Homeಮುಖಪುಟಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

ಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

- Advertisement -
- Advertisement -

ಎಲ್ಲರಿಗೂ ಗೊತ್ತಿರುವ ಸಂಗತಿ ಏನೆಂದರೆ, ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರದ ಸಂಸ್ಥೆಗಳು ಮುಗಿಬಿದ್ದಿರುವುದು ಭ್ರಷ್ಟಾಚಾರ ನಿಗ್ರಹಕ್ಕಲ್ಲ. ಗಣಿ ಲೂಟಿ ಹೊಡೆದ ಆರೋಪ ಹೊತ್ತಿರುವ ಮಾಜಿ ಮಂತ್ರಿ ಜನಾರ್ಧನರೆಡ್ಡಿಯನ್ನು ಜೊತೆಯಲ್ಲಿಟ್ಟುಕೊಂಡ ಬಿಜೆಪಿಯು ಗಣಿ ಕಳ್ಳರನ್ನು ರಕ್ಷಿಸುತ್ತಿದೆ. ಆಪರೇಷನ್ ಕಮಲದ ಮಾತು ಬಂದಾಗಲೆಲ್ಲಾ ಬಿಜೆಪಿ ನಾಯಕರುಗಳು, ‘ಅದರ ಕುರಿತು ನಾವೇನೂ ಹೇಳುವುದಿಲ್ಲ, ಯಡಿಯೂರಪ್ಪನವರು ಮತ್ತು ಶ್ರೀರಾಮುಲು ಅದನ್ನು ನೋಡಿಕೊಳ್ತಾರೆ’ ಎಂದು ಯಾವ ಎಗ್ಗೂ ಸಿಗ್ಗೂ ಇಲ್ಲದೇ ಹೇಳುತ್ತಿದ್ದಾರೆ. ಈಗ ಡಿ.ಕೆ.ಶಿವಕುಮಾರ್‍ರು ಮಾತ್ರ ಭ್ರಷ್ಟರು ಎಂದು ದಾಳಿ ನಡೆಸುತ್ತಿರುವುದು ಕೇವಲ ಅವರನ್ನು ಮಣಿಸಲಿಕ್ಕೆ. ಆ ಮೂಲಕ ಇತರ ನಾಯಕರುಗಳಿಗೂ ಸಂದೇಶ ರವಾನಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಹಾಗೆಂದು ಡಿ.ಕೆ.ಶಿವಕುಮಾರ್‍ರ ಕುಟುಂಬ ಸಾಚಾ ಏನಲ್ಲ. ಅಧಿಕಾರಕ್ಕೇರುವ ಸಂದರ್ಭ ಬಂದಾಗ ಫಲವತ್ತಾದ ಖಾತೆಗಳನ್ನು ಕೇಳುವುದು, ಹೈಕಮ್ಯಾಂಡ್ ಸೇರಿದಂತೆ ಎಲ್ಲರನ್ನೂ ‘ಸಂತೃಪ್ತ’ರನ್ನಾಗಿಸಲು ಸಾಧ್ಯವಾಗುವುದು, ಚುನಾವಣೆಯಲ್ಲೂ ಇತರ ಕ್ಷೇತ್ರಗಳಿಗೂ ಸಂಪನ್ಮೂಲ ಹೊಂದಿಸುವ ಜವಾಬ್ದಾರಿ ಹೊರುವುದು, ವಿವಿಧ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮುಂದೆ ನಿಂತು ‘ಏನೇ ಬರಲಿ ನೋಡಿಕೊಳ್ತೇನೆ’ ಎಂಬ ರೀತಿಯಲ್ಲಿ ಮುಂದೆ ನುಗ್ಗುವುದು ಇವೆಲ್ಲವೂ ಕೇವಲ ರಾಜಕೀಯ ಧೈರ್ಯದ ಹೆಗ್ಗುರುತುಗಳಲ್ಲ. ವಿವಿಧ ರೀತಿಗಳಿಂದ ರಾಶಿ ಮಾಡಿಟ್ಟುಕೊಂಡಿರುವ ಸಂಪತ್ತು ತಂದುಕೊಟ್ಟಿರುವ ಆರ್ಥಿಕ ಧೈರ್ಯದ ಕುರುಹು.
ಇದಕ್ಕಾಗಿ ಡಿ.ಕೆ.ಶಿವಕುಮಾರ್ ಕೆಲವು ರೀತಿಯ ಸಂಬಂಧಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇದೀಗ ತಾನೇ ಅವರು ಹೇಳಿದ ‘ಯಡಿಯೂರಪ್ಪನವರು ಈಗಲೂ ನಮ್ಮ ಸ್ನೇಹಿತರೇ’ ಮಾತು ಅರ್ಧ ಸುಳ್ಳಾದರೂ ಅರ್ಧ ಸತ್ಯ ಸಹಾ ಹೌದು. ಬಿಜೆಪಿ ಸರ್ಕಾರವಿದ್ದಾಗ ಇಂಧನ ಸಚಿವರಾಗಿದ್ದು ಶೋಭಾ ಕರಂದ್ಲಾಜೆ; ಅದನ್ನು ನಿರ್ವಹಿಸುತ್ತಿದ್ದ ಶೋಭಾ ಕರಂದ್ಲಾಜೆಯವರು ಮಾಡಿದ ಅವ್ಯವಹಾರವನ್ನು ಮುಚ್ಚಿ ಹಾಕಲು, ಸದನ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸ್ವತಃ ಡಿ.ಕೆ. ಹೊತ್ತುಕೊಂಡಿದ್ದರು. ಆಗ ಇಬ್ಬರ ವಿರುದ್ಧವೂ ತೊಡೆ ತಟ್ಟಿದ್ದ ಎಚ್.ಡಿ.ಕೆ. ಈಗ ಡಿ.ಕೆ. ಅವರ ಪಾರ್ಟ್‍ನರ್. ಕೇವಲ ಅಧಿಕಾರ ಹಂಚಿಕೊಳ್ಳುವುದರಲ್ಲಿ ಮಾತ್ರವಲ್ಲ. ಈ ಸದ್ಯ ಬಿಜೆಪಿಯನ್ನು ಎದುರಿಸಲು ಮತ್ತು ಬಿಜೆಪಿಯಿಂದ ತೊಂದರೆ ಅನುಭವಿಸುವುದರಲ್ಲೂ ಪಾರ್ಟ್‍ನರ್‍ಗಳೇ.
ವಾಸ್ತವದಲ್ಲಿ ಯಡಿಯೂರಪ್ಪನವರನ್ನು ಡಿ.ಕೆ. ಪಾರು ಮಾಡಿದ್ದು ಇಂಧನ ಖಾತೆಯ ಅವ್ಯವಹಾರದ ವಿಚಾರದಲ್ಲಿ ಮಾತ್ರವಲ್ಲಾ.. ಅಕ್ಟೋಬರ್ 21, 2016ರಂದು ನಡೆದ ಒಂದು ಸಿನೀಮಿಯ ಘಟನೆಯು ಯಡಿಯೂರಪ್ಪನವರಿಗೆ ಹೆದರಿಕೆ ಹುಟ್ಟಿಸಿತ್ತು. ಅಂದು ವಿಧಾನಸೌಧದ ಪಶ್ಚಿಮ ದ್ವಾರದಿಂದ ಹೊರಟ ಒಂದು ವೋಕ್ಸ್‍ವ್ಯಾಗನ್ ಪೋಲೋ ಕಾರನ್ನು (ಕೆಎ-04, ಎಂ.ಎಂ 9018) ಪೊಲೀಸರು ಶೋಧಿಸಿದಾಗ ಅದರಲ್ಲಿ 1.9 ಕೋಟಿ ಹಣ ಸಿಕ್ಕಿತು. ಕಾರಿನಲ್ಲಿದ್ದ ಸಿದ್ಧಾರ್ಥ ಎಂಬ ವಕೀಲರನ್ನು ಹಣದ ಮೂಲದ ಬಗ್ಗೆ ಪೊಲೀಸರು ಪ್ರಶ್ನಿಸಿದರು. ಆ ವಕೀಲರು 2-3 ಬೇರೆ ಬೇರೆ ಉತ್ತರಗಳನ್ನು ಹೇಳಿದರು. ಪೊಲೀಸರು ಕೇಸು ರಿಜಿಸ್ಟರ್ ಮಾಡಿ ಹಣ ಮತ್ತು ಕಾರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.
3 ದಿನಗಳ ನಂತರ ಎಚ್.ಡಿ.ಕುಮಾರಸ್ವಾಮಿಯವರು ಈ ಸಂಬಂಧ ತನಿಖೆಯಾಗಬೇಕು ಮತ್ತು ಆ ಕಾರಿನಲ್ಲಿದ್ದ ಹಣ ಎಲ್ಲಿಂದ ಬಂದಿತು, ಎಲ್ಲಿಗೆ ಹೋಗುತ್ತಿತ್ತು ಎಂಬ ಕುರಿತು ಯಡಿಯೂರಪ್ಪನವರನ್ನು ಪ್ರಶ್ನಿಸಬೇಕು ಎಂದು ಪತ್ರಕರ್ತರ ಮುಂದೆ ಹೇಳಿದರು. ವಾಸ್ತವದಲ್ಲಿ ಒಂದು ತನಿಖೆ ಅಷ್ಟರಲ್ಲಾಗಲೇ ಗುಪ್ತವಾಗಿ ನಡೆದು ಬಿಟ್ಟಿತ್ತು. ಆ ಕಾರು ಬಂದಿದ್ದ ದಿಕ್ಕಿನ ಸಿಸಿಟಿವಿಗಳನ್ನು ಪೊಲೀಸ್ ಇಲಾಖೆಯ ಒಂದು ತಂಡ ಪರಿಶೀಲಿಸಿತು. ಅದು ಸೀದಾ ಕುಮಾರಪಾರ್ಕ್‍ನ ಒಂದು ನಿರ್ದಿಷ್ಟ ಮನೆಯಿಂದ ಹೊರಟಿತ್ತು. ಈ ವಕೀಲ ಸಿದ್ಧಾರ್ಥ, ಕಾರಿನಲ್ಲಿ ಹಣ ಸಿಕ್ಕ ಮರುದಿನ ತೀರ್ಪು ಬಂದ ಕೇಸಿನಲ್ಲಿ ಯಡಿಯೂರಪ್ಪನವರ ಮಗನ ಪರವಾಗಿ ವಾದಿಸಿದ್ದರು.
ಈ ಹಗರಣವನ್ನು ಬಯಲಿಗೆಳೆದು ಸಂಬಂಧಪಟ್ಟವರನ್ನೆಲ್ಲಾ ಹಿಡಿದು ಹಾಕುವ ಧೈರ್ಯವನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ತೋರಿದ್ದರೆ, ಅದು ಜನಾರ್ಧನರೆಡ್ಡಿಯ ಜಾಮೀನು ಕೇಸಿನ ರೀತಿ ಆಗುತ್ತಿತ್ತು. ಅದನ್ನಾಗದಂತೆ ತಡೆದವರು ಡಿ.ಕೆ.ಶಿವಕುಮಾರ್ ಎಂದು ವಿಧಾನಸೌಧದ ಹಲವು ಅಧಿಕಾರಿಗಳು ಕಂಡುಕೊಂಡಿದ್ದರು. ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಡಿ.ಕೆ.ಶಿ ಸಹಾ ಉಪಕೃತರಾಗಿದ್ದುದರಿಂದಲೇ ಈ ಮಟ್ಟಿಗಿನ ಪ್ರತ್ಯುಪಕಾರವನ್ನು ಅವರು ಮಾಡಿದ್ದರೆಂಬುದು ಇಬ್ಬರ ಸಂಬಂಧವನ್ನು ಬಲ್ಲವರ ಮಾತಾಗಿತ್ತು.
ಆದ್ದರಿಂದಲೇ ಡಿ.ಕೆ.ಶಿ ಆಸ್ತಿ ಮೇಲೆ ದಾಳಿ ನಡೆದಾಗ ಯಡಿಯೂರಪ್ಪನವರು ಬಹಿರಂಗವಾಗಿ ಮಾತುಗಳನ್ನಾಡದೇ ಮೃದುಧೋರಣೆ ತೋರಿದ್ದರು. ಇದಕ್ಕಾಗಿ ಅವರು ಬಿಜೆಪಿ ಹೈಕಮ್ಯಾಂಡ್‍ನ ಕೋಪವನ್ನೂ ಎದುರಿಸಬೇಕಾಗಿ ಬಂದಿತು. ಅಲ್ಲಿಗೆ ಅವರಿಬ್ಬರ ಸ್ನೇಹ ಕೊನೆಗೊಂಡಿತ್ತು. ಅಲ್ಲಿಂದ ಮುಂದಕ್ಕೆ ಪಕ್ಷದ ವ್ಯೂಹದ ಭಾಗವಾಗಿ ಯಡಿಯೂರಪ್ಪನವರೂ ಆಡುತ್ತಿದ್ದಾರೆ. ವಿಶ್ವಾಸಮತ ಯಾಚನೆಯ ಸಂದರ್ಭದಲ್ಲೂ ಸಿದ್ದರಾಮಯ್ಯನವರನ್ನು ಹೊಗಳಿದ ಯಡ್ಡಿ ‘ಅಪ್ಪ ಮಕ್ಕಳ’ ವಿರುದ್ಧ ಹರಿಹಾಯ್ದಿದ್ದರು.
ಈ ಸದ್ಯ ದಕ್ಷಿಣ ಕರ್ನಾಟಕದ ಒಕ್ಕಲಿಗರ ಪ್ರದೇಶಕ್ಕೆ ಲಗ್ಗೆ ಹಾಕಲಿಚ್ಛಿಸಿರುವ ಬಿಜೆಪಿಯು ಗೌಡರ ಫ್ಯಾಮಿಲಿ ಮತ್ತು ಡಿಕೆಶಿ ಫ್ಯಾಮಿಲಿಯನ್ನು ಮಣಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸಿದ್ದರಾಮಯ್ಯನವರು ಮತ್ತು ಜಾರಕಿಹೊಳಿ ಬ್ರದರ್ಸ್ ಬಗ್ಗೆ ಮೃದುವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಬಾರದು, ಅವರಿಗೆ ಯಾರೆಲ್ಲಾ ಮಗ್ಗುಲಮುಳ್ಳಾದರೂ ಒಳ್ಳೆಯದು; ನಂತರ ಉಂಟಾಗುವ ಧ್ರುವೀಕರಣದ ಲಾಭವನ್ನು ಬಿಜೆಪಿಯ ಒಕ್ಕಲಿಗ ನಾಯಕರು ಪಡೆದುಕೊಳ್ಳಬೇಕೆಂಬುದು ಅದರ ಇರಾದೆ.
ಆದರೆ, ಇದು ಅವರ ಪರವಾಗಿ ವರ್ಕೌಟ್ ಆಗುತ್ತಿಲ್ಲ. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಕ್ಕಲಿಗ ನಾಯಕರನ್ನು ಎದುರು ಹಾಕಿಕೊಳ್ಳಲು ಬಿಜೆಪಿಯ ಯಾವೊಬ್ಬ ಒಕ್ಕಲಿಗ ನಾಯಕರೂ ರೆಡಿಯಾಗುತ್ತಿಲ್ಲ. ಅದು ಮತ್ತೆ ಮತ್ತೆ ಯಡಿಯೂರಪ್ಪನವರಿಗೇ ಬಂದು ಸುತ್ತಿಕೊಳ್ಳುತ್ತಿದೆ. ಸುತ್ತಿಕೊಳ್ಳಲಿ ಎಂದು ಡಿಕೆಶಿ ಬ್ರದರ್ಸ್ ಮತ್ತು ಗೌಡರ ಫ್ಯಾಮಿಲಿ ಬಯಸಿದೆ. ಇದೇ ಕಾರಣಕ್ಕೇನೇ ‘ನಮ್ಮ ವಿರುದ್ಧ ಯಡಿಯೂರಪ್ಪನವರು ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ’ ಎಂದು ಡಿ.ಕೆ.ಸುರೇಶ್ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಾರೆ; ‘ಯಡಿಯೂರಪ್ಪನವರ ಮಗ ಪದೇ ಪದೇ ತೆರಿಗೆ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆಂಬುದು ಗೊತ್ತು’ ಎಂದು ಕುಮಾರಸ್ವಾಮಿಯವರೂ ಬಹಿರಂಗವಾಗಿ ಹೇಳಿಕೆ ಕೊಡುತ್ತಾರೆ. ಕುಮಾರಸ್ವಾಮಿಯವರ ದೊಡ್ಡ ಅಣ್ಣ ಮಾಜಿ ಅಧಿಕಾರಿ ಬಾಲಕೃಷ್ಣೇಗೌಡರ ಮನೆ ಮೇಲೆ ಮತ್ತು ಎಚ್‍ಡಿಕೆಯ ಖಾಸಾ ಚಾರ್ಟರ್ಡ್ ಅಕೌಂಟೆಂಟ್ ಸುನಿಲ್‍ರ ಮನೆ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂದರೆ ತಮ್ಮನ್ನು ಬಲಿಪಶು ಮಾಡಲು ಬಿಜೆಪಿ ಸಂಚು ನಡೆಸುತ್ತಿದೆ, ಅದರಲ್ಲೂ ಯಡಿಯೂರಪ್ಪನವರು ಅಂತಹ ಸಂಚಿನ ರೂವಾರಿ ಎಂಬುದನ್ನು ಮುಂದಿಡಲು ಈ ಎರಡೂ ಕುಟುಂಬಗಳು ಸಂದೇಶ ನೀಡಬಯಸುತ್ತಿವೆ.
ದೆಹಲಿಗೆ ಹೋಗುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥರನ್ನು ಭೇಟಿಯಾಗಿದ್ದೂ ಇಂತಹುದ್ದೇ ಕಾರಣಕ್ಕೆ. ಇದು ಬಿಜೆಪಿಯು ನಡೆಸುತ್ತಿರುವ ಒಕ್ಕಲಿಗ ವಿರೋಧಿ ಪಾಲಿಟಿಕ್ಸ್‍ನ ಭಾಗ ಮತ್ತು ಮಠವು ತಮ್ಮ ಪರವಾಗಿ ನಿಲ್ಲಬೇಕೆಂಬುದು ಡಿಕೆಶಿ ಆಗ್ರಹವಾಗಿತ್ತು.
ಇದಕ್ಕೊಂದು ಜಾತಿ ರೂಪ ಕೊಡಬಹುದೆಂದು ಸಂಬಂಧಪಟ್ಟ ರಾಜಕಾರಣಿಗಳು ಈಗಾಗಲೇ ಲೆಕ್ಕಾಚಾರ ಹಾಕಿಯಾಗಿದೆ. ಡಿ.ಕೆ.ಶಿವಕುಮಾರ್ ಯಾವ ಕಾರಣಕ್ಕೂ ಸಿ.ಎಂ ಆಗುವ ಆಸೆಯನ್ನು ಪಕ್ಕಕ್ಕಿಡುವ ವ್ಯಕ್ತಿಯಲ್ಲ. ಸಿ.ಎಂ. ಆಗುವುದನ್ನು ಬಿಟ್ಟರೆ ಕೇಂದ್ರ ಮಂತ್ರಿಯೋ ಮತ್ತೊಂದೋ ಆಗಿ ತಮ್ಮ ರಾಜಕೀಯ ಜೀವನವನ್ನು ಕೊನೆಗೊಳಿಸಿಕೊಳ್ಳುವುದನ್ನು ಅವರು ಯೋಚಿಸಿಲ್ಲ. ಸಂಪತ್ತು ಗುಡ್ಡೆ ಹಾಕಿಕೊಳ್ಳುತ್ತಿರುವುದು ಮುಂದೊಂದು ದಿನ ‘ರಾಜ್ಯದ ಇಡೀ ಚುನಾವಣೆ ನಾನು ನಡೆಸುತ್ತೇನೆ, ಸಿಎಂ ಮಾಡುತ್ತೇವೆಂಬ ಖಚಿತ ಭರವಸೆ ಕೊಡಿ’ ಎಂದು ಹೈಕಮ್ಯಾಂಡ್ ಮುಂದೆ ಹೇಳಲೂ ಸಹಾ ಆಗಿದೆ.
‘ನಾವು ಏನೂ ತಪ್ಪು ಮಾಡಿಲ್ಲ; ಎಲ್ಲಾ ವ್ಯವಹಾರಗಳನ್ನು ಕ್ರಮಬದ್ಧವಾಗಿಯೇ ಮಾಡಿದ್ದೇವೆ. ಜೈಲಿಗೆಲ್ಲಾ ಹೆದರುವವರಲ್ಲ’ ಎಂದು ಡಿ.ಕೆ. ಅಣ್ಣ ತಮ್ಮಂದಿರಿಬ್ಬರೂ ಹೇಳಿದ್ದಾರೆ. ಬಂದದ್ದು ಬರಲಿ, ತಮ್ಮ ಆಕ್ರಮಣಕಾರಿ ರಾಜಕಾರಣದಿಂದ ಹಿಂತೆಗೆಯಬಾರದು ಎಂದು ತೀರ್ಮಾನಿಸಿಕೊಂಡಿದ್ದಾರೆ. ಒಂದು ವೇಳೆ ಬಂಧನವೇ ಆಗುವುದಾದಲ್ಲಿ ಅದು ತಮಗೇ ಅನುಕಂಪ ತರುವಂತೆ ಮಾಡಿಕೊಳ್ಳಬೇಕೆಂಬುದು ಅವರ ಪ್ಲಾನ್. ಆದರೆ, ಅದಕ್ಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಹೆಚ್ಚಿನ ಸಾಥ್ ಸಿಗಲಾರದು ಎಂಬುದು ಅವರಿಗೆ ಗೊತ್ತು. ಹಾಗಾಗಿಯೇ ಜೆಡಿಎಸ್ ಫ್ಯಾಮಿಲಿಯ ಜೊತೆಗೆ ಹೈಕಮ್ಯಾಂಡ್‍ನ ಬೆಂಬಲ ಸಿಕ್ಕರೆ ಸಾಕೆಂದು ಯೋಚಿಸಿ, ದೆಹಲಿಗೆ ಹೋದರು. ಅಲ್ಲಿಗೆ ಹೋದವರೇ ಅಹ್ಮದ್ ಪಟೇಲರನ್ನು ಕಂಡರು. ಅಲ್ಲಿ ಅವರಿಗೆ ಬೇಕಿದ್ದುಷ್ಟು ಬೆಂಬಲವೂ ಸಿಕ್ಕಿತು. ಅಹ್ಮದ್ ಪಟೇಲರು ರಾಜ್ಯಸಭೆ ಸದಸ್ಯರಾಗಿ ಪುನರಾಯ್ಕೆಯಾಗುವಲ್ಲಿ ಡಿಕೆಶಿಯವರ ರೆಸಾರ್ಟ್ ಪಾಲಿಟಿಕ್ಸ್‍ನ ಪಾತ್ರ ದೊಡ್ಡದಿತ್ತು. ಈಗ ಎಐಸಿಸಿಯ ಖಜಾಂಚಿಯೂ ಆಗಿರುವ ಅಹ್ಮದ್ ಪಟೇಲರಿಗೆ ಡಿಕೆಶಿಯಂತಹ ಕುಳದ ಅಗತ್ಯ ಮುಂದಕ್ಕೂ ಇದೆ. ಹಾಗಾಗಿ ಅಹ್ಮದ್ ಪಟೇಲರು ಜೊತೆಗೆ ನಿಲ್ಲುವುದರ ಬಗ್ಗೆ ಸಂಶಯವಿರಲಿಲ್ಲ.
ಅದರ ಜೊತೆಗೆ ‘ಬಿಎಸ್‍ವೈ ಮತ್ತು ದೆಹಲಿ ನಮ್ಮ ದೋಣಿಯನ್ನು ಮುರಿಯಲು ವಿವಿಧ ಕೇಂದ್ರೀಯ ಏಜೆನ್ಸಿಗಳ ಮೂಲಕ ಯತ್ನಿಸುತ್ತಿದ್ದಾರೆ. ಆದರೆ ಒಂದು ವಿಚಾರ ಹೇಳಲು ಬಯಸುತ್ತೇನೆ. ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ’ ಎಂಬ ಗೌಡರ ಕುಟುಂಬದ ಸಾರಥಿಯಾದ ಮುಖ್ಯಮಂತ್ರಿಯ ಖಡಕ್ ಮಾತು ಸಹಾ ಬ್ರದರ್ಸ್‍ಗೆ ಬೇಕಿದ್ದ ಸಾಥ್ ಕೊಟ್ಟಿದೆ. ಹಾಗಾಗಿ ಏನೇ ಬಂದರೂ ನೋಡಿಯೇ ಬಿಡೋಣ ಎಂಬ ತೀರ್ಮಾನವನ್ನು ಈರ್ವರೂ ಮಾಡಿಯಾಗಿದೆ.
ಇವೆಲ್ಲವೂ ಎಲ್ಲಿಗೆ ಹೋಗಿ ನಿಲ್ಲುತ್ತದೆಂಬುದನ್ನು ಈಗಲೇ ಹೇಳಲಾಗದು. ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೇ ಹೋಗಿಬಂದ ಯಡಿಯೂರಪ್ಪನವರು ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರೆ, ಡಿಕೆಶಿ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡರೆ ತಪ್ಪು, ಶ್ರೀರಾಮುಲು ರೆಡ್ಡಿಗಳು ಶಾಸಕರನ್ನು ಕೊಂಡುಕೊಂಡರೆ ಸರಿ ಎಂಬ ವಾದವನ್ನು ಮುಂದಿಟ್ಟರೆ ಜನರಿಗೆ ಒಪ್ಪಿಗೆಯಾಗದು. ಭ್ರಷ್ಟಾಚಾರವನ್ನು ನಡೆಸಿ, ಸಂಪತ್ತು ಗುಡ್ಡೆ ಹಾಕಿಕೊಳ್ಳುವುದರಲ್ಲಿ ಈ ಎರಡೂ ಫ್ಯಾಮಿಲಿಗಳು ಬಿಜೆಪಿಯ ಈ ಕುಳಗಳ ಜೊತೆ ಪೈಪೋಟಿ ನೀಡಲು ಪ್ರಯತ್ನಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ದುರಂತವೆಂದರೆ, ಬಿಜೆಪಿಯಂತಹ ಭ್ರಷ್ಟ ಪಕ್ಷವು ಕಾಂಗ್ರೆಸ್-ಜೆಡಿಎಸ್‍ಗಳ ಭ್ರಷ್ಟಾಚಾರದ ಬಗ್ಗೆ ಮಾತಾಡುವುದನ್ನು ರಾಜ್ಯದ ಜನತೆ ಕೇಳಬೇಕಾಗಿ ಬಂದಿದೆ.
ಅಂತಿಮವಾಗಿ ಇವು ಯಾರ ಭ್ರಷ್ಟಾಚಾರವನ್ನೂ ಕಡಿಮೆ ಮಾಡದೇ, ಜಾತಿ ಧ್ರುವೀಕರಣದ ಲೆಕ್ಕಾಚಾರಗಳ ಮೇಲಾಟವೇ ಹೆಚ್ಚಾಗುವ ಸಾಧ್ಯತೆ ಇದೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...