Homeಮುಖಪುಟದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

- Advertisement -
- Advertisement -

ಎಚ್.ಎಸ್ ದೊರೆಸ್ವಾಮಿಯವರಿಗೆ ಈಗ ವಯಸ್ಸು 97. ಆದರೆ ಅವರಿಗೆ ಅದೊಂದು ಮಿತಿಯೂ ಅಲ್ಲ ಅಡೆತಡೆಯೂ ಅಲ್ಲ! ಈಗಲೂ ಎಂತಹ ಸಾಹಸಕ್ಕೂ ಜೈ ಎನ್ನುವ ಜಾಯಮಾನ, ಯಾವ ಅಂಶವನ್ನೂ ಮರೆಯದ ಚುರುಕು ಬುದ್ಧಿ ಅವರದ್ದು. ಅವರಿಗಿರುವ ರಾಜಕೀಯ ಸಹೃದಯತೆ, ಪ್ರಾಮಾಣಿಕತೆ, ಚುರುಕುತನ, ಹಾಸ್ಯ ಮನೋವತ್ತಿ ಒಂದಿಷ್ಟೂ ಬೇಸರಪಟ್ಟುಕೊಳ್ಳದ, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಅವರ ಮನೋಭಾವವನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ಈಗಲೂ ಓದಲು ಕನ್ನಡಕ ಬಳಸದೆ, ಕಾಫಿ ಜೊತೆ ಸಕ್ಕರೆ ಬೇಕೇಬೇಕೆನ್ನುವ, ರುಚಿಕರವಾದ ಆಹಾರವನ್ನು ಇಷ್ಟ ಪಡುವ, ಪುಟ್ಟ ಮಕ್ಕಳಂತೆ ಸ್ವೀಟ್ಸ್ ಮತ್ತು ಐಸ್‍ಕ್ರೀಮ್ ಇಷ್ಟ ಪಡುವ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದಂತ ಸುತ್ತಾಡುವ ಅವರ ಜೀವನೋತ್ಸಾಹ ಬೆರಗು ಮೂಡಿಸುವಂತಹವು.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ದೊರೆಸ್ವಾಮಿಯವರನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರೆ ಅವರಿಗೆ ದಣಿವಾಗಬಹುದು ಎಂಬ ಕಾರಣಕ್ಕೇ ಮೊದಲು ನಾವು ಆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೆವು. ಆದರೆ ಅದಕ್ಕೆ ಹಲವು ತಾಂತ್ರಿಕ ಕಾರಣಗಳು ಅಡ್ಡಿಯಾದಾಗ ಚಿಕ್ಕಮಗಳೂರಿನಲ್ಲಿ ಅದನ್ನು ಏರ್ಪಸುವುದು ಅನಿವಾರ್ಯವಾಯಿತು. ಶಿವಸುಂದರ್ ಅವರು ಹಿಂಜರಿಕೆಯಿಂದಲೇ .

“ಸಾರ್ ಇದಕ್ಕೆ ಚಿಕ್ಕಮಗಳೂರಿಗೇ ಹೋಗಬೇಕಾಗುತ್ತದೆ” ಎಂದು ದೊರೆಸ್ವಾಮಿಯವರ ಮುಂದೆ ಪ್ರಸ್ತಾಪಿಸಿದಾಗ ಅವರು “ನಡೀರಿ ಹೋಗೋಣ” ಎಂದು ಎಲ್ಲರಿಗಿಂತ ಮೊದಲು ಸಜ್ಜಾದರು!

ದೊರೆಸ್ವಾಮಿಯವರನ್ನು ಆರಾಮಾಗಿ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲೆಂದು ನನ್ನ ಪುಟ್ಟ ಸ್ಯಾಂಟ್ರೊ ಕಾರ್ ಬದಲಾಗಿ ನನ್ನ ತಂಗಿಯ ಇನ್ನೋವಾ ಕಾರ್ ಪಡೆದೆ. ಅವತ್ತು ಭಾನುವಾರ ಬೆಳಗ್ಗೆ ದೊರೆಸ್ಟಾಮಿಯವರ ಸಂಬಂಧಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತಾದ್ದರಿಂದ ಅವರು ಬೆಳಗ್ಗೆಯೇ ಮನೆಯಿಂದ ತಮ್ಮ ಬ್ಯಾಗ್ ಹಿಡಿದು ಹೊರಟಿದ್ದರು. ಮಧ್ಯಾಹ್ನ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಆವರಣದಿಂದ ನಾನು ಮತ್ತು ಶಿವಸುಂದರ್ ದೊರೆಸ್ವಾಮಿಯವರನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಟೆವು.

ನೆಲಮಂಗಲ ದಾಟುವ ಹೊತ್ತಿಗೆ ಊಟದ ಸಮಯವಾಗಿತ್ತು. ದುರದೃಷ್ಟವಶಾತ್ ಆ ಹೆದ್ದಾರಿಯಲ್ಲಿ ಅಚ್ಚುಕಟ್ಟಾದ ಸಸ್ಕಾಹಾರಿ ಹೋಟೆಲ್‍ಗಳಿಗಿಂತ ಹೆಚ್ಚಾಗಿ ಡಾಬಾಗಳೇ ಇವೆ. ಒಂದು ಡಾಬಾದ ಮುಂದೆ ಕಾರ್ ನಿಲ್ಲಿಸಿ ದೊರೆಸ್ವಾಮಿಯವರಿಗೆ ಅನ್ನ-ಸಾರು, ಮೊಸರನ್ನ ಇದೆಯೇ ಎಂದು ವಿಚಾರಿಸಿದೆವು. ಆಗ ದೊರೆಸ್ವಾಮಿಯವರು “ನನಗೆ ಪರೋಟ, ಮೊಸರನ್ನ ಮತ್ತು ಪುಟ್ಟ ಐಸ್‍ಕ್ರೀಮ್ ಬೇಕು” ಎಂದರು. ಡಾಬಾಗಳಲ್ಲಿ ‘ಗುಂಡು ಮತ್ತು ತುಂಡು’ ಸಾಮಾನ್ಯವಾದ್ದರಿಂದ ಅವರು ಕಾರಿನಲ್ಲೇ ಊಟ ಮಾಡುವುದಾಗಿ ಹೇಳಿದರು. ಒಳಗೆ ಹೋದ ನಾನು ವೈಟರ್ ಒಬ್ಬನಿಗೆ “ಹೊರಗೆ ಕಾರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ಟಾಮಿಯವರಿದ್ದಾರೆ. ಅವರಿಗೆ ಬೇಕಿದ್ದನ್ನು ಕೊಡು” ಎಂದೆ. ಹೊರಕ್ಕೆ ದೌಡಾಯಿಸಿದ ಆತ ದೊರೆಸ್ವಾಮಿಯವರ ಪಾದಗಳಿಗೆ ನಮಸ್ಕರಿಸಿ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೆ. ಇವತ್ತು ನಿಮ್ಮ ದರ್ಶನದ ಜೊತೆಗೆ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಏನು ಬೇಕು ಹೇಳಿ ಸಾರ್” ಎಂದು ಅವರ ನೆರವಿಗೆ ನಿಂತ.

ನಾವು ಊಟ ಮುಗಿಸಿ ಹೊರಗೆಬಂದಾಗ ಬಹಳಷ್ಟು ಜನ ದೊರೆಸ್ವಾಮಿಯವರನ್ನು ಮುತ್ತಿಕೊಂಡಿದ್ದರು. ಎಲ್ಲರೂ ಅಭಿಮಾನದಿಂದ, ಗೌರವದಿಂದ ದೊರೆಸ್ವಾಮಿಯವರನ್ನು ಮಾತನಾಡಿಸುತ್ತಿದ್ದರು. “ಬೀಡಾ ಬೇಕಾ ಸಾರ್?” ಎಂದು ಕೇಳಿದೆ. “ಸ್ವೀಟ್ ಬೀಡಾ ಬೇಕು ಆದರೆ ಅದರಲ್ಲಿ ತಂಬಾಕು ಇರಬಾರದು” ಎಂದರು. ಬೀಡಾ ಅಂಗಡಿ ಮುಂದೆ ಇಬ್ಬರು ಯುವಕರು ನಿಂತಿದ್ದರು. “ದೊರೆಸ್ವಾಮಿಯವರ ಬಗ್ಗೆ ಕೇಳಿದ್ದೀರಾ, ಅವರು ಕಾರ್‍ನಲ್ಲಿ ಕೂತಿದ್ದಾರೆ. ಅಂತಹವರನ್ನು ಭೇಟಿ ಆಗುವ ಅವಕಾಶ ನಿಮಗೆ ಮುಂದೆ ಸಿಗಲಾರದು, ಹೋಗಿ ಮಾತನಾಡಿಸಿ” ಎಂದೆ. ಇಬ್ಬರೂ ಮಾತನಾಡಿಸಿ ಬಂದಾಗ “ಇವರೇ ಅಲ್ವಾ ಮೇಡಂ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ಮಾಡುತ್ತಿರುವುದು, ಟಿವಿಯಲ್ಲಿ ನೋಡಿದ್ವಿ ಎಂದರು.

ಮಾರ್ಗಮಧ್ಯದಲ್ಲಿ ನಾನು ಒಂದಿಷ್ಟು ಹೊತ್ತು ತೂಕಡಿಸಿದರೂ, ದೊರೆಸ್ವಾಮಿಯವರು ಮಾತ್ರ ಎಚ್ಚರವಾಗಿಯೇ ಇದ್ದರು.

ಚಿಕ್ಕಮಗಳೂರಿನಲ್ಲಿ ನಮ್ಮೆಲ್ಲರಿಗೆ ಐಬಿಯಲ್ಲಿ ರೂಮುಗಳನ್ನು ಕಾದಿರಿಸಿದ್ದೆವು. ಆದರೂ ದೊರೆಸ್ವಾಮಿಯವರು ತಮ್ಮ ಅಣ್ಣನ ಅಳಿಯನ ಮನೆಯಲ್ಲಿ ತಂಗುವುದಾಗಿ ಹೇಳಿದರು. ಆ ಅಳಿಯನ ಮನೆ ಶಂಕರಮಠದ ಹತ್ತಿರವಿದೆ ಎಂಬುದು ಅವರಿಗೆ ಗೊತ್ತಿತ್ತೇ ಹೊರತು ಸರಿಯಾದ ಅಡೆಸ್ ಆಗಲಿ, ಫೋನ್ ನಂಬರ್ ಆಗಲಿ ಅವರಿಗೆ ಗೊತ್ತಿರಲಿಲ್ಲಿ ಕಾರ್ ನಿಲ್ಲಿಸಿ ಡೈರೆಕ್ಷನ್ ಕೇಳಿದ ಕಡೆಯೆಲ್ಲ ಜನ ದೊರೆಸ್ವಾಮಿಯವರನ್ನು ಗುರುತಿಸಿ ಮಾತನಾಡಿಸುತ್ತಿದ್ದರು.

ಕೊನೆಗೂ ಆ ಮನೆ ಸಿಕ್ಕಿತು. “ಬೆಳಗ್ಗೆ ಎಲ್ಲರೂ ಇಲ್ಲಿಗೆ ತಿಂಡಿಗೆ ಬನ್ನಿ” ಎಂದ ದೊರೆಸ್ವಾಮಿಯವರು ನಮ್ಮನ್ನು ಬೀಳ್ಕೊಟ್ಟರು: ಅವತ್ತು ಬೆಂಗಳೂರಿನಲ್ಲಿ ಕಾರ್ ಹತ್ತಿದ್ದ ಅವರು ಎಲ್ಲೂ ಇಳಿದಿರಲಿಲ್ಲ. ಆದರೂ ಅವರಿಗೆ ಒಂದಿಷ್ಟೂ ದಣಿವಾಗಿರಲಿಲ್ಲ!

ಮಾರನೆ ದಿನ ಬೆಳಗ್ಗೆ ಒಂಭತ್ತೂವರೆಗೆ ಅವರನ್ನು ಅಲ್ಲಿಂದ ಕರೆದುಕೊಂಡು ಡಿಸಿ ಆಫೀಸಿಗೆ ಹೋದೆವು. ಅಲ್ಲಿ ಡಿಸಿ ಮತ್ತು ಎಸ್‍ಪಿ ಅವರೊಂದಿಗೆ ಚರ್ಚಿಸಿದ ನಂತರ ಐಬಿಗೆ ಬಂದೆವು.

ನೂರ್ ಮತ್ತು ಸಿರಿಮನೆ ಅವರು ಬರುತಿದ್ದಂತೆ ನೂಕುನುಗ್ಗಲು ಶುರುವಾಯಿತು. ಒಂದೆಡೆ ಎಲ್ಲರಿಗೂ ಅವರನ್ನು ಸ್ವಾಗತಿಸುವ ಆಸೆ, ಇನ್ನೊಂದೆಡೆ ಮಾಧ್ಯಮದವರಿಗೆ ಹತ್ತಿರದಿಂದ ಫೋಟೋ ಮತ್ತು ವೀಡಿಯೋ ಹಿಡಿಯುವ ತವಕ. ಆ ನೂಕಾಟದಲ್ಲಿ ಮಾಧ್ಯಮದವರೇ ಪರಸ್ಪರ ಜಗಳ ಪ್ರಾರಂಭಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಮಾಧ್ಯಮದವರನ್ನು ನಿಯಂತ್ರಿಸಲಾಗಲಿಲ್ಲ. ಇದೆಲ್ಲ ನಡೆಯುತ್ತಿದ್ದಾಗ ಒಬ್ಬರು ಬಂದು “ದತ್ತಣ್ಣ (ವೈ.ಎಸ್.ವಿ.ದತ್ತ) ನಿಮಗೆ ಅಭಿನಂದನೆಗಳನ್ನು ಕಳುಹಿಸಿದ್ದಾರೆ” ಎಂದು ನನ್ನ ಕೈಗೆ ಒಂದು ಹೂವಿನಹಾರವನ್ನು ಕೊಟ್ಟರು. ಅದನ್ನು ನೂರ್ ಝುಲ್ಫಿಕರ್ ಅವರಿಗೆ ಕೊಟ್ಟು “ದೊರೆಸ್ವಾಮಿಯವರಿಗೆ ಥ್ಯಾಂಕ್ಸ್ ಹೇಳಿ” ಎಂದೆ. ಅವರು ಹಾರವನ್ನು ದೊರೆಸ್ಟಾಮಿಯವರಿಗೆ ಹಾಕಿ ಥ್ಯಾಂಕ್ಸ್ ಹೇಳಿದರು.

ಆಮೇಲೆ ಎಲ್ಲರೂ ಡಿಸಿ ಕಚೇರಿಗೆ ಹೋಗಿ ನಿಯಮದ ಪ್ರಕಾರ ನೂರ್ ಹಾಗು ಸಿರಿಮನೆಯವರನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆವು. ನೂರ್ ಮತ್ತು ಸಿರಿಮನೆಯವರ ಪತ್ರಿಕಾಹೇಳಿಕೆ ಪ್ರಕ್ರಿಯೆಗಳು ಮುಗಿದನಂತರ ನಾನು “ಸರ್, ಒಂದು ಚರ್ಚಾಸಭೆಯನ್ನು ಏರ್ಪಡಿಸಿದ್ದಾರೆ. ಅದನ್ನು ಮುಗಿಸಿದಕೂಡಲೇ ಬೆಂಗಳೂರಿಗೆ ಹೊರಡೋಣ” ಎಂದೆ. ಆಗ ದೊರೆಸ್ವಾಮಿಯವರು ’ಇಲ್ಲ ನಾನು ಬಳ್ಳಾರಿಗೆ ಹೋಗುತ್ತೇನೆ ಎಂದು ಬಾಂಬ್’ ಸಿಡಿಸಿದರು. “ಅಲ್ಲಾ ಸಾರ್, ನೀವು ಹೇಗೆ ಬಳ್ಳಾರಿಗೆ ಹೋಗುತ್ತೀರಿ?” ಎಂದು ಅಚ್ಚರಿಯಿಂದ ಕೇಳಿದೆ. “ನನ್ನನ್ನ ಕರೆದುಕೊಂಡು ಹೋಗಲು ಬಂದಿದ್ದಾರೆ” ಎಂದರು. “ಅವರು ಯಾರು? ಯಾವುದರಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದೆಲ್ಲ ಗೊತ್ತಾದ ಮೇಲೇ ನಾನು ನಿಮ್ಮನ್ನು ಅವರ ಜೊತೆ ಕಳಿಸೋದು” ಎಂದೆ. ಅದಕ್ಕೆ ದೊರೆಸ್ವಾಮಿಯವರು “ಓಹೋ, ಇವರಿಬ್ಬರನ್ನು ಹಸ್ತಾಂತರಿಸಿದ್ದು ಆಯಿತು. ಈಗ ನನ್ನನ್ನೂ ಹಸ್ತಾಂತರಿಸುತ್ತೀಯಾ!” ಎಂದು ಜೋಕ್ ಮಾಡಿದರು. “ಸರ್, ನೀವು ಇವತ್ತು ನಮ್ಮೊಂದಿಗೆ ಬೆಂಗಳೂರಿಗೆ ವಾಪಾಸ್ ಹೋಗಬೇಕಿತ್ತು ಆದರೆ ನೀವೀಗ ಬೇರೆಲ್ಲಿಗೋ ಹೊರಟಿದ್ದೀರಿ. ಮನೆಯವರು ಏನಂತಾರೆ?” ಅಂದೆ. “ಅವಳು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟಿದ್ದಾಳೆ” ಎಂದ ಅವರು ಜೋರಾಗಿ ನಕ್ಕರು.

ಐಬಿಗೆ ಹಿಂದಿರುಗಿದಾಗ ದೊರೆಸ್ವಾಮಿಯವರು ಮಂಚದ ಮೇಲೆ ಕಾಲು ಚಾಚಿಕೊಂಡು ಕೂತಿದ್ದಾಗ, ಸುತ್ತುವರಿದಿದ್ದ ಜನರೊಂದಿಗೆ ಮತ್ತೆ ಹರಟಲಾರಂಭಿಸಿದರು. ಆಗ ಶಿವಸುಂದರ್‍ಗೆ ದೊರೆಸ್ವಾಮಿಯವರು ಬಳ್ಳಾರಿಗೆ ಹೊರಟಿದ್ದ ವಿಚಾರ ತಿಳಿಸಿದೆ. “ನನ್ನ ಮನೆಯವರಿಗೆ ಫೋನ್ ಮಾಡಿ ನಾನು ಬಳ್ಳಾರಿಗೆ ಹೋಗಿದ್ದೀನಿ ಅಂತ ತಿಳಿಸಿ ಎಂದರು. ಶಿವಸುಂದರ್ ಅವರು “ಸಾರ್ ಅವರು ಬೈಯಲ್ಲವಾ?” ಎಂದು ಕೇಳಿದರೆ “ಬೈದರೆ ನೀವು ತಾನೆ ಬೈಸಿಕೊಳ್ಳುವುದು, ಬೈಯಿಸಿಕೊಳ್ಳಿ” ಎಂದು ಗಹಗಹಿಸಿ ನಕ್ಕರು.

ದೊರೆಸ್ವಾಮಿಯವರು ಹೊರಡಲು ಸಿದ್ಧರಾಗಿ ನಿಂತಿದರೂ ಸುತ್ತುವರಿದಿದ್ದ ಹಲವಾರು ಅಭಿಮಾನಿಗಳು ಮತ್ತು ಮಾಧ್ಯಮದವರು ಅವರನ್ನು ಮಾತನಾಡಿಸುತ್ತಲೇ ಇದ್ದರು. “ನೀವು ಒಬ್ಬ ರಾಕ್‍ಸ್ಟಾರ್. ನಿಮ್ಮನ್ನ ಜನ ಸುತ್ತುವರಿದೇ ಇರುತ್ತಾರೆ” ಎಂದು ತಮಾಷೆ ಮಾಡುತ್ತಾ ಅವರನ್ನು ಐಬಿಯಿಂದ ಕರೆದುಕೊಂಡು ಹೊರಟೆ.

ಬಳ್ಳಾರಿಯಿಂದ ಬಂದಿದ್ದವರ ಕಾರ್ ಹತ್ತುತ್ತಾ “ನನ್ನ ಜೊತೆ ನನ್ನ ಬ್ಯಾಗನ್ನೂ ಹಸ್ತಾಂತರಿಸಿದ್ದೀ ಏನಮ್ಮ?” ಎಂದು ನಗುನಗುತ್ತಾ ಕೇಳಿದರು. ದೊರೆಸ್ವಾಮಿ ನಿಜಕ್ಕೂ ಅಪರಂಜಿಯಂತಹ ಮನುಷ್ಯ.

ಡಿಸೆಂಬರ್ 24, 2014.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...