Homeಪುಸ್ತಕ ವಿಮರ್ಶೆಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ.

- Advertisement -
- Advertisement -

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಆರಂಭವಾದ ತೊಂಭತ್ತರ ದಶಕ ಬೌದ್ಧಿಕ ಚಿಂತನೆಯ ದೃಷ್ಟಿಯಿಂದಲೂ ಮಹತ್ವದ ಕಾಲಘಟ್ಟ. ಹಾಗೆಯೇ ಎಂಭತ್ತರ ದಶಕದ ನಂತರ ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ವಸಾಹತೋತ್ತರ ಚಿಂತನೆಗಳು ಡಾಳಾಗಿ ಕಾಣಿಸಿಕೊಳ್ಳತೊಡಗಿದವು. ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಬೌದ್ಧಿಕ ನಿರ್ವಸಹತೀಕರಣದ ಪರಿಕಲ್ಪನೆ ಕಾಣಿಸಿಕೊಂಡದ್ದು ಈ ಹಂತದಲ್ಲಿಯೇ. ಹಾಗೆ ನೋಡಿದರೆ ಆಫ್ರಿಕಾದ ಚಿಂತಕ ಥಿಯಾಂಗೊ ಗೂಗಿಯ ನಿರ್ವಸಹತೀಕರಣ ಚಿಂತನೆಯನ್ನು ರಹಮತ್ ತರೀಕರೆಯವರು ಸಂಗ್ರಹರೂಪದಲ್ಲಿ ತಂದದ್ದು ಬಹುಶಃ ಮೊದಲ ಪ್ರಯತ್ನಗಳಲ್ಲೊಂದು.

ಇಂಥ ಬೌದ್ಧಿಕ ನಿರ್ವಸಹತೀಕರಣದ ಯತ್ನ ಭಾರತೀಯ ಭಾಷೆಗಳಲ್ಲಿ ಎರಡು ನೆಲೆಯಲ್ಲಿ ಆಗಬೇಕಿತ್ತು. ಭಾಷಿಕವಾಗಿ ಪ್ರಾದೇಶಿಕ ಭಾಷೆಗಳು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಚಿಂತನೆಯಿಂದ ಮುಕ್ತವಾಗಿ ತನ್ನದೆ ಆದ ಚಿಂತನಾ ಪರಂಪರೆಯನ್ನು ಕಂಡುಕೊಳ್ಳಬೇಕಾಗಿತ್ತು. ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆ ನಮ್ಮಲ್ಲಿ ಕಾಣಿಸಿಕೊಂಡದ್ದು ಈ ಹಿನ್ನೆಲೆಯಲ್ಲಿ. ಹಾಗೆಯೇ ಡಿ ಎನ್ ಶಂಕರಭಟ್ಟರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಕೃತಿ ಕೂಡ ಈ ಚಿಂತನೆಯ ಆದ್ಯ ಕೃತಿಗಳಲ್ಲೊಂದು ಎಂಬುದನ್ನು ಮರೆಯುವಂತಿಲ್ಲ.

ಕನ್ನಡದ ಸಾಹಿತ್ಯ ಮೀಮಾಂಸೆಯೆಂದರೆ ಅದೊಂದು ಅಸ್ಮಿತೆಯ ಹುಡುಕಾಟದ ಮಹಾಯಾನ. ಅಥವಾ ಬೇರೊಂದು ಮಾತಿನಲ್ಲಿ ಅದನ್ನು ಬಿಡುಗಡೆಯ ಕಥನವೆಂದು ಕರೆಯಬಹುದು. ರಹಮತ್ ತರೀಕೆರೆಯವರು ಕನ್ನಡ ಸಾಹಿತ್ಯ ಮೀಮಾಂಸೆಯನ್ನು ವ್ಯಾಖ್ಯಾನಿಸುವುದು ಗಮನಾರ್ಹವಾದದ್ದು. ಅವರ ದೃಷ್ಟಿಯಲ್ಲಿ ಸಾಹಿತ್ಯದ ಹುಟ್ಟಿನ ಪ್ರೇರಣೆಗಳು, ಅದು ಸೃಷ್ಟಿಯಾಗುವ ಕ್ರಮಗಳು, ಅಭಿವ್ಯಕ್ತಿಯಾಗುವ ಪ್ರಕಾರಗಳು, ಅದು ಭಾಷೆಯನ್ನು ಬಳಸುವ ವಿಧಾನ, ಅನುಸರಿಸುವ ಶೈಲಿ, ಅದನ್ನು ಅನುಸಂದಾನ ಮಾಡುವ ಜನ ಮತ್ತು ಸಂಸ್ಥೆಗಳು, ಸಮಾಜದ ಮೇಲಾಗುವ ಪರಿಣಾಮ ಇವೆಲ್ಲವನ್ನು ಕುರಿತ ತಾತ್ವಿಕ ಚಿಂತನೆಯ ಸಾಹಿತ್ಯ ಮೀಮಾಂಸೆಯಾಗಿದೆ. ಅದು ಒಂದು ಭಾಷಿಕ ಸಮುದಾಯವು ಕಾಲಕಾಲಕ್ಕೆ ಪಟ್ಟ ಪಾಡುಗಳ ಮೂಲಕ ಹಾದು ಬಂದ ಕಥನವಾಗಿದೆ.

ಕನ್ನಡ ಸಾಹಿತ್ಯ ಮೀಮಾಂಸೆಯನ್ನು ರೂಪಿಸುವ ಪ್ರಯತ್ನಗಳು ಹಲವು ರೀತಿಯಲ್ಲಿ ಆಗಿವೆ. ಬೇಂದ್ರೇ ಕುರ್ತಕೋಟಿಯವರಲ್ಲಿ ಪಾಶ್ಚಾತ್ಯ ಸಾಹಿತ್ಯ ಚಿಂತನೆಯ ಕುರಿತು ಸಮರ್ಥನೀಯ ನಿರಾಕರಣೆಯಿದೆ. ಆದರೆ ಭಾರತೀಯ ಕಾವ್ಯ ಮೀಮಾಂಸೆಯ ಕುರಿತು ಇಂಥ ನಿರಾಕರಣೆ ಕಾಣುವುದಿಲ್ಲ. ಆದರೆ ಎಂಭತ್ತರ ದಶಕದ ನಂತರದ ಕನ್ನಡ ಸಾಹಿತ್ಯ ಚಿಂತನೆಯಲ್ಲಿ ಕೆ.ವಿ.ನಾರಾಯಣ, ಡಿ.ಆರ್. ನಾಗರಾಜ್, ನಟರಾಜ್ ಬೂದಾಳ್, ರಹಮತ್ ತರೀಕೆರೆಯವರು ಸಂಸ್ಕೃತ ಮತ್ತು ಪಾಶ್ಚಾತ್ಯ ಮೀಮಾಂಸೆಗಳೆರಡು ನಮ್ಮ ಚಿಂತನೆಗಳನ್ನು ಹೇಳಲಾರವು ಎಂಬ ನಿಲುವಿಗೆ ಬರುತ್ತಾರೆ. ಭಾರತೀಯ ಕಾವ್ಯ ಮೀಮಾಂಸೆಯ ಯಜಮಾನಿಕೆಯ ರಸದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾರೆ. ಆನಂದದ ಅನುಸಂಧಾನದ ವೈದಿಕ ಪರಿಕಲ್ಪನೆಯಾದ ರಸಕ್ಕೆ ವಿರುದ್ಧವಾಗಿ ದುಃಖಾನುಸಂಧಾನವನ್ನು ಹೇಳಿಕೊಟ್ಟ ಬೌದ್ಧ ಮೀಮಾಂಸೆಯನ್ನು ಮಂಡಿಸುತ್ತಾರೆ. ಹಾಗೆಯೇ ಏಕರಸದ ಸರಳ ಸ್ಥಿತಿಯ ಚಿಂತನೆಗೆ ರ‍್ಯಾಯವಾಗಿ ಜೈನ ಚಿಂತನೆಯಾದ ಅನೇಕಾಂತವಾದವನ್ನು ಹಾಗೂ ಅರಿವಿನ ಅನುಸಂಧಾನದ ವಚನ ಚಿಂತನೆಯನ್ನು ಮುನ್ನೆಲೆಗೆ ತರುತ್ತಾರೆ.

ಹೀಗೆ ಕನ್ನಡ ಸಾಹಿತ್ಯ ಮೀಮಾಂಸೆಯೆಂಬುದು ಬಹುಮುಖಿ ನೆಲೆಗಳಲ್ಲಿ ಕಟ್ಟಲ್ಪಡುತ್ತಿರುವ ಸಂದರ್ಭದಲ್ಲಿ ಡಾ.ರವಿಕುಮಾರ್ ನೀಹ ಅವರ ‘ದಲಿತ ಸಾಹಿತ್ಯ ಮೀಮಾಂಸೆ’ ಕೃತಿ ಪ್ರಕಟವಾಗಿದೆ. ಈ ಕೃತಿ ಕೆಲವು ಮುಖ್ಯ ಕಾರಣಗಳಿಂದ ಮುಖ್ಯವಾಗಿ ಕಾಣುತ್ತದೆ. ಈ ಕೃತಿಯಲ್ಲಿ ಇರುವ ಸೈದ್ಧಾಂತಿಕ ಸ್ಪಷ್ಟತೆಗಾಗಿ ಮಹತ್ವದ್ದಾಗಿ ಪರಿಗಣಿಸಬೇಕಾಗಿದೆ. ಕನ್ನಡ ಸಾಹಿತ್ಯ ಮೀಮಾಂಸೆಗೆ ಪರ್ಯಾಯವಾಗಿ ದಲಿತ ಸಾಹಿತ್ಯ ಮೀಮಾಂಸೆ ಹುಟ್ಟಿಕೊಂಡಿದೆ ಎಂಬ ನಿಲುವು ಈ ಅಧ್ಯಯನದಲ್ಲಿ ಇಲ್ಲ. ದಲಿತ ಸಾಹಿತ್ಯ ಮೀಮಾಂಸೆಯು ಕನ್ನಡ ಸಾಹಿತ್ಯ ಮೀಮಾಂಸೆಯ ಒಂದು ಭಾಗವೇ ಆಗಿದ್ದೂ, ಅದರ ಒಂದು ವಿಶಿಷ್ಟ ಭಾಗವಾಗಿ ರೂಪುಗೊಂಡಿದೆ ಎಂಬ ನಿಲುವು ಅವರಲ್ಲಿದೆ. ಹಾಗೆಯೆ ದಲಿತರ ಸಾಮಾಜಿಕ ಬದುಕು, ಸೌಲಭ್ಯ, ಕಸುಬು, ಅಭಿವ್ಯಕ್ತಿ, ಆಲೋಚನೆ, ಅನುಭವ, ಬಹುಮುಖತೆ, ಮೂಲಕವೇ ಮೀಮಾಂಸೆಯನ್ನು ಕಟ್ಟಿಕೊಳ್ಳಬೇಕೆನ್ನುವ ಹಂಬಲ ಅವರದು. ಜೊತೆಗೆ ದಲಿತ ಮೀಮಾಂಸೆಯೆನ್ನುವುದು ಒಂದು ಲೋಕದೃಷ್ಟಿಯಾದ್ದರಿಂದ ಬದುಕಿನ ವಿನ್ಯಾಸಗಳು ಬದಲಾದ ಹಾಗೆ ಲೋಕವನ್ನು ನೋಡುವ ನೋಟಕ್ರಮವು ಬದಲಾಗಬೇಕಾದದ್ದು ಸಹಜ ಹಾಗೂ ಅನಿವಾರ್ಯ ನಂಬಿಕೆ ಇಲ್ಲಿಯದು. ತಳವೂರಿದ ಕುರುಬ ಕಟುಕನಾದ ಎನ್ನುವ ನಿಸಾರರ ಕವನದ ಸಾಲು ಹೇಳುವುದು ಇದನ್ನೇ. ಯಾವುದೇ ಚಿಂತನೆ ಎಲ್ಲ ಕಾಲಕ್ಕೂ ಶಾಶ್ವತ ಮತ್ತು ಸಾರ್ವತ್ರಿಕ ಮತ್ತು ತ್ರಿಕಾಲಾ ಭಾದಿತ ಚಿಂತನೆಗಳನ್ನು ಮಾನ್ಯ ಮಾಡುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ್ದಾಗಿದೆ.

ಡಾ.ರವಿಕುಮಾರ್ ನೀಹ

ದಲಿತ ಸಾಹಿತ್ಯ ಮೀಮಾಂಸೆಯನ್ನು ನಿರೂಪಿಸುವ ಸಂದರ್ಭದಲ್ಲಿ ‘ದಲಿತ’ ಪದ ಪಡೆದ ಹಲವು ಅರ್ಥ ಸ್ವರೂಪವನ್ನು ಗುರುತಿಸುವ ಕೆಲಸವನ್ನು ಕೃತಿ ಮಾಡಿದೆ. ಆರಂಭದಲ್ಲಿದ್ದ ಹಸಿವಿನ ಪ್ರಶ್ನೆ, ಅವಮಾನದ ಪ್ರಶ್ನೆಯನ್ನು ಹಾದು ಈಗ ಅಸ್ಮಿತೆಯ ಸ್ವರೂಪವನ್ನು ಪಡೆದುಕೊಂಡ ಬಗೆಯನ್ನು ವಿಶ್ಲೇಷಿಸಿದೆ. ಹಾಗೆಯೆ ದಲಿತ ಸಾಹಿತ್ಯ ಮೀಮಾಂಸೆಯ ಪರಂಪರೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಆರಂಭವನ್ನು ಡಿ ಆರ್ ನಾಗರಾಜ್ ಅವರ ಪ್ಲೇಮಿಂಗ್ ಪೀಟ್ ಕೃತಿಯ ಮೂಲಕ ಗುರುತಿಸುತ್ತದೆ. ನಂತರದ ಕಾಲಘಟ್ಟದಲ್ಲಿ ದೇವಯ್ಯ ಹರವೆ, ಪ್ರೊ.ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ್, ಬಿ.ಎಂ. ಪುಟ್ಟಯ್ಯನವರು ವಿಸ್ತರಿಸಿದ ಪರಂಪರೆಯನ್ನು ವಿಸ್ತರಿಸಿದೆ. ಆದರೆ ಇಲ್ಲಿ ವಿಶ್ಲೇಷಿಸುವ ಕ್ರಮ ಎಂಭತ್ತರ ದಶಕದ ದಲಿತ ಸಾಹಿತ್ಯಕ್ಕೆ ಸೀಮಿತಗೊಂಡಿರುವುದು ಗಂಭೀರವಾದ ಮಿತಿಯೆನಿಸುತ್ತದೆ. ದಲಿತ ಸಾಹಿತ್ಯ ಆರಂಭವಾಗುವ ಮೊದಲಿನ ಲಿಖಿತ ಮತ್ತು ಮೌಖಿಕ ಪರಂಪರೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರೆ ಕೃತಿಯ ವ್ಯಾಪ್ತಿ ಹೆಚ್ಚುತ್ತಿತ್ತು. ಇಂದಿನ ದಲಿತ ಸಾಹಿತ್ಯ ಸಾಮಾಜಿಕ ಕ್ರೋಧದ ಮಾದರಿಯ ಜೊತೆಗೆ ಆಧ್ಯಾತ್ಮಿಕ ಹುಡುಕಾಟದ ಮಾದರಿಯನ್ನು ಸಹ ತೀವ್ರವಾಗಿ ಅಭಿವ್ಯಕ್ತಿಸುವುದರಿಂದ ಆಧ್ಯಾತ್ಮಿಕ ದಂಗೆಯ ನಾಯಕರಾದ ಮಂಟೇಸ್ವಾಮಿ, ಮಾದಪ್ಪನವರೆಗೆ ಈ ಪರಂಪರೆಯನ್ನು ವಿಸ್ತರಿಸುವ ಸಾಧ್ಯತೆಯಿತ್ತು.

ದಲಿತ ಸಾಹಿತ್ಯ ಮೀಮಾಂಸೆ ಇನ್ನೊಂದು ನೆಲೆಯಲ್ಲಿ ನನಗೆ ಮುಖ್ಯವೆನಿಸುತ್ತದೆ. ಈ ಮೀಮಾಂಸೆ ತನ್ನ ಸ್ವರೂಪದಲ್ಲಿಯೇ ಒಳಗೊಳ್ಳುವಿಕೆಯ ನೆಲೆಯನ್ನು(inclusive) ಒಳಗೊಂಡಿದೆ. ಹಾಗೆಯೇ ಪ್ರಖರ ರಾಜಕೀಯ ಚಿಂತನೆಯನ್ನು ತನ್ನ ಭಿತ್ತಿಯಾಗಿಸಿಕೊಂಡಿದೆ. ವೈಯಕ್ತಿಕವು ರಾಜಕೀಯವೇ ಆಗಿರುವ ಇಂದಿನ ಕಾಲಘಟ್ಟದಲ್ಲಿ ಸ್ಪಷ್ಟ ರಾಜಕೀಯ ಚಿಂತನೆಯನ್ನು ಹೊಂದಿರುವುದು ಅಗತ್ಯವಾಗಿದೆ. ಹಾಗೆಯೆ ದಲಿತ ಚಿಂತನೆಯೊಂದಿಗೆ ಬೆಸೆದುಕೊಂಡಿರುವ ಬೌದ್ಧದರ್ಶನವನ್ನು ಚರ್ಚಿಸುವುದರ ಮೂಲಕ, ಜೊತೆಗೆ ಅಲೆಮಾರಿಗಳು ಲೈಂಗಿಕ ಅಲ್ಪಸಂಖ್ಯಾತರು, ಬಿಕ್ಷುಕರ ಜಗತ್ತುಗಳ ಮೂಲಕ ಅನಾವರಣಗೊಳ್ಳುತ್ತಿರುವ ಕಲಾಲೋಕವನ್ನು ತನ್ನ ವ್ಯಾಪ್ತಿಗೆ ತಂದುಕೊಂಡಿದೆ.

ಡಾ.ಪ್ರಕಾಶ್ ಬಡವನಹಳ್ಳಿ

ಈ ಕೃತಿಯ ಕುಲಕಥನ ಮೀಮಾಂಸೆ ನವೀನ ರೀತಿಯದ್ದಾಗಿದೆ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಪ್ರಚಲಿತವಾಗಿರುವ ಖಂಡಕಾವ್ಯಗಳಿಗಿಂತ ಭಿನ್ನವಾಗಿ ಕುಲಕಥನಗಳನ್ನು ನೋಡಬೇಕೆಂದು ಗಟ್ಟಿಯಾಗಿ ವಾದಿಸುತ್ತದೆ. ಈ ಕಾವ್ಯಗಳು ಸಾಮಾಜಿಕ ಆಕ್ರೋಶದ ಮಾದರಿಗಿಂತ ಭಿನ್ನವಾಗಿ ಸ್ವಾಭಿಮಾನ ಸಮಾನತೆಗಳನ್ನು ತಮ್ಮ ಕುಲಪುರಾಣಗಳಲ್ಲಿ ಹೆಕ್ಕಿ ತೆಗೆಯುವ ಮಾದರಿಯನ್ನು ಪಠ್ಯಗಳ ಮೂಲಕವೇ ವಿಶ್ಲೇಷಿಸುವ ಕ್ರಮ ಮಹತ್ವದ್ದಾಗಿದೆ. ಇಷ್ಟಾಗಿ ನಮ್ಮ ಈ ದುರಿತ ಕಾಲದಲ್ಲಿ ಬಹುತ್ವವನ್ನು ಏಕತ್ವಕ್ಕೆ ಬಡಿವ ಹಠಗಾರಿಕೆಯ ರಾಜಕೀಯದ ಕ್ಲುಪ್ತ ಸಮಯದಲ್ಲಿ ದಲಿತ ದಾರೆ ಬಹುತ್ವದ್ದು, ವೈವಿಧ್ಯತೆ ಅದರ ಜೀವಾಳ. ನಿರಂತರತೆ ಅದನ್ನು ಕಟ್ಟುವ ಬಹು ಮುಖ್ಯ ದಾರಿ ಎಂಬ ಸೂಕ್ಷ್ಮತೆ ಇರುವ ದಲಿತ ಸಾಹಿತ್ಯ ಮೀಮಾಂಸೆ ಮಹತ್ವದ ಕೃತಿಯಾಗಿದೆ.

  • ಡಾ.ಪ್ರಕಾಶ್ ಬಡವನಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....