ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲಮೂಡ್ನೂರು ಗ್ರಾಮದ ದೈವಸ್ಥಾನವೊಂದಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ಬಿಲ್ಲವ ಸಮುದಾಯದ ಯುವಕರನ್ನು ಹೊರಗೆ ಕಳುಹಿಸಿದ ಘಟನೆಯೊಂದು ಕಳೆದ ಶುಕ್ರವಾರ ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ವಾರ್ತಾಭಾರತಿ ಪತ್ರಿಕೆ ಶನಿವಾರ ವರದಿ ಮಾಡಿದೆ. ದೈವಸ್ಥಾನವು ಹೊಸತಾಗಿ ನಿರ್ಮಾಣಗೊಂಡಿತ್ತು ಎಂದು ಪತ್ರಿಕೆ ಹೇಳಿದೆ.
ಬಿಲ್ಲವ ಸಮುದಾಯದ ಇಬ್ಬರು ಯುವಕರು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರ ಜತೆ ದೈವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿ ಅಧ್ಯಕ್ಷರಲ್ಲಿ ದೈವಸ್ಥಾನದ ಒಳಾಂಗಣಕ್ಕೆ ಬಿಲ್ಲವರು ಬರುವಂತಿಲ್ಲ ಎಂದಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪತ್ರಿಕೆ ಉಲ್ಲೇಖಿಸಿದೆ.
ದೈವಸ್ಥಾನದ ಉಸ್ತುವಾರಿಯ ಮಾತಿನಂತೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯುವಕರನ್ನು ಹೊರ ಹೋಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ
ಬಿಲ್ಲವ ಯುವಕರು ಈ ವಿಚಾರವನ್ನು ಸಮುದಾಯದ ಮುಖಂಡರ ಬಳಿ ದೂರಿದ್ದು, ಜೊತೆಗೆ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದರು ಎಂದು ವರದಿಯಾಗಿದೆ. ಈ ಮಧ್ಯೆ ಯುವಕರನ್ನು ದೈವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದರೆನ್ನಲಾಗಿದೆ ಎಂದು ವಾರ್ತಾಭಾರತಿ ವರದಿ ತಿಳಿಸಿದೆ.
ಸಮುದಾಯದ ಯುವಕರನ್ನು ಅವಮಾನಿಸಿದ ಬಗ್ಗೆ ವಾಟ್ಸ್ಆ್ಯಪ್ ಗ್ರೂಪುಗಳಲ್ಲೂ ಚರ್ಚೆ ನಡೆದಿದ್ದು, ಶನಿವಾರ ಸಂಜೆ ಕುಂಡಡ್ಕ, ವಿಟ್ಲ ವ್ಯಾಪ್ತಿಯ ಬಿಲ್ಲವ ಸಂಘಟನೆಗಳು, ವಿಟ್ಲ ಯುವವಾಹಿನಿ ಸದಸ್ಯರು ಖಂಡನಾ ಸಭೆ ನಡೆಸಿದ್ದವು ಎಂದು ವರದಿ ತಿಳಿಸಿದೆ.
ಇದರ ನಂತರ ಘಟನೆಯ ಬಗ್ಗೆ ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಜೊತೆಗೆ ಸಮುದಾಯದ ಮುಖಂಡರು ಮಾತನಾಡಿದ್ದು, ಅದಕ್ಕೆ ಅವರು, “ಇದು ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿದ್ದ ಕ್ರಮ. ಆದರೆ ಹೊರಗಿನಿಂದ ಬರುವವರನ್ನು ಹೋಗಿ ಎಂದು ಹೇಳಿಲ್ಲ. ಒಂದು ವೇಳೆ ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ” ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ದೈವಸ್ಥಾನಕ್ಕೆ ಬಿಲ್ಲವರು ಪ್ರವೇಶಿಸುವುದಕ್ಕೆ ಮುಂದಿನ ದಿನಗಳಲ್ಲಿ ನಿರ್ಬಂಧ ಹೇರಿದರೆ ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂಬ ತೀರ್ಮಾನವನ್ನು ಬಿಲ್ಲವ ಸಮುದಾಯದ ಸಭೆಯಲ್ಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಾರ್ವಜನಿಕ ರಸ್ತೆ ಬಳಸಿದ್ದಕ್ಕೆ ದಲಿತ ಯುವಕನ ಮೇಲೆ ತೀವ್ರ ಹಲ್ಲೆ: ಕ್ರೂರ ಅಸ್ಪೃಶ್ಯತೆ ಆಚರಣೆ
We accept they have done wrong, but be careful some anti Hindu elements take advantage of splitting Hindus on the basis of this issue, be careful