Homeಅಂಕಣಗಳುಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

- Advertisement -
- Advertisement -

ಹಂಗಾರ ಅಧಿಕಾರ ದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಸುದ್ದಿಯ ಮೂಲವೇ ಈ ಸಲದ ಸುದ್ದಿ. ಸುದ್ದಿ ಎಲ್ಲಿಂದ ಬರತದ ಅನ್ನೋದು ಬಲ್ಲಿರೇನಯ್ಯ? ಮೊನ್ನೆ ಏನಾತಪಾ ಅಂದರ ವಿಶ್ವದ ಅತಿ ಶ್ರೀಮಂತರ ಪೈಕಿ ಒಬ್ಬರಾದ ಜೆಫರಿ ಬೆಜೋಸ್ ಅನ್ನೋ ಅಮೇಜಾನ್ ಕಂಪನಿ ಮಾಲಿಕರು ದೆಹಲಿಗೆ ಬಂದಿದ್ದರು.

ಪ್ರತಿ ಸಾರಿ ಸಾಹುಕಾರರು ಬಂದಾಗ ಸರಕಾರಿ ಸಾಲಿಗೆ ಸಾಹೇಬರು ಬಂದಾಗ ಹುಡುಗರು ನೀಟಾಗಿ ಸಮವಸ್ತ್ರ ಹಕ್ಕೊಂಡು, ಸಾಲಾಗಿ ನಿಂತು ನಮಸ್ಕಾರ ಅಂತಾರಲ್ಲ, ಹಂಗ ಪ್ರಧಾನ ಮಂತ್ರಿ ಆದಿಯಾಗಿ ಎಲ್ಲ ಮಂತ್ರಿವರೇಣ್ಯರು ನಿಲ್ಲತಿದ್ದರು. ಐಟಿ, ಬಿಟಿ, ಕೋಟಿ, ಚೀಟಿ, ರೋಟಿ ಕಂಪನಿಗಳ ಮಾಲಿಕರು ಅವರ ಕೈಕುಲುಕಿ ನಮಗೊಂದಿಷ್ಟು ಕೂಲಿ ಕೊಡಿ ಅಂತ ಅಂತಿದ್ದರು. ಆದರ ಈ ಸಲೆ ಮಾತ್ರ ಮನಿಷಾನ್ನ ಯಾರು ಭೇಟಿ ಆಗಲಿಲ್ಲ. ಅವರು ನಮ್ಮ ದೇಶದಾಗ ಸಾವಿರ ಕೋಟಿ ಡಾಲರ್ ಬಂಡವಾಳ ಹೂಡಿ ಲಕ್ಷಾಂತರ ಜನರಿಗೆ ಉದ್ಯೋಗ ಕೊಡತೇನಿ ಅಂದರು. ಆದರೂ ಸಹಿತ ಯಾರೂ ಅವರ ಸಂಗತೆ ಮಾತಾಡಲಿಲ್ಲ. ಹೋಗಲಿ, ಕೇಂದ್ರ ಹಣಕಾಸು ಸಚಿವರು ಅವರು ಬಂಡವಾಳ ಹೂಡೋದೇನು ನಮ್ಮ ಮ್ಯಾಲ ಉಪಕಾರ ಮಾಡಲಿಕ್ಕೆ ಹತ್ತಿಲ್ಲ, ಅಂತ ಒಂದು ಡ್ಯಾಷ್ ಡ್ಯಾಷ್ ನೋಟ ಬೀರಿದರು. ಏ ಅಮ್ಮೀಜಾನ್, ಈ ಇಂಡಿಯಾಕ್ಕ ಹೋಗೋ ಐಡಿಯಾ ಕೊಟ್ಟವ ಯಾವಾನವಾ ಅಂತ ಅವರು ತಮ್ಮ ಕಚೇರಿ ಒಳಗ ಜೋರಾಗಿ ಕೂಗಾಡಿರಬೇಕು.

ಆ ಅಂತರಜಾಲಿಯ ಮ್ಯಾಲೆ ನಮ್ಮನ್ನಾಳುವವರ ರಂಜಿಷ್ಗೆ ಕಾರಣ ಏನು ಇದ್ದಿರಬಹುದು? ಬೇಜೋಸ್ ಅವರು ನೆಹರೂ ಜಾಕೆಟ್ ಹಕ್ಕೊಂಡು ಮಹಾತ್ಮಾಗಾಂಧಿ ಸಮಾಧಿಗೆ ಭೇಟಿ ನೀಡಿದ್ದರು. ಅದೂ ಒಂದು ಕಾರಣ ಇರಬಹುದು ಅಂತ ಮೋಷಾ ವಿರೋಧಿಗಳು ಹೇಳಿಕೋತ ಅಡ್ಯಾಡಲಿಕ್ಕೆ ಹತ್ಯಾರಂತ.

ಆದರ ಖರೇ ಸಿಟ್ಟು ಯಾಕಂದರ ಅಮೇರಿಕದ ವಾಷಿಂಗಟನ್ ಪೋಸ್ಟ್ ಪತ್ರಿಕೆ ವರದಿಗಾರರು, ಅಂಕಣಕಾರರು ಭಾರತದ ಸರಕಾರದ ಬಗ್ಗೆ ಸಕಾರಣ ಟೀಕೆ ಮಾಡಿ ಒಂದಿಷ್ಟು ಸುದ್ದಿ ಬರದಾರ. ಬೇಜೋಸ್ ಅವರು ಆ ಪತ್ರಿಕೆ ಮಾಲಿಕರು. ಅಷ್ಟ.

ನಾಕಾಣಿ ಅನ್ನೋ ಹೆಸರಿಟ್ಟುಕೊಂಡಿರುವ ಆಳುವ ಪಕ್ಷದ ನಾಯಕರೊಬ್ಬರು ಮೊನ್ನೆ ರಾತ್ರೋ ರಾತ್ರಿ ಫೇಮಸ್ ಆದರು. ಅವರು ಮಾಡಿದ್ದಿಷ್ಟೇ. ಅವರು ಟ್ವೀಟು ಮಾಡಿದರು. ನಾವು ಸಣ್ಣವರಿದ್ದಾಗ ಕೆಲಸ ಇಲ್ಲದ ಬಡಿಗ್ಯಾ ಮಗಾ ಕೂಡಲಿಕ್ಕೆ ಮೂರು ಮಣಿ ಮಾಡಿದ್ದನಂತ ಅಂತ ಒಂದು ಗಾದಿ ಮಾತು ಇತ್ತು. ಈಗ ಅದು ಬದಲಾಗಿ. ಮಾಡಲಿಕ್ಕೆ ಕೆಲಸ ಇರಲಾರದವರು ಟ್ವೀಟು ಮಾಡಿದ್ದರಂತ ಅಂತ ಆಗೇದ. ಈ ಚೌಥಾಯಿಯಾ ಅನ್ನೋರು ಬೇಜೋಸ್ ಅವರ ಹೆಸರಿಗೆ ಟ್ವೀಟು ಮಾಡಿದರು. “ನೀವು ಇಲ್ಲಿ ಬಂದು ನಮ್ಮ ದೇಶ ಛಲೋ ಅಂದರ ಸಾಲಂಗಿಲ್ಲ. ಅದನ್ನ ಹೋಗಿ ವಾಷಿಂಗಟನ್ನಿನ ನಿಮ್ಮ ನೌಕರರಿಗೆ ಹೇಳಿರಿ” ಅದರ ಅರ್ಥ ಏನಂದರ ವಾಪೋ ಪತ್ರಿಕೆ ಮೋಷಾ ಸರಕಾರದ ಬಗ್ಗೆ ದನಾತ್ಮಕವಾಗಿ ಬರೀಬೇಕು ಅಂತ. ಅವರ ಪ್ರಕಾರ ಅತಳ ಪತಳ ರಸಾತಳದಾಗಿನ ಯಾರೂ ನಮ್ಮ ಸರಕಾರವನ್ನು ಟೀಕೆ ಮಾಡಬಾರದು. ಚಿಕಿತ್ಸಕ ದೃಷ್ಟಿಯಿಂದ ನೋಡಬಾರದು. ಎಲ್ಲರೂ ಉಘೇ ಉಘೇ ಅನ್ನಬೇಕು.

ಅದನ್ನ ನೋಡಿ, ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಂಡ ಪತ್ರಿಕೆಯ ಜಾಗತಿಕ ಅಭಿಪ್ರಾಯ ವಿಭಾಗದ ಸಂಪಾದಕ ಎಲ್ಲೀ ಲೋಪೆಜ್ ಅವರು ಸಟಕ್ಕನ ಉತ್ತರ ಕೊಟ್ಟರು. “ಜೆಫ್ ಬೆಜೋಸ್ ಅವರು ನಮ್ಮ ಪತ್ರಿಕೆಯೊಳಗ ನಾವು ಏನು ಬರೀಬೇಕು ಅಂತ ಹೇಳಿಕೊಡಂಗಿಲ್ಲ” ಅಂತ. ಅದರ ಅರ್ಥ ನಿಮ್ಮ ದೇಶದಾಗ ನೀವು ಪತ್ರಿಕೆ ಮಾಲಿಕರ ಮಾತು ಕೇಳಿ ಸುದ್ದಿ ಬರೀತೀರಿ ಅಂತನೂ ಆಗಬಹುದು. “ಸ್ವತಂತ್ರ ಪತ್ರಿಕೋದ್ಯಮದ ಕೆಲಸ ಅಂದರೆ ಸರಕಾರಕ್ಕ ಬೆಣ್ಣಿ ಹಚ್ಚೋದಲ್ಲ. ನಾವೇನು ತಪ್ಪು ಮಾಡ್ತಿಲ್ಲ. ಭಾರತದ ಪ್ರಜಾಪ್ರಭುತ್ವದ ತತ್ವ ಭಂಗವಾಗದ ಹಂಗ ನಾವು ಸುದ್ದಿ ಮಾಡ್ತಿದ್ದೇವೆ” ಅಂತ ಒಂದು ಸ್ಪಷ್ಟೀಕರಣನೂ ಕೊಟ್ಟರು.

ಇದನ್ನ ನೋಡಿದರ ಅಮೇರಿಕೆ ಪತ್ರಿಕೋದ್ಯಮದ ದಂತ ಕಥೆ ಎನ್ನಲಾದ ವಾಷಿಂಗಟನ್ ಪೋಸ್ಟಿನ ಮಾಜಿ ಸಂಪಾದಕ ಬೆನಜಮಿನ್ ಬ್ರ್ಯಾಡಲೀ ಅವರ ನೆನಪು ಆಗತದ.

ಅಧ್ಯಕ್ಷ ರಿಚರ್ಡ ನಿಕ್ಸನ್ ಅವರನ್ನ ಕುರ್ಚಿಯಿಂದ ಇಳಿಸಲಿಕ್ಕೆ ಕಾರಣರಾದ ವಾಟರ್ ಗೇಟ ಹಗರಣದ ವರದಿಗಾರರಾದ ಬಾಬ್ ವುಡವರ್ಡ್ ಹಾಗೂ ಕಾರ್ಲ್ ಬರ್ನಸ್ಟೀನ್ ಅವರನ್ನು ಬೆನ್ ಅವರು ಅತ್ಯಂತ ಕಷ್ಟದ ದಿನಗಳಲ್ಲಿ ಬೆಂಬಲಿಸಿದರು. ಆಳುವವರಿಂದ, ತಮ್ಮ ವೃತ್ತಿಯ ಇತರರಿಂದ, ಕುಟುಂಬದಿಂದ, ಇನ್ಯಾವುದೋ ಮೂಲದಿಂದ ಬೆದರಿಕೆ, ಆಮಿಷಗಳು ಬಂದರೂ ಸಹ ಅವರು ಹಿಂಜರಿಯಲಿಲ್ಲ. `ನನ್ನನ್ನು ಎಲ್ಲರೂ ಪ್ರೀತಿಸಲಿ ಎನ್ನುವುದು ಪತ್ರಕರ್ತನ ಧ್ಯೇಯ ಆಗಿರಬಾರದು. ಅವನ ಜೀವನದ ಒಂದೇ ಒಂದು ಗುರಿ- ಸತ್ಯದ ಹುಡುಕಾಟ ಹಾಗೂ ಅದನ್ನು ಜಗತ್ತಿನ ಮುಂದ ಜಾಹೀರು ಪಡಿಸೋದು ಆಗಿರಬೇಕು’ ಅಂತ ತಮ್ಮನ್ನು ವಿಚಾರಣೆಗೆ ಗುರಿಪಡಿಸಿದ ಸಂಸತ್ ಸಮಿತಿಯ ಎದುರು ಹೇಳಿದರು. ಸರಿ ಸುಮಾರು ಮೂವತ್ತು ವರ್ಷ ಪತ್ರಿಕೆಯ ಸಂಪಾದಕರಾಗಿದ್ದ ಬೆನ್ ಅವರು ಕೆಲವು ವರ್ಷಗಳ ಹಿಂದೆ ತೀರಿಹೋದರು.

ಹಂಗಾರ ಅಧಿಕಾರದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಜರ್ಮನಿಯಲ್ಲಿ ಹಿಟ್ಲರ್ ಏನೂ ತಪ್ಪು ಮಾಡದ ಆರು ಲಕ್ಷ ಜನ ಯಹೂದಿಗಳನ್ನ ಕೊಂದಾಗ, ಇದಿ ಅಮೀನ ಅವರು ಪ್ರಾಯದ ಯುವಕರ ಮಾಂಸ ಬೇಯಿಸಿ ತಿಂದಾಗ, ಪೋಲ್ ಪೋಟ್ ಅವರು ಚಾಳೀಸು ಹಾಕಿದ ಎಲ್ಲರಿಗೂ ಗುಂಡು ಹಾಕಿರಿ ಅಂತ ಆದೇಶ ಕೊಟ್ಟಾಗ, ಫ್ರೆಂಚ ಸರಕಾರ ಆಫ್ರಿಕಾದ ತನ್ನ ಕಾಲನಿಗಳಲ್ಲಿ ಕರಿಯರನ್ನು ಬಿಡಾಡಿ ದನಗಳಂತೆ ಬಹಿರಂಗ ಹರಾಜು ಹಾಕಿ ಮಾರಾಟ ಮಾಡಿದಾಗ, ಅಮೇರಿಕಾದಾಗ ಗುಲಾಮರನ್ನು ಹತ್ತಿ ಹೂವು ಕದ್ದಿದ್ದಕ್ಕಾಗಿ ಚೌರಸ್ತಾಗಳಲ್ಲಿ ಬೆಂಕಿ ಹಚ್ಚಿದಾಗ, ಇಂಗ್ಲಂಡಿನಲ್ಲಿ ಕೂಲಿ ಮಾಡೋ ಮಹಿಳೆಯರನ್ನ ಮಾಟಗಾತಿಯರು ಅಂತ ಹೇಳಿ ಆರೋಪಿಸಿ ಕೂಟಿನಲ್ಲಿ ಸುಟ್ಟಾಗ, ಅಲ್ಲಿನ ಪತ್ರಿಕೆಗಳು ಸುಮ್ಮನೇ ಇದ್ದದ್ದನ್ನು ನಾವು ಈಗ ಮೆಚ್ಚುತ್ತೇವೋ, ದೂರುತ್ತೇವೋ?

ಧರಾಸನಾ ಉಪ್ಪಿನ ಕಾರಖಾನೆಯೊಳಗ ಶಾಂತಿಯುತ ಪ್ರತಿಭಟನಾಕಾರರನ್ನು ಬ್ರಿಟಿಷರು ಸಾಲು ಹಚ್ಚಿ ಹೊಡೆದು ತಲೆ ಒಡೆದಾಗ ಪತ್ರಿಕರ್ತ ವಿನ್ಸ್ ವಾಕರ್ ಅವರು `ಭಯಂಕರ ಹಿಂಸೆ, ಮಾನವ ಹಕ್ಕುಗಳ ದಮನ’ ಅಂತ ಬರೆದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಕೆಲವು ಬ್ರಿಟಿಷ ಪತ್ರಿಕೆಗಳೇ `ಅತಿರೇಕದ ಹಿಂಸೆ’ ಅಂತ ಬರೆದವು. ಹಂಗಾರ ಅವರು ಸರಕಾರದ ವಿರುದ್ಧ ಬರೆದದ್ದು ತಪ್ಪೇ? ಪತ್ರಿಕಾ ಧರ್ಮಕ್ಕೆ ಮಾಡಿದ ದ್ರೋಹವೇ?

ಈಗ ಜಗತ್ ಪ್ರಸಿದ್ಧವಾಗಿರುವ, ಬೆನ್ ಬ್ರ್ಯಾಡಲೀ ಅವರು ಐವತ್ತು ವರ್ಷ ಹಿಂದೆ ನೀಡಿದ ಹೇಳಿಕೆಯೊಂದನ್ನ ಗಮನಿಸೋಣ.

“ಮಾಧ್ಯಮಗಳು ತಮ್ಮನ್ನು ತಾವು ಪ್ರಜಾಪ್ರಭುತ್ವದ ಕಾವಲು ನಾಯಿ ಅಂತ ತಿಳಿದುಕೊಂಡಿರುತ್ತವೆ. ಆದರೆ ಆಳುವವರು ಮಾಧ್ಯಮ ತಮ್ಮ ಸಾಕುನಾಯಿಯಾಗಿರಬೇಕು ಅಂದುಕೊಂಡಿರುತ್ತಾರೆ”. ಇದರಲ್ಲಿ ನಾವು ಏನನ್ನು ನಂಬುತ್ತೇವೋ ಅದು ನಮ್ಮ ಪ್ರಜಾಪ್ರಭುತ್ವದ ವಿಕಾಸವನ್ನು, ನಮ್ಮ ನಾಳೆಗಳನ್ನ, ನಿರ್ಧರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...