Homeಮುಖಪುಟಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

ಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

- Advertisement -
- Advertisement -

ಎಲ್ಲರಿಗೂ ಗೊತ್ತಿರುವ ಸಂಗತಿ ಏನೆಂದರೆ, ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರದ ಸಂಸ್ಥೆಗಳು ಮುಗಿಬಿದ್ದಿರುವುದು ಭ್ರಷ್ಟಾಚಾರ ನಿಗ್ರಹಕ್ಕಲ್ಲ. ಗಣಿ ಲೂಟಿ ಹೊಡೆದ ಆರೋಪ ಹೊತ್ತಿರುವ ಮಾಜಿ ಮಂತ್ರಿ ಜನಾರ್ಧನರೆಡ್ಡಿಯನ್ನು ಜೊತೆಯಲ್ಲಿಟ್ಟುಕೊಂಡ ಬಿಜೆಪಿಯು ಗಣಿ ಕಳ್ಳರನ್ನು ರಕ್ಷಿಸುತ್ತಿದೆ. ಆಪರೇಷನ್ ಕಮಲದ ಮಾತು ಬಂದಾಗಲೆಲ್ಲಾ ಬಿಜೆಪಿ ನಾಯಕರುಗಳು, ‘ಅದರ ಕುರಿತು ನಾವೇನೂ ಹೇಳುವುದಿಲ್ಲ, ಯಡಿಯೂರಪ್ಪನವರು ಮತ್ತು ಶ್ರೀರಾಮುಲು ಅದನ್ನು ನೋಡಿಕೊಳ್ತಾರೆ’ ಎಂದು ಯಾವ ಎಗ್ಗೂ ಸಿಗ್ಗೂ ಇಲ್ಲದೇ ಹೇಳುತ್ತಿದ್ದಾರೆ. ಈಗ ಡಿ.ಕೆ.ಶಿವಕುಮಾರ್‍ರು ಮಾತ್ರ ಭ್ರಷ್ಟರು ಎಂದು ದಾಳಿ ನಡೆಸುತ್ತಿರುವುದು ಕೇವಲ ಅವರನ್ನು ಮಣಿಸಲಿಕ್ಕೆ. ಆ ಮೂಲಕ ಇತರ ನಾಯಕರುಗಳಿಗೂ ಸಂದೇಶ ರವಾನಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಹಾಗೆಂದು ಡಿ.ಕೆ.ಶಿವಕುಮಾರ್‍ರ ಕುಟುಂಬ ಸಾಚಾ ಏನಲ್ಲ. ಅಧಿಕಾರಕ್ಕೇರುವ ಸಂದರ್ಭ ಬಂದಾಗ ಫಲವತ್ತಾದ ಖಾತೆಗಳನ್ನು ಕೇಳುವುದು, ಹೈಕಮ್ಯಾಂಡ್ ಸೇರಿದಂತೆ ಎಲ್ಲರನ್ನೂ ‘ಸಂತೃಪ್ತ’ರನ್ನಾಗಿಸಲು ಸಾಧ್ಯವಾಗುವುದು, ಚುನಾವಣೆಯಲ್ಲೂ ಇತರ ಕ್ಷೇತ್ರಗಳಿಗೂ ಸಂಪನ್ಮೂಲ ಹೊಂದಿಸುವ ಜವಾಬ್ದಾರಿ ಹೊರುವುದು, ವಿವಿಧ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮುಂದೆ ನಿಂತು ‘ಏನೇ ಬರಲಿ ನೋಡಿಕೊಳ್ತೇನೆ’ ಎಂಬ ರೀತಿಯಲ್ಲಿ ಮುಂದೆ ನುಗ್ಗುವುದು ಇವೆಲ್ಲವೂ ಕೇವಲ ರಾಜಕೀಯ ಧೈರ್ಯದ ಹೆಗ್ಗುರುತುಗಳಲ್ಲ. ವಿವಿಧ ರೀತಿಗಳಿಂದ ರಾಶಿ ಮಾಡಿಟ್ಟುಕೊಂಡಿರುವ ಸಂಪತ್ತು ತಂದುಕೊಟ್ಟಿರುವ ಆರ್ಥಿಕ ಧೈರ್ಯದ ಕುರುಹು.
ಇದಕ್ಕಾಗಿ ಡಿ.ಕೆ.ಶಿವಕುಮಾರ್ ಕೆಲವು ರೀತಿಯ ಸಂಬಂಧಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇದೀಗ ತಾನೇ ಅವರು ಹೇಳಿದ ‘ಯಡಿಯೂರಪ್ಪನವರು ಈಗಲೂ ನಮ್ಮ ಸ್ನೇಹಿತರೇ’ ಮಾತು ಅರ್ಧ ಸುಳ್ಳಾದರೂ ಅರ್ಧ ಸತ್ಯ ಸಹಾ ಹೌದು. ಬಿಜೆಪಿ ಸರ್ಕಾರವಿದ್ದಾಗ ಇಂಧನ ಸಚಿವರಾಗಿದ್ದು ಶೋಭಾ ಕರಂದ್ಲಾಜೆ; ಅದನ್ನು ನಿರ್ವಹಿಸುತ್ತಿದ್ದ ಶೋಭಾ ಕರಂದ್ಲಾಜೆಯವರು ಮಾಡಿದ ಅವ್ಯವಹಾರವನ್ನು ಮುಚ್ಚಿ ಹಾಕಲು, ಸದನ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸ್ವತಃ ಡಿ.ಕೆ. ಹೊತ್ತುಕೊಂಡಿದ್ದರು. ಆಗ ಇಬ್ಬರ ವಿರುದ್ಧವೂ ತೊಡೆ ತಟ್ಟಿದ್ದ ಎಚ್.ಡಿ.ಕೆ. ಈಗ ಡಿ.ಕೆ. ಅವರ ಪಾರ್ಟ್‍ನರ್. ಕೇವಲ ಅಧಿಕಾರ ಹಂಚಿಕೊಳ್ಳುವುದರಲ್ಲಿ ಮಾತ್ರವಲ್ಲ. ಈ ಸದ್ಯ ಬಿಜೆಪಿಯನ್ನು ಎದುರಿಸಲು ಮತ್ತು ಬಿಜೆಪಿಯಿಂದ ತೊಂದರೆ ಅನುಭವಿಸುವುದರಲ್ಲೂ ಪಾರ್ಟ್‍ನರ್‍ಗಳೇ.
ವಾಸ್ತವದಲ್ಲಿ ಯಡಿಯೂರಪ್ಪನವರನ್ನು ಡಿ.ಕೆ. ಪಾರು ಮಾಡಿದ್ದು ಇಂಧನ ಖಾತೆಯ ಅವ್ಯವಹಾರದ ವಿಚಾರದಲ್ಲಿ ಮಾತ್ರವಲ್ಲಾ.. ಅಕ್ಟೋಬರ್ 21, 2016ರಂದು ನಡೆದ ಒಂದು ಸಿನೀಮಿಯ ಘಟನೆಯು ಯಡಿಯೂರಪ್ಪನವರಿಗೆ ಹೆದರಿಕೆ ಹುಟ್ಟಿಸಿತ್ತು. ಅಂದು ವಿಧಾನಸೌಧದ ಪಶ್ಚಿಮ ದ್ವಾರದಿಂದ ಹೊರಟ ಒಂದು ವೋಕ್ಸ್‍ವ್ಯಾಗನ್ ಪೋಲೋ ಕಾರನ್ನು (ಕೆಎ-04, ಎಂ.ಎಂ 9018) ಪೊಲೀಸರು ಶೋಧಿಸಿದಾಗ ಅದರಲ್ಲಿ 1.9 ಕೋಟಿ ಹಣ ಸಿಕ್ಕಿತು. ಕಾರಿನಲ್ಲಿದ್ದ ಸಿದ್ಧಾರ್ಥ ಎಂಬ ವಕೀಲರನ್ನು ಹಣದ ಮೂಲದ ಬಗ್ಗೆ ಪೊಲೀಸರು ಪ್ರಶ್ನಿಸಿದರು. ಆ ವಕೀಲರು 2-3 ಬೇರೆ ಬೇರೆ ಉತ್ತರಗಳನ್ನು ಹೇಳಿದರು. ಪೊಲೀಸರು ಕೇಸು ರಿಜಿಸ್ಟರ್ ಮಾಡಿ ಹಣ ಮತ್ತು ಕಾರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.
3 ದಿನಗಳ ನಂತರ ಎಚ್.ಡಿ.ಕುಮಾರಸ್ವಾಮಿಯವರು ಈ ಸಂಬಂಧ ತನಿಖೆಯಾಗಬೇಕು ಮತ್ತು ಆ ಕಾರಿನಲ್ಲಿದ್ದ ಹಣ ಎಲ್ಲಿಂದ ಬಂದಿತು, ಎಲ್ಲಿಗೆ ಹೋಗುತ್ತಿತ್ತು ಎಂಬ ಕುರಿತು ಯಡಿಯೂರಪ್ಪನವರನ್ನು ಪ್ರಶ್ನಿಸಬೇಕು ಎಂದು ಪತ್ರಕರ್ತರ ಮುಂದೆ ಹೇಳಿದರು. ವಾಸ್ತವದಲ್ಲಿ ಒಂದು ತನಿಖೆ ಅಷ್ಟರಲ್ಲಾಗಲೇ ಗುಪ್ತವಾಗಿ ನಡೆದು ಬಿಟ್ಟಿತ್ತು. ಆ ಕಾರು ಬಂದಿದ್ದ ದಿಕ್ಕಿನ ಸಿಸಿಟಿವಿಗಳನ್ನು ಪೊಲೀಸ್ ಇಲಾಖೆಯ ಒಂದು ತಂಡ ಪರಿಶೀಲಿಸಿತು. ಅದು ಸೀದಾ ಕುಮಾರಪಾರ್ಕ್‍ನ ಒಂದು ನಿರ್ದಿಷ್ಟ ಮನೆಯಿಂದ ಹೊರಟಿತ್ತು. ಈ ವಕೀಲ ಸಿದ್ಧಾರ್ಥ, ಕಾರಿನಲ್ಲಿ ಹಣ ಸಿಕ್ಕ ಮರುದಿನ ತೀರ್ಪು ಬಂದ ಕೇಸಿನಲ್ಲಿ ಯಡಿಯೂರಪ್ಪನವರ ಮಗನ ಪರವಾಗಿ ವಾದಿಸಿದ್ದರು.
ಈ ಹಗರಣವನ್ನು ಬಯಲಿಗೆಳೆದು ಸಂಬಂಧಪಟ್ಟವರನ್ನೆಲ್ಲಾ ಹಿಡಿದು ಹಾಕುವ ಧೈರ್ಯವನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ತೋರಿದ್ದರೆ, ಅದು ಜನಾರ್ಧನರೆಡ್ಡಿಯ ಜಾಮೀನು ಕೇಸಿನ ರೀತಿ ಆಗುತ್ತಿತ್ತು. ಅದನ್ನಾಗದಂತೆ ತಡೆದವರು ಡಿ.ಕೆ.ಶಿವಕುಮಾರ್ ಎಂದು ವಿಧಾನಸೌಧದ ಹಲವು ಅಧಿಕಾರಿಗಳು ಕಂಡುಕೊಂಡಿದ್ದರು. ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಡಿ.ಕೆ.ಶಿ ಸಹಾ ಉಪಕೃತರಾಗಿದ್ದುದರಿಂದಲೇ ಈ ಮಟ್ಟಿಗಿನ ಪ್ರತ್ಯುಪಕಾರವನ್ನು ಅವರು ಮಾಡಿದ್ದರೆಂಬುದು ಇಬ್ಬರ ಸಂಬಂಧವನ್ನು ಬಲ್ಲವರ ಮಾತಾಗಿತ್ತು.
ಆದ್ದರಿಂದಲೇ ಡಿ.ಕೆ.ಶಿ ಆಸ್ತಿ ಮೇಲೆ ದಾಳಿ ನಡೆದಾಗ ಯಡಿಯೂರಪ್ಪನವರು ಬಹಿರಂಗವಾಗಿ ಮಾತುಗಳನ್ನಾಡದೇ ಮೃದುಧೋರಣೆ ತೋರಿದ್ದರು. ಇದಕ್ಕಾಗಿ ಅವರು ಬಿಜೆಪಿ ಹೈಕಮ್ಯಾಂಡ್‍ನ ಕೋಪವನ್ನೂ ಎದುರಿಸಬೇಕಾಗಿ ಬಂದಿತು. ಅಲ್ಲಿಗೆ ಅವರಿಬ್ಬರ ಸ್ನೇಹ ಕೊನೆಗೊಂಡಿತ್ತು. ಅಲ್ಲಿಂದ ಮುಂದಕ್ಕೆ ಪಕ್ಷದ ವ್ಯೂಹದ ಭಾಗವಾಗಿ ಯಡಿಯೂರಪ್ಪನವರೂ ಆಡುತ್ತಿದ್ದಾರೆ. ವಿಶ್ವಾಸಮತ ಯಾಚನೆಯ ಸಂದರ್ಭದಲ್ಲೂ ಸಿದ್ದರಾಮಯ್ಯನವರನ್ನು ಹೊಗಳಿದ ಯಡ್ಡಿ ‘ಅಪ್ಪ ಮಕ್ಕಳ’ ವಿರುದ್ಧ ಹರಿಹಾಯ್ದಿದ್ದರು.
ಈ ಸದ್ಯ ದಕ್ಷಿಣ ಕರ್ನಾಟಕದ ಒಕ್ಕಲಿಗರ ಪ್ರದೇಶಕ್ಕೆ ಲಗ್ಗೆ ಹಾಕಲಿಚ್ಛಿಸಿರುವ ಬಿಜೆಪಿಯು ಗೌಡರ ಫ್ಯಾಮಿಲಿ ಮತ್ತು ಡಿಕೆಶಿ ಫ್ಯಾಮಿಲಿಯನ್ನು ಮಣಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸಿದ್ದರಾಮಯ್ಯನವರು ಮತ್ತು ಜಾರಕಿಹೊಳಿ ಬ್ರದರ್ಸ್ ಬಗ್ಗೆ ಮೃದುವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಬಾರದು, ಅವರಿಗೆ ಯಾರೆಲ್ಲಾ ಮಗ್ಗುಲಮುಳ್ಳಾದರೂ ಒಳ್ಳೆಯದು; ನಂತರ ಉಂಟಾಗುವ ಧ್ರುವೀಕರಣದ ಲಾಭವನ್ನು ಬಿಜೆಪಿಯ ಒಕ್ಕಲಿಗ ನಾಯಕರು ಪಡೆದುಕೊಳ್ಳಬೇಕೆಂಬುದು ಅದರ ಇರಾದೆ.
ಆದರೆ, ಇದು ಅವರ ಪರವಾಗಿ ವರ್ಕೌಟ್ ಆಗುತ್ತಿಲ್ಲ. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಕ್ಕಲಿಗ ನಾಯಕರನ್ನು ಎದುರು ಹಾಕಿಕೊಳ್ಳಲು ಬಿಜೆಪಿಯ ಯಾವೊಬ್ಬ ಒಕ್ಕಲಿಗ ನಾಯಕರೂ ರೆಡಿಯಾಗುತ್ತಿಲ್ಲ. ಅದು ಮತ್ತೆ ಮತ್ತೆ ಯಡಿಯೂರಪ್ಪನವರಿಗೇ ಬಂದು ಸುತ್ತಿಕೊಳ್ಳುತ್ತಿದೆ. ಸುತ್ತಿಕೊಳ್ಳಲಿ ಎಂದು ಡಿಕೆಶಿ ಬ್ರದರ್ಸ್ ಮತ್ತು ಗೌಡರ ಫ್ಯಾಮಿಲಿ ಬಯಸಿದೆ. ಇದೇ ಕಾರಣಕ್ಕೇನೇ ‘ನಮ್ಮ ವಿರುದ್ಧ ಯಡಿಯೂರಪ್ಪನವರು ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ’ ಎಂದು ಡಿ.ಕೆ.ಸುರೇಶ್ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಾರೆ; ‘ಯಡಿಯೂರಪ್ಪನವರ ಮಗ ಪದೇ ಪದೇ ತೆರಿಗೆ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆಂಬುದು ಗೊತ್ತು’ ಎಂದು ಕುಮಾರಸ್ವಾಮಿಯವರೂ ಬಹಿರಂಗವಾಗಿ ಹೇಳಿಕೆ ಕೊಡುತ್ತಾರೆ. ಕುಮಾರಸ್ವಾಮಿಯವರ ದೊಡ್ಡ ಅಣ್ಣ ಮಾಜಿ ಅಧಿಕಾರಿ ಬಾಲಕೃಷ್ಣೇಗೌಡರ ಮನೆ ಮೇಲೆ ಮತ್ತು ಎಚ್‍ಡಿಕೆಯ ಖಾಸಾ ಚಾರ್ಟರ್ಡ್ ಅಕೌಂಟೆಂಟ್ ಸುನಿಲ್‍ರ ಮನೆ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂದರೆ ತಮ್ಮನ್ನು ಬಲಿಪಶು ಮಾಡಲು ಬಿಜೆಪಿ ಸಂಚು ನಡೆಸುತ್ತಿದೆ, ಅದರಲ್ಲೂ ಯಡಿಯೂರಪ್ಪನವರು ಅಂತಹ ಸಂಚಿನ ರೂವಾರಿ ಎಂಬುದನ್ನು ಮುಂದಿಡಲು ಈ ಎರಡೂ ಕುಟುಂಬಗಳು ಸಂದೇಶ ನೀಡಬಯಸುತ್ತಿವೆ.
ದೆಹಲಿಗೆ ಹೋಗುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥರನ್ನು ಭೇಟಿಯಾಗಿದ್ದೂ ಇಂತಹುದ್ದೇ ಕಾರಣಕ್ಕೆ. ಇದು ಬಿಜೆಪಿಯು ನಡೆಸುತ್ತಿರುವ ಒಕ್ಕಲಿಗ ವಿರೋಧಿ ಪಾಲಿಟಿಕ್ಸ್‍ನ ಭಾಗ ಮತ್ತು ಮಠವು ತಮ್ಮ ಪರವಾಗಿ ನಿಲ್ಲಬೇಕೆಂಬುದು ಡಿಕೆಶಿ ಆಗ್ರಹವಾಗಿತ್ತು.
ಇದಕ್ಕೊಂದು ಜಾತಿ ರೂಪ ಕೊಡಬಹುದೆಂದು ಸಂಬಂಧಪಟ್ಟ ರಾಜಕಾರಣಿಗಳು ಈಗಾಗಲೇ ಲೆಕ್ಕಾಚಾರ ಹಾಕಿಯಾಗಿದೆ. ಡಿ.ಕೆ.ಶಿವಕುಮಾರ್ ಯಾವ ಕಾರಣಕ್ಕೂ ಸಿ.ಎಂ ಆಗುವ ಆಸೆಯನ್ನು ಪಕ್ಕಕ್ಕಿಡುವ ವ್ಯಕ್ತಿಯಲ್ಲ. ಸಿ.ಎಂ. ಆಗುವುದನ್ನು ಬಿಟ್ಟರೆ ಕೇಂದ್ರ ಮಂತ್ರಿಯೋ ಮತ್ತೊಂದೋ ಆಗಿ ತಮ್ಮ ರಾಜಕೀಯ ಜೀವನವನ್ನು ಕೊನೆಗೊಳಿಸಿಕೊಳ್ಳುವುದನ್ನು ಅವರು ಯೋಚಿಸಿಲ್ಲ. ಸಂಪತ್ತು ಗುಡ್ಡೆ ಹಾಕಿಕೊಳ್ಳುತ್ತಿರುವುದು ಮುಂದೊಂದು ದಿನ ‘ರಾಜ್ಯದ ಇಡೀ ಚುನಾವಣೆ ನಾನು ನಡೆಸುತ್ತೇನೆ, ಸಿಎಂ ಮಾಡುತ್ತೇವೆಂಬ ಖಚಿತ ಭರವಸೆ ಕೊಡಿ’ ಎಂದು ಹೈಕಮ್ಯಾಂಡ್ ಮುಂದೆ ಹೇಳಲೂ ಸಹಾ ಆಗಿದೆ.
‘ನಾವು ಏನೂ ತಪ್ಪು ಮಾಡಿಲ್ಲ; ಎಲ್ಲಾ ವ್ಯವಹಾರಗಳನ್ನು ಕ್ರಮಬದ್ಧವಾಗಿಯೇ ಮಾಡಿದ್ದೇವೆ. ಜೈಲಿಗೆಲ್ಲಾ ಹೆದರುವವರಲ್ಲ’ ಎಂದು ಡಿ.ಕೆ. ಅಣ್ಣ ತಮ್ಮಂದಿರಿಬ್ಬರೂ ಹೇಳಿದ್ದಾರೆ. ಬಂದದ್ದು ಬರಲಿ, ತಮ್ಮ ಆಕ್ರಮಣಕಾರಿ ರಾಜಕಾರಣದಿಂದ ಹಿಂತೆಗೆಯಬಾರದು ಎಂದು ತೀರ್ಮಾನಿಸಿಕೊಂಡಿದ್ದಾರೆ. ಒಂದು ವೇಳೆ ಬಂಧನವೇ ಆಗುವುದಾದಲ್ಲಿ ಅದು ತಮಗೇ ಅನುಕಂಪ ತರುವಂತೆ ಮಾಡಿಕೊಳ್ಳಬೇಕೆಂಬುದು ಅವರ ಪ್ಲಾನ್. ಆದರೆ, ಅದಕ್ಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಹೆಚ್ಚಿನ ಸಾಥ್ ಸಿಗಲಾರದು ಎಂಬುದು ಅವರಿಗೆ ಗೊತ್ತು. ಹಾಗಾಗಿಯೇ ಜೆಡಿಎಸ್ ಫ್ಯಾಮಿಲಿಯ ಜೊತೆಗೆ ಹೈಕಮ್ಯಾಂಡ್‍ನ ಬೆಂಬಲ ಸಿಕ್ಕರೆ ಸಾಕೆಂದು ಯೋಚಿಸಿ, ದೆಹಲಿಗೆ ಹೋದರು. ಅಲ್ಲಿಗೆ ಹೋದವರೇ ಅಹ್ಮದ್ ಪಟೇಲರನ್ನು ಕಂಡರು. ಅಲ್ಲಿ ಅವರಿಗೆ ಬೇಕಿದ್ದುಷ್ಟು ಬೆಂಬಲವೂ ಸಿಕ್ಕಿತು. ಅಹ್ಮದ್ ಪಟೇಲರು ರಾಜ್ಯಸಭೆ ಸದಸ್ಯರಾಗಿ ಪುನರಾಯ್ಕೆಯಾಗುವಲ್ಲಿ ಡಿಕೆಶಿಯವರ ರೆಸಾರ್ಟ್ ಪಾಲಿಟಿಕ್ಸ್‍ನ ಪಾತ್ರ ದೊಡ್ಡದಿತ್ತು. ಈಗ ಎಐಸಿಸಿಯ ಖಜಾಂಚಿಯೂ ಆಗಿರುವ ಅಹ್ಮದ್ ಪಟೇಲರಿಗೆ ಡಿಕೆಶಿಯಂತಹ ಕುಳದ ಅಗತ್ಯ ಮುಂದಕ್ಕೂ ಇದೆ. ಹಾಗಾಗಿ ಅಹ್ಮದ್ ಪಟೇಲರು ಜೊತೆಗೆ ನಿಲ್ಲುವುದರ ಬಗ್ಗೆ ಸಂಶಯವಿರಲಿಲ್ಲ.
ಅದರ ಜೊತೆಗೆ ‘ಬಿಎಸ್‍ವೈ ಮತ್ತು ದೆಹಲಿ ನಮ್ಮ ದೋಣಿಯನ್ನು ಮುರಿಯಲು ವಿವಿಧ ಕೇಂದ್ರೀಯ ಏಜೆನ್ಸಿಗಳ ಮೂಲಕ ಯತ್ನಿಸುತ್ತಿದ್ದಾರೆ. ಆದರೆ ಒಂದು ವಿಚಾರ ಹೇಳಲು ಬಯಸುತ್ತೇನೆ. ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ’ ಎಂಬ ಗೌಡರ ಕುಟುಂಬದ ಸಾರಥಿಯಾದ ಮುಖ್ಯಮಂತ್ರಿಯ ಖಡಕ್ ಮಾತು ಸಹಾ ಬ್ರದರ್ಸ್‍ಗೆ ಬೇಕಿದ್ದ ಸಾಥ್ ಕೊಟ್ಟಿದೆ. ಹಾಗಾಗಿ ಏನೇ ಬಂದರೂ ನೋಡಿಯೇ ಬಿಡೋಣ ಎಂಬ ತೀರ್ಮಾನವನ್ನು ಈರ್ವರೂ ಮಾಡಿಯಾಗಿದೆ.
ಇವೆಲ್ಲವೂ ಎಲ್ಲಿಗೆ ಹೋಗಿ ನಿಲ್ಲುತ್ತದೆಂಬುದನ್ನು ಈಗಲೇ ಹೇಳಲಾಗದು. ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೇ ಹೋಗಿಬಂದ ಯಡಿಯೂರಪ್ಪನವರು ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರೆ, ಡಿಕೆಶಿ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡರೆ ತಪ್ಪು, ಶ್ರೀರಾಮುಲು ರೆಡ್ಡಿಗಳು ಶಾಸಕರನ್ನು ಕೊಂಡುಕೊಂಡರೆ ಸರಿ ಎಂಬ ವಾದವನ್ನು ಮುಂದಿಟ್ಟರೆ ಜನರಿಗೆ ಒಪ್ಪಿಗೆಯಾಗದು. ಭ್ರಷ್ಟಾಚಾರವನ್ನು ನಡೆಸಿ, ಸಂಪತ್ತು ಗುಡ್ಡೆ ಹಾಕಿಕೊಳ್ಳುವುದರಲ್ಲಿ ಈ ಎರಡೂ ಫ್ಯಾಮಿಲಿಗಳು ಬಿಜೆಪಿಯ ಈ ಕುಳಗಳ ಜೊತೆ ಪೈಪೋಟಿ ನೀಡಲು ಪ್ರಯತ್ನಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ದುರಂತವೆಂದರೆ, ಬಿಜೆಪಿಯಂತಹ ಭ್ರಷ್ಟ ಪಕ್ಷವು ಕಾಂಗ್ರೆಸ್-ಜೆಡಿಎಸ್‍ಗಳ ಭ್ರಷ್ಟಾಚಾರದ ಬಗ್ಗೆ ಮಾತಾಡುವುದನ್ನು ರಾಜ್ಯದ ಜನತೆ ಕೇಳಬೇಕಾಗಿ ಬಂದಿದೆ.
ಅಂತಿಮವಾಗಿ ಇವು ಯಾರ ಭ್ರಷ್ಟಾಚಾರವನ್ನೂ ಕಡಿಮೆ ಮಾಡದೇ, ಜಾತಿ ಧ್ರುವೀಕರಣದ ಲೆಕ್ಕಾಚಾರಗಳ ಮೇಲಾಟವೇ ಹೆಚ್ಚಾಗುವ ಸಾಧ್ಯತೆ ಇದೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...