Homeಮುಖಪುಟಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ವಿಶ್ವದ ನಾಯಕರ ಮುಂದೆ ಗಾಂಧಿಯನ್ನು ಹೊಗಳುವ, ಅವರದೇ ಬೈಠಕ್‍ಗಳಲ್ಲಿ ಗೋಡ್ಸೆ ಮತ್ತು ಸಾವರ್ಕರ್ ಅವರುಗಳನ್ನು ಆರಾಧಿಸುವ ಮಂದಿಗೆ ದೊರೆಸ್ವಾಮಿಯವರು ಸತ್ಯದ ದಾಖಲೆಗಳೊಂದಿಗೆ ಕಟ್ಟಿಕೊಡುವ ಇತಿಹಾಸ ಸಮಸ್ಯೆ ಸೃಷ್ಟಿಸಿದೆ.

- Advertisement -
- Advertisement -

ಮೌಲ್ಯಾಧಾರಿತ ಜೀವನವನ್ನು ನಡೆಸಿಕೊಂಡು ಬಂದು ನೈತಿಕ ವ್ಯಕ್ತಿತ್ವವನ್ನು ಉಸಿರಾಡಿದವರ ಸಿಟ್ಟಿಗೆ ನೂರಾರು ಉರಿನಾಲಗೆ ಇರುತ್ತದೆ. ಅಂತಹವರ ಸಿಟ್ಟನ್ನು ತಣಿಸಲು, ಸರ್ಕಾರಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಷ್ಟೇ. ಸುಳ್ಳಿನ ಮಾರ್ಗವನ್ನು ತೊರೆದು ಸತ್ಯದ ಮಾರ್ಗವನ್ನು ಮತ್ತೆ ತುಳಿಯಬೇಕಷ್ಟೇ. ಅದನ್ನು ಬಿಟ್ಟು ಅಂತಹ ನೈತಿಕ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ಫಲ ಕೊಡುವುದು ಅನುಮಾನವೇ.

ಸ್ವಾತಂತ್ರ್ಯ ಹೋರಾಟಗಾರ, ಚಳವಳಿಗಳ ಮುಂದಾಳು, ಗಾಂಧೀವಾದಿ, ಶತಾಯುಷಿ ಎಚ್.ಎಸ್.ದೊರೆಸ್ವಾಮಿಯವರು ‘ನಕಲಿ ಸ್ವಾತಂತ್ರ್ಯ ಹೋರಾಟಗಾರ, ಅವರು ಪಾಕಿಸ್ತಾನಿ ಏಜೆಂಟ್’ ಎಂಬಿತ್ಯಾದಿಯಾಗಿ ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಳ್ಳಿನ ಅಸಹನೆಯ ಕಂತೆಯನ್ನು ಸುರುಳಿಸುರುಳಿಯಾಗಿ ಹರಿಬಿಟ್ಟಿರುವುದು ರಾಜ್ಯದ ಜನತೆಗೆ ಆಘಾತ ಮತ್ತು ಆಕ್ರೋಶವನ್ನು ತಂದಿದೆ. ಇದರ ಬೆನ್ನಿನಲ್ಲೆ ಸಚಿವ ವಿ.ಸೋಮಣ್ಣ ಮತ್ತು ಎಸ್.ಸುರೇಶ್ ಕುಮಾರ್‌ರವರಂತಹ ಇನ್ನಿತರ ಬಿಜೆಪಿ ಮತ್ತು ಆರ್.ಎಸ್.ಎಸ್ ಮುಖಂಡರು ಯತ್ನಾಳ್ ಅವರ ಶುದ್ಧ ಸುಳ್ಳಿನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಏಕೆ? ಶತಾಯುಷಿ ಎಚ್.ಎಸ್.ದೊರೆಸ್ವಾಮಿಯೇ ಇವರುಗಳ ಟಾರ್ಗೆಟ್ ಆಗಿರುವುದು ಏಕೆ?

ಎಚ್.ಎಸ್.ದೊರೆಸ್ವಾಮಿಯವರು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಸಾಕ್ಷಿಪ್ರಜ್ಞೆಯಾಗಿ ನಾಗರಿಕರ ಹಕ್ಕುಗಳನ್ನು ಕಾಯ್ದುಕೊಳ್ಳಲು ಸದಾ ಹೋರಾಟಕ್ಕೆ ಮುಂದಾಗಿರುವುದು ಸರ್ಕಾರಗಳ ಅಸಹನೆಗೆ ಮುಖ್ಯ ಕಾರಣವಾಗಿ ಕಾಣುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಸರ್ಕಾರ, ತುರ್ತುಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರ ಸರ್ಕಾರ, ಹಲವು ಕರ್ನಾಟಕದ ರಾಜ್ಯ ಸರ್ಕಾರಗಳು ಮತ್ತು ಈಗಿನ ಕೇಂದ್ರ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದ್ದಾರೆ. ಹಿಂದೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಭುತ್ವದ ಸಂಸ್ಥೆಗಳೇ ದೊರೆಸ್ವಾಮಿಯವರ ಮೇಲೆ ಮುಗಿಬಿದ್ದಿದ್ದರೆ, ಈಗಿನ ಪ್ರಭುತ್ವ ತಮ್ಮ ನೆಚ್ಚಿನ ಅಸ್ತ್ರವಾದ ನಕಲಿ ಸುದ್ದಿಗಳ ಪ್ರಚಾರದ ಮೊರೆ ಹೋಗಿದೆ. ಅದಕ್ಕಾಗಿ ಯತ್ನಾಳ್ ಅಂತಹವರ ಬೆಂಬಲ ತೆಗೆದುಕೊಂಡು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲು ಹಲವು ಐಟಿ ಸೆಲ್‍ಗಳು ತೊಡಗಿಸಿಕೊಂಡಿವೆ.

ಸದ್ಯಕ್ಕೆ ಎಚ್.ಎಸ್.ದೊರೆಸ್ವಾಮಿ ಅವರು ಸದರಿ ಕೇಂದ್ರ ಸರ್ಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದು, ಸಿಎಎ ವಿರೋಧ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದರಿಂದ. ದೇಶದಾದ್ಯಂತ ಸಿಎಎ, ಎನ್‍ಪಿಆರ್ ಮತ್ತು ಎನ್‍ಆರ್‌ಸಿ ವಿರೋಧಿ ಚಳವಳಿಗಳು ಚುರುಕು ಪಡೆದುಕೊಂಡು, ದೇಶದ ಆರ್ಥಿಕ ಪರಿಸ್ಥಿತಿಯ ಹಿನ್ನಡೆಯ ಸಂದರ್ಭದಲ್ಲಿ ಸರ್ಕಾರಕ್ಕೆ ಹೆಚ್ಚೆಚ್ಚು ಮುಜುಗರ ತಂದಿವೆ. ರಾಜಧಾನಿ ದೆಹಲಿಯಲ್ಲಿಯೇ ಬಿಜೆಪಿ ಪಕ್ಷದ ಕೆಲವು ಮುಖಂಡರ ಪ್ರಚೋದನಕಾರಿ ಹೇಳಿಕೆಗಳಿಂದ ಪ್ರೇರಣೆಯಾಗಿ ಗಲಭೆಗಳಾಗಿ ಹತ್ತಾರು ಸಾವುಗಳು ಸಂಭವಿಸಿವೆ. ಇಂತಹ ಮುಖಂಡರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರ್ಟ್ ಹಾಲಿನಲ್ಲಿಯೇ ಪೊಲೀಸರಿಗೆ ವಿಡಿಯೋ ತೋರಿಸಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಮುರುಳೀಧರ್ ಅವರ ವರ್ಗಾವಣೆ ರಾತ್ರೋರಾತ್ರಿ ನಡೆದಿದೆ. ನ್ಯಾಯಮೂರ್ತಿ ಮುರುಳೀಧರ್ ಅವರು ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ ಅವರಿಗೆ ಆಪ್ತರು ಎಂಬ ನಕಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲಾಗುತ್ತಿದೆ. ಹೀಗೆ ನಕಲಿ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುವ ಗುಂಪು ಈಗ ದೊರೆಸ್ವಾಮಿ ಅವರ ವಿರುದ್ಧ ಕೂಡ ಸೆಣೆಸಲು ತನ್ನೆಲ್ಲಾ ಬತ್ತಳಿಕೆಯನ್ನು ಬಳಸುತ್ತಿದೆ. ಎಚ್.ಎಸ್.ದೊರೆಸ್ವಾಮಿ ಅವರು ಈಗಿನ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಸಿಡಿದು ಜೈಲೋ ಭರೋ ಚಳವಳಿಗೆ ಕರೆ ಕೊಡುವ ಮುನ್ಸೂಚನೆ ಇವರನ್ನೆಲ್ಲ ಅಲುಗಾಡಿಸಿದೆ. ಸಂವಾದ ಮಾಡುವುದು ಇರಲಿ ಸಣ್ಣ ಟೀಕೆಯನ್ನೂ ಕೇಳಿಸಿಕೊಳ್ಳದ ಸರ್ಕಾರ ಮತ್ತು ಅದನ್ನು ಬೆಂಬಲಿಸುವ ಮುಖೇಡಿ ಐಟಿಸೆಲ್‍ಗಳು ಈಗ ಜಾಗೃತವಾಗಿವೆ.

ಇತ್ತೀಚೆಗಷ್ಟೇ ಕ್ಯಾರವಾನ್ ಪತ್ರಿಕೆ ಮಹಾತ್ಮ ಗಾಂಧಿ ಹತ್ಯೆಯ ಮುಖ್ಯ ರೂವಾರಿ ನಾಥೂರಾಮ್ ಗೋಡ್ಸೆ, ಆರ್‌ಎಸ್‍ಎಸ್ ತೊರೆದೇ ಇರಲಿಲ್ಲ ಎಂಬುದಕ್ಕೆ ಹೊಸ ಪುರಾವೆಗಳು ಸಿಕ್ಕಿವೆ ಎಂಬ ಒಂದು ದೀರ್ಘ ಲೇಖನವನ್ನು ಪ್ರಕಟ ಮಾಡಿತ್ತು. ಗಾಂಧಿ ಹತ್ಯೆಯಾದಾಗಲಿಂದಲೂ ಆರ್‌ಎಸ್‍ಎಸ್, ಗೋಡ್ಸೆಯಿಂದ ದೂರ ಸರಿಯಲು ಪ್ರಯತ್ನಿಸಿದೆ. ಆದರೆ ಪತ್ರಕರ್ತರೂ ಆಗಿದ್ದ ಎಚ್.ಎಸ್.ದೊರೆಸ್ವಾಮಿ ಅವರು ಗಾಂಧಿ ಹತ್ಯೆಯ ಮುಂಚಿನ ಇತಿಹಾಸವನ್ನೂ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇತಿಹಾಸವನ್ನು ನಿಖರವಾಗಿ ಅರಿತಿರುವ ಎಚ್.ಎಸ್.ದೊರೆಸ್ವಾಮಿ, ನಾಥೂರಾಮ್ ಗೋಡ್ಸೆ ಮತ್ತು ಆರ್‌ಎಸ್‍ಎಸ್ ಸಂಬಂಧದ ಬಗ್ಗೆ ಹಲವಾರು ವರ್ಷಗಳಿಂದ ಹೇಳುತ್ತಾ, ಬರೆಯುತ್ತಾ ಬಂದಿದ್ದಾರೆ. ಅಲ್ಲದೆ ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾದ ವಿ.ಡಿ.ಸಾವರ್ಕರ್ ಅವರ ವಿರುದ್ಧ, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರವನ್ನು ಬರೆದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ ಇದ್ದುದರ ಬಗ್ಗೆ ಬಹಳ ನಿಷ್ಠುರವಾಗಿ ನುಡಿಯುವ ಗಾಂಧಿವಾದಿ ದೊರೆಸ್ವಾಮಿಯವರ ಬಗ್ಗೆ ಕೋಪ, ದ್ವೇಷ, ಅಸೂಯೆಗಳು ಸಂಘ ಪರಿವಾರದವರಿಗೆ ಹುಟ್ಟಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲದೆ ಹೋದರೂ ಆತಂಕಕಾರಿ ವಿಷಯವಾಗಿದೆ. ವಿಶ್ವದ ನಾಯಕರ ಮುಂದೆ ಗಾಂಧಿಯನ್ನು ಹೊಗಳುವ, ಅವರದೇ ಬೈಠಕ್‍ಗಳಲ್ಲಿ ಗೋಡ್ಸೆ ಮತ್ತು ಸಾವರ್ಕರ್ ಅವರುಗಳನ್ನು ಆರಾಧಿಸುವ ಮಂದಿಗೆ ದೊರೆಸ್ವಾಮಿಯವರು ಸತ್ಯದ ದಾಖಲೆಗಳೊಂದಿಗೆ ಕಟ್ಟಿಕೊಡುವ ಇತಿಹಾಸ ಸಮಸ್ಯೆ ಸೃಷ್ಟಿಸಿದೆ.

ಸ್ವ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಬರೆದು ಜೈಲಿಗೆ ಸೇರಿದ್ದ ದೊರೆಸ್ವಾಮಿಯವರಿಗೆ ಹೆದರಿಸಿ ಮೂಲೆಗುಂಪು ಮಾಡಲು ಸರ್ಕಾರಗಳಿಗೆ ಬೇರೆ ಯಾವುದೇ ಮಾರ್ಗ ಇಲ್ಲವಾಗಿದೆ. ಪ್ರಜಾಪ್ರಭುತ್ವವಾದಿಯಾಗಿರುವ ಶತಾಯುಷಿಗಳಿಗೆ ಯಾವುದೇ ಸರ್ಕಾರದ ಸರ್ವಾಧಿಕಾರದ ಧೋರಣೆಯನ್ನು ಸುಮ್ಮನೆ ನೋಡಿಕೊಂಡು, ಸಹಿಸಿಕೊಂಡು ಅಥವಾ ಕೇವಲ ಬಾಯಿಮಾತಿನಲ್ಲಿ ಟೀಕಿಸಿಕೊಂಡು ನಂತರ ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವ ಇರುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುವುದು, ಜನಾಭಿಪ್ರಾಯ ಮೂಡಿಸುವುದು ಅವರ ಮೂಲಗುಣ. ಗಾಂಧಿಯವರ ಜೊತೆಗಿನ ಹೋರಾಟದಲ್ಲಿ ಅವರು ರೂಢಿಸಿಕೊಂಡ ಧೋರಣೆ. ಬಹುಶಃ ಇದನ್ನು ಒಬ್ಬ ಅಥವಾ ಇಂತಹ ಸಾವಿರಾರು ಯತ್ನಾಳ್‍ಗಳಿಂದ ಬದಲಿಸಲು ಅಥವಾ ಬೆದರಿಸಲು ಸಾಧ್ಯವಿಲ್ಲವೇನೋ.

ಟಿಪ್ಪುವಿನ ಬ್ರಿಟಿಷರ ವಿರುದ್ಧದ ಹೋರಾಟದ ಸಂಗತಿಗಳನ್ನು ತಿರುಚುವುದು, ಕೋಮುವಾದಿಗಳ ವಿರೋಧಿಗಳಾಗಿದ್ದ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅಂತಹ ನಾಯಕರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ತಂತ್ರ ಮಾಡುವುದು, ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರ್‍ಎಸ್‍ಎಸ್ ನಾಯಕರನ್ನು ಬಂಧಿಸಿ, ಆರ್‍ಎಸ್‍ಎಸ್ ನಿಷೇಧಿಸಲು ಅಂದಿನ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಾಯಿ ಪಟೇಲ್ ನೆಹರೂರ ವಿರೋಧಿಗಳಾಗಿದ್ದರು ಎಂಬಂತೆ ಬಿಂಬಿಸುವುದು, ನೆಹರೂವಿನಿಂದ ಹಿಡಿದು ಪ್ರಮುಖ ಪ್ರಗತಿಪರ ಮುಖಂಡರ ಕುರಿತು ಸುಳ್ಳು ವೈಯಕ್ತಿಕ ಸಂಗತಿಗಳನ್ನು ಸೃಷ್ಟಿಸಿ ಖಳನಾಯಕರಂತೆ ಬಿಂಬಿಸುವುದು, ದೇಶದ ಸಾಮರಸ್ಯಕ್ಕೆ ಧಕ್ಕೆ ಆಗುವಂತೆ ಸೈದ್ಧಾಂತಿಕ ಪೊಲರೈಸೇಶನ್‍ಅನ್ನು ವಿಪರೀತಕ್ಕೆ ತೆಗೆದುಕೊಂಡು ಹೋಗುವುದು, ಸಂವಿಧಾನ ಬರೆದದ್ದು ಅಂಬೇಡ್ಕರ್ ಅಲ್ಲ ಎಂಬಂತಹ ಸುಳ್ಳು ಸುದ್ದಿಗಳನ್ನು ಹರಿದುಬಿಡುವುದು ಇಂತಹ ಪ್ರೊಪಗಾಂಡದ ಭಾಗವಾಗಿಯೇ.

ಈಗ ನಮ್ಮೆಲ್ಲರ ನಡುವೆ ತಮ್ಮ 103ನೇ ವಯಸ್ಸಿನಲ್ಲಿ ಪ್ರತಿರೋಧದ ಮಹಾಮೂರ್ತಿಯಂತೆ ಬದುಕುತ್ತಿರುವ ದೊರೆಸ್ವಾಮಿ ಅವರ ವಿರುದ್ಧ ಕೆಸರೆರಚಾಟಕ್ಕೆ ಸಂಘಪರಿವಾರದ ಹಲವು ಮುಖಂಡರು ಎದ್ದುಕೂತಿದ್ದಾರೆ. ನೈತಿಕವಾಗಿ ಗಟ್ಟಿಯಿಲ್ಲದ ವ್ಯಕ್ತಿಯ ವಿರುದ್ಧ ಆಗಿದ್ದರೆ ಸಫಲರಾಗುತ್ತಿದ್ದರೇನೋ, ಆದರೆ ಈ ಬಾರಿ ಅವರು ತಮ್ಮ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿತ್ವ ಮತ್ತು ಅವರನ್ನು ಗೌರವಿಸುವ ಲಕ್ಷಾಂತರ ನಾಗರಿಕರು ತಿರುಗಿಬಿದ್ದರೆ ತಾವು ಕಟ್ಟುವ ಸುಳ್ಳಿನ ಸೌಧ ನೆಲಸಮವಾಗಿ ಬೂದಿಯಾದೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...