ಹಿಂದಿ ಹೇರಿಕೆ ಬಗ್ಗೆ ದಕ್ಷಿಣ ಭಾರತದಲ್ಲಿ ತೀವ್ರ ಪ್ರತಿರೋಧಗಳು ಕಂಡು ಬಂದಿದ್ದವು. ಬರುತ್ತಲೇ ಇವೆ. ಸೆ.14 ರ ಹಿಂದಿ ದಿವಸದ ದಿನ ವಿವಿಧ ಸ್ವರೂಪಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ತಮಿಳು, ಕನ್ನಡ ಭಾಷೆಗಳಲ್ಲಿ ಹಿಂದಿ ತೆರಿಯಾದು ಪೋಡಾ, ಹಿಂದಿ ಗೊತ್ತಿಲ್ಲ ಹೋಗ್ರಪ್ಪ ಎಂಬ ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿದ್ದವು.
ಸ್ಯಾಂಡಲ್ವುಡ್ ನಟರು ಕೂಡ ಹಿಂದಿ ದಿವಸ್ಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದರು. ಟೀ ಶರ್ಟ್ಗಳ ಮೇಲೆ ಹಿಂದಿ ಗೊತ್ತಿಲ್ಲ ಹೋಗೋ ನಾನು ಕನ್ನಡಿಗ ಎಂದು ನಟ ಚೇತನ್, ಕನ್ನಡವೇ ನನ್ನ ಬೇರು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್, ಜೊತೆಗೆ ನನ್ನ ದೇಶ ಭಾರತ, ನನ್ನ ಬೇರು ಕನ್ನಡ ಎಂದು ನಟ ಧನಂಜಯ್ ಕೂಡ ಪೋಸ್ಟ್ ಶೇರ್ ಮಾಡಿದ್ದರು. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ ಎಂದು ನಟ ದರ್ಶನ್ ತೂಗುದೀಪ್ ಕೂಡ ಹಿಂದಿ ದಿವಸ್ಗೆ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಸೆಪ್ಟಂಬರ್ 14 ಹಿಂದಿ ದಿವಸ ಆಚರಣೆಗೆ ಕನ್ನಡಿಗರ ತೀವ್ರ ವಿರೋಧ
ಇವುಗಳ ನಡುವೆಯೇ ಚಂದನವನದ ನಿರ್ದೇಶಕ ಲೂಸಿಯಾ ಪವನ್ ಕುಮಾರ್ ಸೆ.13 ರಂದು ಫೇಸ್ಬುಕ್ನಲ್ಲಿ ಹಿಂದಿ ದಿವಸವನ್ನು ವಿರೋಧಿಸುವವರ ವಿರುದ್ಧ ಮಾತನಾಡಿ ವಿವಾದಕ್ಕೆ ಸಿಲುಕಿದ್ದರು. ಫೇಸ್ಬುಕ್ನಲ್ಲಿ ನೆಗೆಟಿವ್ ಕಾಮೆಂಟ್ಗಳನ್ನು ಪಡೆದಿದ್ದರು.
Posted by Pawan Kumar on Sunday, September 13, 2020
ಆದರೆ ಇಂದು ಬೆಳಗ್ಗೆ ಮತ್ತೊಂದು ವಿಡಿಯೋ ಮಾಡಿರುವ ನಿರ್ದೇಶಕ ಹಿಂದಿ ಹೇರಿಕೆ ಬಗ್ಗೆ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಜೊತೆಗೆ ಕನ್ನಡದ ನಟರು, ನಿರ್ದೇಶಕರಿಗೆ ಹೊಸದೊಂದು ಚಾಲೆಂಜ್ ನೀಡುವ ಮೂಲಕ ಹಿಂದಿ ಹೇರಿಕೆ ವಿರೋಧಿಸಲು ಹೊಸ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.
ಪವನ್ ಕುಮಾರ್ ಮಾಡಿರುವ ವಿಡಿಯೋದಲ್ಲಿ, ಹಿಂದಿ ಹೇರಿಕೆಯನ್ನು ವಿರೋಧಿಸುವವರು ನಿರ್ದೇಶಕರುಗಳು ಪ್ರತಿಯೊಬ್ಬರು ಹಿಂದಿ ಹೇರಿಕೆ ವಿಚಾರವನ್ನು ಮುಖ್ಯವಾಗಿರಿಸಿ 10 ನಿಮಿಷ, 15 ನಿಮಿಷದ ತಲಾ ಒಂದೊಂದು ಚಿತ್ರಗಳನ್ನು ಮಾಡುವುದು. ಅದನ್ನು ಸೆನ್ಸಾರ್ ಮಂಡಳಿಗೆ ಕಳುಹಿಸುವುದು ಅವರು ಕೊಡುವ ಪ್ರಮಾಣಪತ್ರವನ್ನು ಕನ್ನಡದಲ್ಲಿ ಕೇಳುವುದು. ಅವರು ಕನ್ನಡದಲ್ಲಿ ಸರ್ಟಿಫಿಕೆಟ್ ಕೊಡುವುದಿಲ್ಲ. ಆಗ ಚಿತ್ರವನ್ನು ಸೆನ್ಸಾರ್ ಬೋರ್ಡ್ ಸರ್ಟಿಫಿಕೆಟ್ ಇಲ್ಲದೇ ಹಾಗೇಯೇ ಕನ್ನಡ ರಾಜ್ಯೋತ್ಸವದ ದಿನ ಬಿಡುಗಡೆ ಮಾಡುವುದು.
ಇದನ್ನೂ ಓದಿ: ದ್ರಾವಿಡ ನಾಡಿನ ಹಿಂದಿ ಹೇರಿಕೆ ವಿರೋಧಿ ಚಳುವಳಿಯ ಇತಿಹಾಸ ಮತ್ತು ಪ್ರಸ್ತುತ ರಾಜಕಾರಣವೆಂಬ ನಾಟಕದ ಸುತ್ತ!
ಸೆನ್ಸಾರ್ ಬೋರ್ಡ್ ಸರ್ಟಿಫಿಕೆಟ್ ಇಲ್ಲದೇ ಚಿತ್ರ ಬಿಡುಗಡೆ ಮಾಡಿದರೆ ಅದು ಇಂಡಿಯನ್ ಸಿನಿಮಾಟೋಗ್ರಾಫರ್ ಆಕ್ಟ್ ಪ್ರಕಾರ ಅಪರಾಧವಾಗಿ 3 ವರ್ಷ ಜೈಲಿಗೆ ಹಾಕುತ್ತಾರೆ. ಆದರೆ ಒಬ್ಬನೇ ಚಿತ್ರ ಮಾಡಿದರೇ ಜೈಲಿಗೆ ಹಾಕಬಹುದು. ಆದರೆ 50 ಜನ ಸೇರಿ ಚಿತ್ರ ಮಾಡಿದರೇ ಅದು ಪ್ರತಿಭಟನೆ. ಹಾಗಾಗಿ ಇದಕ್ಕೆ ನಟರು, ನಿರ್ದೇಶಕರ ಬೆಂಬಲ ಬೇಕು ಎಂದಿದ್ದಾರೆ. ಯಾರ್ಯಾರು ನನ್ನ ಜೊತೆ ಕೈ ಜೋಡಿಸುತ್ತಿರಾ ಬನ್ನಿ ಎಂದು ಚಾಲೆಂಜ್ ಹಾಕಿದ್ದಾರೆ.
ಈ ರೀತಿಯ ಪ್ರತಿಭಟನೆಯಿಂದ ನಾವು ದೊಡ್ಡಮಟ್ಟದಲ್ಲಿ ಪ್ರತಿರೋಧ ನೀಡಲು ಸಾಧ್ಯ. ಈ ರೀತಿಯಲ್ಲಿ ಚಿತ್ರ ಮಾಡುವುದರಿಂದ ತುಂಬಾ ಜನಕ್ಕೆ ಕೆಲಸ ಸಿಕ್ಕಿದಂತಾಗುತ್ತದೆ, ಅವರ ಟ್ಯಾಲೆಂಟ್ ಹೊರ ಬರುತ್ತದೆ. ಕೊನೆಯದಾಗಿ ಇಂತಹ ವಿಷಯದ ಮೇಲೆ ಚಿತ್ರ ಮಾಡುವುದರಿಂದ ತುಂಬಾ ಜನಕ್ಕೆ ತಲುಪುತ್ತದೆ. ಪ್ರತಿಭಟನೆ ಮೂಲಕ ಕಮ್ಯೂನಿಕೇಟ್ ಮಾಡುವುದನ್ನು ಮತ್ತಷ್ಟು ಸ್ಟ್ರಾಂಗ್ ಆಗಿ ಮಾಡುತ್ತದೆ. ಇದಕ್ಕೆ ಸಬ್ ಟೈಲಲ್ ನೀಡಿ, ಯೂಟ್ಯೂಬ್ನಲ್ಲಿ ಫ್ರೀಯಾಗಿ ಬಿಡುಗಡೆ ಮಾಡುವ ಎಂದಿದ್ದಾರೆ.
Posted by Pawan Kumar on Wednesday, September 16, 2020
ಪವನ್ ವಿಡಿಯೋಗೆ ಹಲವು ಮಂದಿ ಪ್ರತಿಕ್ರಿಯಿಸುತ್ತಿದ್ದು, ನಿರ್ದೇಶಕ ಪಿ.ಶೇಷಾದ್ರಿ, ಚೈತನ್ಯ ಕೆ.ಎಂ ನಿಮ್ಮ ಪ್ರಯತ್ನಕ್ಕೆ ನನ್ನ ಬೆಂಬಲ ಇದೆ. ನಾನು ಕೈ ಜೊಡಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಚಿತ್ರ ಸಾಹಿತಿ ಕವಿರಾಜ್ ಕೂಡ ಕಾಮೆಂಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ಬಿಡುಗಡೆ ಮಾಡುವ ಉಪಾಯ ಸೂಚಿಸಿದ್ದಾರೆ.
ಇದನ್ನೂ ಓದಿ: ನಂಗೆ ಹಿಂದಿ ಬರಲ್ಲ ಹೋಗ್ರಪ್ಪ: ಹಿಂದಿ ಹೇರಿಕೆಯ ವಿರುದ್ಧ ಬಹುಭಾಷ ನಟ ಪ್ರಕಾಶ್ ರಾಜ್ ದನಿ
ತನ್ನ ಹಿಂದಿನ ವಿವಾದಾತ್ಮಕ ಹೇಳಿಕೆಯ ಬಗ್ಗೆ ನಾನು ಗೌರಿ.ಕಾಂ ಜೊತೆ ಸ್ಪಷ್ಟನೆ ನೀಡಿದ ನಿರ್ದೇಶಕ ಪವನ್ ಕುಮಾರ್ “ನಾನು ಅಂದಿನ ದಿನ ಕೂಡ ಹಿಂದಿ ಹೇರಿಕೆ ವಿರೋಧಿಸುವವರ ವಿರುದ್ಧ ಮಾತನಾಡಲಿಲ್ಲ. ಪ್ರತಿಭಟನೆಗಳ ಸ್ವರೂಪದ ಬಗ್ಗೆ ಮಾತನಾಡಿದ್ದು. ಜನರಿಗೆ ಆರ್ಥಿಕವಾಗಿ ಬಲಪಡಿಸುವ ಕೆಲಸ ಮಾಡಬೇಕು ಎಂದಿದ್ದು” ಎಂದು ಹೇಳಿದರು.
ಪ್ರತಿಭಟನೆಗಳು ಮಾಡಲಿ ಆದರ ಜೊತೆಗೆ ಕನ್ನಡಿಗರಿಗೆ ಕೆಲಸ ಕೂಡ ಸಿಗಬೇಕು. ಭಾಷೆ ಹೆಸರು ಇಟ್ಟುಕೊಂಡು ಹೋಗೋ ಅನ್ನೋ ರೀತಿಯಲ್ಲಿ ಮಾತನಾಡಿದರೆ ಅದು ಮತ್ತಷ್ಟು ದ್ವೇಷಕ್ಕೆ ಕಾರಣ ಆಗುತ್ತೆ ಅನ್ನೊದು ನನ್ನ ಅಭಿಪ್ರಾಯ ಎನ್ನುತ್ತಾರೆ ಪವನ್.
ಇಂದು ನಾನು ಕೊಟ್ಟಿರುವ ಉಪಾಯಕ್ಕೆ ಹಲವು ಹೊಸ ನಿರ್ದೇಶಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜೊತೆಗೆ ನಿರ್ದೇಶಕರಾದ ಪಿ.ಶೇಷಾದ್ರಿ, ಚೈತನ್ಯ ಕೆ.ಎಂ, ಸಿಂಪಲ್ ಸುನಿ ಕೂಡ ಕೈ ಜೋಡಿಸುವ ಭರವಸೆ ನೀಡಿದ್ದಾರೆ. ನನ್ನ ಕಡೆಯಿಂದ ಪ್ಲಾನ್ ಕೊಟ್ಟಿದ್ದೀನಿ ಆದರೆ ಅಷ್ಟು ಜನ ಮುಂದೆ ಬರುತ್ತಾರೋ ನೋಡೋಣ ಎಂದರು.
ನಿರ್ದೇಶಕರು ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡರೂ, ಜನ ಮಾತ್ರ ಇನ್ನೂ ಅವರ ಹಳೆಯ ವಿಡಿಯೋಗೆ ಕಾಮೆಂಟ್ ಮಾಡುವುದನ್ನು ಬಿಟ್ಟಿಲ್ಲ. ಇದರ ಜೊತೆಗೆ ಇಂದಿನ ವಿಡಿಯೋಗೂ ಸಹ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು. ಕನ್ನಡ ಚಿತ್ರರಂಗ ಹೇಗೆ ಈ ಚಾಲೆಂಜ್ ಸ್ವೀಕರಿಸುತ್ತದೆ ಎಂಬುದೇ ಸದ್ಯದ ಕುತೂಹಲ.