ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ನಡವಳಿಕೆಯು ‘ಫ್ಯೂಡಲ್’ ಮನಸ್ಥಿತಿಯನ್ನು ನೆನಪಿಸುತ್ತದೆ. ಹೌದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂತಹ ನಡವಳಿಕೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಟೀಕೆಗೆ ಗುರಿಯಾಗಿದೆ.
ಕನಕಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೇಬನ್ನು ಕಚ್ಚಿ, ಬಳಿಕ ಅದನ್ನು ನೆರೆದಿದ್ದ ಜನರತ್ತ ಎಸೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಡಿ.ಕೆ. ಶಿವಕುಮಾರ್ ಅವರು ಕನಕಪುರದ ಹಾರೋಹಳ್ಳಿಗೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದ್ದು, ಅಲ್ಲಿನ ಬೆಂಬಲಿಗರು ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಅವರಿಗೆ ತಾಜಾ ಸೇಬು ಮತ್ತು ಹೂವುಗಳಿಂದ ಮಾಡಿದ ಬೃಹತ್ “ಗಜಮಾಲೆ”ಯನ್ನು ಹಾಕಿ ಬರಮಾಡಿಕೊಂಡಿದ್ದರು.
ವೈರಲ್ ವಿಡಿಯೋದಲ್ಲಿ, ಶಿವಕುಮಾರ್ ಅವರು ಆ ಗಜಮಾಲೆಯಿಂದ ಸೇಬುಗಳನ್ನು ಕಿತ್ತು, ಅದಕ್ಕೊಂದು ಕಚ್ಚು ಹಾಕಿ, ನಂತರ ಅಲ್ಲಿ ನೆರೆದಿದ್ದ ಬೆಂಬಲಿಗರ ಕಡೆಗೆ ಎಸೆಯುತ್ತಿರುವುದನ್ನು ಕಾಣಬಹುದು. ಅಲ್ಲಿ ನೆರೆದಿದ್ದ ಜನರೂ ಸಹ ಅಷ್ಟೇ ಉತ್ಸಾಹದಿಂದ, ಗಾಳಿಯಲ್ಲಿ ತೇಲಿಬರುತ್ತಿದ್ದ ಆ ಸೇಬುಗಳನ್ನು ಹಿಡಿಯಲು ಮುಗಿಬಿದ್ದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವು ಬೆಂಬಲಿಗರು ಇದನ್ನು “ಜನರ ಮೇಲಿನ ಪ್ರೀತಿ ಮತ್ತು ಸಹಜ ಒಡನಾಟ” ಎಂದು ಬಣ್ಣಿಸಿದರೆ, ವಿರೋಧಿಗಳು ಮತ್ತು ವಿಮರ್ಶಕರು “ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೀಗೆ ಎಂಜಲು ಮಾಡಿದ ಆಹಾರವನ್ನು ಎಸೆಯುವುದು ಎಷ್ಟು ಸರಿ?” ಎಂದು ಪ್ರಶ್ನಿಸುತ್ತಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು, “ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ತಾವೇ ದೇವರೆಂದು ಅಂದುಕೊಂಡಿದ್ದಾರೆಯೇ? ಸೇಬಿನ ಮಾಲೆಯನ್ನು ಕಚ್ಚಿ ಅದನ್ನೇನೋ ದೇವರ ಪ್ರಸಾದ ಎಂಬಂತೆ ಜನರಿಗೆ ಹಂಚುತ್ತಿದ್ದಾರೆ. ಇದು ಯಾವ ಸೀಮೆಯ ನ್ಯಾಯ?” ಎಂದು ಆಕ್ರೋಶ ಹೊರಹಾಕಿದ್ದಾರೆ.
ಪುನರಾವರ್ತನೆಯಾಗುತ್ತಿರುವ ವಿವಾದಾತ್ಮಕ ನಡವಳಿಕೆ
ಸಿಎಂ ಡಿ.ಕೆ. ಶಿವಕುಮಾರ್ ಅವರ ಸಾರ್ವಜನಿಕ ವರ್ತನೆಗಳು ವಿವಾದಕ್ಕೆ ಇಡಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ತಮ್ಮನ್ನು ಸೆಲ್ಫಿ ಕೇಳಲು ಬಂದ ಅಭಿಮಾನಿಯ ಕೈಗೆ ಹೊಡೆದಿದ್ದು, ಪಕ್ಷದ ಕಾರ್ಯಕರ್ತರನ್ನು ಸಾರ್ವಜನಿಕವಾಗಿ ತಳ್ಳಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದವು. ಈಗ ಮುಖ್ಯಮಂತ್ರಿಯಾದ ಮೇಲೂ ಕಚ್ಚಿದ ಹಣ್ಣನ್ನು ಜನರತ್ತ ಎಸೆದಿರುವುದು ಅವರ ಫ್ಯೂಡಲ್ ಮತ್ತು ಉಡಾಫೆಯ ವರ್ತನೆ ಮತ್ತೆ ಪುನರಾವರ್ತನೆಯಾಗುತ್ತಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಅಧಿಕಾರ ಮತ್ತು ಜನಪ್ರಿಯತೆ ಹೆಚ್ಚಾದಂತೆ ವಿನಯತೆ ಕೂಡ ಹೆಚ್ಚಾಗಬೇಕು. ಕರ್ನಾಟಕ ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ರವರ ಬೇಜವಾಬ್ದಾರಿ ವರ್ತನೆಗಳು ಅವರ ಇಡೀ ರಾಜಕೀಯ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗುತ್ತವೆ. ಇನ್ನಾದರೂ ಜನಪ್ರತಿನಿಧಿಗಳು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಬಾಡಿ ಲಾಂಗ್ವೇಜ್ ಮತ್ತು ನಡವಳಿಕೆಗಳ ಬಗ್ಗೆ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ.


