“ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ 19.37 ಕೋಟಿಗೆ ಏರಿಕೆಯಾಯಿತು. ಆದರೆ, ಇಂದು 2024ರಲ್ಲಿ ಸರ್ಕಾರ ರಚಿಸಿದವರು, 2025ರ ಹೆಸರಿನಲ್ಲಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನೆಪದಲ್ಲಿ ಕೋಟ್ಯಂತರ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ” ಎಂದು ಜಮಾತೆ ಇಸ್ಲಾಮಿ ಹಿಂದ್ನ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಯೂಸುಫ್ ಕನ್ನಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, “ಒಟ್ಟು 6 ಕೋಟಿ 50 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇವರೆಲ್ಲರೂ ನುಸುಳುಕೋರರಾ ಅಥವಾ ಸತ್ತು ಹೋಗಿದ್ದಾರಾ? 2024ರಿಂದ 26ರ ಅವಧಿಯಲ್ಲಿ ಸತ್ತವರನ್ನು ನೆಪವಾಗಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದವರು, ಈಗ 65 ಲಕ್ಷ ಜನರನ್ನು ಹೊರಹಾಕುವಾಗ 23 ಲಕ್ಷ ಜನ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಹಿಂದೆ ಈ ಸತ್ತವರು ಮತ ಹಾಕಿದ್ದರೇ? ಮತದಾರರ ಪಟ್ಟಿಯಿಂದ ತೆಗೆದುಹಾಕಿರುವ ಆ ಜನರು ಯಾರು ಎಂಬುವುದನ್ನು ಚುನಾವಣಾ ಆಯೋಗ ಮೊದಲು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.
“ಇಲ್ಲಿಯವರೆಗೆ ಪಟ್ಟಿಯಿಂದ ತೆಗೆದ ಲಕ್ಷಾಂತರ ಜನರಲ್ಲಿ ಒಬ್ಬನೇ ಒಬ್ಬ ನುಸುಳುಕೋರ ಸಿಕ್ಕಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಹೊರಗಿಟ್ಟು ಚುನಾವಣೆ ನಡೆಸಿದ್ದು ಏಕೆ? ಇದು ಚುನಾವಣಾ ಆಯೋಗದ ಜವಾಬ್ದಾರಿಯಲ್ಲವೇ? ಈ ಹೊಣೆಗಾರಿಕೆಯನ್ನು ಆಯೋಗ ಏಕೆ ನಿರ್ವಹಿಸುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು.
“ಕರ್ನಾಟಕಕ್ಕೆ ಎಸ್ಐಆರ್ (SIR) ಕಾಲಿಟ್ಟಿದೆ. ಕಳೆದ ಆರು ತಿಂಗಳಿನಿಂದ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಒಂದಕ್ಕೂ ಉತ್ತರ ಸಿಕ್ಕಿಲ್ಲ. ‘ಎದ್ದೇಳು ಕರ್ನಾಟಕ’, ‘ನನ್ನ ಮತ-ನನ್ನ ಹಕ್ಕು’, ‘ಜಾಗೃತ ಕರ್ನಾಟಕ’ದಂತಹ ಸಂಘಟನೆಗಳು ಜನರಲ್ಲಿ ಅರಿವು ಮೂಡಿಸಲು ಹೋಗುತ್ತಿದ್ದೇವೆ. ಆದರೆ, ಎಸ್ಐಆರ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲ. ಹಿಂದೆಲ್ಲಾ ಚುನಾವಣಾ ಆಯೋಗವೇ ಹಳ್ಳಿ ಹಳ್ಳಿಗಳಿಗೆ ಹೋಗಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು. ಈಗ ಅದೇ ಆಯೋಗ ಮಾಡುತ್ತಿರುವುದೇನು?” ಎಂದು ಅವರು ತೀವ್ರವಾಗಿ ಆಕ್ಷೇಪಿಸಿದರು.
“ಈ ಸಭೆಯಲ್ಲಿರುವ ಪ್ರತಿಯೊಬ್ಬರೂ ಜಾಗೃತರಾಗಬೇಕು. ರಾಜ್ಯದಲ್ಲಿ ಯಾರೊಬ್ಬರ ಮತವೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲಾ ಸಂಘಟನೆಗಳ ಜವಾಬ್ದಾರಿಯಾಗಿದೆ” ಎಂದು ಮೊಹಮ್ಮದ್ ಯೂಸುಫ್ ಕನ್ನಿ ಅವರು ಕರೆ ನೀಡಿದರು.
‘ಚುನಾವಣಾ ಆಯೋಗಕ್ಕೆ’ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಅತಾರ್ತಿಕ ʼಲಾಜಿಕಲ್ ಡಿಸ್ಕ್ರಿಪೆನ್ಸಿʼ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಆಗ್ರಹಿಸಿದರು.
- ನೀವು ತಯಾರಿಸುವ ಮತದಾರರ ಪಟ್ಟಿಯ ಕರಡು ಪ್ರತಿಯನ್ನು (ಪರಿಶೀಲನೆಗೆ ಅವಕಾಶವಿರುವಂತೆ) ಕಂಪ್ಯೂಟರ್ ಓದುವ ಮಾದರಿಯಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು.
- ಚುನಾವಣಾ ಮ್ಯಾನ್ಯೂಯಲ್ನಲ್ಲಿ ನೀಡಲಾಗಿರುವ ನಿರ್ದೇಶನದಂತೆ, ಕರಡು ಮತದಾರರ ಪಟ್ಟಿಯನ್ನು ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆಗೆ ಮತ್ತು ತಿದ್ದುಪಡಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
- ಅಪೀಲ್ ಸಲ್ಲಿಸಲು ಕನಿಷ್ಠ ಆರು ತಿಂಗಳ ಸಮಯಾವಕಾಶ ನೀಡಲೇ ಬೇಕು ಎಂದು ಒತ್ತಾಯಿಸಿದರು.
‘ರಾಜ್ಯ ಸರಕಾರಕ್ಕೆ’ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಸರಳ ವಿಧಾನ ಬಳಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಚೆಕ್ ಲಿಸ್ಟ್ ರೀತಿ ಕೆಲಸ ಮಾಡುವ, ರಾಜ್ಯದ ಸ್ವಾಲಂಬಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು ಎಂದು ಆಗ್ರಹಿಸಿದರು.
- ಅರ್ಹ ಮತದಾರರಿಗೆ ಗ್ಯಾರಂಟಿಯಾಗಿ ಸ್ಮಾರ್ಟ್ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಿದರು.
- ಎಸ್ಐಆರ್ ಕೇಳುವ ದಾಖಲೆಗಳಲ್ಲದ ಅರ್ಹ ಮತದಾರರಿಗೆ ಸ್ಥಳದಲ್ಲೇ ಅಗತ್ಯ ದಾಖಲೆ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


