ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಪರೇಡ್ ಸಂಪೂರ್ಣ ಯಶಸ್ವಿಯಾಗಿದೆ. ಲಕ್ಷಾಂತರ ಟ್ರ್ಯಾಕ್ಟರ್ಗಳಲ್ಲಿ ದೆಹಲಿ ಪ್ರವೇಶಿಸಿದ ರೈತರು ಶಾಂತಿಯುತ ಪರೇಡ್ ನಡೆಸಿ ಕೇಂದ್ರ ಸರ್ಕಾರವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಟ್ರ್ಯಾಕ್ಟರ್ ಪರೇಡ್ ಸಂಪೂರ್ಣ ಯಶಸ್ವಿಯಾಗಿದ್ದು, ಶೇ. 99 ಶಾಂತಿಯುತವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೂ ಅರ್ಧದಷ್ಟು ಮಾತ್ರ ಟ್ರ್ಯಾಕ್ಟರ್ಗಳು ಪರೇಡ್ನಲ್ಲಿ ಭಾಗವಹಿಸಿದ್ದು ಇನ್ನು ಲಕ್ಷಾಂತರ ಟ್ರ್ಯಾಕ್ಟರ್ಗಳು ದೆಹಲಿ ಪ್ರವೇಶಿಸುತ್ತಲೇ ಇವೆ. ಟ್ರ್ಯಾಕ್ಟರ್ಗಳು ದೆಹಲಿ ಪ್ರವೇಶಿಸಿದೊಡನೆಯ ದೆಹಲಿ ಜನರು ಫ್ಲೈಓವರ್ಗಳಿಂದ ಹೂವು ಸುರಿಸುವ ಮೂಲಕ ರೈತರಿಗೆ ಪ್ರೀತಿಯ ಸ್ವಾಗತ ಕೋರಿದ್ದಾರೆ. ಅಲ್ಲದೇ ರೈತರ ಐತಿಹಾಸಿಕ ಪರೇಡ್ ನೋಡಲು ಸಾವಿರಾರು ಜನ ರಸ್ತೆಬದಿಗಳನ್ನು ಸೇರಿದ್ದು ರೈತರಿಗೆ ಜೈಕಾರ ಕೂಗಿದ್ದಾರೆ.
ಇನ್ನು ರೈತ ಸಂಘಟನೆಗಳ ಕೆಲವು ಗುಂಪು ಕೆಂಪುಕೋಟೆ ತಲುಪಿ ಅಲ್ಲಿ ರೈತ ಧ್ವಜಗಳನ್ನು ಹಾರಿಸಿದ್ದಾರೆ. ಟ್ರ್ಯಾಕ್ಟರ್ ಮತ್ತು ಪೊಲೀಸರ ಘರ್ಷಣೆಯಲ್ಲಿ ಒಬ್ಬ ರೈತ ಮೃತಪಟ್ಟಿದ್ದಾನೆ. ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆ ನೀಡಿ ಖಂಡಿಸಿದೆ.
“ಇಂದಿನ ರೈತ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಅಭೂತಪೂರ್ವವಾಗಿ ಭಾಗವಹಿಸಿದ್ದಕ್ಕಾಗಿ ರೈತರಿಗೆ ಧನ್ಯವಾದಗಳು. ಇಂದು ನಡೆದ ಅನಪೇಕ್ಷಿತ ಮತ್ತು ಸ್ವೀಕಾರಾರ್ಹವಲ್ಲದ ಘಟನೆಗಳನ್ನು ನಾವು ಖಂಡಿಸುತ್ತೇವೆ ಮತ್ತು ವಿಷಾದಿಸುತ್ತೇವೆ ಮತ್ತು ಅಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಂದ ನಮ್ಮನ್ನು ಬೇರ್ಪಡಿಸುತ್ತೇವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಕೆಲವು ಸಂಸ್ಥೆಗಳು ಮತ್ತು ವ್ಯಕ್ತಿಗಳು ಮಾರ್ಗವನ್ನು ಉಲ್ಲಂಘಿಸಿದ್ದಾರೆ ಮತ್ತು ಖಂಡನೀಯ ಕೃತ್ಯಗಳಲ್ಲಿ ತೊಡಗಿದ್ದಾರೆ. ಕೆಲ ಸಮಾಜ ವಿರೋಧಿ ಶಕ್ತಿಗಳು ಒಳನುಗ್ಗಿ ಶಾಂತಿಗೆಡಿಸಿರುವುದು ಸರಿಯಲ್ಲ. ಶಾಂತಿ ನಮ್ಮ ದೊಡ್ಡ ಶಕ್ತಿ, ಯಾವುದೇ ನಿಯಮ ಉಲ್ಲಂಘನೆಯು ಚಳವಳಿಗೆ ನೋವುಂಟು ಮಾಡುತ್ತದೆ ಎಂದು ನಾವು ಯಾವಾಗಲೂ ಭಾವಿಸಿದ್ದೇವೆ ಎಂದು ಮೋರ್ಚಾ ಹೇಳಿದೆ.
ಆದರೆ 6 ತಿಂಗಳಿಗಿಂತ ಹೆಚ್ಚು ಕಾಲ ನಡೆಯುತ್ತಿರುವ ಈ ಸುದೀರ್ಘ ಹೋರಾಟ, ಮತ್ತು ದೆಹಲಿ ಗಡಿಯಲ್ಲಿ 60 ದಿನಗಳಿಗಿಂತಲೂ ಹೆಚ್ಚು ನಡೆಯುತ್ತಿರುವ ಪ್ರತಿಭಟನೆ ಕೂಡ ಇವತ್ತಿನ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ರೈತರು ದೂರಿದ್ದಾರೆ.
ಶಿಸ್ತನ್ನು ಉಲ್ಲಂಘಿಸಿದ ಅಂತಹ ಎಲ್ಲ ಅಂಶಗಳಿಂದ ನಾವು ನಮ್ಮನ್ನು ಬೇರ್ಪಡಿಸುತ್ತೇವೆ. ಮೆರವಣಿಗೆಯ ಮಾರ್ಗಗಳನ್ನು ಅನುಸರಿಸಬೇಕೆಂದು ಎಲ್ಲರಲ್ಲಿಯೂ ಬಲವಾಗಿ ಮನವಿ ಮಾಡುತ್ತೇವೆ ಮತ್ತು ಯಾವುದೇ ಹಿಂಸಾತ್ಮಕ ಕ್ರಮ ಅಥವಾ ರಾಷ್ಟ್ರೀಯ ಚಿಹ್ನೆಗಳು ಮತ್ತು ಘನತೆಗೆ ಕಳಂಕ ತರುವಂತಹ ಯಾವುದನ್ನೂ ಮಾಡಬಾರದು. ಅಂತಹ ಯಾವುದೇ ಕೃತ್ಯಗಳಿಂದ ದೂರವಿರಲು ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ಕೆಲವು ವಿಷಾದನೀಯ ಉಲ್ಲಂಘನೆಗಳ ಹೊರತಾಗಿ, ಯೋಜನೆಯ ಪ್ರಕಾರ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುತ್ತಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಇದನ್ನೂ ಓದಿ: ದೆಹಲಿಯಲ್ಲಿ ರೈತರ ದಿಟ್ಟ ಹೋರಾಟ: ಕ್ಯಾಮರಗೆ ಸೆರೆಸಿಕ್ಕ ಅದ್ಭುತ ಚಿತ್ರಗಳು!