Homeಎಕಾನಮಿಆರ್ಥಿಕ ಕುಸಿತದ ಸರಳ ಚಿತ್ರಣ: ಸಮಸ್ಯೆ ಹೂಡಿಕೆಯದ್ದಲ್ಲ, ಬೇಡಿಕೆಯದ್ದು

ಆರ್ಥಿಕ ಕುಸಿತದ ಸರಳ ಚಿತ್ರಣ: ಸಮಸ್ಯೆ ಹೂಡಿಕೆಯದ್ದಲ್ಲ, ಬೇಡಿಕೆಯದ್ದು

- Advertisement -
- Advertisement -

ಯಾವುದೇ ರೋಗ ಬಂದಾಗ ಚಿಕಿತ್ಸೆಗೂ ಮುನ್ನ ವೈದ್ಯರು ರೋಗಪರೀಕ್ಷೆ ಮಾಡುತ್ತಾರೆ. ಇದನ್ನು ಡಯೋಗ್ನೋಸಿಸ್ ಎನ್ನುತ್ತಾರೆ. ನಂತರವಷ್ಟೇ ಚಿಕಿತ್ಸೆಗೆ ಮುಂದಾಗುವುದು. ಇಂದಿನ ಆರ್ಥಿಕ ಕುಸಿತ, ಉದ್ಯೋಗ ನಷ್ಟದ ಸಮಸ್ಯೆಗೆ ಮೊದಲು ಸರ್ಕಾರ ಮಾಡಬೇಕಾದ್ದು ಇದೇ ವಿಧಾನ. ಇದಕ್ಕೆ ಮೂಲಕಾರಣ ಶೋಧಿಸಿ ಚಿಕಿತ್ಸೆಗೆ ಮುಂದಾಗಬೇಕು. ಆದರೆ ನಮ್ಮ ಸರ್ಕಾರದ ದೊಡ್ಡ ಸಮಸ್ಯೆಯೆಂದರೆ ದೇಶದ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳದಿರುವುದು.

ಇದು ಹೇಗೆಂದರೆ ಒಬ್ಬನಿಗೆ ತೀವ್ರ ಕಾಯಿಲೆ ಬಂದರೂ ಆತ ಆಸ್ಪತ್ರೆಗೆ ಹೋಗದೇ ನಾನು ಚೆನ್ನಾಗಿದ್ದೇನೆ ಎಂದು ನಟಿಸದಂತೆ ಮಾಡುವುದಾಗಿದೆ. ಆದರೆ ಎಷ್ಟು ದಿನ ಮಾಡುತ್ತಾನೆ? ಅದರ ಲಕ್ಷಣಗಳು ಎದುರಿರುವವರಿಗೆ ಗೊತ್ತಾಗಿಯೇ ಆಗುತ್ತೇ ಅಲ್ಲವೇ? ಇಂದಿನ ಭಾರತದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಸಮಸ್ಯೆ ಏನೆಂದರೆ ಚಿಕಿತ್ಸೆ ಪಡೆಯುವುದು ತಡವಾದಷ್ಟು ರೋಗ ಉಲ್ಬಣಿಸುತ್ತದೆ.. ಇಂದು ಅದೇ ಆಗುತ್ತಿದೆ. ಸರ್ಕಾರ ಮಾಡದಿದ್ದರೂ ದೇಶದ ಜವಾಬ್ದಾರಿಯುತ ನಾಗರಿಕರಾದ ನಾವು ಕಾರಣಗಳನ್ನು ಮತ್ತು ಪರಿಹಾರವನ್ನು ಸೂಚಿಸುವ ಕೆಲಸ ಮಾಡಬೇಕಿದೆ. ದೇಶದ ಉಳಿವಿನ ದೃಷ್ಟಿಯಿಂದ ಇದು ಮಹತ್ವದ ಕೆಲಸ. ಹಾಗಾದರೆ ಬನ್ನಿ, ಇಂದಿನ ಸ್ಥಿತಿಗೆ ಮೂಲಕಾರಣಗಳನ್ನು ಶೋಧಿಸೋಣ.

ಈ ದೇಶದಲ್ಲಿರುವ ಸಂಪನ್ಮೂಲಗಳ ಸದ್ಬಳಕೆ ಆದರೆ, ಅದರಿಂದ ದೇಶದ ಎಲ್ಲರಿಗೂ ಉದ್ಯೋಗ, ಆಹಾರ, ವಸತಿ ಕಲ್ಪಿಸುವುದು ಯಾವ ರೀತಿಯಿಂದಲೂ ಕಷ್ಟವಲ್ಲ. ಆದರೆ, ಇಂದು ದೇಶದ ಸಂಪತ್ತು ಮತ್ತು ಹಣ ಎಲ್ಲೆಡೆ ಚಲಾವಣೆಯಾಗುವ ಬದಲು ಕೆಲವೇ ಕಡೆ ಶೇಖರಣೆಯಾಗುತ್ತಿದೆ. 135 ಕೋಟಿಯಷ್ಟು ದೊಡ್ಡ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಹಣ ಮತ್ತು ಸಂಪತ್ತು ಸದಾ ಚಲಾವಣೆಯಲ್ಲಿರಬೇಕು. ಆಗ ಮಾತ್ರವೇ ಉತ್ಪಾದನೆ, ಮಾರಾಟ, ಲಾಭ, ಉದ್ಯೋಗ, ಖರ್ಚು ಈ ಸರಪಳಿ ಸರಾಗವಾಗಲು ಸಾಧ್ಯ. ಆದರೆ ಕಳೆದ 7-8 ವರ್ಷಗಳಿಂದ ಈ ಸರಪಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೊದಲಿಗೆ ಇದು ಉತ್ಪಾದನಾ ಕ್ಷೇತ್ರದಲ್ಲಿ ಕುಂಠಿತವಾಗುವುದರೊಂದಿಗೆ ಆರಂಭವಾಯಿತು. ಆಗ ಸರ್ಕಾರ ಇದನ್ನು ಸರಿಮಾಡಲು ದೊಡ್ಡ ಬಂಡವಾಳಿಗರಿಗೆ ಮತ್ತಷ್ಟು ಮಗದಷ್ಟು ಸಾಲವನ್ನು ಕೊಟ್ಟು, ಅವರ ತೆರಿಗೆ ಮನ್ನಾ ಮಾಡುವುದರ ಜೊತೆಗೆ ಒಂದಷ್ಟು ಸಾಲವನ್ನು ಮನ್ನಾ ಮಾಡಿತು. ಆದರೂ ಸಮಸ್ಯೆ ಬಗೆಹರಿಯದೇ ಮತ್ತಷ್ಟು ಹೆಚ್ಚಾಗುತ್ತಾ ಸಾಗಿತು.

ಏಕೆಂದರೆ, ಉದ್ಯೋಗ ಸೃಷ್ಟಿಸದ ಆದರೆ ಹೂಡಿಕೆದಾರರಿಗೆ ಹೆಚ್ಚಿನ ಲಾಭ ತರುವ ಕ್ಷೇತ್ರಗಳಿಗೆ ಸರ್ಕಾರದ ಒತ್ತು ಹೆಚ್ಚಾಗಿತ್ತು. ಇದು ಯುಪಿಎ ಕಾಲದಲ್ಲೇ ಶುರುವಾಗಿತ್ತು; ಎನ್‍ಡಿಎ ಕಾಲದಲ್ಲಿ ಇನ್ನೂ ಹೆಚ್ಚಾಯಿತು. ಅದರ ಜೊತೆಗೆ ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಬರುವ ಬಿಕ್ಕಟ್ಟು ಸಹಾ ತಲೆದೋರಿದೆ. ಅಂದರೆ ಕೋಟಿಗಟ್ಟಲೆ ಜನರು ಕೊಳ್ಳಬಹುದಾದಷ್ಟು ಸರಕುಗಳನ್ನು (ಉದಾಹರಣೆಗೆ ಕಾರು ಇತ್ಯಾದಿ) ಕೊಂಡ ನಂತರ, ಸರಕು ಉತ್ಪಾದನೆ ಹೆಚ್ಚಳವಾಗುತ್ತಾ ಹೋದ ಹಾಗೆ ಜನರು ಕೊಳ್ಳುವ ಪ್ರಮಾಣವೂ ಏರುತ್ತಾ ಹೋಗುವುದಿಲ್ಲ. ಆಗ ಸರಕು ಉತ್ಪಾದನೆ ಬೀಳುತ್ತದೆ. ಬದಲಿಗೆ ಸಾಮಾನ್ಯ ಜನರಿಗೆ ಉದ್ಯೋಗ ನೀಡುವ ಕ್ಷೇತ್ರಗಳಿಗೆ ಪ್ರೋತ್ಸಾಹ ಹೆಚ್ಚಾಗಿ, ಜನರ ಕೈಯ್ಯಲ್ಲಿ ಹಣ ಹೆಚ್ಚಾದರೆ ಹೆಚ್ಚು ಸರಕು ಕೊಳ್ಳುತ್ತಾರೆ. ಅದಾಗದೇ ಇದ್ದಲ್ಲಿ ಬಿಕ್ಕಟ್ಟು ಉಂಟಾಗುತ್ತದೆ.

ಅಧಿಕಾರಕ್ಕೆ ಬರುವ ಮುನ್ನ ನರೇಂದ್ರ ಮೋದಿಯವರು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮಾತುಕೊಟ್ಟಿದ್ದರು. ಆ ಕುರಿತು ಪರಿಣಾಮಕಾರಿ ಯೋಜನೆಗಳನ್ನೇನೂ ರೂಪಿಸದೇ, ಆಡಳಿತಕ್ಕೆ ಬಂದ ಎರಡೂವರೆ ವರ್ಷಗಳ ನಂತರ ಏಕಾಏಕಿ ನೋಟು ಅಮಾನ್ಯೀಕರಣಕ್ಕೆ ಕೈಹಾಕಿದರು. ಇದು ಮುಂದಾಲೋಚನೆಯಿಲ್ಲದ ಅತ್ಯಂತ ಮೂರ್ಖ ಕ್ರಮವೆಂಬುದು ಇಂದು ಗೊತ್ತಾಗುತ್ತಿದೆ. ಇದರಿಂದ ಒಂದಷ್ಟು ಹಣ ಬ್ಯಾಂಕುಗಳತ್ತ ಹರಿದುಬಂದರೂ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕೃಷಿ ಕ್ಷೇತ್ರ, ಬೃಹತ್ ಅಸಂಘಟಿತ ವಲಯ ದೊಡ್ಡ ಸಮಸ್ಯೆಗೆ ಸಿಲುಕಿತು. ನಂತರ ಮೋದಿಯವರು ಜಾರಿಗೆ ತಂದ ಜಿಎಸ್‍ಟಿ ಈ ಜನರನ್ನು ಮತ್ತಷ್ಟು ಹೈರಾಣಾಗಿಸಿತು. ನೋಟು ಅಮಾನ್ಯೀಕರಣದಿಂದ ಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದ ಜನರಿಗೆ ಹೆಚ್ಚಿನ ತೆರಿಗೆ ಹೊರೆ ಹೊರಿಸಿ ಗಾಯದ ಮೇಲೆ ಬರೆ ಎಳೆಯಲಾಯಿತು.

ಇತ್ತ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಪಡೆದಿದ್ದ ಉದ್ದಿಮೆಪತಿಗಳು ತಾವು ಉತ್ಪಾದಿಸಿದ ವಸ್ತುಗಳು ಮಾರಾಟವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲಿ ಒಂದಷ್ಟು ಜನ ದೇಶ ಬಿಟ್ಟು ಓಡಿಹೋದರು. ಬ್ಯಾಂಕುಗಳು ದಿವಾಳಿಯಾಗಲು ಆರಂಭಿಸಿದವು. ಏಕೆಂದರೆ ಸುಮಾರು 13 ಲಕ್ಷ ಕೋಟಿಯಷ್ಟು ಸಾಲವನ್ನು ಈ ಉದ್ದಿಮೆಪತಿಗಳು ಮರುಪಾವತಿ ಮಾಡಿರಲಿಲ್ಲ. ಅದನ್ನು ಎನ್‍ಪಿಎ ಎಂಬ ಹೆಸರಿನೊಂದಿಗೆ ಮನ್ನಾ ಮಾಡಲಾಯಿತು. ಕೆಲವು ಉದ್ದಿಮೆಪತಿಗಳು ನಷ್ಟ ಹೊಂದಿದ್ದರೆ ಮುಖೇಶ್ ಅಂಬಾನಿ, ಗೌತಮ್ ಅದಾನಿಯಂತಹ ಕುಳಗಳು ಲಾಭದ ಮೇಲೆ ಲಾಭ ಪಡೆದರು. ತೆರಿಗೆಯ ಹೊರೆಯನ್ನು ತಪ್ಪಿಸಿಕೊಳ್ಳಲು ಇವರು ವಿದೇಶಗಳಲ್ಲಿ ತಮ್ಮ ಕಂಪನಿಗಳನ್ನು ರಿಜಿಸ್ಟರ್ ಮಾಡಿಸಿ ಅವುಗಳ ಹೆಸರಿನಲ್ಲಿ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಿ ಲೂಟಿ ಹೊಡೆಯಲು ಮುಂದಾದರು.

ಈ ಖಾಸಗಿ ಕುಳಗಳು ಮತ್ತಷ್ಟು ಲಾಭ ಮಾಡುವುದಕ್ಕಾಗಿ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ನಿರ್ಲಕ್ಷಿಸಲಾಯಿತು. ಭಾರತದ ಬಹುದೊಡ್ಡ ಸರ್ಕಾರೀ ಸ್ವಾಮ್ಯದ ಕಂಪನಿಯಾಗಿದ್ದ ಓಎನ್‍ಜಿಸಿ ಕಂಪನಿಯ ಕಚ್ಛಾ ತೈಲ ಸಂಸ್ಕರಣ ಘಟಕಗಳನ್ನು ಮುಖೇಶ್ ಅಂಬಾನಿ ಬಾಯಿಗೆ ಹಾಕಲಾಯಿತು. ಆತ ನಿಯಮ ಮೀರಿ ಒಎನ್‍ಎನ್‍ಜಿಸಿಯ ಕೊಳವೆ ಬಾವಿಗೂ ಕನ್ನ ಹಾಕಿದ್ದು, ಆ ಕೇಸಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಅಂಬಾನಿಯ ಪರವೇ ನಿಂತಿವೆ. ಇಂತಹ ಹಲವು ನೀತಿಗಳ ಪರಿಣಾಮವಾಗಿ ಆ ಸರ್ಕಾರಿ ಕಂಪನಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಷ್ಟಕ್ಕೆ ಬಂದು ನಿಂತಿದೆ. ಇನ್ನು ದೇಶದ ಮೂಲೆಮೂಲೆಗೆ ಟೆಲಿಕಾಂ ಸೇವೆ ನೀಡಿದ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್‍ಗೆ ಇದುವರೆಗೂ 4ಜಿ ಸೇವೆಯನ್ನು ನೀಡಿಲ್ಲ. ಆದರೆ ಖಾಸಗಿ ಜಿಯೊ ಕಂಪನಿ 5ಜಿ ಫೈಬರ್‍ನೆಟ್ ಬ್ರಾಡ್‍ಬ್ಯಾಂಡ್ ಸೇವೆ ಕೊಡಲು ಮುಂದಾಗಿದೆ. ಈ ಜಿಯೊಗೆ ಮೊದಲ ದಿನದ ಜಾಹಿರಾತು ಕೊಟ್ಟವರು ಯಾರು ನೆನಪಿಸಿಕೊಳ್ಳಿ. ಈಗ ಬಿಎಸ್‍ಎನ್‍ಎಲ್ ಬಳಿ ತನ್ನ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದೇ ಪರದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರ ಏನು ಮಾಡಿದೆ ಗೊತ್ತೆ? ಬಿ.ಎಸ್.ಎನ್.ಎಲ್ ಎಲ್ಲಿಂದಲೂ ಸಾಲ ಪಡೆಯಬಾರದೆಂಬ ನಿರ್ಬಂಧ ವಿಧಿಸಿದೆ. ಅಂದರೆ ಬಲವಂತವಾಗಿ ಅದರ ಉಸಿರು ನಿಲ್ಲಿಸಲು ಸರ್ಕಾರವೇ ಮುಂದಾಗಿದೆ.

ಸರ್ಕಾರದ ಬಳಿ ಹಣವಿಲ್ಲವೇ?

ಮೋದಿ ನೇತೃತ್ವದ ಸರ್ಕಾರ ಜಿಎಸ್‍ಟಿ ಮೂಲಕ ಅಧಿಕ ತೆರಿಗೆ ವಿಧಿಸಿ ಹಣ ಸಂಗ್ರಹಿಸಿತು. ರಾಜ್ಯಗಳು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಕಟ್ಟುವಂತಾಯಿತು. ಜಾಗತಿಕ ಮಾರುಕಟ್ಟೆಯಲ್ಲಿ 6 ವರ್ಷಗಳಿಂದಲೂ ಪೆಟ್ರೋಲಿಯಂ ಕಚ್ಛಾ ತೈಲದ ಬೆಲೆ ಅರ್ಧಕ್ಕಿಂತ ಕಡಿಮೆಯಾಗಿದ್ದರೂ ಭಾರತದಲ್ಲಿ ದಿನೇ ದಿನೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರುತ್ತಲೇ ಇದೆ. ಏಕೆಂದರೆ ಕಡಿಮೆಯಾದ ತೈಲದ ಬೆಲೆಗೆ ಹೆಚ್ಚೆಚ್ಚು ತೆರಿಗೆ ಹಾಕಿ ಬೆಲೆ ಹೆಚ್ಚಾಗುವಂತೆ ನೋಡಿಕೊಳ್ಳಲಾಗಿದೆ. ಜನಸಾಮಾನ್ಯರು ಬಳಸುವ ದಿನಬಳಕೆಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ಕೋಟಿ ಲಾಭವಾಗಿದೆ. ಹಾಗಾದರೆ ಈ ಹಣವೆಲ್ಲಾ ಎಲ್ಲಿ ಹೋಯಿತು? ಸರ್ಕಾರ ತನ್ನ ಬಳಿ ಇದ್ದ ಹಣವನ್ನು ಯಾರ ಜೇಬಿಗೆ ಹಾಕಿದರು?

ಇದಲ್ಲದೇ, ಮೋದಿ ಸರ್ಕಾರ ಬರುವ ಹೊತ್ತಿಗೆ ಎಲ್ಲಾ ತೆರಿಗೆ ಸಂಗ್ರಹವನ್ನೂ ಆನ್‍ಲೈನ್ ಮಾಡುವ ಕೆಲಸ ಆರಂಭವಾಗಿಯಾಗಿತ್ತು. ಹಾಗಾಗಿ tax compliance ಹೆಚ್ಚಾಗಿ ತೆರಿಗೆ ಸಂಗ್ರಹವೂ ಆಗಿದೆ.

ಇಂದಿನ ಬಿಕ್ಕಟ್ಟೇನು? ಪರಿಹಾರ ಹೇಗೆ?

ವಾರದ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರ್ಥಿಕತೆಯನ್ನು ಸುಧಾರಿಸಲು ಕಲ್ಲಿದ್ದಲು ಗಣಿಗಾರಿಕೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಹೂಡಿಕೆಗೆ 100% ಅವಕಾಶ ಕೊಡುತ್ತೇವೆ. ಆಗ ಹೂಡಿಕೆ ಹೆಚ್ಚಾಗುತ್ತದೆ ಎಂದರು. ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಜಿ.ಎಸ್.ಟಿಯಲ್ಲಿ ಸಡಿಲಿಕೆ ಮಾಡುತ್ತೇವೆ, ಸ್ಟಾರ್ಟಪ್‍ಗಳಿಗೆ ತೆರಿಗೆ ವಿನಾಯಿತಿ ಕೊಡುತ್ತೇವೆ ಎಂದು ಘೋಷಿಸಿದ್ದಲ್ಲದೇ, 10 ರಾಷ್ಟ್ರೀಕೃತ ಬ್ಯಾಂಕುಗಳನ್ನು 4 ಬ್ಯಾಂಕುಗಳಾಗಿ ವಿಲೀನ ಮಾಡುತ್ತೇವೆ ಎಂದರು. ಅಷ್ಟೂ ಸಾಲದೆಂಬಂತೆ ಆರ್.ಬಿ.ಐನಿಂದ 1.75 ಲಕ್ಷ ಕೋಟಿ ಮೀಸಲು ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಲಾಯಿತು. ಆದರೆ ಇದ್ಯಾವುದರಿಂದಲೂ ಸಮಸ್ಯೆ ಬಗೆಹರಿಯುವುದಿಲ್ಲ ಬದಲಿಗೆ ಹೆಚ್ಚಾಗುತ್ತದೆ. ಆಗಲೇ ಹೇಳಿದಂತೆ ರೋಗಕ್ಕೆ ಕಾರಣವನ್ನು ತಿಳಿಯದೇ ಚಿಕಿತ್ಸೆ ನೀಡಲಾಗುತ್ತಿದೆ.

ಭಾರತದಕ್ಕೆ ಹೂಡಿಕೆಯ ಕೊರತೆಯಾಗಿಲ್ಲ ಬದಲಿಗೆ ಬೇಡಿಕೆಯ ಕೊರತೆಯಾಗಿದೆ. ಇದನ್ನು ಸರ್ಕಾರ ಆದಷ್ಟು ಬೇಗ ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ಉತ್ಪಾದನಾ ಕ್ಷೇತ್ರ ಕುಂಠಿತವಾಗಲು ಕಾರಣ ಕೊಳ್ಳಲು ಜನರ ಬಳಿ ಸಾಕಷ್ಟು ಹಣವಿಲ್ಲ. ಹಾಗಾಗಿಯೇ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಝುಕಿ ಬಳಿ 55 ಸಾವಿರ ಕೋಟಿ ರೂ.ಗಳ ಕಾರುಗಳು ಮಾರಾಟವಾಗದೇ ಬಿದ್ದಿವೆ. ಅವರ ವ್ಯಾಪಾರ ಶೇ.30ರಷ್ಟು ಕುಸಿದಿದೆ. ಒಳಉಡುಪುಗಳ ಮಾರಾಟ ಶೇ.20ರಷ್ಟು ಕುಸಿದಿದೆ. ಪಾರ್ಲೆಜಿ ಬಿಸ್ಕೆಟ್‍ಗಳ ಮಾರಾಟದಲ್ಲಿ ಭಾರೀ ಕಡಿತ ಉಂಟಾಗಿದೆ ಎಂದು ಕಂಪನಿಯ ಸಿಇಓ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಅರ್ಧದಷ್ಟು ಅಪಾರ್ಟ್‍ಮೆಂಟ್‍ಗಳು ಕೊಳ್ಳುವವರಿಲ್ಲದೇ ಖಾಲಿ ಬಿದ್ದಿವೆ. ಗೃಹ ನಿರ್ಮಾಣ ಕ್ಷೇತ್ರ ಕುಸಿದ ಪರಿಣಾಮ ಸಿಮೆಂಟ್, ಕಬ್ಬಿಣದ ಕೊಳ್ಳುವಿಕೆ ಕಡಿಮೆಯಾಗಿದೆ. ಈ ಎಲ್ಲಾ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕಿತ್ತುಹಾಕುತ್ತಿದ್ದಾರೆ.

ಯಾಕೀಗೆ ಆಯಿತು? ಆಗಲೇ ಹೇಳಿದ ಹಾಗೆ ಮುಂದಾಲೋಚನೆಯಿಲ್ಲದ ನೋಟು ರದ್ದತಿ ಮತ್ತು ಜಿಎಸ್‍ಟಿಯ ಹೊಡೆತ.. ಇದರ ಜೊತೆಗೆ ಕೃಷಿಯ ನಷ್ಟ ಸೇರಿಕೊಂಡರೆ ಇನ್ನೇನಾಗುತ್ತದೆ. ಒಂದು ಕಡೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಜನರಿಗೆ ಆದಾಯವಿಲ್ಲದೇ ಇರುವ ಸಂದರ್ಭದಲ್ಲಿ ಕೊಳ್ಳುವ ಶಕ್ತಿ ಹೇಗೆ ಬರುತ್ತದೆ? ಕೊಳ್ಳದಿದ್ದರೆ ಉತ್ಪಾದನೆ ಹೆಚ್ಚಾಗುವುದಾದರೂ ಹೇಗೆ? ಉತ್ಪಾದನೆಯೇ ಇಲ್ಲವೆಂದ ಮೇಲೆ ಉದ್ಯೋಗಗಳು ಎಲ್ಲಿಂದ?

ಹಾಗಾಗಿ ಸರ್ಕಾರ ಸಮಸ್ಯೆಯನ್ನು ಪರಿಹರಿಸಬೇಕಾದರೆ ಮೊದಲು ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು. ಅಂದರೆ ಅವರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ಆ ಕೊರತೆಯನ್ನು ತುಂಬಿಕೊಳ್ಳಲು ಅತೀ ಶ್ರೀಮಂತರ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಬೇಕು. ಜನರ ಕೈಲಿ ದುಡ್ಡು ಹರಿದಾಡಬೇಕಾದರೆ ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಹೆಚ್ಚು ಮಾಡಬೇಕು. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚು ಹಣ ಹೂಡಿಕೆ ಮಾಡಬೇಕು. ಮುಖ್ಯವಾಗಿ ಕೃಷಿಯನ್ನು ಮೇಲೆತ್ತಬೇಕು. ಏಕೆಂದರೆ ಇಂದಿಗೂ ದೇಶದ ಅತಿಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿರುವ ಕ್ಷೇತ್ರ ಕೃಷಿ. ನಂತರದ ಸ್ಥಾನ ಅಸಂಘಟಿತ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಸ್ವಂತ ಉದ್ಯೋಗಗಳು. ಇವರ ಮೇಲಿನ ಅವೈಜ್ಞಾನಿಕ ಜಿಎಸ್‍ಟಿ ಹೊರೆಯನ್ನು ತಗ್ಗಿಸಬೇಕು.

ಇದರ ಜೊತೆಜೊತೆಗೆ ಸ್ಥಳೀಯ ಸಂಪನ್ಮೂಲಗಳನ್ನಾಧರಿಸಿದ ಸ್ಥಳೀಯ ಉದ್ಯೋಗಕ್ಕೆ ಒತ್ತು ಕೊಡಬೇಕು. ಸ್ಥಳೀಯ ಜನರಿಗೆ ಉದ್ಯೋಗದ ಜೊತೆಗೆ ಲಾಭವೂ ಸಿಕ್ಕರೆ ಅವರು ಕೂಡಿಡುವುದಿಲ್ಲ. ಖರ್ಚು ಮಾಡುತ್ತಾರೆ.. ನಿಧಾನಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಮಹಾನಗರಗಳಲ್ಲಿ ಭಾರೀ ಕೈಗಾರಿಕೆಗಳನ್ನು ಸ್ಥಾಪಿಸುವ ಬದಲು ವಿಕೇಂದ್ರೀಕೃತವಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಒತ್ತು ನೀಡಬೇಕು. ಕೃಷಿಯನ್ನು ವೈಜ್ಞಾನಿಕ ಉನ್ನತ ದರ್ಜೆಗೇರಿಸಿ ರಫ್ತಿಗೆ ಉತ್ತೇಜನ ನೀಡಬೇಕು.

ತುರ್ತಾಗಿ ಮಾಡಬೇಕಾದುದೇನು?

ನಷ್ಟದಲ್ಲಿರುವ ಕಾರ್ಖಾನೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯದೇ ಅವರಿಗೆ ರಕ್ಷಣೆ ನೀಡಬೇಕು. ಆರ್ಥಿಕ ಪುನಶ್ಚೇತನ ಕಾಣುವವರೆಗೂ ಸರ್ಕಾರ ಮತ್ತು ಕಂಪನಿಗಳು ಅವರಿಗೆ ಸಂಬಳ ನೀಡುವ ಜವಾಬ್ದಾರಿ ತೆಗೆದುಕೊಳ್ಳಬೇಕು

ಉದ್ಯೋಗ ಸಚಿವಾಲಯವನ್ನು ಸ್ಥಾಪಿಸಿ ಉದ್ಯೋಗ ಕಳೆದುಕೊಂಡವರ ನೋಂದಣಿಯಾಗಬೇಕು. ಹೊಸ ಉದ್ಯೋಗಗಳ ಅವಕಾಶಗಳನ್ನು ಪಾರದರ್ಶಕಗೊಳಿಸಬೇಕು.

ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳ ಮಾಲೀಕರಿಗೆ ಬ್ಯಾಂಕುಗಳು ಈ ವರ್ಷ ಹೆಚ್ಚಿನ ಸಾಲ ನೀಡಬೇಕು ಮತ್ತು ಸಾಲ ಮರುಪಾವತಿಗೆ ಕನಿಷ್ಠ ಮೂರು ವರ್ಷಗಳ ಕಾಲಾವಧಿ ನೀಡಬೇಕು. ಅವೈಜ್ಞಾನಿಕ ಶೇ.18% ಜಿ.ಎಸ್.ಟಿ ತೆಗೆದುಹಾಕಿ ಶೇ.5%ಗೆ ಇಳಿಸಬೇಕು.

ಸರ್ಕಾರವು ನಷ್ಟದಲ್ಲಿರುವ ಆಟೋಮೊಬೈಲ್ ಮತ್ತಿತರ ಕ್ಷೇತ್ರಗಳಿಗೆ ಒಂದು ಪ್ಯಾಕೇಜ್ ಘೋಷಣೆ ಮಾಡಿ ಮಾಲೀಕರು ಮತ್ತು ಕಾರ್ಮಿಕರಿಬ್ಬರ ಹಿತ ಕಾಯಬೇಕು.

ಸರ್ಕಾರದ ನೀತಿಗಳು ಕೂಡಲೇ ಬದಲಾಗಬೇಕು. ದೊಡ್ಡ ಬಂಡವಾಳಿಗರಿಗೆ ಸಾಲ ನೀಡುವುದು ನಿಲ್ಲಬೇಕು. ಅವರನ್ನು ಸಾಲವನ್ನು ವಸೂಲು ಮಾಡಬೇಕು. ಬ್ಯಾಂಕಿಂಗ್ ಕ್ಷೇತ್ರವನ್ನು ದಕ್ಷಗೊಳಿಸಬೇಕು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...