ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ, ಜನಶಕ್ತಿ ಸಂಘಟನೆ, ರೈತ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಜಮಾತೆ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಾಥಾವನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಿದರು.
ಜೂನ್ 13ರಂದು ಶಿವಮೊಗ್ಗದಿಂದ ಆಯೋಜನೆಗೊಂಡಿದ್ದ ಈ ಜಾಥಾವು ಈಗಾಗಲೇ ಐದು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ. ಚಿತ್ರದುರ್ಗದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಜಾಥಾದ ನೇತೃತ್ವ ವಹಿಸಿದ್ದ ಸುರೇಶ್ ನಾಯ್ಕ್ ಅವರು, “ಮುಂಬರುವ ಜೂನ್ 20ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಆ ಮೂಲಕ ಚುನಾವಣಾ ಆಯೋಗವು ಪ್ರಜಾಪ್ರಭುತ್ವ ವಿರೋಧಿಯಾದ ಎಸ್ಐಆರ್ ವ್ಯವಸ್ಥೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಕಡಕ್ ಎಚ್ಚರಿಕೆ ನೀಡಲಾಗುವುದು” ಎಂದು ಪ್ರಕಟಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖ್ಯಾತ ವಕೀಲ ಅನೀಷ್ ಪಾಷಾ, ಕೇಂದ್ರದ ಬಿಜೆಪಿ ಸರ್ಕಾರವು ತನ್ನ ಹಿಂಬಾಗಿಲ ರಾಜಕಾರಣಕ್ಕಾಗಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಎಸ್ಐಆರ್ ಜಾರಿಗೊಳಿಸಲು ಮುಂದಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಈ ವ್ಯವಸ್ಥೆಯಿಂದಾಗಿ ದೇಶದ ನಿಜವಾದ ಮತದಾರರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ದೇಶದ ಮೂಲ ನಿವಾಸಿಗಳ ಪೌರತ್ವವನ್ನೇ ಪ್ರಶ್ನಿಸುತ್ತಿರುವ ಚುನಾವಣಾ ಆಯೋಗದ ನಡೆ ಅತ್ಯಂತ ಖಂಡನೀಯವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹೊರಕೇರಪ್ಪ ಅವರು, ಎಸ್ಐಆರ್ ಹೆಸರಿನಲ್ಲಿ ಜನರ ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಸಂಚು ನಡೆಯುತ್ತಿದೆ ಎಂದರು. ಈಗಾಗಲೇ ಐದು ರಾಜ್ಯಗಳಲ್ಲಿ ಇದರ ಪ್ರಯೋಗದಿಂದಾಗಿ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ನಿಗೂಢವಾಗಿ ಮಾಯವಾಗಿವೆ. ಎಲ್ಲಾ ಸೂಕ್ತ ದಾಖಲೆಗಳಿದ್ದರೂ ಜನಸಾಮಾನ್ಯರನ್ನು ನುಸುಳುಕೋರರಂತೆ ಬಿಂಬಿಸಿ ಹೆಸರು ಕೈಬಿಟ್ಟಿರುವುದರ ಹಿಂದೆ ರಾಜಕೀಯ ಪಿತೂರಿಯಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಪವಿತ್ರವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ ಯಾದವ್ ರೆಡ್ಡಿ, ಭಾರತೀಯ ಚುನಾವಣಾ ಆಯೋಗವು ಸದ್ಯ ಒಂದು ರಾಜಕೀಯ ಪಕ್ಷದ ಏಜೆಂಟ್ನಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು. ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯೇ ಅಸಂವಿಧಾನಿಕವಾಗಿದ್ದು, ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ಒಂದು ಪಕ್ಷದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಸೃಷ್ಟಿಸಿದ ಗೊಂದಲಗಳು ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಬಿಹಾರದ ತೀರ್ಪು ಜನಸಾಮಾನ್ಯರ ವಿರೋಧಿಯಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ಈ ಜನವಿರೋಧಿ ನೀತಿಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಹಿಮ್ಮೆಟ್ಟಿಸಬೇಕಿದೆ ಎಂದು ಕರೆ ನೀಡಿದರು.
ಮಹಿಳಾ ಮುನ್ನಡೆ ಸಂಘಟನೆಯ ನಾಯಕಿ ಪವಿತ್ರಾ ಅವರು ಜಾಥಾಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿ, ಎಸ್ಐಆರ್ ಜಾರಿ ನಿರ್ಧಾರದಿಂದ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು ಹಾಗೂ ಜೂನ್ 20ರ ಬೆಂಗಳೂರು ಸಮಾವೇಶದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಹಕ್ಕುಗಳನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದರು. ಮತ್ತೊಬ್ಬ ಮುಖಂಡ ಮುನ್ನ ಕಡೂರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಾಥಾಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಬೆಂಗಳೂರಿನ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಜನಜಾಗೃತಿ ಜಾಥಾದಲ್ಲಿ ಮುಖಂಡರುಗಳಾದ ಶಿವಕುಮಾರ್, ಪುರುಷೋತ್ತಮ, ಸಾಲುಮರದ ರಾಜಕುಮಾರ್, ಹೊರಕೇರಪ್ಪ, ಮಾವಳ್ಳಿ ಗೋವಿಂದಪ್ಪ, ಸೈಯದ್ ಅಲಿ. ಎಸ್.ಕೆ, ಮುಸ್ತಾಕ್, ಮೊಹಮ್ಮದ್ ರಫಿಕ್, ಬೆಂಕಿ ಬಸವರಾಜು, ಬೈಲಮ್ಮ, ಪ್ರಭಾವತಿ ಸೇರಿದಂತೆ ಹಲವು ಪ್ರಮುಖರು ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


