ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್ನಲ್ಲಿಯೇ ಕುಳಿತಿದ್ದಾರೆ.
ಶನಿವಾರ ಮಧ್ಯಾಹ್ನ ಪ್ರಾರಂಭವಾದ ಧರಣಿ ಅಹೋರಾತ್ರಿ ಮುಂದುವರೆದಿದ್ದು, ಪ್ರತಿಭಟನಾಕಾರರು ಪೊಲೀಸರ ಕಣ್ಗಾವಲಿನಲ್ಲಿ ಪ್ರತಿಭಟನೆ ಧರಣಿ ಮುಂದುವೆರಸಿದ್ದಾರೆ. ರಾತ್ರಿಯಿಡೀ ಆಂದೋಲನದಲ್ಲಿ ಭಾಗವಹಿಸುವವರಿಗೆ ಕೆಲವರು ಆಹಾರ ಮತ್ತು ಕುಡಿಯುವ ನೀರು ವಿತರಿಸಿದರು.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಪ್ರತಿಭಟನೆ ಸೋಮವಾರವೂ ಮುಂದುವರಿಯಲಿದೆ ಎಂದು ಭಾನುವಾರ ಘೋಷಿಸಿದರು. ತಮ್ಮ ಚಳವಳಿಗೆ ಬೆಂಬಲ ನೀಡುವಂತೆ ಅವರು ರೈತ ಸಂಘಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪ್ರತಿಭಟನಾ ಸ್ಥಳದಲ್ಲಿ ಸರ್ಕಾರದ ವಿರುದ್ಧ ಘೋಷಣೆ, ಭಾಷಣ ಮತ್ತು ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ಪ್ರತಿಭಟನಾಕಾರರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಸಂಜೆಯ ಹೊತ್ತಿಗೆ, 200 ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಜಮಾಯಿಸಿದರು ಎಂದು ಸಂಘಟಕರು ತಿಳಿಸಿದ್ದಾರೆ.
ಪರೀಕ್ಷಾ ವಿವಾದದ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೊಣೆಗಾರಿಕೆಗೆ ಆಗ್ರಹಿಸಿರುವ ದಿಪ್ಕೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ನೀಟ್ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಪ್ರವೇಶವನ್ನು ನಿರ್ಬಂಧಿಸದಂತೆ ಅಧಿಕಾರಿಗಳನ್ನು ದೀಪ್ಕೆ ಒತ್ತಾಯಿಸಿದರು. ಮುಖ್ಯವಾಗಿ, ಸಾರ್ವಜನಿಕ ಶೌಚಾಲಯಗಳಿಗೆ ನೀರು ಸರಬರಾಜು ಪುನಃಸ್ಥಾಪಿಸುವಂತೆ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮೂಲಭೂತ ಸೌಲಭ್ಯಗಳ ಅಸ್ತವ್ಯಸ್ತತೆ ಪ್ರತಿಭಟನಾಕಾರರು ಆರೋಪಿಸಿದ್ದರು. ಆಕ್ರೋಶದ ಬಳಿಕ ಕುಡಿಯುವ ನೀರಿನ ವ್ಯವಸ್ಥೇಯನ್ನು ಪುನಃಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ತಮ್ಮ ಬೇಡಿಕೆಗಳನ್ನು ಪರಿಹರಿಸುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಸಿಜೆಪಿ ಹೇಳಿದೆ. ಸಂಘಟಕರ ಪ್ರಕಾರ, ರೈತ ಸಂಘಟನೆಗಳು ಹಗಲಿನಲ್ಲಿ ಪ್ರತಿಭಟನೆಗೆ ಸೇರುವ ನಿರೀಕ್ಷೆಯಿದೆ.
ಪೊಲೀಸರ ಭದ್ರತೆಯಲ್ಲಿ ಹೋರಾಟ ನಡೆಸಲಾಗುತ್ತಿದೆ. ಸ್ಥಳದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿಭಟನಾ ಪ್ರದೇಶದ ಸುತ್ತಲೂ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ ಸರಣಿ ಪ್ರತಿಭಟನೆ
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ನೀಟ್ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್ಇ ಆನ್ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಈ ಚಳವಳಿ ಈಗ ಜಂತರ್ ಮಂಥರ್ನಲ್ಲಿ ಮುಂದುವರೆದಿದೆ.
ಜಂತರ್ ಮಂತರ್ನಲ್ಲಿ ಮೊದಲ ಪ್ರತಿಭಟನೆ
ಜೂನ್ 6 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿಯ ಮೊದಲ ಬೃಹತ್ ಪ್ರತಿಭಟನೆ ನಡೆಯಿತು. ಅಮೆರಿಕದಿಂದ ಹಿಂದಿರುಗಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ನೇರವಾಗಿ ಆಗಮಿಸಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜೂನ್ 20 ರಿಂದ ದೆಹಲಿಯಲ್ಲಿ ಎರಡನೇ ಹಂತದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪೊಲೀಸರು ನಿಗದಿಪಡಿಸಿದ ಸಂಜೆ 5 ಗಂಟೆಯ ಸಮಯ ಮುಗಿದರೂ ಪ್ರತಿಭಟನಾಕಾರರು ಸ್ಥಳದಲ್ಲೇ ಉಳಿದು, ಮೊಬೈಲ್ ಫ್ಲ್ಯಾಶ್ಲೈಟ್ ಮೂಲಕ, ತಟ್ಟೆ-ಚಮಚಗಳನ್ನು ಬಡಿಯುವ ಮೂಲಕ ವಿನೂತನವಾಗಿ ಆಕ್ರೋಶ ಹೊರಹಾಕಿದರು. ಶಿಕ್ಷಣ ಸಚಿವರು ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಿಜೆಪಿ ಪಟ್ಟು ಹಿಡಿದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ
ಸುರಿಯುವ ಮಳೆಯನ್ನೂ ಲೆಕ್ಕಿಸದೆ ನೂರಾರು ಜನ ಸಿಜೆಪಿ ಬೆಂಬಲಿಗರು ಜೂನ್ 14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಲಡಾಖ್ನ ಪ್ರಮುಖ ಪರಿಸರ ಕಾರ್ಯಕರ್ತರಾದ ಸೋನಮ್ ವಾಂಗ್ಚುಕ್ ಮತ್ತು ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಭಾಗವಹಿಸಿದ್ದರು.
“ಇದು ಕೇವಲ ರಾಜಕೀಯ ಅಧಿಕಾರಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ, ಬದಲಿಗೆ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಮಾಡುತ್ತಿರುವ ಪ್ರಯತ್ನ” ಎಂದು ಸೋನಮ್ ವಾಂಗ್ಚುಕ್ ತಿಳಿಸಿದರು.
ಬೆಂಗಳುರಿನ ಪ್ರತಿಭಟನೆಯಲ್ಲಿ ಮಾತನಾಡಿದ ದೀಪ್ಕೆ, “ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸಿದಾಗ ನಮ್ಮನ್ನು ಜಿರಳೆಗಳು (ಕಾಕರೂಚ್) ಎಂದು ಕರೆಯಲಾಗುತ್ತದೆ. ಹಕ್ಕುಗಳಿಗಾಗಿ ಜೈಲಿಗೆ ಹೋಗಲು ನಾನು ಸಿದ್ಧ” ಎಂದು ಘೋಷಿಸಿದ್ದರು.
ದೆಹಲಿ ಮತ್ತು ಬೆಂಗಳೂರು ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಸಿಜೆಪಿ ಅಭಿಯಾನ ನಡೆಸಿದೆ. ಪುಣೆ, ಲಕ್ನೋ, ಅಮೃತಸರ, ಜೈಪುರ ಮತ್ತು ಜಾನ್ಪುರ ನಗರಗಳಲ್ಲಿ ನೀಟ್ ಆಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


