದಿ: ‘ಕಾಂಗ್ರೆಸ್ ಟೂಲ್ಕಿಟ್ ಎಕ್ಸ್ಪೋಸ್ಡ್’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!
ನಂತರದಲ್ಲಿ ರಾಮ್ದೇವ್, “ಅಂತರರಾಷ್ಟ್ರೀಯ ಮಾನದಂಡಗಳನ್ನು ಆಧರಿಸಿದ ಸಂಪೂರ್ಣ ವೈಜ್ಞಾನಿಕ ಸಂಶೋಧನಾ ಪುರಾವೆಗಳನ್ನು ಪೂರ್ಣಗೊಳಿಸಿದ ನಂತರ ಸರ್ಕಾರವು ಅನುಮತಿ ನೀಡಿದೆ. ದೇಶ ಮತ್ತು ಪ್ರಪಂಚವೂ ಸಹ ಒಪ್ಪಿಕೊಂಡಿವೆ WHO ಸಹ ಒಪ್ಪಿಕೊಂಡಿದೆ. ಈಗ ನಾವು `ಕೊರೊನಿಲ್’ ಅನ್ನು 150 ದೇಶಗಳಲ್ಲಿ ಮಾರಾಟ ಮಾಡುವ ಆಯ್ಕೆ ಹೊಂದಿದ್ದೇವೆ’ ಎಂದು ಹೇಳಿದ್ದರು.
ಆಗ್ನೇಯ ಏಷ್ಯಾದ WHO, ‘ಕೋವಿಡ್ಗೆ ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ’ ಎಂದು ಟ್ವೀಟ್ ಮಾಡಿದಾಗ, ರಾಮದೇವ್ ವಿರುದ್ಧ ಮತ್ತೆ ಟೀಕೆಗಳು ಕೇಳಿ ಬಂದಿದ್ದವು.
ರಾಮದೇವ್ರ “ಅಪ್ಪಟ ಸುಳ್ಳು” ಗಮನಿಸಿ ಆಘಾತವಾಯಿತು. ಈ ಕುರಿತಂತೆ ದೇಶಕ್ಕೆ ಆರೋಗ್ಯ ಸಚಿವರ ವಿವರಣೆಯ ಅಗತ್ಯವಿದೆ ಎಂದು ಐಎಂಎ ಪ್ರತಿಪಾದಿಸಿತ್ತು.
ಇದನ್ನೂ ಓದಿ: ಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ