Homeಕರ್ನಾಟಕಹರಿಹರಪುರ ಅಟ್ರಾಸಿಟಿ ಪ್ರಕರಣ: ದಲಿತ ಮುಖಂಡರನ್ನು ಬಳಸಿ ಪ್ರಕರಣ ಮುಚ್ಚಲು ಯತ್ನ?

ಹರಿಹರಪುರ ಅಟ್ರಾಸಿಟಿ ಪ್ರಕರಣ: ದಲಿತ ಮುಖಂಡರನ್ನು ಬಳಸಿ ಪ್ರಕರಣ ಮುಚ್ಚಲು ಯತ್ನ?

ಎಡಗೈ- ಬಲಗೈ ಸಮುದಾಯಗಳ ನಡುವಿನ ಒಗ್ಗಟ್ಟಿನ ಕೊರತೆಯು ಅಟ್ರಾಸಿಟಿ ಪ್ರಕರಣ ಮುಚ್ಚಿಹಾಕಲು ಬಳಕೆಯಾಗುತ್ತಿದೆ ಎಂಬ ಅನುಮಾನಗಳು ಮೂಡಿವೆ.

- Advertisement -
- Advertisement -

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ದಲಿತರ ಮೇಲೆ ಸವರ್ಣಿಯರು ಹಲ್ಲೆ ನಡೆಸಿದ್ದಾರೆಂದು 27 ಮಂದಿ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲಾದ ಬಳಿಕ, ಈ ಪ್ರಕರಣವನ್ನು ಮುಚ್ಚಿ ಹಾಕಲು ದಲಿತ ಮುಖಂಡರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ದಲಿತರಲ್ಲಿನ ಎಡಗೈ (ಮಾದಿಗ), ಬಲಗೈ (ಹೊಲೆಯ) ಸಮುದಾಯಗಳ ನಡುವಿನ ಮುನಿಸುಗಳ ಲಾಭ ಪಡೆಯಲು ಸವರ್ಣಿಯರು ಯತ್ನಿಸುತ್ತಿದ್ದಾರೆ. ಹರಿಹರಪುರದಲ್ಲಿ ಮಾದಿಗ ಸಮುದಾಯದ ಮೇಲೆ ಹಲ್ಲೆಯಾಗಿದ್ದು, ಹೊಲೆಯ ಸಮುದಾಯದ ಮುಖಂಡರನ್ನು ಕರೆಸಿ ಸವರ್ಣೀಯರು ಮಾತು ಕತೆ ನಡೆಸಿ, ಅವರಿಂದ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ.

ದಲಿತ ಮುಖಂಡರು ಮಾತುಕತೆ ನಡೆಸಿದ್ದಾರೆಂದು ವರದಿಗಳು ಆದ ಬಳಿಕ ಹರಿಹರಪುರದ ಸಂತ್ರಸ್ತ ಕುಟುಂಬಗಳ ಬಳಿ ವಿಚಾರಿಸಿದಾಗ, “ನಾವು ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಸವರ್ಣೀಯರ ಆಮಿಷಕ್ಕೆ ಒಳಗಾಗಿರುವವರು ದಲಿತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸುತ್ತಿದ್ದಾರೆ. ಹಲ್ಲೆಗೊಳಗಾಗಿರುವ ಯುವಕರ ಮೇಲೆ ಸುಳ್ಳು ಆಪಾದನೆಗಳನ್ನು ಹೊರಿಸಿ ಪ್ರಕರಣ ಮುಚ್ಚಲು ಯತ್ನಿಸುತ್ತಿದ್ದಾರೆ” ಎಂದು ಹರಿಹರಪುರ ಮಾದಿಗ ಸಮುದಾಯದ ಮುಖಂಡರು, ಮಾದಿಗ ಸಮುದಾಯದ ಪರ ನಿಂತಿರುವ ಹೊಲೆಯ ಸಮುದಾಯದ ಮುಖಂಡರು ಹೇಳುತ್ತಿದ್ದಾರೆ.

ಕೆ.ಆರ್‌.ಪೇಟೆಯಲ್ಲಿ ಮೇಲುಕೋಟೆ- ಪಾಂಡವಪುರ ಶಾಸಕರ ಸಂಧಾನ ಸಭೆ

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ದಲಿತ ಮುಖಂಡರೊಂದಿಗೆ ಮೇಲುಕೋಟೆ- ಪಾಂಡವಪುರ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಅವರ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದೆ. ತನ್ನದಲ್ಲದ ಕ್ಷೇತ್ರದ ವಿವಾದದಲ್ಲಿ ಸಿ.ಎಸ್‌.ಪುಟ್ಟರಾಜು ಅವರು ಪಾಲ್ಗೊಂಡಿದ್ದು ಏತಕ್ಕೆ ಎಂಬ ಗೊಂದಲಗಳೂ ಉಂಟಾಗಿವೆ. ಕೆ.ಆರ್‌.ಪೇಟೆಗೆ ಬೇರೊಂದು ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದ ಶಾಸಕರು, ಹಾಗೆಯೇ ಸಂಧಾನ ಸಭೆಗೂ ಆಗಮಿಸಿದ್ದರಷ್ಟೇ ಎಂದು ಸವರ್ಣೀಯ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.

“ಹರಿಹರಪುರದಲ್ಲಿ ಯಾವುದೇ ದಲಿತ ದೌರ್ಜನ್ಯ ನಡೆದಿಲ್ಲ. ಘಟನೆ ಶುದ್ಧ ಕಟ್ಟುಕತೆ. ಹಿಂದೆ ಕಳ್ಳತನ ಮಾಡಿ ಸಿಕ್ಕಿಬಿದ್ದವರು, ಹುಡುಗಿಯರನ್ನು ರೇಗಿಸಿದವರು, ರೇಪ್‌ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದಿರುವ ಏಳೆಂಟು ಜನ ಅಯೋಗ್ಯರನ್ನು ಉಳಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ. ವಕೀಲರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದಲಿತ ಮುಖಂಡ ಬಸ್ತಿ ರಂಗಪ್ಪ ಅವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯವರು ಈ ಘಟನೆ ಶುದ್ಧ ಸುಳ್ಳು ಎಂದು ಹೇಳಿದ್ದಾರೆ” ಎಂದು ಮಾಧ್ಯಮವೊಂದರ ಜೊತೆ ಸವರ್ಣೀಯ ಸಮುದಾಯದ ಮುಖಂಡ, ಆರೋಪಿ ಶ್ರೀನಿವಾಸ್‌ ಮಾತನಾಡಿದ್ದು, ವಿಡಿಯೊ ವೈರಲ್ ಆಗಿದೆ. ಬಸ್ತಿ ರಂಗಪ್ಪ ಸಮ್ಮುಖದಲ್ಲಿ ಶ್ರೀನಿವಾಸ್ ಅವರು ಮಾತನಾಡುವುದನ್ನು ಇಲ್ಲಿ ಗಮನಿಸಬಹುದು.

ದೂರು ನೀಡಿರುವ ಯುವಕರು ಈ ಹಿಂದೆ ರೇಪ್‌ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ ಎಂಬ ಸವರ್ಣೀಯ ಮುಖಂಡರ ಆರೋಪದ ಕುರಿತು ಸ್ಪಷ್ಟನೆಯನ್ನು ಬಸ್ತಿ ರಂಗಪ್ಪ ಅವರಲ್ಲಿ ಕೇಳಿದಾಗ, “ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ” ಎಂದರು. “ರೇಪ್‌ ಕೇಸ್‌ಗಳಲ್ಲಿ ನಮ್ಮ ಹುಡುಗರು ಯಾರೂ ಸೇರಿಲ್ಲ. ಆದರೆ ದೇವಾಲಯ ಪ್ರವೇಶದಿಂದ ಗಲಾಟೆಯಾಗಿದೆ ಎಂಬುದು ಸುಳ್ಳು. ದಲಿತ ಹುಡುಗರು ಅಲ್ಲಿನ ಹುಡುಗಿಯರಿಗೆ ಬಾಳೆಹಣ್ಣಿನಲ್ಲಿ ತೀಡಿದ್ದಾರೆ, ಬಲೂನಿನಲ್ಲಿ ಹೊಡೆದಿದ್ದಾರೆ. ಹೀಗಾಗಿ ಗಲಾಟೆಯಾಗಿದೆ” ಎಂದರು. “ಇದಕ್ಕೆ ಪುರಾವೆಗಳು ಇದ್ದಾವೆಯೇ” ಎಂದು ಕೇಳಿದಾಗ, “ವಿಡಿಯೊ ಕಳಿಸುತ್ತೇನೆ” ಎಂದರು. ಶ್ರೀನಿವಾಸ್‌ ಅವರು ವಿಡಿಯೊವೊಂದನ್ನು ಕಳುಹಿಸಿದ್ದು, ದಲಿತ ಹುಡುಗರು ಸಿನಿಮಾ ಹಾಡೊಂಡಕ್ಕೆ ಕುಣಿಯುತ್ತಿರುವುದನ್ನು ಕಾಣಬಹುದೇ ಹೊರತು, ಹುಡುಗಿಯರಿಗೆ ಬಾಳೇಹಣ್ಣಿನಲ್ಲಿ ಹೊಡೆದಿರುವುದಾಗಲೀ, ಬಲೂನಿನಲ್ಲಿ ಹೊಡೆದಿರುವುದಾಗಲೀ ಕಂಡು ಬಂದಿಲ್ಲ.

“ನೀವು ಹೇಳುತ್ತಿರುವುದಕ್ಕೂ, ಇಲ್ಲಿನ ವಿಡಿಯೊಕ್ಕೂ ಯಾವುದೇ ಸಂಬಂಧಗಳು ಕಂಡು ಬರುತ್ತಿಲ್ಲ. ಬೇರೆ ವಿಡಿಯೊ ಇದ್ದರೆ ಕಳಿಸಿಕೊಡಿ” ಎಂದು ಕೇಳಿದಾಗ, ಕಳಿಸಿಕೊಡುವುದಾಗಿ ತಿಳಿಸಿದ್ದರು. ಆದರೆ ಎಲ್ಲ ವಿಡಿಯೊಗಳು ಪೊಲೀಸರ ಬಳಿ ಇವೆ ಹೊರತು, ನಮ್ಮಲ್ಲಿ ಈಗ ಇಲ್ಲ ಎಂದು ತಿಳಿಸಿದರು. (ಹಾಗೇನಾದರೂ ವಿಡಿಯೋ ಸಿಕ್ಕಲ್ಲಿ, ಸತ್ಯಾಸತ್ಯತೆ ಪರಿಶೀಲಿಸಿ ಓದುಗರಿಗೆ ನೀಡಲಾಗುವುದು).

“ಐದು ಹುಡುಗರು ಮಾತ್ರ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇಡೀ ದಲಿತ ಸಮುದಾಯವಲ್ಲ. ಹೀಗಾಗಿ ತಪ್ಪು ಮಾಡಿರುವ ಸವರ್ಣೀಯರಿಗೂ, ದಲಿತರಿಗೂ ಶಿಕ್ಷೆಯಾಗಲಿ. ಇಲ್ಲಿ ಜಾತಿ ಜಾತಿ ತರಬಾರದು” ಎಂಬುದು ಬಸ್ತಿ ರಂಗಪ್ಪ ಅವರ ವಾದ. ಆದರೆ ಪೊಲೀಸರಿಗೆ ದೂರು ನೀಡಿರುವವರಲ್ಲಿ ಒಟ್ಟು ಹನ್ನೆರಡು ಮಂದಿ ಇದ್ದು, ಅಂಗವಿಕಲ ವ್ಯಕ್ತಿಯೊಬ್ಬರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದನ್ನು ನಾನುಗೌರಿ.ಕಾಂ ಹೀಗಾಗಲೇ ವರದಿ ಮಾಡಿದೆ. (ವರದಿಯನ್ನು ಇಲ್ಲಿ ಓದಬಹುದು).

ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಮುಖಂಡರ ಹೆಸರುಗಳನ್ನು ಬಸ್ತಿ ರಂಗಪ್ಪ ನಮ್ಮ ಗಮನಕ್ಕೆ ತಂದರು. ‌ಹೆಚ್ಚಿನ ಪರಿಶೀಲನೆ ನಡೆಸಿದಾಗ, ಈ ಸಭೆಯಲ್ಲಿ ಸಂತ್ರಸ್ತ ಕುಟುಂಬದ ಒಬ್ಬರೇ ಒಬ್ಬರು ದಲಿತರು ಪಾಲ್ಗೊಂಡಿರಲಿಲ್ಲ ಎಂಬ ಮಾಹಿತಿ ಸಿಕ್ಕಿತು. ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಮುಖಂಡರು ಬಲಗೈ (ಹೊಲೆಯ) ಸಮುದಾಯಕ್ಕೆ ಸೇರಿದವರು. ಹಲ್ಲೆಯಾಗಿರುವುದು ಎಡಗೈ (ಮಾದಿಗ) ಸಮುದಾಯದ ಮೇಲೆ. ಎಡಗೈ ಮತ್ತು ಬಲಗೈ ಸಮುದಾಯಗಳು ಅಣ್ಣತಮ್ಮಂದಿರಂತೆ ಇರದೆ ಕಿತ್ತಾಡಿಕೊಳ್ಳುತ್ತಿರುವುದರಿಂದ ಇದರ ಲಾಭವನ್ನು ಪಡೆಯಲು ಸವರ್ಣಿಯರು ಯತ್ನಿಸಿದ್ದಾರೆ ಎಂದು ಸಂತ್ರಸ್ತ ಯುವಕರಾದ ದರ್ಶನ್‌ ಮತ್ತು ಸಂಜು ಆರೋಪಿಸಿದ್ದಾರೆ.

ನಮ್ಮೊಂದಿಗೆ ಮಾತನಾಡಿರುವ ಆರೋಪಿ ಶ್ರೀನಿವಾಸ್, “ನಮ್ಮ ಊರಿನಲ್ಲಿ ಯಾವುದೇ ಜಾತಿ ವ್ಯವಸ್ಥೆ ಇಲ್ಲ. ಇದು ಜಾತಿ ಕಾರಣಕ್ಕೆ ನಡೆದ ಗಲಾಟೆಯಲ್ಲ. ಗಲಾಟೆ ಮಾಡಿದವರು ಹೀಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ” ಎಂದರು. “ಹರಿಹರಪುರವು ಜಾತಿ ಮುಕ್ತ ಗ್ರಾಮವೆಂದು ನೀವು ಹೇಳುತ್ತಿದ್ದೀರಿ. ಭಾರತಕ್ಕೆ ಇಂತಹ ಗ್ರಾಮಗಳ ಅಗತ್ಯವಿದೆ. ಮುಂದೊಮ್ಮೆ ಈ ಕುರಿತು ಪರಿಶೀಲಿಸಿ ವಿಶೇಷ ಲೇಖನ ಬರೆಯಲಾಗುವುದು” ಎಂದು ತಿಳಿಸಲಾಗಿದೆ.

ಸವರ್ಣೀಯರ ಮೇಲೆ ದೂರು ನೀಡಿರುವ ಯುವಕರನ್ನು ಸಂಪರ್ಕಿಸಿದಾಗ “ನಮ್ಮ ಮೇಲೆ ಯಾವುದೇ ಅತ್ಯಾಚಾರ ಪ್ರಕರಣ ದಾಖಲಾಗಿಲ್ಲ” ಎಂದು ತಿಳಿಸಿದ್ದಾರೆ. “ದಲಿತರು ಎಡಗೈ- ಬಲಗೈ ಎಂದು ಒಡೆದುಹೋದರೆ ಮುಂದೆ ಹೀಗೆಯೇ ದೌರ್ಜನ್ಯಕ್ಕೆ ಒಳಗಾಗುತ್ತೇವೆ” ಎಂದು ಎಚ್ಚರಿಸಿದ್ದಾರೆ.


ಇದನ್ನೂ ಓದಿರಿ: ಕೆ.ಆರ್ ಪೇಟೆ: ದಲಿತರ ಮೇಲೆ ದೌರ್ಜನ್ಯ – ದೂರು ನೀಡಿದ್ದಕ್ಕೆ ಅಂಗಡಿ ಮುಚ್ಚಿ ಸವರ್ಣೀಯರಿಂದ ಸಾಮಾಜಿಕ ಬಹಿಷ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತ್ರಿಪುರದಲ್ಲಿ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ

0
ತ್ರಿಪುರ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯಲ್ಲಿ ರಸ್ತೆ, ನೀರಿನಂತಹ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲದೆ ಕಂಗೆಟ್ಟ ಬುಡಕಟ್ಟು ಗ್ರಾಮದ 600ಕ್ಕೂ ಹೆಚ್ಚು ಜನರು ಮತದಾನವನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ...