ಅಕ್ಕಿಯೊಳಗನ್ನವನು ಮೊದಲಾರು ಕಂಡವನು
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೇ ನಿನಗೆ ಜಸ ಮಂಕುತಿಮ್ಮ.
ಮಂಕುತಿಮ್ಮ ಎಂದು ದಡ್ಡನೊಬ್ಬನಿಗೆ ಅನ್ನುವಂತಹ ಮಾತೊಂದನ್ನು ಡಿವಿಜಿ ಜೀವರೂಪಕವನ್ನಾಗಿ ಆರಿಸಿಕೊಂಡಿದ್ದು ಆಕಸ್ಮಿಕವೂ ಅಲ್ಲ, ವಿಡಂಬನೆಯೂ ಅಲ್ಲ. ಜೀವಿ ಎಂಬ ಸೀಮಿತ ಭೌತಿಕ ಅಸ್ತಿತ್ವವು ಜೀವನ ಎಂಬ ಅನಂತ ಅಸ್ತಿತ್ವದ ಭಾಗವಾಗಿದ್ದು, ಅದನ್ನು ಅರಿಯಲು ತನ್ನ ತಾತ್ವಿಕತೆಯ ದೃಷ್ಟಿಯನ್ನು ವಿಸ್ತಾರಗೊಳಿಸಿಕೊಳ್ಳಲು ಮಂಕುತಿಮ್ಮ ಇಲ್ಲಿ ಮಾನುಷ ರೂಪಕವಾಗಿದ್ದಾನೆ.
ತಿಳಿದಿದ್ದೇನೆ ಎನ್ನುವ ಅಹಮಿನ ಭಾವಕ್ಕೆ ತಿಳಿಯದ ಅನಂತ ವಿಚಾರಗಳು, ಅಚ್ಚರಿಗಳು, ಗುಟ್ಟುಗಳು, ದಾರಿಗಳು, ನೋಟಗಳೆಲ್ಲಾ ಇದ್ದು, ತನಗೆ ಹೇಳಿಕೊಂಡರೆ ತಾನು, ನಿನಗೆ ಹೇಳಿದರೆ ನೀನು ಎನ್ನುವ ಹಾಗೆ ಮಂಕುತಿಮ್ಮ ಆತ್ಮಾವಲೋಕನಕ್ಕೂ ರೂಪಕವಾಗುತ್ತಾನೆ. ಎದುರಿಗೆ ಸಂವಾದಿಸುತ್ತಾ ಬೋಧನೆಯನ್ನು ಸ್ವೀಕರಿಸುತ್ತಿರುವ ವ್ಯಕ್ತಿಯಾಗಿಯೂ ಸಂಕೇತವಾಗುತ್ತಾನೆ. ಒಟ್ಟಾರೆ ಒಂದು ಮಾನುಷ ಪರಿಮಿತಿಯ ಗ್ರಹಿಕೆ ಮತ್ತು ಅರಿವನ್ನು ಪರಸ್ಪರ ಹಂಚಿಕೊಳ್ಳುವ ಪ್ರತಿಮೆ ಮಂಕುತಿಮ್ಮ.
“ಕಲೆಗಳಲಿ ಪರಮ ಕಲೆ ಜೀವನದ ಲಲಿತಕಲೆ” ಎನ್ನುವ ಮಂಕುತಿಮ್ಮ ತನ್ನೆಲ್ಲಾ ತಾತ್ವಿಕ, ನೈತಿಕ, ಪಾರಮಾರ್ಥಿಕ ಹುಡುಕಾಟಗಳನ್ನೆಲ್ಲಾ ತನ್ನ ವರ್ತನೆ, ದರ್ಶನ, ಕ್ರಿಯೆ, ಪ್ರತಿಕ್ರಿಯೆ, ಗಮನ, ವಿಚಾರದ ಪ್ರಕ್ರಿಯೆಗಳಲ್ಲಿ ಅಲ್ಲಲ್ಲಿಗೆ ಒಳನೋಟಗಳನ್ನು ಕಂಡುಕೊಳ್ಳುತ್ತಿರುತ್ತಾನೆ. ಅದು ಧೈರ್ಯ, ಶಾಂತಿ, ಸಮಾಧಾನ, ದೃಷ್ಟಿಯಾಗುತ್ತದೆ, ಊರುಗೋಲಾಗುತ್ತದೆ, ಹರಿಗೋಲಾಗುತ್ತದೆ.
ಸತ್ತೆನೆಂದೆನಬೇಡ ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆಂಬುದು ಒಂದು ತೆರೆಯಿಳಿತ ತೆರೆಯೇರು
ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ.
ಹೀಗೆ ಸಾವನ್ನೂ ಎದುರಿಸುವಂತಹ ಸ್ಥೈರ್ಯ ಕೊಡಲು ಅಥವಾ ತಂದುಕೊಳ್ಳಲು ಮಂಕುತಿಮ್ಮ ಮುಂದಾಗುತ್ತಾನೆ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.
ಈ ಕಗ್ಗ ನೇರವಾಗಿ ವಿಷಯವನ್ನು ತಿಳಿಸಿದಂತೆ ಎಲ್ಲಾ ಕಗ್ಗಗಳೂ ಸುಲಭವೇನಲ್ಲ. ಪದಪದಗಳು ಒಂದರಲ್ಲೊಂದು ಹೆಣೆದುಕೊಂಡು ಜಟಿಲವಾದ ಅಥವಾ ಕೇಳದಿರುವ ಪದಗಳಂತೆ ತೋರುವುದುಂಟು. ತತ್ಸಮ ತತ್ಭವ ಪದಗಳ ಅರಿವಿರಬೇಕು.
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎಂದಾಗ ಕದನವು ಎಂದು ಅಂಜಿ ಎಂಬ ಪದಗಳಲ್ಲಿ ಸಂಧಿಕಾರ್ಯವಾಗಿರುವ ಅರಿವಿರಬೇಕು. ಬಿದಿ ಎಂಬುದು ವಿಧಿಯ ತತ್ಭವ ರೂಪ ಎಂದೂ ತಿಳಿದಿರಬೇಕು. ಹೀಗಾಗಿ ಕಗ್ಗ ಬಹುಜನಕ್ಕೆ ಕಬ್ಬಿಣದ ಕಡಲೆಯಾಗಿ ಚೆನ್ನಾಗಿ ಭಾಷೆ ಬಲ್ಲವರು ನಾಲಿಗೆಯನ್ನು ಹೊರಳಾಡಿಸುತ್ತಾ ಹೇಳುವಾಗ ಕೆಲವರಿಗೆ ಯಾವುದೋ ಮಂತ್ರವನ್ನು ಅಥವಾ ಟಂಗ್ ಟ್ವಿಸ್ಟರ್ ಕೇಳುತ್ತಿರುವಂತೆ ಅನ್ನಿಸಿದರೆ ಆಶ್ಚರ್ಯವೇನಿಲ್ಲ.
ಎಲ್ಲಾ ಕಗ್ಗಗಳೂ ಒಂದೇ ದೃಷ್ಟಿಕೋನವನ್ನು ಹೊಂದಿರುವುದಿಲ್ಲ. ಸಾಂದರ್ಭಿಕವಾಗಿ ಅವುಗಳು ಧ್ವನಿಸುತ್ತವೆ. ಎದೆಯನುಕ್ಕಾಗಿಸುತ ಮತಿಗದೆಯ ಪಿಡಿದು ನೀನೆದುರು ನಿಲೆ ಬಿದಿಯೊಲಿವ, ಅಂದರೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ಕುಶಲತೆಯಿಂದ ನಿನಗೆ ಎದುರಾಗಿರುವ ವಿಧಿಯನ್ನು ಗೆಲ್ಲು ಎಂದು ಆತ್ಮಶಕ್ತಿಯ ಧೈರ್ಯ ಹೇಳುವ ಮಂಕುತಿಮ್ಮ, ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ಮದುವೆಗೋ ಮಸಣಕೋ ಹೋಗೆಂದಕಡೆಗೋಡುತ್ತಿರಬೇಕು ಎನ್ನುವ ಹಣೆಬರಹವನ್ನು ಹಳಿಯಲಾರದ ಜಿಗುಪ್ಸೆಯೂ ಇದೆ. ಇವು ವಿರೋಧಾಭಾಸಗಳೇನಲ್ಲ. ಮಂಕುತಿಮ್ಮನ ಕಗ್ಗ ಒಂದು ವಿಚಾರಧಾರೆಯನ್ನು ಪ್ರತಿಪಾದಿಸಲು ಇಡೀ ಕೃತಿ ಕಟ್ಟಿಕೊಂಡಿರುವುದೇನಲ್ಲ.
ಒಂದು ಜೀವ, ಜೀವನದ ಪಥದಲ್ಲಿ ಎದುರಾಗುವ ಎಲ್ಲವನ್ನೂ ಹಾದು ಹೋಗುವುದು ಅನಿವಾರ್ಯವಾದ್ದರಿಂದ ಸಂದರ್ಭಾನುಸಾರ ಪ್ರಶ್ನೆಗಳಿಗೂ ಸಾಂದರ್ಭಿಕ ಉತ್ತರಗಳನ್ನು ಪಡೆದುಕೊಳ್ಳುತ್ತಾ ಹೋಗುವನು ಈ ಮಂಕುತಿಮ್ಮ.
ಒಂದು ಎಚ್ಚರಿಕೆ; ಮಂಕುತಿಮ್ಮನ ಕಗ್ಗವನ್ನು ಓದುವಾಗ ಪದಗಳು ಉಲ್ಲನ್ ಉಂಡೆ ಸಿಕ್ಕಾದಂತೆ ಕಂಡರೂ ಯಾರಾದರೂ ಕೊಟ್ಟಿರುವ ವಿವರಣೆಗಳನ್ನು ಮಾತ್ರ ಓದಬೇಡಿ. ಎಷ್ಟೋ ಬಾರಿ ಕೊಟ್ಟಿರುವ ವಿವರಣೆಗಳು ಕಗ್ಗದ ಅರ್ಥವನ್ನೇ ಸಂಕುಚಿತಗೊ ಳಿಸಿಬಿಟ್ಟಿರುತ್ತವೆ, ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ, ಅರ್ಥ ವ್ಯತ್ಯಾಸವಾಗಿರುತ್ತದೆ. ವಿರೋಧಾರ್ಥಗಳು ಇರುವುದೂ ಉಂಟು. ಹಲಸನ್ನು ಬಿಡಿಸಿದಂತೆ ವಾಕ್ಯಗಳಲ್ಲಿರುವ ಪದಗಳನ್ನು ಬಿಡಿಸಿಕೊಂಡರೆ ಅರ್ಥವಾಗುವುದು. ಅರ್ಥವಾಗದಿದ್ದರೂ ಪರವಾಗಿಲ್ಲ, ತಾತ್ಪರ್ಯಗಳನ್ನು ಓದಿ ಅಪಾರ್ಥ ಮಾಡಿಕೊಳ್ಳಬಾರದೆಂಬುದಷ್ಟೇ ನನ್ನ ಕಾಳಜಿ.
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ?
ಮುಷ್ಟಿ ಪಿಷ್ಟವು ತಾನೇ? ಮಂಕುತಿಮ್ಮ.
ಮಂಕುತಿಮ್ಮನ ಕಗ್ಗವನ್ನು ಮೊದಲಿನಿಂದ ಪ್ರಾರಂಭಿಸಿ ಕೊನೆಗೆ ಮುಗಿಸಬೇಕೆಂದೇನಿಲ್ಲ. ಮಧ್ಯೆಮಧ್ಯೆ ತೆರೆದು ಕಂಡಿದ್ದನ್ನು ಓದಬಹುದು. ಅದು ನಮ್ಮರಿವಿಗೆ ಒದಗುವುದು. ಎಲ್ಲಾ ಒಪ್ಪಬೇಕೆಂದಿಲ್ಲ. ಬೇಕಾದ ಕಾಳುಗಳ ಆಯ್ದಾಯ್ದುಕೊಳ್ಳಬಹುದು. ಹೊಟ್ಟು ಮತ್ತು ಪೊಳ್ಳುಗಳಲ್ಲಿ ಗಟ್ಟಿ ಕಾಳುಗಳು ಇವೆ ಎಂಬುದಂತೂ ಸತ್ಯ. ಕಳೆದು ಹೋಗಿರುವ ಆ ತಲೆಮಾರಿನ ಬೇರುಗಳು ನಮ್ಮಲ್ಲಿ ಚಿಗುರನ್ನು ಮೂಡಿಸಲಾರವೇ?
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ.


