Homeಮುಖಪುಟಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

ಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

- Advertisement -
- Advertisement -

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಮಾರು 20 ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪು ರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ಕೇವಲ ಮೂರನೇ ಎರಡರಷ್ಟು ಸಂಸದರ ಬೆಂಬಲ ಹೊಂದಿರುವುದರಿಂದ ಮಾತ್ರ ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ theprint.in ವರದಿ ಮಾಡಿದೆ.

ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಟಿಎಂಸಿಯ 20 ಸಂಸದರು ಪಕ್ಷವನ್ನು ಬಿಟ್ಟು, ಸಂಸತ್ತಿನಲ್ಲಿ ಹೊಸ ಗುಂಪು ಕಟ್ಟಲು ರೆಡಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ, ಬಂಡಾಯ ಟಿಎಂಸಿ ಪಾಳಯದಲ್ಲಿರುವ ಸಂಸದರ ನಿಖರ ಸಂಖ್ಯೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಒಟ್ಟು 28 ಟಿಎಂಸಿ ಸಂಸದರ ಪೈಕಿ 20 ಸಂಸದರ ಬೆಂಬಲ ತಮಗಿದೆ ಎಂದು ದಸ್ತಿದಾರ್ ಪಾಳಯ ಪ್ರತಿಪಾದಿಸುತ್ತಿದೆ, ಆದರೆ 16 ಸಂಸದರು ಬಂಡಾಯವೆದ್ದಿದ್ದಾರೆ ಮತ್ತು ಇನ್ನುಳಿದ 12 ಸಂಸದರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಬಣದಲ್ಲೇ ಇದ್ದಾರೆ ಎಂದು ಪಕ್ಷದ ಇಬ್ಬರು ಹಿರಿಯ ಸಂಸದರು ಹೇಳಿರುವುದಾಗಿ theprint.in ವರದಿ ಉಲ್ಲೇಖಿಸಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿ, ಮೂರನೇ ಎರಡರಷ್ಟು (2/3) ಸಂಸದರು ತಾವು ಪ್ರತ್ಯೇಕ ಬಣವನ್ನು ರಚಿಸಲು ಬಯಸುತ್ತೇವೆ ಅಥವಾ ಎನ್‌ಡಿಎ ಜೊತೆ ಕೈಜೋಡಿಸುತ್ತೇವೆ ಎಂದು ಹೇಳುವುದು ಮಾತ್ರವೇ ಸಾಕಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅದರ ಬದಲಾಗಿ, ಮೊದಲು ಇಡೀ ಬಣವು ಅಧಿಕೃತವಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳುವುದು ಕಡ್ಡಾಯವಾಗಿದೆ ಎಂದು ವರದಿ ಹೇಳಿದೆ.

ಸರಳವಾಗಿ ಹೇಳುವುದಾದರೆ, 20 ಸಂಸದರು ಕೇವಲ “ನಾವು ಟಿಎಂಸಿ ಬಿಟ್ಟು ಪ್ರತ್ಯೇಕ ಗುಂಪು ಆಗುತ್ತೇವೆ” ಅಥವಾ “ನಾವು ಎನ್‌ಡಿಎ ಕೂಟಕ್ಕೆ ಬೆಂಬಲ ನೀಡುತ್ತೇವೆ” ಎಂದು ಘೋಷಿಸಲು ಬರುವುದಿಲ್ಲ.

ಅವರು ತಮ್ಮ ಸಂಸದ ಸ್ಥಾನ ಉಳಿಸಿಕೊಳ್ಳಬೇಕಾದರೆ, ತಮ್ಮ ಇಡೀ ಗುಂಪನ್ನು ಅಧಿಕೃತವಾಗಿ ಮತ್ತೊಂದು ರಾಜಕೀಯ ಪಕ್ಷದೊಂದಿಗೆ (ಉದಾಹರಣೆಗೆ ಬಿಜೆಪಿ ಅಥವಾ ಬೇರೆ ಪಕ್ಷ) ಸಂಪೂರ್ಣವಾಗಿ ವಿಲೀನ ಮಾಡಲೇಬೇಕು.

ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಪ್ರಕಾರ, ಕೇವಲ ಪಕ್ಷ ಸೀಳುವುದು ಅಥವಾ ಪ್ರತ್ಯೇಕ ಬಣ ರಚಿಸುವುದನ್ನು ಈಗ ನಿಷೇಧಿಸಲಾಗಿದೆ. ಮತ್ತೊಂದು ಪಕ್ಷದೊಂದಿಗೆ ಅಧಿಕೃತವಾಗಿ ಒಂದಾದರೆ ಮಾತ್ರ ಇವರ ಸ್ಥಾನ ಉಳಿಯುತ್ತದೆ.

ಟಿಎಂಸಿ ಪಕ್ಷದ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿದ್ದಾಗ, ಅಂದರೆ ಸೋಮವಾರದಂದು ಈ ಆಂತರಿಕ ಭಿನ್ನಮತ ಅಥವಾ ಬಣ ರಾಜಕೀಯದ ಜಗಳ ಬೆಳಕಿಗೆ ಬಂತು.

ಅದೇ ದಿನ, ಟಿಎಂಸಿ ಸಂಸದೆ ಶರ್ಮಿಳಾ ಸರ್ಕಾರ್ ಅವರು ಪಕ್ಷದಲ್ಲಿನ “ಭ್ರಷ್ಟಾಚಾರ”ವೇ ಈ ನಿರ್ಧಾರಕ್ಕೆ ಕಾರಣ ಎಂದು ದೂರಿದ್ದಲ್ಲದೆ, ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಲು 20 ಟಿಎಂಸಿ ಸಂಸದರು ತಮ್ಮದೇ ಆದ “ಪ್ರತ್ಯೇಕ ಬಣ” ರಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರ ದೆಹಲಿಯ ನಿವಾಸದಲ್ಲಿ ಬಂಡಾಯ ಸಂಸದರ ಸಭೆ ನಡೆದಿದೆ ಎಂದು ವರದಿಯಾಗಿದೆ, ಜೊತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಟಿಎಂಸಿ ಸಂಸದರನ್ನು ಭೇಟಿಯಾಗಿದ್ದಾರೆ.

ಇದಕ್ಕೂ ಮುನ್ನ, ಉಚ್ಚಾಟಿತ ಟಿಎಂಸಿ ನಾಯಕ ರಿತಾಬ್ರತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಕ್ಕು ಮಂಡಿಸಿ, ತಮಗೆ 58 ಟಿಎಂಸಿ ಶಾಸಕರ ಬೆಂಬಲವಿದೆ ಎಂದು ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಪತ್ರ ಬರೆದಿದ್ದಾರೆ. 

ಸ್ಪೀಕರ್ ರಿತಾಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಅಂಗೀಕರಿಸಿದ್ದರೂ ಸಹ, ಈ ಆಯ್ಕೆಯ ಸಂಪೂರ್ಣ ಹಕ್ಕು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮಾತ್ರ ಸೇರಿದ್ದಾಗಿದೆ ಎಂದು ಸಾಂವಿಧಾನಿಕ ತಜ್ಞರು ತಿಳಿಸಿದ್ದಾರೆ ಎಂದು theprint.in ವರದಿ ಹೇಳಿದೆ.

ಬಣ ಜಗಳ ಈಗ ಲೋಕಸಭೆಯನ್ನು ತಲುಪಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ, ಲೋಕಸಭೆಯ ಮೂರನೇ ಎರಡರಷ್ಟು (2/3) ಸಂಸದರು ಕೇವಲ ಪ್ರತ್ಯೇಕ ಬಣ ರಚಿಸಲು ಬಯಸುವುದರಿಂದ ಅದು ಅಧಿಕೃತ ವಿಲೀನ ಎಂದು ಪರಿಗಣಿಸಲ್ಪಡದ ಕಾರಣ, ಅವರು ಅನರ್ಹತೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕ ತಜ್ಞರು ತಿಳಿಸಿದ್ದಾರೆ. 

ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ ಅವರ ಪ್ರಕಾರ, 20 ಸಂಸದರು ಪಕ್ಷ ತೊರೆದು ಪ್ರತ್ಯೇಕ ಬಣ ರಚಿಸಿದರೆ ಮಾತ್ರ ಅನರ್ಹತೆಯಿಂದ ವಿನಾಯಿತಿ ದೊರೆಯುವುದಿಲ್ಲ. ಸಂವಿಧಾನದ 10ನೇ ಪರಿಚ್ಛೇದದಡಿ ಅವರು ಅನರ್ಹತೆಯ ಅಪಾಯವನ್ನು ಎದುರಿಸಬೇಕಾಗಬಹುದು. 10ನೇ ಪರಿಚ್ಛೇದದ ಪ್ರಕಾರ, ಸಂಸದರು ಸ್ವಯಂಪ್ರೇರಿತವಾಗಿ ಪಕ್ಷದ ಸದಸ್ಯತ್ವ ತ್ಯಜಿಸಿದರೆ ಅಥವಾ ಪಕ್ಷದ ವಿಪ್ ಗೆ ವಿರುದ್ಧವಾಗಿ ನಡೆದುಕೊಂಡರೆ ಅವರನ್ನು ಅನರ್ಹಗೊಳಿಸಬಹುದು.

ತಜ್ಞರ ಅಭಿಪ್ರಾಯದಂತೆ, ಅನರ್ಹತೆಯಿಂದ ಪಾರಾಗಲು ಇರುವ ಏಕೈಕ ಅವಕಾಶವೆಂದರೆ ರಾಜಕೀಯ ಪಕ್ಷದ ವಿಲೀನ. ಅಂದರೆ, ಟಿಎಂಸಿ ಪಕ್ಷವೇ ಮತ್ತೊಂದು ಪಕ್ಷದೊಂದಿಗೆ ಅಧಿಕೃತವಾಗಿ ವಿಲೀನಗೊಳ್ಳಬೇಕು. ಆ ವಿಲೀನಕ್ಕೆ ಪಕ್ಷದ ಮೂರನೇ ಎರಡರಷ್ಟು ಸಂಸದರು ಅಥವಾ ಶಾಸಕರು ಒಪ್ಪಿಗೆ ನೀಡಿದರೆ ಮಾತ್ರ ಕಾನೂನಿನ ರಕ್ಷಣೆ ದೊರೆಯುತ್ತದೆ.

ಈ ಹಂತದಲ್ಲಿ ಮೂರನೇ ಎರಡರಷ್ಟು ಸಂಖ್ಯೆಗೆ ಯಾವುದೇ ಮಹತ್ವವಿಲ್ಲ. ಮೊದಲು ಪಕ್ಷದ ವಿಲೀನವಾಗಬೇಕು. ಅದರ ನಂತರ ಮಾತ್ರ ಆ ಸಂಖ್ಯೆಗೆ ಕಾನೂನುಬದ್ಧ ಅರ್ಥ ಬರುತ್ತದೆ ಎಂದು ಆಚಾರ್ಯ ಹೇಳಿದ್ದಾರೆ.

ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ವಿಲೀನ ಎಂದರೆ ಸಂಸದರ ಗುಂಪಿನ ವಿಲೀನವಲ್ಲ, ರಾಜಕೀಯ ಪಕ್ಷದ ಸಂಘಟನೆಯ ವಿಲೀನ. ಕೇವಲ ಪ್ರತ್ಯೇಕ ಬಣ ರಚಿಸುವುದರಿಂದ ಅನರ್ಹತೆಯಿಂದ ಪಾರಾಗಲು ಸಾಧ್ಯವಿಲ್ಲ’ ಎಂದಿದ್ದಾರೆ.

ಹಿಂದೆ ಪಕ್ಷದ ಮೂರನೇ ಒಂದು ಭಾಗದ ಸದಸ್ಯರು ಬೇರ್ಪಟ್ಟರೆ ಅನರ್ಹತೆಯಿಂದ ವಿನಾಯಿತಿ ಪಡೆಯುವ ಅವಕಾಶ ಇತ್ತು. ಆದರೆ 2004ರ ತಿದ್ದುಪಡಿಯ ಮೂಲಕ ಆ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ. ಈಗ ವಿಲೀನದ ಸಂದರ್ಭದಲ್ಲಷ್ಟೇ ವಿನಾಯಿತಿ ಸಾಧ್ಯವಿದೆ. ಕಿರ್ಪಾಲ್ ಅವರ ಪ್ರಕಾರ, ಶಿವಸೇನಾ ಪ್ರಕರಣ ಸೇರಿದಂತೆ ವಿವಿಧ ನ್ಯಾಯಾಂಗ ತೀರ್ಪುಗಳೂ ಪಕ್ಷದ ಸಂಘಟನೆಯ ಮಟ್ಟದಲ್ಲಿ ವಿಲೀನ ಅಥವಾ ವಿಭಜನೆಗೆ ಮಹತ್ವ ನೀಡಿವೆ.

ಹೀಗಾಗಿ, 20 ಟಿಎಂಸಿ ಸಂಸದರು ಪ್ರತ್ಯೇಕ ಬಣ ರಚಿಸಿದರೂ, ಟಿಎಂಸಿ ಪಕ್ಷವೇ ಅಧಿಕೃತವಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳದ ಹೊರತು ಅವರು ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆಯ ಅಪಾಯದಿಂದ ಸಂಪೂರ್ಣವಾಗಿ ಪಾರಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 









ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...