ವಿದೇಶಿ ನೇರ ಹೂಡಿಕೆ (ಎಫ್ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
ಮೇ 29ರಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು, ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಯನ್ನು ಮುಂದುವರಿಸುವುದು “ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ” ಎಂದು ಹೇಳಿದ್ದಾರೆ. ಅಲ್ಲದೆ, ಮುಖ್ಯ ಆರೋಪಕ್ಕೆ ಸಂಬಂಧಿಸಿದ ಎಫ್ಐಆರ್ ರದ್ದಾದ ನಂತರ, ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ಕೂಡ ರದ್ದಾಗಲು ಅರ್ಹವಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) 2020ರಲ್ಲಿ ದಾಖಲಿಸಿದ ಎಫ್ಐಆರ್ನಲ್ಲಿ, ನ್ಯೂಸ್ಕ್ಲಿಕ್ನ ಮೂಲ ಸಂಸ್ಥೆಯಾದ ಪಿಪಿಕೆ ನ್ಯೂಸ್ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್, 2018-19ರ ಹಣಕಾಸು ವರ್ಷದಲ್ಲಿ ಅಮೆರಿಕದ ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ ಎಲ್ಎಲ್ಸಿಯಿಂದ 9.59 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಯನ್ನು ನಿಯಮ ಬಾಹಿರವಾಗಿ ಪಡೆದುಕೊಂಡಿದೆ ಎಂದು ಆರೋಪಿಸಲಾಗಿತ್ತು. ಈ ವಿದೇಶಿ ಹೂಡಿಕೆ ಕಾನೂನಿನ ಉಲ್ಲಂಘನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಅದರಲ್ಲಿ ದೂರಲಾಗಿತ್ತು.
ಡಿಜಿಟಲ್ ಸುದ್ದಿ ವೆಬ್ಸೈಟ್ಗಳಲ್ಲಿ ಇರುವ ಶೇಕಡ 26ರಷ್ಟು ವಿದೇಶಿ ನೇರ ಹೂಡಿಕೆಯ ಮಿತಿಯನ್ನು ತಪ್ಪಿಸುವ ಸಲುವಾಗಿ, ಕಂಪನಿಯ ಷೇರುಗಳ ಮೌಲ್ಯವನ್ನು ಅತಿಯಾಗಿ ಹೆಚ್ಚಿಸಿ ಈ ಹೂಡಿಕೆಯನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಈ ಹೂಡಿಕೆಯ ಶೇಕಡ 45ಕ್ಕಿಂತ ಹೆಚ್ಚಿನ ಹಣವನ್ನು ದುರುದ್ದೇಶಗಳಿಗಾಗಿ ಸಂಬಳ, ಸಮಾಲೋಚನೆ ಶುಲ್ಕ, ಬಾಡಿಗೆ ಇತ್ಯಾದಿಗಳ ರೂಪದಲ್ಲಿ ಬೇರೆಡೆಗೆ ವರ್ಗಾಯಿಸಲಾಗಿದೆ/ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅದರಲ್ಲಿ ಹೇಳಲಾಗಿತ್ತು.
ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು (ಇಡಿ) ನ್ಯೂಸ್ಕ್ಲಿಕ್, ಪ್ರಬೀರ್ ಪುರಕಾಯಸ್ಥ ಮತ್ತು ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣವನ್ನು ದಾಖಲಿಸಿತ್ತು.
ಪಿಪಿಕೆ ನ್ಯೂಸ್ಕ್ಲಿಕ್ ಸ್ಟುಡಿಯೋ ಸಂಸ್ಥೆಯು ಈ ಎಫ್ಐಆರ್ ಅಸ್ಪಷ್ಟ ಆರೋಪಗಳಿಂದ ಕೂಡಿದೆ ಎಂದು ಹೇಳಿ, ಅದನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು.
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಈ ಹೂಡಿಕೆಯು ಒಂದು ಆರ್ಥಿಕ ನಿರ್ಧಾರವಾಗಿದ್ದು, ಇದು “ಯಾವುದೇ ಕ್ರಿಮಿನಲ್ ಅಪರಾಧವನ್ನು ಸೂಚಿಸುವುದಿಲ್ಲ” ಎಂದು ತಿಳಿಸಿದೆ. ಅಲ್ಲದೆ, ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯ ಪತ್ರಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿದ ಪ್ರತಿಕ್ರಿಯೆಯ ಪ್ರಕಾರ, ಸಂಬಂಧಿತ ಅವಧಿಯಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ವಿದೇಶಿ ನೇರ ಹೂಡಿಕೆ ಸ್ವೀಕರಿಸಲು ಯಾವುದೇ ಮಿತಿ ಅಥವಾ ನಿರ್ಬಂಧ ಇರಲಿಲ್ಲ ಎಂದು ಕೋರ್ಟ್ ಹೇಳಿದೆ.
ಈ ಹೂಡಿಕೆಯು ಸ್ವೀಕಾರಾರ್ಹ ನಿಯಮಗಳಂತೆಯೇ ನಡೆದಿದೆ ಮತ್ತು ಎಲ್ಲಾ ಆರೋಪಗಳನ್ನು ಒಪ್ಪಿಕೊಂಡರೂ ಸಹ ವಂಚನೆ ಅಥವಾ ಅಪರಾಧ ನಂಬಿಕೆ ದ್ರೋಹದ ಅಪರಾಧಗಳು ಸಾಬೀತಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಂಚನೆ ಅಪರಾಧಕ್ಕೆ “ವಂಚನೆಗೊಳಗಾದ” ವ್ಯಕ್ತಿ ಇರಬೇಕು, ಈ ಪ್ರಕರಣದಲ್ಲಿ ಅದು ಮೆಸರ್ಸ್ ವರ್ಲ್ಡ್ವೈಡ್ ಮೀಡಿಯಾ ಹೋಲ್ಡಿಂಗ್ಸ್ ಎಲ್ಎಲ್ಸಿ ಆಗಿರಬೇಕಿತ್ತು; ಆದರೆ ಅಂತಹ ಯಾವುದೇ ದೂರು ದಾಖಲಾಗಿಲ್ಲ ಮತ್ತು ಬದಲಿಗೆ “ಕೇವಲ ಒಬ್ಬ ಮಾಹಿತಿ ನೀಡಿದವರಿಂದ” ಈ ದೂರು ಬಂದಿದೆ ಎಂದು ಕೋರ್ಟ್ ತಿಳಿಸಿದೆ.
ಡಿಜಿಟಲ್ ಮುದ್ರಣ ಮಾಧ್ಯಮ ವ್ಯವಹಾರದಲ್ಲಿ ತೊಡಗಿರುವ ಕಂಪನಿಯು ಸಂಬಳ, ಸಮಾಲೋಚನೆ ಶುಲ್ಕ, ಬಾಡಿಗೆ ಇತ್ಯಾದಿಗಳಿಗೆ ವೆಚ್ಚ ಮಾಡುವುದು ಸಹಜವಾಗಿದ್ದು, ಆದ್ದರಿಂದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ/ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬ ಆರೋಪವು ಸಮರ್ಥನೀಯವಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ಕ್ರಿಮಿನಲ್ ಪಿತೂರಿಯ ಅಪರಾಧದ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣವನ್ನು ಮುಂದುವರಿಸಲು ಜಾರಿ ನಿರ್ದೇಶನಾಲಯ ನಡೆಸಿದ ಪ್ರಯತ್ನವನ್ನು ಕೋರ್ಟ್ ತಿರಸ್ಕರಿಸಿದೆ. ತನಿಖಾ ಸಂಸ್ಥೆಯು ಈ ಅಪರಾಧಕ್ಕಾಗಿ ನ್ಯೂಸ್ಕ್ಲಿಕ್ ಮತ್ತು ಇತರರು ಅನುಸರಿಸಿದ “ಕಾನೂನುಬಾಹಿರ ಉದ್ದೇಶ” ಅಥವಾ “ಮಾರ್ಗಗಳನ್ನು” ತೋರಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ವಿಶೇಷವಾಗಿ, ಜಾರಿ ನಿರ್ದೇಶನಾಲಯವು ಸುಮಾರು ಒಂದೂವರೆ ವರ್ಷಗಳ ಕಾಲ ವ್ಯಾಪಕ ತನಿಖೆಯನ್ನು ನಡೆಸಿದೆ ಮತ್ತು ಅರ್ಜಿದಾರರನ್ನು ಹಾಗೂ ಅವರ ಉದ್ಯೋಗಿಗಳನ್ನು ಹಲವು ಬಾರಿ ಕರೆಸಿ ವಿಚಾರಣೆ ನಡೆಸಿದೆ. ಆದರೆ ಇಂದಿನವರೆಗೆ ಯಾವುದೇ ಅಪರಾಧ ಸಾಬೀತುಪಡಿಸುವ ಪುರಾವೆಗಳು ಪತ್ತೆಯಾಗಿಲ್ಲ ಅಥವಾ ದಾಖಲೆಯಲ್ಲಿ ಸೇರಿಸಲ್ಪಟ್ಟಿಲ್ಲ. ಕ್ರಿಮಿನಲ್ ಪಿತೂರಿ ನಡೆದಿದೆ ಎಂಬ ಕೇವಲ ಆಧಾರರಹಿತ ಪ್ರತಿಪಾದನೆಗಳನ್ನು ಹೊರತುಪಡಿಸಿ, ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ನಡೆದಿರುವುದನ್ನು ದೂರದಿಂದಾದರೂ ಸೂಚಿಸುವಂತಹ ಯಾವುದೇ ಅಪರಾಧದ ಆರೋಪದ ಸುಳಿವು ಕೂಡ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಎಫ್ಐಆರ್ ಸಂಖ್ಯೆ 0116/2020 ಮತ್ತು ಇಸಿಐಆರ್ ಸಂಖ್ಯೆ ECIR/14/HIU/2020 ಅನ್ನು ಈ ಮೂಲಕ ರದ್ದುಗೊಳಿಸಲಾಗಿದೆ” ಎಂದು ನ್ಯಾಯಾಲಯ ಮುಕ್ತಾಯಗೊಳಿಸಿದೆ.
ಒಮ್ಮೆ ಇಸಿಐಆರ್ ಸ್ವತಃ ರದ್ದಾದ ಮೇಲೆ, ಇಸಿಐಆರ್ನ ಪ್ರತಿಯನ್ನು ಒದಗಿಸುವಂತೆ ಕೋರಿ ಸಲ್ಲಿಸಲಾದ ಮನವಿಯು ನಿರರ್ಥಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.


