ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಟ್ವೀಟ್ ಮಾಡಿ ಟೀಕಿಸಿದ್ದಕ್ಕಾಗಿ, ಯಶವಂತ ಸಿಂಗ್ ಎಂಬವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿರುವ ಅಲಹಾಬಾದ್ ಹೈಕೋರ್ಟ್, “ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣ” ಎಂದು ಹೇಳಿದೆ.
“ಆದಿತ್ಯನಾಥ್ ಉತ್ತರ ಪ್ರದೇಶವನ್ನು ‘ಜಂಗಲ್ ರಾಜ್’ ಆಗಿ ಪರಿವರ್ತಿಸಿದ್ದಾರೆ ಮತ್ತು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿಲ್ಲ” ಎಂದು ಯಶವಂತ ಸಿಂಗ್ ಟ್ವೀಟ್ ಮಾಡಿದ್ದರು. ಈ ಕಾರಣಕ್ಕಾಗಿ ರಾಜ್ಯ ಸರ್ಕಾರವು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66-ಡಿ ಮತ್ತು ಐಪಿಸಿ ಸೆಕ್ಷನ್ 500ರ ಅಡಿ ಪ್ರಕರಣವನ್ನು ದಾಖಲಿಸಿತ್ತು. ಈಗ ಕೋರ್ಟ್ ಈ ಪ್ರಕರಣವನ್ನು ಕೈಬಿಟ್ಟಿರುವುದರಿಂದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.
ಇದನ್ನೂ ಓದಿ: ಆಹಾರ ನೀಡಲು ಸಾಧ್ಯವಾಗಿಲ್ಲ ಎಂದು 8 ವರ್ಷದ ಮಗಳಿಗೆ ವಿಷವುಣಿಸಿದ ವೈದ್ಯೆ!
ತಮ್ಮ ವಿರುದ್ಧದ ಎಫ್ಐಆರ್ನ್ನು ರದ್ದುಗೊಳಿಸುವಂತೆ ಕೋರಿ ಯಶವಂತ ಸಿಂಗ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ ನಕ್ವಿ ಮತ್ತು ವಿವೇಕ ಅಗರವಾಲ್ ಅವರ ಪೀಠವು, “ರಾಜ್ಯದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮಂತಹ ಸಾಂವಿಧಾನಿಕ ಉದಾರವಾದಿ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದ್ದು, ಈ ಹಕ್ಕು ಸಂವಿಧಾನದ 19 ನೇ ವಿಧಿಯ ಅಡಿಯಲ್ಲಿ ರಕ್ಷಣೆಯನ್ನು ಹೊಂದಿದೆ” ಎಂದು ಹೇಳಿತು.
ಜೊತೆಗೆ, “ರಾಜ್ಯ ಸರಕಾರದ ಕಾರ್ಯ ವೈಖರಿಯ ವಿರುದ್ಧ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಸೆಕ್ಷನ್ಗಳ ಅಡಿಯಲ್ಲಿ ಅಪರಾಧವಾಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ: 24 ದಲಿತ ಕುಟುಂಬಗಳಿಗೆ ಬಹಿಷ್ಕಾರ – ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರ ವಿರುದ್ಧ ಪ್ರಕರಣ!
ಉತ್ತರ ಪ್ರದೇಶ ಸರ್ಕಾರ ಇಂತಹ ಅಸಾಂವಿಧಾನಿಕ ಕೆಲಸಕ್ಕೆ ಕೈ ಹಾಕಿರುವುದು ಇದೆ ಮೊದಲೇನಲ್ಲ. ಈ ವರ್ಷದ ಮಾರ್ಚ್ನಲ್ಲಿ ಆದಿತ್ಯನಾಥ್ರನ್ನು “ಭಯೋತ್ಪಾದಕ” ಎಂದು ಬಣ್ಣಿಸಿದ್ದ ವೀಡಿಯೊವೊಂದನ್ನು ರೀಟ್ವೀಟ್ ಮಾಡಿದ್ದಕ್ಕಾಗಿ ಖಾನ್ಪುರದ ವಕೀಲ ಅಬ್ದುಲ್ ಹನ್ನಾನ್ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು.
ಎಪ್ರಿಲ್ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಮತ್ತು ಆದಿತ್ಯನಾಥ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತ ಪ್ರಶಾಂತ ಖನೋಜಿಯಾರನ್ನು ಲಕ್ನೋ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ: ರಾಜೀನಾಮೆ ನೀಡಿದ ಬಿಜೆಪಿಯ ಮಾಜಿ ಸಂಸದ!