Homeಮುಖಪುಟಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

ಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಡೀಕೆ ಪ್ರತಿತಂತ್ರ

- Advertisement -
- Advertisement -

ಎಲ್ಲರಿಗೂ ಗೊತ್ತಿರುವ ಸಂಗತಿ ಏನೆಂದರೆ, ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರದ ಸಂಸ್ಥೆಗಳು ಮುಗಿಬಿದ್ದಿರುವುದು ಭ್ರಷ್ಟಾಚಾರ ನಿಗ್ರಹಕ್ಕಲ್ಲ. ಗಣಿ ಲೂಟಿ ಹೊಡೆದ ಆರೋಪ ಹೊತ್ತಿರುವ ಮಾಜಿ ಮಂತ್ರಿ ಜನಾರ್ಧನರೆಡ್ಡಿಯನ್ನು ಜೊತೆಯಲ್ಲಿಟ್ಟುಕೊಂಡ ಬಿಜೆಪಿಯು ಗಣಿ ಕಳ್ಳರನ್ನು ರಕ್ಷಿಸುತ್ತಿದೆ. ಆಪರೇಷನ್ ಕಮಲದ ಮಾತು ಬಂದಾಗಲೆಲ್ಲಾ ಬಿಜೆಪಿ ನಾಯಕರುಗಳು, ‘ಅದರ ಕುರಿತು ನಾವೇನೂ ಹೇಳುವುದಿಲ್ಲ, ಯಡಿಯೂರಪ್ಪನವರು ಮತ್ತು ಶ್ರೀರಾಮುಲು ಅದನ್ನು ನೋಡಿಕೊಳ್ತಾರೆ’ ಎಂದು ಯಾವ ಎಗ್ಗೂ ಸಿಗ್ಗೂ ಇಲ್ಲದೇ ಹೇಳುತ್ತಿದ್ದಾರೆ. ಈಗ ಡಿ.ಕೆ.ಶಿವಕುಮಾರ್‍ರು ಮಾತ್ರ ಭ್ರಷ್ಟರು ಎಂದು ದಾಳಿ ನಡೆಸುತ್ತಿರುವುದು ಕೇವಲ ಅವರನ್ನು ಮಣಿಸಲಿಕ್ಕೆ. ಆ ಮೂಲಕ ಇತರ ನಾಯಕರುಗಳಿಗೂ ಸಂದೇಶ ರವಾನಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಹಾಗೆಂದು ಡಿ.ಕೆ.ಶಿವಕುಮಾರ್‍ರ ಕುಟುಂಬ ಸಾಚಾ ಏನಲ್ಲ. ಅಧಿಕಾರಕ್ಕೇರುವ ಸಂದರ್ಭ ಬಂದಾಗ ಫಲವತ್ತಾದ ಖಾತೆಗಳನ್ನು ಕೇಳುವುದು, ಹೈಕಮ್ಯಾಂಡ್ ಸೇರಿದಂತೆ ಎಲ್ಲರನ್ನೂ ‘ಸಂತೃಪ್ತ’ರನ್ನಾಗಿಸಲು ಸಾಧ್ಯವಾಗುವುದು, ಚುನಾವಣೆಯಲ್ಲೂ ಇತರ ಕ್ಷೇತ್ರಗಳಿಗೂ ಸಂಪನ್ಮೂಲ ಹೊಂದಿಸುವ ಜವಾಬ್ದಾರಿ ಹೊರುವುದು, ವಿವಿಧ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮುಂದೆ ನಿಂತು ‘ಏನೇ ಬರಲಿ ನೋಡಿಕೊಳ್ತೇನೆ’ ಎಂಬ ರೀತಿಯಲ್ಲಿ ಮುಂದೆ ನುಗ್ಗುವುದು ಇವೆಲ್ಲವೂ ಕೇವಲ ರಾಜಕೀಯ ಧೈರ್ಯದ ಹೆಗ್ಗುರುತುಗಳಲ್ಲ. ವಿವಿಧ ರೀತಿಗಳಿಂದ ರಾಶಿ ಮಾಡಿಟ್ಟುಕೊಂಡಿರುವ ಸಂಪತ್ತು ತಂದುಕೊಟ್ಟಿರುವ ಆರ್ಥಿಕ ಧೈರ್ಯದ ಕುರುಹು.
ಇದಕ್ಕಾಗಿ ಡಿ.ಕೆ.ಶಿವಕುಮಾರ್ ಕೆಲವು ರೀತಿಯ ಸಂಬಂಧಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇದೀಗ ತಾನೇ ಅವರು ಹೇಳಿದ ‘ಯಡಿಯೂರಪ್ಪನವರು ಈಗಲೂ ನಮ್ಮ ಸ್ನೇಹಿತರೇ’ ಮಾತು ಅರ್ಧ ಸುಳ್ಳಾದರೂ ಅರ್ಧ ಸತ್ಯ ಸಹಾ ಹೌದು. ಬಿಜೆಪಿ ಸರ್ಕಾರವಿದ್ದಾಗ ಇಂಧನ ಸಚಿವರಾಗಿದ್ದು ಶೋಭಾ ಕರಂದ್ಲಾಜೆ; ಅದನ್ನು ನಿರ್ವಹಿಸುತ್ತಿದ್ದ ಶೋಭಾ ಕರಂದ್ಲಾಜೆಯವರು ಮಾಡಿದ ಅವ್ಯವಹಾರವನ್ನು ಮುಚ್ಚಿ ಹಾಕಲು, ಸದನ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸ್ವತಃ ಡಿ.ಕೆ. ಹೊತ್ತುಕೊಂಡಿದ್ದರು. ಆಗ ಇಬ್ಬರ ವಿರುದ್ಧವೂ ತೊಡೆ ತಟ್ಟಿದ್ದ ಎಚ್.ಡಿ.ಕೆ. ಈಗ ಡಿ.ಕೆ. ಅವರ ಪಾರ್ಟ್‍ನರ್. ಕೇವಲ ಅಧಿಕಾರ ಹಂಚಿಕೊಳ್ಳುವುದರಲ್ಲಿ ಮಾತ್ರವಲ್ಲ. ಈ ಸದ್ಯ ಬಿಜೆಪಿಯನ್ನು ಎದುರಿಸಲು ಮತ್ತು ಬಿಜೆಪಿಯಿಂದ ತೊಂದರೆ ಅನುಭವಿಸುವುದರಲ್ಲೂ ಪಾರ್ಟ್‍ನರ್‍ಗಳೇ.
ವಾಸ್ತವದಲ್ಲಿ ಯಡಿಯೂರಪ್ಪನವರನ್ನು ಡಿ.ಕೆ. ಪಾರು ಮಾಡಿದ್ದು ಇಂಧನ ಖಾತೆಯ ಅವ್ಯವಹಾರದ ವಿಚಾರದಲ್ಲಿ ಮಾತ್ರವಲ್ಲಾ.. ಅಕ್ಟೋಬರ್ 21, 2016ರಂದು ನಡೆದ ಒಂದು ಸಿನೀಮಿಯ ಘಟನೆಯು ಯಡಿಯೂರಪ್ಪನವರಿಗೆ ಹೆದರಿಕೆ ಹುಟ್ಟಿಸಿತ್ತು. ಅಂದು ವಿಧಾನಸೌಧದ ಪಶ್ಚಿಮ ದ್ವಾರದಿಂದ ಹೊರಟ ಒಂದು ವೋಕ್ಸ್‍ವ್ಯಾಗನ್ ಪೋಲೋ ಕಾರನ್ನು (ಕೆಎ-04, ಎಂ.ಎಂ 9018) ಪೊಲೀಸರು ಶೋಧಿಸಿದಾಗ ಅದರಲ್ಲಿ 1.9 ಕೋಟಿ ಹಣ ಸಿಕ್ಕಿತು. ಕಾರಿನಲ್ಲಿದ್ದ ಸಿದ್ಧಾರ್ಥ ಎಂಬ ವಕೀಲರನ್ನು ಹಣದ ಮೂಲದ ಬಗ್ಗೆ ಪೊಲೀಸರು ಪ್ರಶ್ನಿಸಿದರು. ಆ ವಕೀಲರು 2-3 ಬೇರೆ ಬೇರೆ ಉತ್ತರಗಳನ್ನು ಹೇಳಿದರು. ಪೊಲೀಸರು ಕೇಸು ರಿಜಿಸ್ಟರ್ ಮಾಡಿ ಹಣ ಮತ್ತು ಕಾರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.
3 ದಿನಗಳ ನಂತರ ಎಚ್.ಡಿ.ಕುಮಾರಸ್ವಾಮಿಯವರು ಈ ಸಂಬಂಧ ತನಿಖೆಯಾಗಬೇಕು ಮತ್ತು ಆ ಕಾರಿನಲ್ಲಿದ್ದ ಹಣ ಎಲ್ಲಿಂದ ಬಂದಿತು, ಎಲ್ಲಿಗೆ ಹೋಗುತ್ತಿತ್ತು ಎಂಬ ಕುರಿತು ಯಡಿಯೂರಪ್ಪನವರನ್ನು ಪ್ರಶ್ನಿಸಬೇಕು ಎಂದು ಪತ್ರಕರ್ತರ ಮುಂದೆ ಹೇಳಿದರು. ವಾಸ್ತವದಲ್ಲಿ ಒಂದು ತನಿಖೆ ಅಷ್ಟರಲ್ಲಾಗಲೇ ಗುಪ್ತವಾಗಿ ನಡೆದು ಬಿಟ್ಟಿತ್ತು. ಆ ಕಾರು ಬಂದಿದ್ದ ದಿಕ್ಕಿನ ಸಿಸಿಟಿವಿಗಳನ್ನು ಪೊಲೀಸ್ ಇಲಾಖೆಯ ಒಂದು ತಂಡ ಪರಿಶೀಲಿಸಿತು. ಅದು ಸೀದಾ ಕುಮಾರಪಾರ್ಕ್‍ನ ಒಂದು ನಿರ್ದಿಷ್ಟ ಮನೆಯಿಂದ ಹೊರಟಿತ್ತು. ಈ ವಕೀಲ ಸಿದ್ಧಾರ್ಥ, ಕಾರಿನಲ್ಲಿ ಹಣ ಸಿಕ್ಕ ಮರುದಿನ ತೀರ್ಪು ಬಂದ ಕೇಸಿನಲ್ಲಿ ಯಡಿಯೂರಪ್ಪನವರ ಮಗನ ಪರವಾಗಿ ವಾದಿಸಿದ್ದರು.
ಈ ಹಗರಣವನ್ನು ಬಯಲಿಗೆಳೆದು ಸಂಬಂಧಪಟ್ಟವರನ್ನೆಲ್ಲಾ ಹಿಡಿದು ಹಾಕುವ ಧೈರ್ಯವನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ತೋರಿದ್ದರೆ, ಅದು ಜನಾರ್ಧನರೆಡ್ಡಿಯ ಜಾಮೀನು ಕೇಸಿನ ರೀತಿ ಆಗುತ್ತಿತ್ತು. ಅದನ್ನಾಗದಂತೆ ತಡೆದವರು ಡಿ.ಕೆ.ಶಿವಕುಮಾರ್ ಎಂದು ವಿಧಾನಸೌಧದ ಹಲವು ಅಧಿಕಾರಿಗಳು ಕಂಡುಕೊಂಡಿದ್ದರು. ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಡಿ.ಕೆ.ಶಿ ಸಹಾ ಉಪಕೃತರಾಗಿದ್ದುದರಿಂದಲೇ ಈ ಮಟ್ಟಿಗಿನ ಪ್ರತ್ಯುಪಕಾರವನ್ನು ಅವರು ಮಾಡಿದ್ದರೆಂಬುದು ಇಬ್ಬರ ಸಂಬಂಧವನ್ನು ಬಲ್ಲವರ ಮಾತಾಗಿತ್ತು.
ಆದ್ದರಿಂದಲೇ ಡಿ.ಕೆ.ಶಿ ಆಸ್ತಿ ಮೇಲೆ ದಾಳಿ ನಡೆದಾಗ ಯಡಿಯೂರಪ್ಪನವರು ಬಹಿರಂಗವಾಗಿ ಮಾತುಗಳನ್ನಾಡದೇ ಮೃದುಧೋರಣೆ ತೋರಿದ್ದರು. ಇದಕ್ಕಾಗಿ ಅವರು ಬಿಜೆಪಿ ಹೈಕಮ್ಯಾಂಡ್‍ನ ಕೋಪವನ್ನೂ ಎದುರಿಸಬೇಕಾಗಿ ಬಂದಿತು. ಅಲ್ಲಿಗೆ ಅವರಿಬ್ಬರ ಸ್ನೇಹ ಕೊನೆಗೊಂಡಿತ್ತು. ಅಲ್ಲಿಂದ ಮುಂದಕ್ಕೆ ಪಕ್ಷದ ವ್ಯೂಹದ ಭಾಗವಾಗಿ ಯಡಿಯೂರಪ್ಪನವರೂ ಆಡುತ್ತಿದ್ದಾರೆ. ವಿಶ್ವಾಸಮತ ಯಾಚನೆಯ ಸಂದರ್ಭದಲ್ಲೂ ಸಿದ್ದರಾಮಯ್ಯನವರನ್ನು ಹೊಗಳಿದ ಯಡ್ಡಿ ‘ಅಪ್ಪ ಮಕ್ಕಳ’ ವಿರುದ್ಧ ಹರಿಹಾಯ್ದಿದ್ದರು.
ಈ ಸದ್ಯ ದಕ್ಷಿಣ ಕರ್ನಾಟಕದ ಒಕ್ಕಲಿಗರ ಪ್ರದೇಶಕ್ಕೆ ಲಗ್ಗೆ ಹಾಕಲಿಚ್ಛಿಸಿರುವ ಬಿಜೆಪಿಯು ಗೌಡರ ಫ್ಯಾಮಿಲಿ ಮತ್ತು ಡಿಕೆಶಿ ಫ್ಯಾಮಿಲಿಯನ್ನು ಮಣಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸಿದ್ದರಾಮಯ್ಯನವರು ಮತ್ತು ಜಾರಕಿಹೊಳಿ ಬ್ರದರ್ಸ್ ಬಗ್ಗೆ ಮೃದುವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಬಾರದು, ಅವರಿಗೆ ಯಾರೆಲ್ಲಾ ಮಗ್ಗುಲಮುಳ್ಳಾದರೂ ಒಳ್ಳೆಯದು; ನಂತರ ಉಂಟಾಗುವ ಧ್ರುವೀಕರಣದ ಲಾಭವನ್ನು ಬಿಜೆಪಿಯ ಒಕ್ಕಲಿಗ ನಾಯಕರು ಪಡೆದುಕೊಳ್ಳಬೇಕೆಂಬುದು ಅದರ ಇರಾದೆ.
ಆದರೆ, ಇದು ಅವರ ಪರವಾಗಿ ವರ್ಕೌಟ್ ಆಗುತ್ತಿಲ್ಲ. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಒಕ್ಕಲಿಗ ನಾಯಕರನ್ನು ಎದುರು ಹಾಕಿಕೊಳ್ಳಲು ಬಿಜೆಪಿಯ ಯಾವೊಬ್ಬ ಒಕ್ಕಲಿಗ ನಾಯಕರೂ ರೆಡಿಯಾಗುತ್ತಿಲ್ಲ. ಅದು ಮತ್ತೆ ಮತ್ತೆ ಯಡಿಯೂರಪ್ಪನವರಿಗೇ ಬಂದು ಸುತ್ತಿಕೊಳ್ಳುತ್ತಿದೆ. ಸುತ್ತಿಕೊಳ್ಳಲಿ ಎಂದು ಡಿಕೆಶಿ ಬ್ರದರ್ಸ್ ಮತ್ತು ಗೌಡರ ಫ್ಯಾಮಿಲಿ ಬಯಸಿದೆ. ಇದೇ ಕಾರಣಕ್ಕೇನೇ ‘ನಮ್ಮ ವಿರುದ್ಧ ಯಡಿಯೂರಪ್ಪನವರು ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ’ ಎಂದು ಡಿ.ಕೆ.ಸುರೇಶ್ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಾರೆ; ‘ಯಡಿಯೂರಪ್ಪನವರ ಮಗ ಪದೇ ಪದೇ ತೆರಿಗೆ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆಂಬುದು ಗೊತ್ತು’ ಎಂದು ಕುಮಾರಸ್ವಾಮಿಯವರೂ ಬಹಿರಂಗವಾಗಿ ಹೇಳಿಕೆ ಕೊಡುತ್ತಾರೆ. ಕುಮಾರಸ್ವಾಮಿಯವರ ದೊಡ್ಡ ಅಣ್ಣ ಮಾಜಿ ಅಧಿಕಾರಿ ಬಾಲಕೃಷ್ಣೇಗೌಡರ ಮನೆ ಮೇಲೆ ಮತ್ತು ಎಚ್‍ಡಿಕೆಯ ಖಾಸಾ ಚಾರ್ಟರ್ಡ್ ಅಕೌಂಟೆಂಟ್ ಸುನಿಲ್‍ರ ಮನೆ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂದರೆ ತಮ್ಮನ್ನು ಬಲಿಪಶು ಮಾಡಲು ಬಿಜೆಪಿ ಸಂಚು ನಡೆಸುತ್ತಿದೆ, ಅದರಲ್ಲೂ ಯಡಿಯೂರಪ್ಪನವರು ಅಂತಹ ಸಂಚಿನ ರೂವಾರಿ ಎಂಬುದನ್ನು ಮುಂದಿಡಲು ಈ ಎರಡೂ ಕುಟುಂಬಗಳು ಸಂದೇಶ ನೀಡಬಯಸುತ್ತಿವೆ.
ದೆಹಲಿಗೆ ಹೋಗುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥರನ್ನು ಭೇಟಿಯಾಗಿದ್ದೂ ಇಂತಹುದ್ದೇ ಕಾರಣಕ್ಕೆ. ಇದು ಬಿಜೆಪಿಯು ನಡೆಸುತ್ತಿರುವ ಒಕ್ಕಲಿಗ ವಿರೋಧಿ ಪಾಲಿಟಿಕ್ಸ್‍ನ ಭಾಗ ಮತ್ತು ಮಠವು ತಮ್ಮ ಪರವಾಗಿ ನಿಲ್ಲಬೇಕೆಂಬುದು ಡಿಕೆಶಿ ಆಗ್ರಹವಾಗಿತ್ತು.
ಇದಕ್ಕೊಂದು ಜಾತಿ ರೂಪ ಕೊಡಬಹುದೆಂದು ಸಂಬಂಧಪಟ್ಟ ರಾಜಕಾರಣಿಗಳು ಈಗಾಗಲೇ ಲೆಕ್ಕಾಚಾರ ಹಾಕಿಯಾಗಿದೆ. ಡಿ.ಕೆ.ಶಿವಕುಮಾರ್ ಯಾವ ಕಾರಣಕ್ಕೂ ಸಿ.ಎಂ ಆಗುವ ಆಸೆಯನ್ನು ಪಕ್ಕಕ್ಕಿಡುವ ವ್ಯಕ್ತಿಯಲ್ಲ. ಸಿ.ಎಂ. ಆಗುವುದನ್ನು ಬಿಟ್ಟರೆ ಕೇಂದ್ರ ಮಂತ್ರಿಯೋ ಮತ್ತೊಂದೋ ಆಗಿ ತಮ್ಮ ರಾಜಕೀಯ ಜೀವನವನ್ನು ಕೊನೆಗೊಳಿಸಿಕೊಳ್ಳುವುದನ್ನು ಅವರು ಯೋಚಿಸಿಲ್ಲ. ಸಂಪತ್ತು ಗುಡ್ಡೆ ಹಾಕಿಕೊಳ್ಳುತ್ತಿರುವುದು ಮುಂದೊಂದು ದಿನ ‘ರಾಜ್ಯದ ಇಡೀ ಚುನಾವಣೆ ನಾನು ನಡೆಸುತ್ತೇನೆ, ಸಿಎಂ ಮಾಡುತ್ತೇವೆಂಬ ಖಚಿತ ಭರವಸೆ ಕೊಡಿ’ ಎಂದು ಹೈಕಮ್ಯಾಂಡ್ ಮುಂದೆ ಹೇಳಲೂ ಸಹಾ ಆಗಿದೆ.
‘ನಾವು ಏನೂ ತಪ್ಪು ಮಾಡಿಲ್ಲ; ಎಲ್ಲಾ ವ್ಯವಹಾರಗಳನ್ನು ಕ್ರಮಬದ್ಧವಾಗಿಯೇ ಮಾಡಿದ್ದೇವೆ. ಜೈಲಿಗೆಲ್ಲಾ ಹೆದರುವವರಲ್ಲ’ ಎಂದು ಡಿ.ಕೆ. ಅಣ್ಣ ತಮ್ಮಂದಿರಿಬ್ಬರೂ ಹೇಳಿದ್ದಾರೆ. ಬಂದದ್ದು ಬರಲಿ, ತಮ್ಮ ಆಕ್ರಮಣಕಾರಿ ರಾಜಕಾರಣದಿಂದ ಹಿಂತೆಗೆಯಬಾರದು ಎಂದು ತೀರ್ಮಾನಿಸಿಕೊಂಡಿದ್ದಾರೆ. ಒಂದು ವೇಳೆ ಬಂಧನವೇ ಆಗುವುದಾದಲ್ಲಿ ಅದು ತಮಗೇ ಅನುಕಂಪ ತರುವಂತೆ ಮಾಡಿಕೊಳ್ಳಬೇಕೆಂಬುದು ಅವರ ಪ್ಲಾನ್. ಆದರೆ, ಅದಕ್ಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಹೆಚ್ಚಿನ ಸಾಥ್ ಸಿಗಲಾರದು ಎಂಬುದು ಅವರಿಗೆ ಗೊತ್ತು. ಹಾಗಾಗಿಯೇ ಜೆಡಿಎಸ್ ಫ್ಯಾಮಿಲಿಯ ಜೊತೆಗೆ ಹೈಕಮ್ಯಾಂಡ್‍ನ ಬೆಂಬಲ ಸಿಕ್ಕರೆ ಸಾಕೆಂದು ಯೋಚಿಸಿ, ದೆಹಲಿಗೆ ಹೋದರು. ಅಲ್ಲಿಗೆ ಹೋದವರೇ ಅಹ್ಮದ್ ಪಟೇಲರನ್ನು ಕಂಡರು. ಅಲ್ಲಿ ಅವರಿಗೆ ಬೇಕಿದ್ದುಷ್ಟು ಬೆಂಬಲವೂ ಸಿಕ್ಕಿತು. ಅಹ್ಮದ್ ಪಟೇಲರು ರಾಜ್ಯಸಭೆ ಸದಸ್ಯರಾಗಿ ಪುನರಾಯ್ಕೆಯಾಗುವಲ್ಲಿ ಡಿಕೆಶಿಯವರ ರೆಸಾರ್ಟ್ ಪಾಲಿಟಿಕ್ಸ್‍ನ ಪಾತ್ರ ದೊಡ್ಡದಿತ್ತು. ಈಗ ಎಐಸಿಸಿಯ ಖಜಾಂಚಿಯೂ ಆಗಿರುವ ಅಹ್ಮದ್ ಪಟೇಲರಿಗೆ ಡಿಕೆಶಿಯಂತಹ ಕುಳದ ಅಗತ್ಯ ಮುಂದಕ್ಕೂ ಇದೆ. ಹಾಗಾಗಿ ಅಹ್ಮದ್ ಪಟೇಲರು ಜೊತೆಗೆ ನಿಲ್ಲುವುದರ ಬಗ್ಗೆ ಸಂಶಯವಿರಲಿಲ್ಲ.
ಅದರ ಜೊತೆಗೆ ‘ಬಿಎಸ್‍ವೈ ಮತ್ತು ದೆಹಲಿ ನಮ್ಮ ದೋಣಿಯನ್ನು ಮುರಿಯಲು ವಿವಿಧ ಕೇಂದ್ರೀಯ ಏಜೆನ್ಸಿಗಳ ಮೂಲಕ ಯತ್ನಿಸುತ್ತಿದ್ದಾರೆ. ಆದರೆ ಒಂದು ವಿಚಾರ ಹೇಳಲು ಬಯಸುತ್ತೇನೆ. ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ’ ಎಂಬ ಗೌಡರ ಕುಟುಂಬದ ಸಾರಥಿಯಾದ ಮುಖ್ಯಮಂತ್ರಿಯ ಖಡಕ್ ಮಾತು ಸಹಾ ಬ್ರದರ್ಸ್‍ಗೆ ಬೇಕಿದ್ದ ಸಾಥ್ ಕೊಟ್ಟಿದೆ. ಹಾಗಾಗಿ ಏನೇ ಬಂದರೂ ನೋಡಿಯೇ ಬಿಡೋಣ ಎಂಬ ತೀರ್ಮಾನವನ್ನು ಈರ್ವರೂ ಮಾಡಿಯಾಗಿದೆ.
ಇವೆಲ್ಲವೂ ಎಲ್ಲಿಗೆ ಹೋಗಿ ನಿಲ್ಲುತ್ತದೆಂಬುದನ್ನು ಈಗಲೇ ಹೇಳಲಾಗದು. ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೇ ಹೋಗಿಬಂದ ಯಡಿಯೂರಪ್ಪನವರು ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರೆ, ಡಿಕೆಶಿ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡರೆ ತಪ್ಪು, ಶ್ರೀರಾಮುಲು ರೆಡ್ಡಿಗಳು ಶಾಸಕರನ್ನು ಕೊಂಡುಕೊಂಡರೆ ಸರಿ ಎಂಬ ವಾದವನ್ನು ಮುಂದಿಟ್ಟರೆ ಜನರಿಗೆ ಒಪ್ಪಿಗೆಯಾಗದು. ಭ್ರಷ್ಟಾಚಾರವನ್ನು ನಡೆಸಿ, ಸಂಪತ್ತು ಗುಡ್ಡೆ ಹಾಕಿಕೊಳ್ಳುವುದರಲ್ಲಿ ಈ ಎರಡೂ ಫ್ಯಾಮಿಲಿಗಳು ಬಿಜೆಪಿಯ ಈ ಕುಳಗಳ ಜೊತೆ ಪೈಪೋಟಿ ನೀಡಲು ಪ್ರಯತ್ನಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ದುರಂತವೆಂದರೆ, ಬಿಜೆಪಿಯಂತಹ ಭ್ರಷ್ಟ ಪಕ್ಷವು ಕಾಂಗ್ರೆಸ್-ಜೆಡಿಎಸ್‍ಗಳ ಭ್ರಷ್ಟಾಚಾರದ ಬಗ್ಗೆ ಮಾತಾಡುವುದನ್ನು ರಾಜ್ಯದ ಜನತೆ ಕೇಳಬೇಕಾಗಿ ಬಂದಿದೆ.
ಅಂತಿಮವಾಗಿ ಇವು ಯಾರ ಭ್ರಷ್ಟಾಚಾರವನ್ನೂ ಕಡಿಮೆ ಮಾಡದೇ, ಜಾತಿ ಧ್ರುವೀಕರಣದ ಲೆಕ್ಕಾಚಾರಗಳ ಮೇಲಾಟವೇ ಹೆಚ್ಚಾಗುವ ಸಾಧ್ಯತೆ ಇದೆ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...