Homeಅಂಕಣಗಳುಕಾಫಿ ವಲಯದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು: ಪ್ರಸಾದ್ ರಕ್ಷಿದಿ

ಕಾಫಿ ವಲಯದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ  -7

ಕಾಫಿ ವಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯೇ ಹೌದು. ಆದರೆ ಇಲ್ಲೂ ಕೊಡಗಿನಂತೆಯೇ ಕೆಲವರು ವ್ಯಕ್ತಿಗಳು ನಿರಂತರವಾಗಿ ಅಲ್ಲದಿದ್ದರೂ ಅಲ್ಲಲ್ಲಿ ಸಾಕಷ್ಟು ಕೆಲಸ ಮಾಡಿದವರಿದ್ದಾರೆ. ಅವರಲ್ಲಿ ಇಲ್ಲಿಯೇ ಹುಟ್ಟಿ ಬೆಳೆದವರು ಕೆಲವರಾದರೆ, ಇನ್ನು ಕೆಲವರು ಬೇರೆ ಕಡೆಗಳಿಂದ ಇಲ್ಲಿಗೆ ಬಂದು ನೆಲೆಸಿದವರು.

ಅವರಲ್ಲೂ ಸ್ವಾತಂತ್ರ್ಯ ಪೂರ್ವದ ತಲೆಮಾರಿನ ಹಲವರಿದ್ದಾರೆ. ಸಕಲೇಶಪುರದ ಗಾಂಧಿಯೆಂದು ಹೆಸರಾಗಿದ್ದ ಎಸ್.ಕೆ.ಕರೀಂಖಾನರು ಮತ್ತು ಅವರ ಸಮಕಾಲೀನರಾದ ಹಾಗೂ ಆನಂದ ಕುಮಾರಸ್ವಾಮಿಯವರ “Time and eternity” ಹಾಗೂ ಗಾಂಧೀಜಿಯ ಹಿಂದ್ ಸ್ವರಾಜ್ ಗ್ರಂಥಗಳ ಬಗ್ಗೆ ವಿಮರ್ಶೆಯನ್ನು ಬರೆದ ಇತಿಹಾಸಕಾರ ‘ಸಕಲೇಶಪುರ ಶ್ರೀಕಂಠಯ್ಯ’ನವರು. ಇವರು The founders of vijayanagara, Founders of Hoysala ಮುಂತಾದ ಗ್ರಂಥಗಳ ಕರ್ತೃವೂ ಹೌದು.

ಕರೀಂಖಾನರು

ಕರೀಂಖಾನರ ಬಾಲ್ಯ ಸ್ನೇಹಿತರೂ ಆಗಿದ್ದ ವಾಲಗದ ಬೀರಯ್ಯ ಹಿರಿಯ ಜಾನಪದ ಕಲಾವಿದರು, ಮೈಸೂರು ಸಂಸ್ಥಾನದ ಎಲ್ಲಕಡೆಗಳಲ್ಲಿಯೂ ಖ್ಯಾತಿಯನ್ನುಗಳಿಸಿದ್ದ ಬೀರಯ್ಯ ಮತ್ತು ಮೋರಿ ಮೊಗಾರಯ್ಯ ಇವರು ಮಲೆನಾಡಿನಲ್ಲಿ ಜಾನಪದ ವಾದ್ಯ, ನೃತ್ಯ, ಕುಣಿತಗಳನ್ನು ಜೀವಂತವಾಗಿಟ್ಟಿದ್ದರು.

ರಂಗಭೂಮಿಯ ವಿಚಾರಕ್ಕೆ ಬಂದರೆ ಗುಬ್ಬಿ ಕಂಪೆನಿಯಲ್ಲಿ ಕೆಲಸಮಾಡಿ ಅಂತದೇ ಸಂಸ್ಥೆಯನ್ನು ಕಟ್ಟಬೇಕೆಂದು ಆಸೆಪಟ್ಟು ಬಾಳ್ಳುಪೇಟೆಯ ಬಸವೇಗೌಡರು, “ಬಸವೇಗೌಡರ ನಾಟಕ ಕಂಪೆನಿ” ಸ್ಥಾಪಿಸಿದ್ದರು. ಇದು ಹಳೆಯ ಮೈಸೂರಿನ ಭಾಗದಲ್ಲಿ ಸಾಕಷ್ಟು ಹೆಸರು ಗಳಿಸಿ ನಾಟಕ ಕಂಪೆನಿಯಾಗಿತ್ತು.

1940ರ ದಶಕದಲ್ಲಿಯೇ ಸಕಲೇಶಪುರದ ಜಾತ್ರೆಯಲ್ಲಿ ಅಖಿಲ ಕರ್ನಾಟಕ ನಾಟಕ ಸ್ಫರ್ಧೆಗಳು ನಡೆಯುತ್ತಿದ್ದವು.

ಜಾತಿ ಪದ್ಧತಿಯ ಕ್ರೌರ್ಯವನ್ನು ಹೇಳುವ “ಮಗನಕೊಂದ ಮಾರಾಯ” ಮದುವೆಗೆ ಮೊದಲೇ ಗಂಡು ಹೆಣ್ಣಿನ ರಕ್ತ ಪರೀಕ್ಷೆ ಮಾಡಿಸಿಬೇಕೆಂಬ ಆಧುನಿಕ ವೈದ್ಯ ವಿಜ್ಞಾನ ವಿಚಾರಗಳ “ರಕ್ತ ಪರೀಕ್ಷೆ” “ಒಡ ಹುಟ್ಟದ ಸಹೋದರ” ಮುಂತಾದ ನಾಟಕಗಳನ್ನು ಬರೆದು ಆಡಿಸಿದ ಮಂಜಪ್ಪ ಹೆನ್ಲಿ ಸಕಲೇಶಪುರದಲ್ಲಿ ಇದ್ದರು. ಮಂಜಪ್ಪ ಹೆನ್ಲಿಯವರ ಹತ್ತಿರದ ಸಂಬಂಧಿಗಳಾದ ಭದ್ರಪ್ಪ ಹೆನ್ಲಿ ಕೂಡಾ ನಾಟಕಕಾರರು, ನಟ ಹಾಗೂ ರಂಗ ನಿರ್ದೇಶಕರೂ ಆಗಿದ್ದಾರೆ. ಮೈಸೂರಿನ ಸುರುಚಿ ರಂಗಮನೆಯ ಸಕ್ರಿಯ ಸದಸ್ಯರೂ ಇವರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಇವರು ಈಗ ಮೈಸೂರಿನಲ್ಲೇ ನೆಲೆಸಿದ್ದಾರೆ. ಹಾಗೆಯೇ ಸುಳ್ಯದಲ್ಲಿ ಅಧ್ಯಾಪಕರಾಗಿದ್ದ ಇಲ್ಲಿನವರೇ ಆದ ನಾಟಕಕಾರ ಮತ್ತು ಅನುವಾದಕ ಎಚ್.ಎಂ.ಕುಮಾರಸ್ವಾಮಿ ಅವರೂ ಕೂಡಾ ಮೈಸೂರಿನಲ್ಲಿ ನೆಲೆಸಿದ್ದಾರೆ.

ಇಂಗ್ಲಿಷ್ ನಾಟಕಗಳ ಅನುವಾದ ಮಾಡಿ ರಂಗಕ್ಕೆ ತಂದಿದ್ದ ಗೋಪಾಲ ಅಯ್ಯಂಗಾರ್, ವರದರಾಜ್, ಸಾರಂಗ ಕಾವ್ಯನಾಮದ ರಂಗೇಗೌಡ, ಕರೀಂಖಾನರ ಯಚ್ಚಮನಾಯಕ ನಾಟಕದ, ಯಚ್ಚಮನಾಯಕನಾಗಿ ಅಭಿನಯಿಸಿ ಕರ್ನಾಟಕದಾದ್ಯಂತ ಹೆಸರಾಗಿದ್ದ ಕಲಾಕೇಸರಿ  ಟೈಲರ್ ಮೂರ್ತಿ ರಾವ್, ಸ್ವತಃ ನಿರಕ್ಷರಿಯಾಗಿದ್ದರೂ ಸುಮಾರು ಎಪ್ಪತ್ತು ನಾಟಕಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ನಟ ಮಳಲಿ ರಾಮಪ್ಪ ಇವರೆಲ್ಲ ಕಾಫಿವಲಯದಲ್ಲಿ ಒಂದಷ್ಟು ಸಾಂಸ್ಕೃತಿಕ ವಾತಾವರಣವನ್ನು ಕಾಪಾಡಿಕೊಂಡಿದ್ದರು.

ಇತಿಹಾಸಕಾರ ಸಕಲೇಶಪುರ ಶ್ರೀಕಂಠಯ್ಯ, ಸಾರಂಗ ರಂಗೇಗೌಡರು, ಮಳಲಿ ರಾಮಪ್ಪನವರು

ಇವೆಲ್ಲವೂ ಹೆಚ್ಚಾಗಿ ನಗರ ಕೇಂದ್ರಿತ ಚಟುವಟಿಕೆಗಳಾಗಿದ್ದವೇ ಹೊರತು ಗ್ರಾಮಾಂತರದಲ್ಲಿ ಇದರ ಪ್ರಭಾವ ಹರಡಿದ್ದು ಕಡಿಮೆಯೇ. ಆದರೆ ಇವೆಲ್ಲದರ ಹಿಂದೆ ಬಹಳ ಮುಖ್ಯವಾಗಿ ಗಮನಿಸಿಬೇಕಾದ ಸಂಗತಿಯೆಂದರೆ, ಈ ಎಲ್ಲ ವ್ಯಕ್ತಿಗಳ ಕಾರ್ಯಚಟುವಟಿಕೆಗಳೂ ಗಾಂಧೀಜಿಯ ವಿಚಾರಧಾರೆಯಿಂದ ಪ್ರಭಾವಿತವಾದ ಸಂಗತಿಗಳಾಗಿರುವುದು.

ಸ್ವಾತಂತ್ರ್ಯಾ ನಂತರವೂ ಹೆಚ್ಚಿನ ಏಳುಬೀಳುಗಳನ್ನು ಕಾಣದೆ ಇದು ನಡೆದುಬಂತು. ಜೊತೆಯಲ್ಲಿ ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯಲು ಬಂದ ದಕ್ಷಿಣಕನ್ನಡ ಜಿಲ್ಲೆಯ ಜನರಲ್ಲಿ ಕಾರ್ಮಿಕರು ಕುಶಲ ಕರ್ಮಿಗಳು. ನೌಕರರು, ಹೋಟೆಲ್ ಉದ್ಯಮಿಗಳು, ಎಲ್ಲರೂ ಇದ್ದರು. ನಂತರದ ವರ್ಷಗಳಲ್ಲಿ ಹೆಚ್ಚಿನವರು ಇಲ್ಲೇ ನೆಲೆನಿಂತರು. ತಮ್ಮ ಕಲೆ ಸಂಸ್ಕೃತಿಯನ್ನೂ ಇಲ್ಲಿ ಬೆಳೆಸಿದರು. ಮುಖ್ಯವಾಗಿ ಯಕ್ಷಗಾನ ಕಲೆಯನ್ನು ಇಲ್ಲಿಗೆ ತಂದರು. ಆದ್ದರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಯಕ್ಷಗಾನ ಮೇಳಗಳು ಸಕಲೇಶಪುರ ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ಪ್ರದರ್ಶನ ನೀಡುತ್ತಿದ್ದವು.

ಕಾಫಿ ಬೆಳೆಗೆ ಸಿಕ್ಕಿದ ಹೆಚ್ಚಿನ ಬೆಲೆ ಮತ್ತು ಅದರಿಂದ ಜನರಲ್ಲಿ ಆದ ಹಣದ ಪ್ರಸರಣ ಕಾಫಿವಲಯದಲ್ಲಿ ಹೊಡೆದಾಟ, ಗಲಭೆ, ಕಳ್ಳತನ, ದರೋಡೆಗಳಂತಹ ಸಾಮಾಜಿಕ ಸಮಸ್ಯೆಗಳನ್ನು ತಂದದ್ದು ಮಾತ್ರವಲ್ಲ  ಸಾಂಸ್ಕೃತಿಕ  ಕ್ಷೇತ್ರಗಳಲ್ಲಿಯೂ ಪರಿಣಾಮ ಬೀರಿತು. ಮನೆ ಮನೆಗೂ ಡಿಷ್ ಆಂಟೆನಾಗಳು, ಟಿ.ವಿ. ಬಂದವು. ಜನ ಸಂಜೆ ಮನೆಯಿಂದ ಹೊರಗೆ ಬರುವುದು ಕಡಿಮೆಯಾಯಿತು. ಸಾಂಸ್ಕೃತಿಕ ಕೆಲಸಗಳಿಗೆ ಒಂದಷ್ಟು ಹಣ ಸಹಾಯ ಮಾಡುತ್ತಿದ್ದ ಪ್ಲಾಂಟರ್‌ಗಳು ಕೈಗೇ ಸಿಗದಾದರು. ಯಕ್ಷಗಾನ ಮೇಳಗಳು ಕೂಡಾ ಇತ್ತ ಬರುವುದು ನಿಂತುಹೋಯಿತು.

ಯಾವುದೇ ಜನಪದವಾಗಲಿ, ಹೊಟ್ಟೆ ತುಂಬಿರಲಿ ಹಸಿವಿರಲಿ ತನ್ನ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ಬಿಟ್ಟುಕೊಡದು. ಶಿಷ್ಟ ಮಾರ್ಗಗಳು ಇಲ್ಲದಿದ್ದಾಗಲೂ ಜಾನಪದ ತನ್ನ ಕಾಡುಹಾದಿಯನ್ನು, ಕಾಲುದಾರಿಯನ್ನು ಹುಡುಕಿಕೊಂಡು ತನ್ನ ಚಲನಶೀಲತೆಯನ್ನು ಮತ್ತು ಉಸಿರಾಟವನ್ನು ಹಿಡಿದಿಟ್ಟುಕೊಂಡೇ ಇರುತ್ತದೆ. ಹಸಿವಿನಿಂದ ಇದ್ದಾಗ ಎಲ್ಲ ಸಮಸ್ಯೆಗಳ ನಡುವೆಯೂ ಈ ತುಡಿತ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಸಾಮಾನ್ಯರ ಅನುಭವ.

ಕಲಾಕೇಸರಿ ಮೂರ್ತಿ ರಾವ್, ಮತ್ತು ಪ್ರೆಸ್ ಸ್ವಾಮಿ ಯಚ್ಚಮನಾಯಕ ನಾಟಕದಲ್ಲಿ

ಇದು ಕಾಫಿ ವಲಯದಲ್ಲೂ ನಿಜವೇ. ಶತಮಾನಗಳಿಂದ ಇಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆ ಇರಬಹುದು. ಅಥವಾ ಬ್ರಿಟಿಷ್ ಜೀವನ ಶೈಲಿಯ ಪ್ರಭಾವದಿಂದ ಬೆಳವಣಿಗೆಯ ಮಾರ್ಗ ಕುಂಠಿತವಾಗಿರಬಹುದು ಆದರೆ ಆಗಲೂ ಜನಪದ ಪ್ರಕಾರಗಳಲ್ಲಿ ಒಂದಷ್ಟು ಕಾವ್ಯ, ಕತೆ, ನೃತ್ಯ, ನಾಟಕ, ಹರಿಕತೆ, ಗೊಂಬೆಯಾಟಗಳು ನಡೆದೇ ಇದ್ದವು. ದೊಡ್ಡಮನೆ ಚನ್ನಯ್ಯ ಶೆಟ್ಟಿ, ನಿಡಿಗೆರೆ ನರಸಿಂಹ ಶಾಸ್ತ್ರಿ, ಕರಗೂರು ಗಿರಿಜಮ್ಮ, ಚಿನ್ನಹಳ್ಳಿ ಗಂಗಮ್ಮ, ತಂಬೂರಿ ನಿಂಗಯ್ಯ ಮುಂತಾದವರು ಬ್ರಿಟಿಷ್ ಕಾಲದಲ್ಲಿಯೂ ಮಂಜರಾಬಾದ್ ವಲಯದ ಶಿಷ್ಟ ಮತ್ತು ಜಾನಪದ ಕ್ಷೇತ್ರವನ್ನು ಜೀವಂತವಾಗಿ ಉಳಿಸಿಕೊಂಡು ಬಂದಿದ್ದರು.

1990ರಲ್ಲಿ ದೇಶಾದ್ಯಂತ ಮಂಡಲ- ಮಂದಿರ ವಿಚಾರಗಳು ಬೀದಿಗೆ ಬಂದಿದ್ದವು. ರಥಯಾತ್ರೆಗಳ ಭರಾಟೆ ಪ್ರಾರಂಭವಾಗಿತ್ತು. ಅಯೋಧ್ಯಾ ಪ್ರಕರಣದ ನಂತರವಂತೂ ದೇಶವೇ ಹತ್ತಿ ಉರಿದಿತ್ತು. ಎಲ್ಲೆಲ್ಲೂ ರಸ್ತೆ ತಡೆ, ಬೆಂಕಿ, ಹೊಡೆದಾಟ, ಸಾವು ಇತ್ಯಾದಿಗಳಲ್ಲದೆ, ಸಂಚಾರ ವ್ಯವಸ್ಥೆ, ಟೆಲಿಫೋನ್, ಟಪಾಲು ಎಲ್ಲವೂ ಅಸ್ತವ್ಯಸ್ತವಾಗಿದ್ದವು.

ಕರ್ನಾಟಕ ತಮಿಳುನಾಡುಗಳಲ್ಲಿ ಕಾಡುಗಳ್ಳ ವೀರಪ್ಪನ್‌ನ ಅಟ್ಟಹಾಸವೂ ಜೋರಾಗಿತ್ತು. ಮೈಸೂರು ಜೈಲಿನಿಂದ ವೀರಪ್ಪನ್‌ ಅನ್ನು ಬೇರೆಡೆಗೆ ಕರೆದೊಯ್ಯುವಾಗ ಕೆಲವರು ಅವನಿಗೆ ಜೈಕಾರ ಹಾಕಿದ್ದರು.

ಈ ಎಲ್ಲ ವಿಚಾರಗಳು ಮತ್ತು ಅಂದಿನ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು “ಇಂಡಿಯಾ 1991” ಎನ್ನುವ ನಾಟಕ ಬರೆದೆ.

ಮಲ್ನಾಡ್ ಕಲಾ ಸಂಘ (ಘಟಂ ಮತ್ತು ತಬಲಾ ದಲ್ಲಿ ಕರೀಂಖಾನರ ಸೋದರ ಸಂಬಂಧಿಗಳು ,ರಿಯಾಜ್ ಖಾನ್ ಮತ್ತು ಫಯಾಜ್ ಖಾನ್

ಪೂರ್ಣಿಮಾ ಎಸ್ಟೇಟ್ ಮಾರಾಟವಾದ ನಂತರ ಹರಿದು ಹಂಚಿಹೋದಂತಿದ್ದ ನಮ್ಮ ರಂಗ ತಂಡವನ್ನು ಮತ್ತೆ ಒಗ್ಗೂಡಿಸಬೇಕಿತ್ತು. ಕೆಲವರು ಹೊಸಬರು ತಂಡಕ್ಕೆ ಸೇರಿದರು. ಒಂದೆರಡು ತಿಂಗಳಲ್ಲಿ ನಾಟಕ ಪ್ರದರ್ಶನಕ್ಕೆ ಸಿದ್ಧವಾಯಿತು. ಅಲ್ಲಲ್ಲಿ ಈ ನಾಟಕದ ಪ್ರದರ್ಶನ ನಡೆಯಿತು. ಹಲವರ ಕೆಂಗಣ್ಣಿಗೂ ಈ ನಾಟಕ ಗುರಿಯಾಯಿತು.

ಆ ವರ್ಷ ಲೋಕಸಭೆಗೆ ಚುನಾವಣೆಗಳು ನಡೆಯಲಿದ್ದವು. ಚುನಾವಣೆ ಘೋಷಣೆಯಾಗುವ ತನಕ ಈ ನಾಟಕದ ಪ್ರದರ್ಶನಗಳು ಮುಂದುವರೆದವು. ಚುನಾವಣೆಯ ನಡುವಿನಲ್ಲಿಯೇ ರಾಜೀವ್ ಗಾಂಧಿ ಹತ್ಯೆಯಾದುದರಿಂದ ಚುನಾವಣೆಯೂ ಮುಂದಕ್ಕೆ ಹೋಗಿ ಅದರ ಪ್ರಕ್ರಿಯೆಗಳು ಮುಗಿಯುವ ಹೊತ್ತಿಗೆ ಮಳೆಗಾಲ ಬಂದಿತ್ತು. ನಂತರ ಆ ವರ್ಷ ನಾಟಕದ ಪ್ರದರ್ಶನ ಸಾಧ್ಯವಾಗಲಿಲ್ಲ.

ಆ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರು ಹಾಸನದಿಂದ ಲೋಕಸಭೆಗೆ ಆಯ್ಕೆಯಾದರು. ಕೇಂದ್ರದಲ್ಲಿ ಪಿ.ವಿ ನರಸಿಂಹರಾಯರ ಸರ್ಕಾರ ಬಂತು.

ಮಳೆಗಾಲ ಕಳೆದ ನಂತರ ಮತ್ತೆ ನಮ್ಮ “ಇಂಡಿಯಾ 1991” ನಾಟಕವನ್ನು ಪ್ರಾರಂಭಿಸಿದೆವು. ಆದರೆ  ರಥಯಾತ್ರೆಯಿಂದ ಪ್ರಾರಂಭವಾದ ಗಲಭೆಗಳು ಮತ್ತು ಬಾಬರಿ ಮಸೀದಿಯ ಗಲಾಟೆಗಳು ಹೆಚ್ಚುತ್ತಾ ಹೋದಂತೆ ನಮಗೆ ನಾಟಕ ಪ್ರದರ್ಶನ ಮಾಡಲು ಸಾಧ್ಯವಾಗದಂತ ಸ್ಥಿತಿ ನಿರ್ಮಾಣವಾಯಿತು. ಅದನ್ನು ನಿಲ್ಲಿಸಿದೆವು.

ಇಂಡಿಯಾ 1991 ನಾಟಕದ ವಿವರ

ಮಲೆನಾಡಿನ ಕಾಫಿ ವಲಯದಲ್ಲಿಯೂ ಗಲಭೆಗಳಾದವು. ಸಕಲೇಶಪುರ ತಾಲ್ಲೂಕಿನ ಹಾನುಬಾಳು, ಹೆತ್ತೂರು, ಬಾಳ್ಳುಪೇಟೆಯಂತಹ ಹಳ್ಳಿಗಳಿಗೂ ಗಲಭೆ ಹಬ್ಬಿತ್ತು. ಪ್ರಥಮ ಬಾರಿಗೆ ಕರ್ಫ್ಯೂ ಎಂದರೇನೆಂದು ಸಕಲೇಶಪುರದ ಜನ ಅನುಭವಿಸಿದರು. ಕೋಮು ಗಲಭೆಯ ಕಳಂಕ ನಮ್ಮ ತಾಲ್ಲೂಕಿಗೂ ಅಂಟಿಕೊಂಡಿತ್ತು. ಕೆಲವು ತಿಂಗಳ ಕಾಲ ಹಳ್ಳಿಗಳಲ್ಲಿಯೂ ಒಂದು ರೀತಿಯ ಭಯ ಮತ್ತು ಅಪನಂಬಿಕೆಯ ವಾತಾವರಣ ಸೃಷ್ಟಿಯಾಗಿತ್ತು.

ನಮ್ಮ ಈ ನಾಟಕದ ಪ್ರದರ್ಶನವನ್ನು ಹಾರ್ಲೆ ಎಸ್ಟೇಟಿನಲ್ಲಿಯೂ ಮಾಡಿದ್ದೆವು. ರವಿಂದ್ರನಾಥರು ಇಡೀ ನಾಟಕವನ್ನು ನೋಡಿದರು. ನಂತರ “ನಾಟಕದ ಮೂಲಕ ಹಲವು ವಿಚಾರಗಳನ್ನು ಹೇಳಲು ಪ್ರಯತ್ನಿಸಿದ್ದೀಯ. ಹೌದು ಅಸಹನೆಯ ಮೂಲಕ ಯಾವ ಸಮಾಜವನ್ನೂ ಕಟ್ಟಲು ಸಾಧ್ಯವಿಲ್ಲ. ಇದನ್ನು ನೋಡಿ ಕೆಲವರಿಗಾದರೂ ಅರ್ಥವಾಗಬಹುದು. ಬೇರೆ ಕಡೆಯ ಪ್ರದರ್ಶನಗಳಲ್ಲಿ ಜನರ ಸ್ಪಂದನೆ ಹೇಗಿತ್ತು? ಎಂದು ಕೇಳಿದರು”.

ನಾನು “ಸುಮಾರಾಗಿತ್ತು, ಆದರೆ ರಾಜಕೀಯ ವಿಷಯಗಳ ನಾಟಕಗಳನ್ನೂ ಜನ ಅರ್ಥಮಾಡಿಕೊಳ್ಳುವುದು ಮಾತ್ರವಲ್ಲ ಇಷ್ಟಪಡುತ್ತಾರೆ. ಆದರೆ ವಿದ್ಯಾವಂತರಿಗೆ ಹೆಚ್ಚು ಅರ್ಥವಾಗಬಹುದು” ಎಂದೆ.

“ಹಾಗೇನಿಲ್ಲ ಶಾಲೆಯ ಮೂಲಕ ಕಲಿತದ್ದು ವಿದ್ಯೆ ಅನ್ನುವುದು ನಮ್ಮ ಅನಿಸಿಕೆ ಅಷ್ಟೇ, ಅವರಿಗೆ ಜೀವನಾನುಭವ ಹೆಚ್ಚಿನ ವಿದ್ಯೆ ಕೊಟ್ಟಿರುತ್ತದೆ” ಎಂದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಭಾಗದ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...