ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ನಂತರ, ದೆಹಲಿ ನ್ಯಾಯಾಲಯವು ಗುರುವಾರ (ಮಾರ್ಚ್ 19, 2026) ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಇಬ್ಬರು ವ್ಯಕ್ತಿಗಳನ್ನು ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.
ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಬನ್ಸಾಲ್ ಅವರು, ಆರೋಪಿಗಳಾದ ಜಮ್ಶೀದ್ ಜಹೂರ್ ಪಾಲ್ ಮತ್ತು ಪರ್ವೈಜ್ ರಶೀದ್ ಅವರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ್ದಾರೆ.
ಭಯೋತ್ಪಾದಕ ಸಂಘಟನೆಯ ಸದಸ್ಯತ್ವ ಮತ್ತು ಪಿತೂರಿಗೆ ಸಂಬಂಧಿಸಿದ ಯುಎಪಿಎ ನಿಬಂಧನೆಗಳ ಅಡಿಯಲ್ಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಇಬ್ಬರ ವಿರುದ್ಧ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದ ಎಫ್ಐಆರ್ನಲ್ಲಿ ಇನ್ನೂ ಇಬ್ಬರನ್ನು ಹೆಸರಿಸಲಾಗಿದೆ, ಅವರಲ್ಲಿ ಒಬ್ಬರು ಬಂಧನಕ್ಕೆ ಮುನ್ನ 2018ರಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಜಮ್ಮು ಕಾಶ್ಮೀರದ ಕೆಲ ವ್ಯಕ್ತಿಗಳು ಐಸಿಸ್ ಸಂಘಟನೆಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ್ದಾರೆ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಬಳಸಲು ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಸೂಚಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವಿಶೇಷ ಘಟಕದ ತಂಡವು, ಸೆಪ್ಟೆಂಬರ್ 6, 2018 ರಂದು ದೆಹಲಿಯ ಜಾಮಾ ಮಸೀದಿಯ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು. ಬಂಧಿತರ ಬಳಿಯಿಂದ ತಲಾ ಒಂದು ಪಿಸ್ತೂಲ್ ಮತ್ತು ಐದು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಆರೋಪಿಗಳು ಬಿಬಿಎಂ ಚಾಟ್ಗಳ ಮೂಲಕ ಶಂಕಿತ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಣವನ್ನು ಪಡೆದಿದ್ದರು ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿದೆ.
ವಿಚಾರಣೆಯ ಸಮಯದಲ್ಲಿ, ಪ್ರಾಸಿಕ್ಯೂಷನ್ ಪೊಲೀಸ್ ಸಿಬ್ಬಂದಿ ಮತ್ತು ವಿಧಿವಿಜ್ಞಾನ ತಜ್ಞರು ಸೇರಿದಂತೆ 23 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಆರೋಪಿಗಳು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ವಿಚಾರಣೆಯನ್ನು ಕೋರಿದ್ದರು.
ಪ್ರಾಸಿಕ್ಯೂಷನ್ ಮಂಡಿಸಿದ ವಾದದಲ್ಲಿನ ಗಂಭೀರ ಅಸಂಗತತೆಗಳನ್ನು ಮತ್ತು ತನಿಖೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ ನ್ಯಾಯಾಲಯವು, ಆರೋಪಿಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ವಿವರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.
ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಾಗ ತಯಾರಿಸಿದ ದಾಖಲೆಗಳ ಮೇಲೆ ಎಫ್ಐಆರ್ ಸಂಖ್ಯೆಯನ್ನು ಮೊದಲೇ ಬರೆಯಲಾಗಿತ್ತು. ಸಾಮಾನ್ಯವಾಗಿ, ಎಫ್ಐಆರ್ ದಾಖಲಾದ ಮೇಲಷ್ಟೇ ಅದಕ್ಕೊಂದು ಸಂಖ್ಯೆ ಸಿಗುತ್ತದೆ. ಆದರೆ ಇಲ್ಲಿ ಶಸ್ತ್ರಾಸ್ತ್ರ ಸಿಕ್ಕವು ಎನ್ನಲಾದ ಸಮಯದಲ್ಲಿಯೇ ದಾಖಲೆಗಳ ಮೇಲೆ ಆ ಸಂಖ್ಯೆ ಇತ್ತು. ಹಾಗಾಗಿ, ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಮೊದಲೇ ಎಫ್ಐಆರ್ ದಾಖಲಿಸಿರಬೇಕು. ಅಥವಾ, ನಂತರ ಎಫ್ಐಆರ್ ಸಂಖ್ಯೆಯನ್ನು ಆ ದಾಖಲೆಗಳಿಗೆ ಸೇರಿಸಿರಬೇಕು. ಈ ಗೊಂದಲದಿಂದಾಗಿ, ಪೊಲೀಸರು ಹೇಳುತ್ತಿರುವ ಕಥೆ ಸುಳ್ಳಿರಬಹುದು ಮತ್ತು ಅವರು ಹೇಳಿದ ಜಾಗದಲ್ಲಿ, ಹೇಳಿದ ರೀತಿಯಲ್ಲಿ ಶಸ್ತ್ರಾಸ್ತ್ರಗಳು ಸಿಕ್ಕಿಲ್ಲದಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು ‘ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣದಂತಹ ಅತೀ ಹೆಚ್ಚು ಸಾರ್ವಜನಿಕರು ಇರುವ ಜನನಿಬಿಡ ಪ್ರದೇಶದಲ್ಲಿ’ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಅಲ್ಲದೆ, ಅಲ್ಲಿ ಅನೇಕ ಸಾರ್ವಜನಿಕರು ಸಾಕ್ಷಿಗಳಾಗಿ ಇದ್ದರು ಎಂದು ಪ್ರಾಸಿಕ್ಯೂಷನ್ ಸಾಕ್ಷಿಗಳೇ ಒಪ್ಪಿಕೊಂಡಿದ್ದರು. ಹೀಗಿದ್ದರೂ ಸಹ, ಈ ಪ್ರಕರಣದ ಯಾವುದೇ ಹಂತದಲ್ಲಿ ಒಬ್ಬರೇ ಒಬ್ಬ ಸ್ವತಂತ್ರ ಸಾರ್ವಜನಿಕ ಸಾಕ್ಷಿಗಳನ್ನು ಏಕೆ ಸೇರಿಸಿಕೊಳ್ಳಲಿಲ್ಲ ಎಂಬುದಕ್ಕೆ ಪೊಲೀಸರು ಯಾವುದೇ ಸಮರ್ಥನೆಯನ್ನು ನೀಡಿಲ್ಲ ಎಂದಿದೆ.
ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ಗಳನ್ನು ಸುಮಾರು ಎರಡು ತಿಂಗಳ ಕಾಲ ಸೀಲ್ ಮಾಡದೆ ಹಾಗೆಯೇ ಇಡಲಾಗಿತ್ತು. ಈ ಫೋನ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲು ಇಷ್ಟು ದಿನಗಳ ಕಾಲ ಏಕೆ ವಿಳಂಬ ಮಾಡಲಾಯಿತು ಅಥವಾ ಅವುಗಳನ್ನು ತಕ್ಷಣವೇ ಪೊಲೀಸ್ ‘ಮಲ್ಖಾನಾ’ (ಸಾಕ್ಷ್ಯಗಳನ್ನು ಇಡುವ ಕೊಠಡಿ) ದಲ್ಲಿ ಏಕೆ ಇರಿಸಲಿಲ್ಲ ಎಂಬುದಕ್ಕೆ ಪೊಲೀಸರು ಸರಿಯಾದ ಉತ್ತರ ನೀಡಿಲ್ಲ. ಎರಡು ತಿಂಗಳ ಕಾಲ ಫೋನ್ಗಳು ಪೊಲೀಸರ ವಶದಲ್ಲಿ ಸೀಲ್ ಇಲ್ಲದೆ ಇದ್ದುದರಿಂದ, ಅದರಲ್ಲಿರುವ ಮಾಹಿತಿಯನ್ನು ಯಾರಾದರೂ ಬದಲಿಸಿರಬಹುದು ಅಥವಾ ಹೊಸದಾಗಿ ಸೇರಿಸಿರಬಹುದು ಎಂಬ ಸಂಶಯ ನ್ಯಾಯಾಲಯಕ್ಕೆ ಬಂದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಈ ಕಾರಣದಿಂದಾಗಿ, ಪೊಲೀಸರು ಸಾಕ್ಷ್ಯವಾಗಿ ನೀಡಿದ್ದ ಬಿಬಿಎಂ ಚಾಟ್ ರೆಕಾರ್ಡ್ಗಳನ್ನು ನಂಬಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅವುಗಳನ್ನು ತಿರಸ್ಕರಿಸಿದೆ.
ಆರೋಪಿಗಳ ಪರ ವಕೀಲರಾದ ಅಹ್ಮದ್ ಇಬ್ರಾಹಿಂ, ತಮನ್ನಾ ಪಂಕಜ್, ಅರ್ಚಿತ್ ಕೃಷ್ಣ ಮತ್ತು ಪ್ರಿಯಾ ವತ್ಸ್ ವಾದ ಮಂಡಿಸಿದ್ದಾರೆ.


