ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಪ್ರಕರಣದ ಕುರಿತು ಯುಟ್ಯೂಬ್ ವಿಡಿಯೊ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ಅವರು ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್ಬಝಾರ್ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಸಮೀರ್ ಅವರ ವೀಡಿಯೋದಿಂದ ಧರ್ಮಸ್ಥಳ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಮೇಲೆ ಧಾರ್ಮಿಕ ಭಾವನೆ ಹೊಂದಿದ ಸಾರ್ವಜನಿಕರ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸಮೀರ್ ಅವರು ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಇತ್ತೀಚೆಎ ಮಾಡಿದ್ದ ವೀಡಿಯೊವೊಂದು ವ್ಯಾಪಕ ಗಮನ ಸೆಳೆದಿದ್ದು, ರಾಜ್ಯದಾದ್ಯಂತ ಮತ್ತೆ ಸೌಜನ್ಯ ಪ್ರಕರಣ ಮುನ್ನಲೆಗೆ ಬಂದಿದೆ. ಈ ನಡುವೆ ಅವರ ಧರ್ಮವನ್ನು ಮುನ್ನಲೆಗೆ ತಂದು ಅವರನ್ನು ಅವಮಾನಿಸುತ್ತಿದ್ದಾರೆ ಎಂಬ ಆರೋಪಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದು, ಜನರು ಜಾತಿ ಮತ್ತು ಧರ್ಮವನ್ನು ಈ ವಿಷಯಕ್ಕೆ ಏಕೆ ಎಳೆದು ತರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಮೀರ್ ವಿರುದ್ಧ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ -299 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಧರ್ಮಸ್ಥಳ ಸೌಜನ್ಯ
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ನಂತರ ಸಮೀರ್ ಅವರ ಮನೆಗೆ ಬುಧವಾರ ತಡ ರಾತ್ರಿ ಪೊಲೀಸರು ಪ್ರವೇಶಿಸಿದ್ದು, ಅವರನ್ನು ಬಂಧಿಸಲು ಪ್ರಯತ್ನಿಸಿದ್ದಾಗಿ ಅವರು ಆರೋಪಿಸಿದ್ದಾರೆ. ಈ ಕುರಿತು ಸಮೀರ್ ರಾತ್ರಿ 1 ಗಂಟೆಗೆ ಫೇಸ್ಬುಕ್ ಲೈವ್ನಲ್ಲಿ ಖಚಿತಪಡಿಸಿದ್ದಾರೆ.
ಈ ನಡುವೆ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅವರು ಹೊರಡಿಸಿದ್ದಾರೆ ಎನ್ನಲಾದ ಆದೇಶದ ಪ್ರತಿಯೊಂದು ಬುಧವಾರ ಸಂಜೆಯಿಂದ ವೈರಲ್ ಆಗಿದೆ. ಈ ಆದೇಶದಲ್ಲಿ “ಸಮೀರ್ ವೀಡಿಯೊದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್ ಚುರುಕುಗೊಳಿಸಿ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದು, ಈ ಆದೇಶವು ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ.
ಎಡಿಜಿಪಿ ಹೊರಡಿಸಿದ್ದಾರೆ ಎನ್ನಲಾದ ಈ ಆದೇಶದಲ್ಲಿ, “ಇತ್ತೀಚಿಗೆ ಸಮೀರ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಹರಿಬಿಟ್ಟದ್ದು, ಘಟಕಾಧಿಕಾರಿಗಳು ಈ ವಿಷಯವನ್ನು ತಮ್ಮ ಘಟಕಗಳಲ್ಲಿರುವ Social Media Monitoring Cell ಮುಖೇನ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುತ್ತೀರಿ. ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ/ವಿರೋಧ ಅನಿಸಿಕೆಗಳು ಉದ್ಭವಿಸಿ ಸಾಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿರುತ್ತದೆ. ಆದ್ದರಿಂದ, Social Media Monitoring Cell ಚುರುಕುಗೊಳಿಸುವುದು ಹಾಗೂ ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಮಾನ್ಯ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ರವರಿಗೆ ಮಾಹಿತಿ ನೀಡುವುದು” ಎಂದು ಹೇಳಿದೆ.
ಮಾಜಿ ಪೊಲೀಸ್ ಅಧಿಕಾರಿ, ಸೌಜನ್ಯ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಗಿರೀಶ್ ಮಟ್ಟಣ್ಣನವರ್ ಅವರ ಜೊತೆಗೆ ಸಮೀರ್ ಅವರು ಬುಧವಾರ ತಡರಾತ್ರಿ ಫೇಸ್ಬುಕ್ ಲೈವ್ನಲ್ಲಿ ತನಗೆ ವ್ಯಾಪಕ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ.
ಲೈವ್ನಲ್ಲಿ ಮಾತನಾಡಿದ ಸಮೀರ್, “ಪ್ರಸ್ತುತ ನನ್ನ ಪರಿಸ್ಥತಿ ತುಂಬಾ ಕೆಟ್ಟದಾಗಿದ್ದು, ಈಗಾಗಲೆ ಪೊಲೀಸ್ ನೋಟಿಸ್ ಬಂದಿದೆ. ಸುಮಾರು ರಾತ್ರಿ 10;45ರ ಹೊತ್ತಿಗೆ ಪೊಲೀಸರು ಬಂದು ನೋಟಿಸ್ ಕೊಟ್ಟು ಹೋಗಿದ್ದಾರೆ. ಅದಾಗ್ಯೂ ನನಗೆ ಯಾವುದೇ ಭಯವಿಲ್ಲ. ನಾನು ವಿಡಿಯೊದಲ್ಲಿ ಹೇಳಿರುವ ಎಲ್ಲಾ ವಿಚಾರಗಳಿಗೂ ಸಾಕ್ಷಿಯಿದೆ. ನನಗೆ ಕಾನೂನಿನ ಮೇಲೆ ನಂಬಿಕೆಯಿದ್ದು, ಕೋರ್ಟ್ನ ಮುಂದೆ ಮತ್ತಷ್ಟು ವಿಸೃತವಾಗಿ ಮಂಡಿಸುತ್ತೇನೆ. ಈ ಬಗ್ಗೆ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದ್ದಾರೆ.
ಪ್ರಸ್ತತ ತನಗೆ ತೊಂದರೆ ಆಗುತ್ತಿರುವುದು, ಮುಸ್ಲಿಮನೊಬ್ಬ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದೆ ತಪ್ಪು ಹಾಗೂ ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, ತಾನು ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದು, ಅದು ನನ್ನ ಧರ್ಮ, ಅದನ್ನು ನಾನು ಪಾಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
“ಒಂದು ವೇಳೆ ನಾನು ಹಿಂದೂ ವಿರೋಧಿ ಆಗಿದ್ದರೆ, ಒಬ್ಬ ಹಿಂದೂ ಹುಡುಗಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಯಾಕೆ ಧ್ವನಿ ಎತ್ತಬೇಕು? ನ್ಯಾಯದ ಬಗ್ಗೆ ಮಾತನಾಡೋಣ. ಅದುವೇ ಧರ್ಮ” ಎಂದು ಸಮೀರ್ ಅವರು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಹಮಾಸ್ಗೆ ಕೊನೆಯ ಎಚ್ಚರಿಕೆ ನೀಡಿದ ಟ್ರಂಪ್
ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಹಮಾಸ್ಗೆ ಕೊನೆಯ ಎಚ್ಚರಿಕೆ ನೀಡಿದ ಟ್ರಂಪ್

