ತನ್ನ ಸ್ನೇಹಿತನೊಡನೆ ಊರಿನ ಸಾರ್ವಜನಿಕ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸಿದ್ದಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕವಾಗಿ ಥಳಿಸಿಲಾಗಿದೆ. ದಲಿತರ ವಿರುದ್ಧ ಜಾತಿನಿಂದನೆ ಮಾಡಿ ಬಹಿರಂಗ ಅಸ್ಪೃಶ್ಯತೆ ಆಚರಿಸಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ಅಣ್ಣೂರು-ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಊರಿನ ಪರಿಶಿಷ್ಟ ಜಾತಿಗೆ ಸೇರಿದ 29 ವರ್ಷದ ಮಹೇಶ್ ಎಂಬ ಯುವಕನು ತನ್ನ ಸ್ನೇಹತ ಸುರೇಶ್ ಎಂಬುವವರ ಜೊತೆ ಊರಿನ ಸಾರ್ವಜನಿಕ ರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದರು. ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಊರಿನ ಕೆಲವರು ಈ ರಸ್ತೆಯಲ್ಲಿ ದಲಿತರು ಬರಬೇಡಿ ಎಂದು ತಾಕೀತು ಮಾಡಿದ್ದಾರೆ. ಈ ರಸ್ತೆಯಲ್ಲಿ ಏಕೆ ಬರಬಾರದು? ಬೇರೆ ಯಾವ ರಸ್ತೆಯಲ್ಲಿ ಹೋಗಬೇಕು ಎಂದು ಮಹೇಶ್ ಪ್ರಶ್ನಿಸಿದ್ದಕ್ಕೆ ಗುಂಪೊಂದು ಜಾತಿನಿಂದನೆ ಮಾಡಿ, ತೀವ್ರವಾಗಿ ಥಳಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 11 ಜನರ ವಿರುದ್ದ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
5 ವರ್ಷದ ಹಿಂದೆ ದೇವಾಲಯ ಪ್ರವೇಶಕ್ಕೆ ತಡೆ
5 ವರ್ಷದ ಹಿಂದೆ ಊರಿನಲ್ಲಿ ಮಹಾದೇವ ದೇವಾಲಯ ನಿರ್ಮಾಣ ಕೆಲಸ ಆರಂಭವಾಗಿತ್ತು. ಸುಮಾರು 300 ಕುಟುಂಬಗಳು ಇರುವ ಊರಿನಲ್ಲಿ 40 ದಲಿತ ಕುಟುಂಬಗಳಿದ್ದು ದಲಿತರೂ ಸೇರಿದಂತೆ ಎಲ್ಲರೂ ದೇವಾಲಯ ನಿರ್ಮಾಣಕ್ಕೆ ಚಂದಾ ನೀಡಿದ್ದಾರೆ. ಆದರೆ ದೇವಾಲಯ ನಿರ್ಮಾಣವಾದ ನಂತರ ಲಿಂಗಾಯತ ಜಾತಿಯ ಮುಖಂಡರು ದಲಿತರು ದೇವಾಲಯ ಪ್ರವೇಶ ಮಾಡಬಾರದೆಂದು ತಾಕೀತು ಮಾಡಿದ್ದರು. ಆಗ ಕೆಲ ದಲಿತ ಯುವಕರು ಅದನ್ನು ಪ್ರಶ್ನಿಸಿದ್ದಾಗ ಜಗಳ ನಡೆದು ವಿವಾದವಾಗಿತ್ತು. ಅದು ಈಗ ದೇವಾಲಯವಿರುವ ರಸ್ತೆಯನ್ನು ಬಳಸಬೇಡಿ ಎನ್ನುವಷ್ಟರ ಮಟ್ಟಿಗೆ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ ಎಂದು ಸಂತ್ರಸ್ತ ಮಹೇಶ್ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ನೋವು ತೋಡಿಕೊಂಡಿದ್ದಾರೆ.
ಇಂದಿಗೂ ಹಲವಾರು ಜನ ದಲಿತರು ಆ ರಸ್ತೆಯಲ್ಲಿ ಓಡಾಡುವುದಿಲ್ಲ. ಆದರೆ ನಾನು ಆ ರಸ್ತೆ ಬಳಸಬಾರದೆಂಬುದನ್ನು ಒಪ್ಪದೆ ರಸ್ತೆಯಲ್ಲಿ ಬಂದಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆ ನಡೆದ ನಂತರ ಗ್ರಾಮಕ್ಕೆ ಎಸ್ಪಿ ಚೇತನ್, ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸಂವಿಧಾನದ 17ನೇ ವಿಧಿಯು ಎಲ್ಲಾ ರೀತಿಯ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸುತ್ತದೆ. ದೇವಾಲಯ ಪ್ರವೇಶಕ್ಕೆ ನಿರಾಕರಣೆ, ಬಾವಿ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕೆ ತಡೆ, ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ಆಚರಿಸುವುದರಲ್ಲಿ ತಾರತಮ್ಯವನ್ನು ನಿಷೇಧಿಸುತ್ತದೆ. ಈ ಆಚರಣೆಗೆಳು ಮುಂದುವರೆದರೆ ಅದನ್ನು ಅಸ್ಪೃಶ್ಯತೆ ಎಂದು ಪರಿಗಣಿಸುವುದು ಹಾಗೂ ಅದನ್ನು ಆಚರಿಸುವ ವ್ಯಕ್ತಿ ಆಪಾದಿತ ಎಂದು ಪರಿಗಣಿಸುವುದು ಹಾಗೂ ಅದನ್ನು ಅಲ್ಲಗಳೆಯುವ ಜವಾಬ್ದಾರಿಯನ್ನು ಆಪಾದಿತನ ಮೇಲೆ ಹೊರಿಸುವುದು ಕಾಯಿದೆಯ ಮುಖ್ಯ ಅಂಶವಾಗಿತ್ತು. ಆದರೆ ಶಿಕ್ಷೆಯ ಪ್ರಮಾಣ ಮುಂತಾದ ಹಲವು ನ್ಯೂನತೆಗಳಿಂದಾಗಿ ಕಾನೂನಿನಲ್ಲಿ ಬದಲಾವಣೆ ತರಬೇಕಾಯಿತು. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು (ದೌರ್ಜನ್ಯಗಳ ತಡೆ) ಕಾಯಿದೆ 1989 ಮತ್ತು 1995ರಲ್ಲಿ ಅದರಡಿ ರೂಪಿಸಲಾದ ನಿಯಮಗಳು ಜಾರಿಯಲ್ಲಿವೆ.
ಇದನ್ನೂ ಓದಿ; ಬಾವುಟಕ್ಕೆ ಬೆಂಕಿ ಇಟ್ಟವರನ್ನು ಶಿಕ್ಷಿಸಿ, ನಮ್ಮ ಧ್ವಜ ಹಿಡಿದ ಭುಜಗಳನ್ನು ರಕ್ಷಿಸಿ: ಡಾ.ಹಂಸಲೇಖ