ದೇಶದಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಉತ್ತರಾಖಂಡದ ನ್ಯೂ ತೆಹ್ರಿ ಜಿಲ್ಲೆಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ 18 ವರ್ಷದ ದಲಿತ ಹದಿಹರೆಯದ ಯುವಕನನ್ನು ಅತ್ಯಂತ ಕ್ರೂರವಾಗಿ ಥಳಿಸಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾಳಿಯಲ್ಲಿ ಮೃತನ ಸ್ನೇಹಿತ ಕೂಡ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೃತನನ್ನು ದೇವಲ್ ಗ್ರಾಮದ ನಿವಾಸಿ ಕೇತನ್ ಲಾಲ್ (18) ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಬದುಕುಳಿದ ಆತನ ಸ್ನೇಹಿತ ದಿವಾಕರ್ ದಿಮ್ರಿ ತೀವ್ರ ಗಾಯಗೊಂಡಿದ್ದು, ಸದ್ಯ ಬೌರಾರಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತ ಕೇತನ್ ಲಾಲ್ ತಂದೆ ಧನಪಾಲ್ ಲಾಲ್ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಈ ಭೀಕರ ಘಟನೆಯು ಭಾನುವಾರ ರಾತ್ರಿ ಖೋಲ್ಗಢ ಗ್ರಾಮದಲ್ಲಿ ನಡೆದಿದೆ. ಕೇತನ್ ಕಳೆದ ಆರು ತಿಂಗಳಿನಿಂದ ಖೋಲ್ಗಢ ಗ್ರಾಮದ ಮೇಲ್ಜಾತಿಯ ಯುವತಿಯೊಬ್ಬಳೊಂದಿಗೆ ಸ್ನೇಹ ಹೊಂದಿದ್ದ ಎನ್ನಲಾಗಿದೆ.
ಭಾನುವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ, ಯುವತಿಯು ಫೋನ್ ಮಾಡಿ ಕೇತನ್ನನ್ನು ತನ್ನ ಗ್ರಾಮಕ್ಕೆ ಬರುವಂತೆ ಕೇಳಿಕೊಂಡಿದ್ದಾಳೆ. ಅದರಂತೆ ಕೇತನ್ ತನ್ನ ಸ್ನೇಹಿತ ದಿವಾಕರ್ ಜೊತೆ ಖೋಲ್ಗಢ ಗ್ರಾಮಕ್ಕೆ ಹೋಗಿದ್ದಾನೆ. ಆದರೆ, ಅವರು ಅಲ್ಲಿಗೆ ತಲುಪುತ್ತಿದ್ದಂತೆ ಯುವತಿಯ ಕುಟುಂಬದ ಸದಸ್ಯರು ಇಬ್ಬರನ್ನೂ ಹಿಡಿದು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ನಂತರ ಇಬ್ಬರ ಮೇಲೂ ಕೋಲು ಹಾಗೂ ಮಾರಕಾಸ್ತ್ರಗಳಿಂದ ಮೃಗೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.
ಮರುದಿನ ಅಂದರೆ ಸೋಮವಾರ ಮುಂಜಾನೆ, ಘಟನೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಶ್ವೀರ್ ಸಿಂಗ್ ಪನ್ವಾರ್, ಕೇತನ್ ತಂದೆ ಧನಪಾಲ್ ಲಾಲ್ ಅವರಿಗೆ ಫೋನ್ ಕರೆ ಮಾಡಿ, ನಿಮ್ಮ ಮಗನ ಸ್ಥಿತಿ ಗಂಭೀರವಾಗಿದೆ, ಬಂದು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾನೆ. ಧನಪಾಲ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದಾಗ ಮಗ ಕೇತನ್ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಚೌಂಡ್ ಲಂಬಗಾಂವ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತಾದರೂ, ಆತ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ಮೃತನ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವವರೆಗೆ ಶವವನ್ನು ಆಸ್ಪತ್ರೆಯಿಂದ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಸ್ವಲ್ಪ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆಯ ಕುರಿತು ಮಾಹಿತಿ ನೀಡಿರುವ ತೆಹ್ರಿ ಗರ್ವಾಲ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಶ್ವೇತಾ ಚೌಬೆ ಅವರು, “ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಶ್ವೀರ್ ಸಿಂಗ್ ಪನ್ವಾರ್ ಎಂಬಾತನನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಗೆ ವ್ಯಾಪಕ ಸಾಮಾಜಿಕ ಆಕ್ರೋಶ ವ್ಯಕ್ತವಾಗಿದ್ದು, ಸಿಪಿಐ (ಎಂಎಲ್) ಲಿಬರೇಶನ್ ಕೇಂದ್ರ ಸಮಿತಿ ಸದಸ್ಯ ಹಾಗೂ ಉತ್ತರಾಖಂಡ ರಾಜ್ಯ ಕಾರ್ಯದರ್ಶಿ ಇಂದ್ರೇಶ್ ಮೈಖುರಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
“ಜಾತಿವಾದಿ ಮನಸ್ಥಿತಿಯು ಮನುಷ್ಯರನ್ನು ಎಷ್ಟು ಹಿಂಸಾತ್ಮಕ ಮತ್ತು ಅನಾಗರಿಕರನ್ನಾಗಿ ಮಾಡುತ್ತದೆ ಎಂಬುದಕ್ಕೆ ಈ ಕೊಲೆಯೇ ಪ್ರತ್ಯಕ್ಷ ಸಾಕ್ಷಿ. 2022 ರಲ್ಲಿ ಮೇಲ್ಜಾತಿಯ ಮಹಿಳೆಯನ್ನು ಮದುವೆಯಾಗಿದ್ದಕ್ಕಾಗಿ ದಲಿತ ರಾಜಕೀಯ ಕಾರ್ಯಕರ್ತ ಜಗದೀಶ್ ಚಂದ್ರ ಅವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು. ಈಗ 18 ವರ್ಷದ ಯುವಕನ ಜೀವ ತೆಗೆಯಲಾಗಿದೆ” ಎಂದು ಅವರು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಯಶ್ವೀರ್ ಪನ್ವಾರ್ ಮತ್ತು ಆತನ ಸಹಚರರ ರಕ್ತನಾಳಗಳಲ್ಲಿ ಜಾತಿವಾದದ ವಿಷ ಆಳವಾಗಿ ಹರಿಯುತ್ತಿತ್ತು. ಈ ಕೃತ್ಯದಿಂದ ಅವರು ವೀರರೇನೂ ಆಗಲಿಲ್ಲ, ಬದಲಿಗೆ ಸಮಾಜದ ಕ್ರೂರ ಕೊಲೆಗಾರರಾಗಿದ್ದಾರೆ. ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಕೇತನ್ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದು ಒತ್ತಾಯಿಸಿದ್ದಾರೆ.
ಉತ್ತರಾಖಂಡದಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ: ಆತಂಕಕಾರಿ ಅಂಕಿ-ಅಂಶ
‘ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನ’ (NCDHR) ಇತ್ತೀಚೆಗೆ ಬಿಡುಗಡೆ ಮಾಡಿರುವ “ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ಅಪರಾಧಗಳ ವಿಶ್ಲೇಷಣೆ (2019-2023)” ವರದಿಯು ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಆತಂಕಕಾರಿ ಚಿತ್ರಣವನ್ನು ತೆರೆದಿಟ್ಟಿದೆ.
ಈ ರಾಷ್ಟ್ರೀಯ ವರದಿಯ ಪ್ರಕಾರ, ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಮೇಲಿನ ಅಪರಾಧ ಪ್ರಕರಣಗಳಲ್ಲಿ ಉತ್ತರಾಖಂಡ ರಾಜ್ಯವು ಭಾರತೀಯ ರಾಜ್ಯಗಳ ಪೈಕಿ 18ನೇ ಸ್ಥಾನದಲ್ಲಿದೆ. ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧ ನಡೆಯುವ ಒಟ್ಟು ಅಪರಾಧಗಳ ಪೈಕಿ ಶೇಕಡಾ 5.4 ರಷ್ಟು ಪ್ರಕರಣಗಳು ಉತ್ತರಾಖಂಡವೊಂದರಲ್ಲೇ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೆ, ಕಳೆದ ಐದು ವರ್ಷಗಳ ಅವಧಿಯನ್ನು ಗಮನಿಸಿದರೆ ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವುದು ಸ್ಪಷ್ಟವಾಗುತ್ತದೆ. 2019 ರಿಂದ 2023 ರ ನಡುವಿನ ಅವಧಿಯಲ್ಲಿ ಉತ್ತರಾಖಂಡದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 21.4 ರಷ್ಟು ಭಾರಿ ಹೆಚ್ಚಳವಾಗಿದೆ ಎಂದು ವರದಿ ಸವಿಸ್ತಾರವಾಗಿ ಉಲ್ಲೇಖಿಸಿದೆ.
ಈ ಅಂಕಿ-ಅಂಶಗಳು ಉತ್ತರಾಖಂಡದಲ್ಲಿ ಹಿಂದುಳಿದ ವರ್ಗಗಳ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯು ತೀವ್ರ ಸವಾಲಾಗಿ ಪರಿಣಮಿಸಿರುವುದನ್ನು ಎತ್ತಿ ತೋರಿಸುತ್ತಿವೆ. ಸದ್ಯ ಪೊಲೀಸರು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


