ರೈತರ ಮರಣ ಶಾಸನ ಬರೆಯುವ ಮೂರು ಕರಾಳ ಶಾಸನ ರದ್ದಾಗುವವರೆಗೂ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು 541 ಸಂಘಟನೆಗಳ ಒಕ್ಕೂಟದ ಕಿಸಾನ್ ಏಕ್ತಾ ಮೋರ್ಚಾ ತೀರ್ಮಾನಿಸಿದೆ. ಲಕ್ಷಾಂತರ ಜನರು, ಸಾವಿರಾರು ವಾಹನಗಳು ಈ ಹೋರಾಟದಲ್ಲಿ ಭಾಗಿಯಾಗಿವೆ.
ರೈತ ಹೋರಾಟವನ್ನು ಬೆಂಬಲಿಸಲು ಕರ್ನಾಟಕದಿಂದ ಆಗಮಿಸಿದ್ದ ನಿಯೋಗವು ಇಂದು ದಿಲ್ಲಿಯ ಪಂಜಾಬ್ ಹರಿಯಾಣ ಗಡಿ ಭಾಗವಾದ ಟಿಕ್ರಿಗೆ ಭೇಟಿ ನೀಡಿತು. ಕರ್ನಾಟಕದ ನಿಯೋಗವನ್ನು ಟಿಕ್ರಿ ಗಡಿಯಲ್ಲಿ ಬಿಕೆಯು ಸಂಘಟನೆಯ ಗೆಳೆಯರು ನೂರಾರು ಕಾರ್ಯಕರ್ತರೊಂದಿಗೆ ಬಹದ್ದೂರ್ ಘಡ್ ವೃತ್ತದಲ್ಲಿ ಸ್ವಾಗತ ಮಾಡಿದರು. ಬಹದ್ದೂರ್ ಘಡ್ ವೃತ್ತದಿಂದ ಕರ್ನಾಟಕದ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ಪ್ರಮುಖರೊಂದಿಗೆ, ಈ ಸಂಘಟನೆಯ ಪ್ರಮುಖರು ಮತ್ತು ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಹಾಕುತ್ತಾ ಕಿ.ಮೀ.ಗಟ್ಟಲೆ ಮೆರವಣಿಗೆ ಹೊರಟು ಪ್ರತಿಭಟನೆಯ ಪ್ರಮುಖ ವೇದಿಕೆಗೆ ತಲುಪಿದೆವು.
ಇಂದು ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 250 ಕ್ಕೂ ಹೆಚ್ಚಿನ ಸಂಘಟನೆಯ ಪ್ರಮುಖರು ಮಾತನಾಡಿದರು. ಮಾತನಾಡಿದ ಎಲ್ಲ ಸಂಘಟನೆಗಳ ಪ್ರಮುಖರು ಮೋದಿ ಸರ್ಕಾರದ ರೈತ-ಕಾರ್ಮಿಕ-ದಲಿತ ವಿರೋಧಿ ನೀತಿಗಳನ್ನು ಖಂಡಿಸಿದರು.
ಇದನ್ನೂ ಓದಿ: 24 ದಲಿತ ಕುಟುಂಬಗಳಿಗೆ ಬಹಿಷ್ಕಾರ – ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರ ವಿರುದ್ಧ ಪ್ರಕರಣ!
“ಜಾರಿಗೆ ತಂದಿರುವ ಕರಾಳ ಕಾನೂನು ರದ್ದು ಮಾಡುವವರೆಗೂ ಹೋರಾಟ ನಿಲ್ಲದು. ಬದಲಿಗೆ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಸಂಘಟನೆಯ ಪ್ರಮುಖರು ರೈತರ ಸಮಸ್ಯೆಯ ಜೊತೆಗೆ ದಲಿತ ಕಾರ್ಮಿಕ ಸಮಸ್ಯೆಗಳ ಪರಿಹಾರಕ್ಕೂ ಗಂಭೀರ ಹೋರಾಟ ರೂಪಿಸಲಾಗುವುದು ಎಂದರು.
ವೇದಿಕೆಯಲ್ಲಿ ಕರ್ನಾಟಕ ನಿಯೋಗದ ಪ್ರಮುಖರಲ್ಲಿ ಒಬ್ಬರಾದ ದಲಿತ ಸಂಘಟನೆಯ ಪ್ರಮುಖರಾದ ಗುರುಪ್ರಸಾದ್ ಕೆರೆಗೋಡು ಮಾತನಾಡಿ, “ಉತ್ತರ ಭಾರತದಲ್ಲಿ ರೈತರ ಬೆಳೆ ಮತ್ತು ಬೆಲೆಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಬೆಳೆ ಬೆಲೆಯ ಜೊತೆಗೆ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ದೇಶಕ್ಕೆ ಮಾದರಿಯಾದ ದೇವರಾಜು ಅರಸು ಅವರು ಜಾರಿಗೆ ತಂದ ಭೂಸುಧಾರಣಾ ಕಾನೂನು ದೇಶಕ್ಕೆ ಮಾದರಿಯಾಗಿತ್ತು. ಹಾಲಿ ಈ ಕಾನೂನಿಗೆ ತಿದ್ದುಪಡಿತಂದು, ರೈತರಿಂದ ಕಿತ್ತು ಕಾರ್ಪೊರೇಟ್ ಕುಳಗಳಿಗೆ ಹಂಚುತ್ತಿದ್ದಾರೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕದ ಮುಖ್ಯಮಂತ್ರಿ ರೈತ ದ್ರೋಹಿಯಾಗಿದ್ದಾರೆ. ಕರ್ನಾಟಕದಲ್ಲಿ ಈಗಾಗಲೆ ಐಕ್ಯ ಹೋರಾಟದ ಅಡಿಯಲ್ಲಿ ರೈತ ದಲಿತ ಕಾರ್ಮಿಕರಿಗೆ ಸರ್ಕಾರ ಮಾಡುತ್ತಿರುವ ದ್ರೋಹದ ವಿರುದ್ದ ಹೋರಾಟ ರೂಪಿಸಿ ನಿರಂತರವಾಗಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟವು ನಿಮ್ಮೊಂದಿಗೆ ಇನ್ನಷ್ಟು ಸಂಘಟನಾತ್ಮವಾಗಿ ಸಾಥ್ ನೀಡಲಿದೆ” ಎಂದರು.
ಇವರ ಕನ್ನಡ ಭಾಷಣವನ್ನು ರೈತಸಂಘದ ಹಿರಿಯ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ ಕನ್ನಡದಿಂದ ಹಿಂದಿಗೆ ಭಾಷಾಂತರ ಮಾಡಿದರು.
ಇದನ್ನೂ ಓದಿ: ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ – ತಮ್ಮ ನಿಲುವು ಸ್ಪಷ್ಟಪಡಿಸಿದ ರೈತ ಮುಖಂಡರು