Homeಮುಖಪುಟಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

- Advertisement -
- Advertisement -

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10) ದೇಶದಾದ್ಯಂತ ಬೀದಿಗಿಳಿದಿದೆ. ಕಾಂಗ್ರೆಸ್‌ನ ಉನ್ನತ ನಾಯಕರ ನಿಯೋಗವೊಂದು ಚುನಾವಣಾ ಆಯೋಗವನ್ನು ಭೇಟಿಯಾಗಿ ತಮ್ಮ ಪ್ರತಿರೋಧವನ್ನು ದಾಖಲಿಸಿದೆ, ಜೊತೆಗೆ ಚುನಾವಣಾಧಿಕಾರಿಯ ಕ್ರಮ ಹೇಗೆ ಕಾನೂನುಬಾಹಿರ ಎಂಬುವುದನ್ನು ವಿವರಿಸಿ ಬಂದಿದೆ.

ಸ್ವತಃ ಮೀನಾಕ್ಷಿ ನಟರಾಜನ್ ಸೇರಿದಂತೆ ಕಾಂಗ್ರೆಸ್ ನಾಯಕರು, ಈ ಬೆಳವಣಿಗೆಯನ್ನು ಬಿಜೆಪಿಯ ‘ಸೀಟ್ ಚೋರಿ’ (ಸೀಟ್ ಕಳ್ಳತನ) ಎಂದು ಹೇಳಿದ್ದಾರೆ. ಬಿಜೆಪಿಯ ಅಣತಿಯಂತೆ ಚುನಾವಣಾ ಆಯೋಗ ನಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಮೀನಾಕ್ಷಿ ಅವರ ನಾಮಪತ್ರ ತಿರಸ್ಕಾರ ಕೇವಲ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿದ ರಾಜಕೀಯ ವಿಷಯವಾಗಿ ಉಳಿಯದೆ, ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಚುನಾವಣಾ ರಾಜಕೀಯ ಹಾಗೂ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ರಾಜಕೀಯ ವಲಯದವರು ಮಾತ್ರವಲ್ಲದೆ, ವಿವಿಧ ಕ್ಷೇತ್ರಗಳ ಪ್ರಮುಖರು ಕೂಡ ಮೀನಾಕ್ಷಿ ಅವರ ನಾಮಪತ್ರ ತಿರಸ್ಕೃತಗೊಂಡಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

“ಜಾರ್ಖಂಡ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾನಿ ಅವರಿಗೆ ತಮ್ಮ ನಾಮಪತ್ರದಲ್ಲಿದ್ದ ತಾಂತ್ರಿಕ ತಪ್ಪುಗಳನ್ನು ಸರಿಪಡಿಸಲು ಮರುದಿನ ಬೆಳಗ್ಗೆ 11 ಗಂಟೆಯವರೆಗೆ ಸಮಯ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್‌ಗೆ ಯಾಕೆ ಅವಕಾಶವಿಲ್ಲ? ಚುನಾವಣಾ ಆಯೋಗ ಎಲ್ಲರೊಂದಿಗೆ ಸಮಾನವಾಗಿ ನಡೆದುಕೊಂಡು ‘ತಟಸ್ಥ ಅಂಪೈರ್’ ಆಗಿ ಕಾರ್ಯನಿರ್ವಹಿಸುತ್ತದೆಯೇ? ಎಂದು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಪ್ರಶ್ನಿಸಿದ್ದಾರೆ.

“ಮೀನಾಕ್ಷಿ ನಟರಾಜನ್ ವಿರುದ್ಧ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ. ಅವರಿಗೆ ಬಹಿರಂಗಪಡಿಸಲು ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ. ಖಾಸಗಿ ದೂರಿನ ನ್ಯಾಯಾಲಯದ ಸೂಚನೆ ಮಾತ್ರ ಇದೆ, ಅದು ಬಹಿರಂಗಪಡಿಸುವುದು ಕಡ್ಡಾಯವಲ್ಲ. ಅವರ ನಾಮಪತ್ರ ತಿರಸ್ಕಾರ ಕಾನೂನು ಬಾಹಿರ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ರಾಜ್ಯಸಭೆ ಸದಸ್ಯರಾದ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಅಸಲಿಗೆ ಆಗಿದ್ದೇನು?

ಮಧ್ಯಪ್ರದೇಶದಿಂದ ಒಟ್ಟು 3 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18, 2026 ರಂದು ಚುನಾವಣೆ ನಿಗದಿಯಾಗಿದೆ. ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಕನಿಷ್ಠ 1 ಸ್ಥಾನವನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಿತ್ತು.

ವಿಧಾನಸಭೆಯಲ್ಲಿ ಬಿಜೆಪಿಗೆ 164 ಶಾಸಕರ ಬಲ ಇರುವುದರಿಂದ, ಮೊದಲ ಆದ್ಯತೆಯ ಮತಗಳ ಆಧಾರದ ಮೇಲೆ 2 ಸ್ಥಾನಗಳನ್ನು ಬಿಜೆಪಿ ಅತ್ಯಂತ ಸುಲಭವಾಗಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.

ಎರಡು ಸ್ಥಾನಗಳನ್ನು ಗೆದ್ದ ನಂತರವೂ ಬಿಜೆಪಿಗೆ ಸುಮಾರು 48 ಹೆಚ್ಚುವರಿ ಮತಗಳು ಉಳಿಯುತ್ತಿದ್ದವು. ಗೆಲುವಿಗೆ 58 ಮತಗಳ ಅಗತ್ಯವಿದ್ದು, ಇನ್ನುಳಿದ 10 ಮತಗಳಿಗಾಗಿ ಕಾಂಗ್ರೆಸ್‌ನಲ್ಲಿ ಮೂಡಬಹುದಾದ ಭಿನ್ನಮತ ಅಥವಾ ಅಡ್ಡ ಮತದಾನದ ಆಧಾರದ ಮೇಲೆ ಮೂರನೇ ಸ್ಥಾನವನ್ನೂ ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿತ್ತು.

ಈ ಬಗ್ಗೆ ಎಚ್ಚರಗೊಂಡ ಕಾಂಗ್ರೆಸ್, ತಮ್ಮ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಮುಂದಾಗಿತ್ತು. ಈ ನಡುವೆ ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರವೇ ತಿರಸ್ಕೃತಗೊಂಡಿರುವುದು ದೊಡ್ಡ ತಿರುವು ನೀಡಿದೆ.

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತಗೊಂಡಿದ್ದೇಕೆ?

ಮೀನಾಕ್ಷಿ ಅವರು ನಾಮಪತ್ರದ ಜೊತೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕಾನೂನು ಪ್ರಕರಣವೊಂದರ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅದನ್ನು ಪುರಸ್ಕರಿಸಿದ ಚುನಾವಣಾ ಆಯೋಗ ನಾಮಪತ್ರ ತಿರಸ್ಕರಿಸಿದೆ.

ಹೈದರಾಬಾದ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಬಾಕಿಯಿರುವ ಖಾಸಗಿ ದೂರು ಸಂಬಂಧಿಸಿದ ಮಾಹಿತಿಯನ್ನು ಮೀನಾಕ್ಷಿ ನಟರಾಜನ್ ಅವರು ತಮ್ಮ ನಾಮಪತ್ರದ ಅಫಿಡವಿಟ್‌ನಲ್ಲಿ ಘೋಷಿಸದೆ ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ.

ಮೂರನೇ ಸ್ಥಾನಕ್ಕೆ ಸ್ಪರ್ಧಿಸಿರುವ ಬಿಜೆಪಿಯ ಮಹೇಶ್ ಕೇವಟ್ ಮತ್ತು ಅವರ ಪರ ವಕೀಲರು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಅಭ್ಯರ್ಥಿಗಳು ತಮ್ಮ ಮೇಲಿರುವ ಎಲ್ಲಾ ಕಾನೂನು ಪ್ರಕರಣಗಳ ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂದು ಆಕ್ಷೇಪಣೆ ಎತ್ತಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ನಾಮಪತ್ರವನ್ನು ರದ್ದುಗೊಳಿಸಿದ್ದರು.

ಕಾಂಗ್ರೆಸ್ ಈ ಆರೋಪವನ್ನು ತಳ್ಳಿಹಾಕಿದೆ. ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಔಪಚಾರಿಕ ಎಫ್‌ಐಆರ್ ದಾಖಲಾಗಿಲ್ಲ, ಕೇವಲ ‘ಶೋ-ಕಾಸ್’ (ಕಾರಣ ಕೇಳಿ) ನೋಟಿಸ್ ಮಾತ್ರ ಜಾರಿಯಾಗಿದೆ. ಆದ್ದರಿಂದ ಇದನ್ನು ಪ್ರಕರಣ ಎಂದು ಪರಿಗಣಿಸಿ ನಾಮಪತ್ರ ತಿರಸ್ಕರಿಸಿರುವುದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ವಾದಿಸಿದೆ. 

ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಕುಳಿತ ಕಾಂಗ್ರೆಸ್

ಮೀನಾಕ್ಷಿ ಅವರ ನಾಮಪತ್ರ ತಿರಸ್ಕಾರಗೊಂಡಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಆಕ್ರೋಶಗೊಂಡ ಕಾಂಗ್ರೆಸ್ ಉನ್ನತ ನಾಯಕರು, ಮಂಗಳವಾರ (ಜೂ.9) ಸಂಜೆ ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕೇಂದ್ರ ಕಚೇರಿ ಮುಂದೆ ಧರಣಿ ಕುಳಿತರು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಕೊಡಲು ಧಾವಿಸಿದ್ದರು ಎನ್ನಲಾಗಿದೆ. ಅದಕ್ಕೆ ಆಯೋಗ ಅವಕಾಶ ನೀಡದ ಕಾರಣ, ಕಚೇರಿ ಮುಂಭಾಗದ ರಸ್ತೆಯಲ್ಲಿ ಧರಣಿ ಕುಳಿತರು ಎಂದು ವರದಿಯಾಗಿದೆ.

ಧರಣಿಯ ವೇಳೆ, ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ತಿರಸ್ಕರಿಸಲಾಗಿದೆ. ಇದು ಸಂಪೂರ್ಣವಾಗಿ “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಹೇಳಿದರು.

“ಜೂನ್ 9ರ ಸಂಜೆ 6:30ಕ್ಕೆ ನಾಮಪತ್ರ ರದ್ದಾಗಿರುವುದು ಗೊತ್ತಾಯಿತು. ಇದಾಗಿ ಕೇವಲ 30 ನಿಮಿಷಗಳಲ್ಲೇ ನಾವು ಆಯೋಗದ ಅಪಾಯಿಂಟ್‌ಮೆಂಟ್ ಕೋರಿ ಪತ್ರ ಬರೆದಿದ್ದರೂ, ಜವಾಬ್ದಾರಿಯುತ ಜನಪ್ರತಿನಿಧಿಗಳಾದ ನಮಗೆ ಆಯೋಗದ ಕಚೇರಿಯೊಳಗೆ ಪ್ರವೇಶ ನೀಡದೆ ತಡೆದಿರುವುದು ಸರಿಯಲ್ಲ” ಎಂದರು.

“ಕೇವಲ ಮನವಿ ಪತ್ರವನ್ನು ತಲುಪಿಸುವುದಷ್ಟೇ ನಮ್ಮ ಉದ್ದೇಶವಲ್ಲ; ಚುನಾವಣಾ ಆಯೋಗವು ನಮ್ಮ ವಾದವನ್ನು ಆಲಿಸಲು ಭೌತಿಕ ಸಭೆಗೆ ಅವಕಾಶ ನೀಡಬೇಕು” ಎಂದು ಪಟ್ಟು ಹಿಡಿದರು.

“ಈ ದೇಶದಲ್ಲಿ ಸ್ವಲ್ಪವಾದರೂ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದಿದ್ದರೆ, ಚುನಾವಣಾ ಆಯೋಗ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು. 

“ಒಂದು ವೇಳೆ ಆಯೋಗವು ನಮಗೆ ನ್ಯಾಯ ಒದಗಿಸದಿದ್ದರೆ, ಲಭ್ಯವಿರುವ ಎಲ್ಲಾ ಸಂವಿಧಾನಾತ್ಮಕ ಮತ್ತು ಕಾನೂನು ಮಾರ್ಗಗಳ ಮೂಲಕ ನಾವು ಈ ದಬ್ಬಾಳಿಕೆಯ ವಿರುದ್ಧ ಹೋರಾಟ ಮುಂದುವರಿಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ನಿಯೋಗದ ಭೇಟಿಗೆ ಅವಕಾಶ ಕೊಟ್ಟ ಚುನಾವಣಾ ಆಯೋಗ

ಕಾಂಗ್ರೆಸ್ ಉನ್ನತ ನಾಯಕರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಚುನಾವಣಾ ಆಯೋಗ ಬುಧವಾರ (ಜೂ.10) ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ನಿಯೋಗದ ಭೇಟಿಗೆ ಅವಕಾಶ ನೀಡಿತು.

ಚುನಾವಣಾ ಆಯೋಗ ಸಮಯ ಕೊಟ್ಟಂತೆ ಕಾಂಗ್ರೆಸ್ ಉನ್ನತ ನಾಯಕರ ನಿಯೋಗ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಚರ್ಚಿಸಿದೆ. ಕೆ.ಸಿ. ವೇಣುಗೋಪಾಲ್, ಅಭಿಷೇಕ್ ಮನು ಸಿಂಘ್ವಿ, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲ, ಭೂಪೇಶ್ ಬಘೇಲ್, ಮೀನಾಕ್ಷಿ ನಟರಾಜನ್ ಸೇರಿದಂತೆ 10 ಪ್ರಮುಖ ನಾಯಕರು ನಿಯೋಗದಲ್ಲಿದ್ದರು.

ಚುನಾವಣಾ ಆಯೋಗದ ಜೊತೆಗಿನ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅಭಿಷೇಕ್ ಮನು ಸಿಂಘ್ವಿ ಮತ್ತು ಕೆ.ಸಿ. ವೇಣುಗೋಪಾಲ್ ಅವರು, ಆಯೋಗದ ಮುಂದೆ ಇಟ್ಟ ಪ್ರಮುಖ ಅಂಶಗಳನ್ನು ಹಂಚಿಕೊಂಡರು.

“ಮೀನಾಕ್ಷಿ ನಟರಾಜನ್ ಅವರ ಮೇಲೆ ಕಾನೂನುಬದ್ಧವಾಗಿ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ ಮತ್ತು ಸಾಬೀತಾಗಿಲ್ಲ. ಕೇವಲ ಖಾಸಗಿ ದೂರೊಂದರ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ “ಏಕೆ ಪರಿಗಣಿಸಬಾರದು?” ಎಂಬ ನೋಟಿಸ್ ಮಾತ್ರ ಬಂದಿದೆ” ಎಂದು ವೇಣುಗೋಪಾಲ್ ತಿಳಿಸಿದರು.

“ಇದು ಎರಡು ಪ್ಲಸ್ ಎರಡನ್ನು ಸೇರಿಸಿ ಏಳು ಎಂದು ಲೆಕ್ಕ ಹಾಕಿದಂತಾಗಿದೆ” ಎಂದು ಸಿಂಘ್ವಿ ಲೇವಡಿ ಮಾಡಿದರು. ನ್ಯಾಯಾಲಯವು ಆರೋಪ ಹೊರಿಸುವ ಹಂತಕ್ಕೆ ಬಂದಾಗ ಮಾತ್ರ ಅಫಿಡವಿಟ್‌ನಲ್ಲಿ ಘೋಷಿಸಬೇಕಾಗುತ್ತದೆ, ಆದರೆ ಮಧ್ಯಪ್ರದೇಶದ ಚುನಾವಣಾಧಿಕಾರಿಗಳು ತರಾತುರಿಯಲ್ಲಿ ತಪ್ಪು ನಿರ್ಧಾರ ಕೈಗೊಂಡಿದ್ದಾರೆ” ಎಂದು ಹೇಳಿದರು.

ಬಿಜೆಪಿಯಿಂದ ಸೀಟ್ ಚೋರಿ?

ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕರಿಸಿರುವುದು ಚುನಾವಣಾ ಆಯೋಗ. ಇದು ಆಯೋಗ ಮತ್ತು ಅಭ್ಯರ್ಥಿ ನಡುವಿನ ವಿಚಾರ, ಇದರಲ್ಲಿ ನಮ್ಮ ಪಾತ್ರವೇನು ಇಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, ಬಿಜೆಪಿಯ ಅಣತಿಯಂತೆ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಇದುವರೆಗೆ ಚುನಾವಣಾ ಆಯೋಗ ಪರೋಕ್ಷವಾಗಿ ಬಿಜೆಪಿ ಪರ ಕೆಲಸ ಮಾಡುತ್ತಿತ್ತು. ಈಗ ನೇರವಾಗಿ ಬಿಜೆಪಿ ಪರ ಪಕ್ಷಪಾತ ಮಾಡುತ್ತಿದೆ. ಇದು ದೇಶದ ಸಂವಿಧಾನ, ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ನೇರ ಮತ್ತು ಗಂಭೀರ ದಾಳಿ. ಇದು ಕೇವಲ ಕಾಂಗ್ರೆಸ್ ವಿಚಾರವೆಂದು ನಾವು ಸುಮ್ಮನಾಗಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದೆ.

ಎರಡು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯ ಎಂದು ಗೊತ್ತಿದ್ದರೂ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಲು ಪ್ರಯತ್ನಿಸಿತು. ಆದರೆ, ಕಾಂಗ್ರೆಸ್ ಶಾಸಕರು ಬಿಜೆಪಿಯ ಆಮಿಷಕ್ಕೆ ಒಳಗಾಗದೆ ಒಗ್ಗಟ್ಟು ಪ್ರದರ್ಶಿಸಿದರು. ಹಾಗಾಗಿ, ಬಿಜೆಪಿ ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವೇ ತಿರಸ್ಕೃತಗೊಳ್ಳುವಂತೆ ಮಾಡಿತು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...

ಉತ್ತರಾಖಂಡ: ಮೇಲ್ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ 18 ವರ್ಷದ ದಲಿತ ಯುವಕನ ಹತ್ಯೆ, ಸ್ನೇಹಿತನ ಮೇಲೂ ಮಾರಣಾಂತಿಕ ಹಲ್ಲೆ 

ದೇಶದಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಉತ್ತರಾಖಂಡದ ನ್ಯೂ ತೆಹ್ರಿ ಜಿಲ್ಲೆಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ 18 ವರ್ಷದ ದಲಿತ ಹದಿಹರೆಯದ...

ಟಿಎಂಸಿ ಬಂಡಾಯ : 20 ಸಂಸದರು ಪಕ್ಷ ತೊರೆದರೂ ಅನರ್ಹತೆ ತಪ್ಪಿದ್ದಲ್ಲ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಮಾರು 20 ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಪ್ರತ್ಯೇಕ ಗುಂಪು ರಚಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳ ನಡುವೆ, ಕೇವಲ ಮೂರನೇ ಎರಡರಷ್ಟು ಸಂಸದರ ಬೆಂಬಲ ಹೊಂದಿರುವುದರಿಂದ ಮಾತ್ರ...

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....

ವೈಜಾಗ್ ಸ್ಟೀಲ್ ಅಪಘಾತಕ್ಕೆ 8 ಮಂದಿ ಬಲಿ: ಸಿಬ್ಬಂದಿ ಕೊರತೆಯ ಬಗ್ಗೆ ಕಾರ್ಮಿಕ ಸಂಘಗಳ ಆರೋಪ: ಸಾವಿನ ಅಂಚಿನಲ್ಲೂ ಕುಟುಂಬಕ್ಕಾಗಿ ಮಿಡಿದ ಕಾರ್ಮಿಕ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಪ್ರಸಿದ್ಧ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸೋಮವಾರ (ಜೂನ್ 8, 2026) ಸಂಜೆ ಭೀಕರ ಕೈಗಾರಿಕಾ ದುರಂತವೊಂದು ಸಂಭವಿಸಿದೆ. ಸ್ಥಾವರದ ಸ್ಟೀಲ್ ಮೆಲ್ಟ್ ಶಾಪ್-1 (SMS-1)...

ಅಂದು ಪಿಣರಾಯಿ ಮನೆ ಮೇಲೆ ದಾಳಿ; ಈಗ ವೀಣಾ ವಿಜಯನ್‌ಗೆ ಸಮನ್ಸ್‌: ಹಿರಿಯ ಕಮ್ಯುನಿಸ್ಟ್‌ ನಾಯಕನ ಕುಟುಂಬದ ಮೇಲೆ ಇಡಿ ಕಣ್ಣು

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಕೊನೆಗೆ ಅಲ್ಲಿ ಏನೂ ಸಿಗದೆ ಬರಿಗೈನಲ್ಲಿ ಅಧಿಕಾರಿಗಳು...

ಮೋದಿ ಸರ್ಕಾರಕ್ಕೆ 12 ವರ್ಷ : 12 ರಿಂದ 4ಕ್ಕೆ ಇಳಿದ ಉಜ್ವಲ ಯೋಜನೆ ಸಿಲಿಂಡರ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ 12 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದೆ ಅಥವಾ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ 2026ರ ಜೂನ್ 9ಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ....

ಬಿರ್ಸಾ ಮುಂಡಾ 150ನೇ ಜಯಂತಿ ಹೆಸರಿನಲ್ಲಿ ಆದಿವಾಸಿ ಹಕ್ಕುಗಳ ಮೇಲೆ ಸಂಘ ಪರಿವಾರದ ಕಣ್ಣು?

ಮೇ 24 ರಂದು ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಭಾರತದಾದ್ಯಂತದ ಲಕ್ಷಾಂತರ ಪರಿಶಿಷ್ಟ ಪಂಗಡದ (ST) ಸಮುದಾಯಗಳ ಜನರು ಒಟ್ಟಿಗೆ ಸೇರಿದ್ದರು. ‘ಜಂಜಾತಿ ಸುರಕ್ಷಾ ಮಂಚ್’ (ಬುಡಕಟ್ಟು ರಕ್ಷಣಾ ವೇದಿಕೆ) ಆಯೋಜಿಸಿದ್ದ ಈ...