ಮಹಾ ವಿಕಾಸ್ ಅಗಾಡಿ ನಾಯಕರು ನಿನ್ನೆ ರಾಜ್ಯಪಾಲರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದಕ್ಕಿಂತಲೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸರ್ಕಾರದಿಂದ ಅಂತರ ಕಾಯ್ದುಕೊಳ್ಳಿ ಎಂದಿರುವುದರಿಂದ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮಿತ್ರಪಕ್ಷಗಳ ಸಭೆ ಕರೆದಿದ್ದಾರೆ.
ಮಹಾ ವಿಕಾಸ್ ಅಗಾಡಿ ನಾಯಕರ ಸಭೆ ಮತ್ತು ಸಚಿವ ಸಂಪುಟ ಸಭೆಯನ್ನು ಒಂದೇ ದಿನ ಕರೆದಿದ್ದು ಸರ್ಕಾರ ಅಲುಗಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಇದು ಬಿಕ್ಕಟ್ಟಿನ ಕುರಿತು ಕರೆದಿರುವ ಸಭೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ಸಭೆ ನಿರಂತರವಾಗಿ ಕರೆಯುತ್ತಿದ್ದೇನೆ. ಸಭೆಯಲ್ಲಿ ಕೋವಿಡ್-19 ನಿಯಂತ್ರಣದ ಕುರಿತು ಚರ್ಚೆ ನಡೆಯಲಿದೆ. ಇದೊಂದು ಸಾಮಾನ್ಯ ಸಚಿವ ಸಂಪುಟ ಸಭೆಯಾಗಿದೆ ಎಂದು ಹೇಳಿದ್ದಾರೆ.
ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಮತ್ತು ಮುಖ್ಯಮಂತ್ರಿ ಉದ್ದವ್ ಠಾಕ್ರೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ್ದರು. ಇದು ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ರವಾನಿಸಿತ್ತು.
ನಂತರ ರಾಹುಲ್ ಗಾಂಧಿ ಮಾತನಾಡುತ್ತಾ ನಾವು ಮಹಾರಾಷ್ಟ್ರದಲ್ಲಿ ಬೆಂಬಲ ನೀಡಿರುವವರು ಅಷ್ಟೆ ಹೊರತು ನಿರ್ಧಾರ ತೆಗೆದುಕೊಳ್ಳುವವರ ಅಲ್ಲ. ನಾವು ರಾಜಸ್ತಾನ, ಪಂಜಾಬ್, ಛತ್ತೀಸ್ಘಡ ಮತ್ತು ಜಾರ್ಖಂಡ್ನಲ್ಲಿ ಮಾತ್ರ ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಬಿಕ್ಕಟ್ಟು ಮತ್ತಷ್ಟು ತೀವ್ರ ರೂಪ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಈ ಮಧ್ಯೆ ಸನ್ನಿವೇಶದ ಲಾಭ ಪಡೆಯಲು ಬಿಜೆಪಿ ಅಖಾಡಕ್ಕೆ ಇಳಿದಿದೆ. ಕೋವಿಡ್-19 ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದೆ. ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ದೇವೇಂದ್ರ ಫಡ್ನಾವೀಸ್ ನಾವು ಸರ್ಕಾರ ರಚನೆಯ ಯತ್ನ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಶಿವನೇನೆ ಮುಖಂಡ ಸಂಜಯ್ ರಾವತ್ ಮಾತನಾಡಿ, ಮಹಾರಾಷ್ಟ್ರ ಸರ್ಕಾರದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮತ್ತು ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ರಾಜ್ಯಪಾಲರವನ್ನು ಭೇಟಿ ಮಾಡಿ ಕೊರೊನ ನಿಯಂತ್ರಣದ ಕುರಿತು ಚರ್ಚೆ ನಡೆಸಿದ್ದಾರೆ. ಇದನ್ನು ಬಿಜೆಪಿ ರಾಜಕೀಯ ಬಿಕ್ಕಟ್ಟು ಎಂಬಂತೆ ಬಿಂಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹಾ ವಿಕಾಸ್ ಅಗಾಡಿ ನೇತೃತ್ವದ ಮೈತ್ರಿ ಸರ್ಕಾರ ಐದು ವರ್ಷವನ್ನೂ ಪೂರ್ಣಗೊಳಿಸಲಿದೆ. ಮೂರು ಪಕ್ಷಗಳಲ್ಲೂ ಯಾವುದೇ ಬಿಕ್ಕಟ್ಟು ಇಲ್ಲ. ಮುಂದಿನ ಬಾರಿಯೂ ಮಹಾ ವಿಕಾಸ ಅಗಾದಿ ನೇತೃತ್ವದಲ್ಲೇ ಚುನಾವಣೆ ಹೋಗುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ..
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ : ಸುಳ್ಳು ಹರಡುತ್ತಿರುವವರಿಗೆ ಹೊಟ್ಟೆ ನೋವು- ಶಿವಸೇನೆ