ಎಸ್ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರೊಂದಿಗೆ ಚರ್ಚೆ ನಡೆಸುತ್ತಿದ್ದೇನೆ. ಮುಖ್ಯವಾಗಿ ರಾಹುಲ್ ಗಾಂಧಿಯವರು ಈ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಸಭೆಗಳಲ್ಲಿ ರೆಸಿಡೆನ್ಸಿಯಲ್ ಡಾಕ್ಯುಮೆಂಟ್ ನೀಡಬೇಕೆಂದು ಮುಖ್ಯಮಂತ್ರಿಗಳು ಈಗಾಗಲೇ ಸೂಚಿಸಿದ್ದಾರೆ ಎಂದು ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, “ನಾನು ರಾಜಕೀಯಕ್ಕೆ ಬಂದಿರುವುದೇ ಇಂತಹ ಭೇದಭಾವಗಳನ್ನು ತೊಡೆದುಹಾಕಲು. ವಿದ್ಯಾರ್ಥಿ ದೆಸೆಯಿಂದಲೂ ಅನ್ಯಾಯಗಳನ್ನು ಕಂಡಿದ್ದೇನೆ. ದಕ್ಷಿಣ ಭಾರತೀಯರನ್ನು ಮುಂಬೈನಿಂದ ಹೊರಗಿಟ್ಟಿದ್ದು, ನಂತರ ಗುಜರಾತಿಗಳನ್ನು, ಆಮೇಲೆ ಅಲ್ಪಸಂಖ್ಯಾತರನ್ನು ಬಾಂಗ್ಲಾದೇಶಿಗಳೆಂದು ಕರೆದು ಹೊರದೂಡಲು ಮುಂದಾಗಿದ್ದು—ಇವೆಲ್ಲವೂ ವ್ಯವಸ್ಥಿತ ಹುನ್ನಾರಗಳು. ಚುನಾವಣಾ ಬೂತ್ಗಳಲ್ಲಿ ದಲಿತರು ಮತ್ತು ತಳಸಮುದಾಯದವರ ಮತಗಳನ್ನು ಅಳಿಸಿ ಹಾಕುತ್ತಿದ್ದ ದೃಶ್ಯಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ” ಎಂದು ಹರಿಪ್ರಸಾದ್ ಸ್ಮರಿಸಿದರು.
“ಸಂವಿಧಾನ ವಿರೋಧಿ ಶಕ್ತಿಗಳು ದೇಶದ ಏಕತೆಯನ್ನು ಒಡೆಯಲು ಹೊಂಚು ಹಾಕುತ್ತಿದ್ದಾರೆ. ಇವರೇ ದೇಶಪ್ರೇಮಿಗಳು ಎಂದು ಕಥೆಗಳನ್ನು ಹೆಣೆಯುತ್ತಾರೆ. ಇತಿಹಾಸದ ಉದಾಹರಣೆಗಳನ್ನು ನೀಡುತ್ತಾ, ಅಂದಿನ ಕಾಲದ ರಾಜರು-ಮಂತ್ರಿಗಳು ಶ್ರಮಿಕರನ್ನು ನಿರ್ಲಕ್ಷಿಸಿದ್ದರಿಂದಲೇ ದೇಶ ಲೂಟಿಯಾಯಿತು. ಇಂದು ಅದೇ ತಪ್ಪು ಮರುಕಳಿಸುತ್ತಿದೆ. ಬಿಜೆಪಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ, ಇಂತಹ ಜನವಿರೋಧಿ ನೀತಿಗಳಿಂದಾಗಿ ನಾಳೆ ದೇಶವನ್ನು ರಕ್ಷಿಸಲು ಜನರೇ ಸಿಗುವುದಿಲ್ಲ. ಪ್ರಧಾನಿ ಮೋದಿಯವರ ಡಿಗ್ರಿ ಸರ್ಟಿಫಿಕೇಟ್ ಇನ್ನೂ ಸಿಕ್ಕಿಲ್ಲ, ಆದರೆ ದೇಶದ ಜನರಿಂದ ಮಾತ್ರ ಪ್ರತಿಯೊಂದು ದಾಖಲೆಯನ್ನು ಇವರು ಕೇಳುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
“ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯರೇ ತುಂಬಿದ್ದಾರೆ. ಜ್ಞಾನ ಕುಮಾರ್ ಅಂತಹ ಅಧಿಕಾರಿಗಳು ಜನಪ್ರತಿನಿಧಿಗಳನ್ನೇ ಭೇಟಿಯಾಗುವುದಿಲ್ಲ ಎಂದರೆ ನ್ಯಾಯಯುತ ಮತದಾನವನ್ನು ಇವರಿಂದ ನಿರೀಕ್ಷಿಸಲು ಸಾಧ್ಯವೇ? ಆರ್ಎಸ್ಎಸ್ ಮಂದಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇರಲಿಲ್ಲ, ಇವತ್ತು ಸಂವಿಧಾನವನ್ನು ಮೊಟಕುಗೊಳಿಸಲು ಎಲ್ಲಾ ರೀತಿಯ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ. ಈ ಹೋರಾಟ ಕೇವಲ ಮುಖ್ಯಮಂತ್ರಿಗಳೊಬ್ಬರಿಂದ ಸಾಧ್ಯವಿಲ್ಲ, ಇದಕ್ಕಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ನಡೆಯಬೇಕಿದೆ” ಎಂದು ಅವರು ಕರೆ ನೀಡಿದರು.
‘ಚುನಾವಣಾ ಆಯೋಗಕ್ಕೆ’ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಅತಾರ್ತಿಕ ʼಲಾಜಿಕಲ್ ಡಿಸ್ಕ್ರಿಪೆನ್ಸಿʼ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಆಗ್ರಹಿಸಿದರು.
- ನೀವು ತಯಾರಿಸುವ ಮತದಾರರ ಪಟ್ಟಿಯ ಕರಡು ಪ್ರತಿಯನ್ನು (ಪರಿಶೀಲನೆಗೆ ಅವಕಾಶವಿರುವಂತೆ) ಕಂಪ್ಯೂಟರ್ ಓದುವ ಮಾದರಿಯಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು.
- ಚುನಾವಣಾ ಮ್ಯಾನ್ಯೂಯಲ್ನಲ್ಲಿ ನೀಡಲಾಗಿರುವ ನಿರ್ದೇಶನದಂತೆ, ಕರಡು ಮತದಾರರ ಪಟ್ಟಿಯನ್ನು ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆಗೆ ಮತ್ತು ತಿದ್ದುಪಡಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
- ಅಪೀಲ್ ಸಲ್ಲಿಸಲು ಕನಿಷ್ಠ ಆರು ತಿಂಗಳ ಸಮಯಾವಕಾಶ ನೀಡಲೇ ಬೇಕು ಎಂದು ಒತ್ತಾಯಿಸಿದರು.
‘ರಾಜ್ಯ ಸರಕಾರಕ್ಕೆ’ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಸರಳ ವಿಧಾನ ಬಳಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಚೆಕ್ ಲಿಸ್ಟ್ ರೀತಿ ಕೆಲಸ ಮಾಡುವ, ರಾಜ್ಯದ ಸ್ವಾಲಂಬಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು ಎಂದು ಆಗ್ರಹಿಸಿದರು.
- ಅರ್ಹ ಮತದಾರರಿಗೆ ಗ್ಯಾರಂಟಿಯಾಗಿ ಸ್ಮಾರ್ಟ್ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಿದರು.
- ಎಸ್ಐಆರ್ ಕೇಳುವ ದಾಖಲೆಗಳಲ್ಲದ ಅರ್ಹ ಮತದಾರರಿಗೆ ಸ್ಥಳದಲ್ಲೇ ಅಗತ್ಯ ದಾಖಲೆ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


