Homeಕರ್ನಾಟಕನಿಮ್ಮ ಮಕ್ಕಳು ಕಲಿಯುವ ಶಿಕ್ಷಣ ಪದ್ಧತಿ ಹೀಗಿದ್ದರೆ ಚೆನ್ನ ಅಲ್ಲವೇ?

ನಿಮ್ಮ ಮಕ್ಕಳು ಕಲಿಯುವ ಶಿಕ್ಷಣ ಪದ್ಧತಿ ಹೀಗಿದ್ದರೆ ಚೆನ್ನ ಅಲ್ಲವೇ?

- Advertisement -
- Advertisement -

| ಜಿ.ಆರ್. ವಿದ್ಯಾರಣ್ಯ |

ಇತ್ತೀಚೆಗಷ್ಟೇ ಭಾರತ ಸರಕಾರದ ಶಿಕ್ಷಣ ನೀತಿಯ ಕರಡು ಪ್ರತಿ ಬಿಡುಗಡೆ ಮಾಡಿದೆ. ಅದರಲ್ಲಿ ಏನಿದೆ, ಏನಿಲ್ಲ, ಏನಿರಬೇಕು ಅಥವಾ ಬೇಡ ಅದರ ವಿಸ್ತೃತ ಚರ್ಚೆ ಇನ್ನೂ ಆಗಬೇಕಿದೆ. ಅದಕ್ಕೆ ಮುನ್ನವೇ ಇದು ತ್ರಿಭಾಷಾ ಸೂತ್ರದಡಿಯಲ್ಲಿ ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ಮೇಲೆ ಬಲವಂತವಾಗಿ ಹೇರುವ ಮರು ಪ್ರಯತ್ನ ಎಂಬ ದೋಷಾರೋಪಣೆ ಎದ್ದು ಹಲವಾರು ಎಚ್ಚರಿಕೆ ಕೂಗು, ಪ್ರತಿಭಟನೆಗಳು, ಅದಕ್ಕೆ ಬೇಕಾದ ಸಮಜಾಯಿಷಿ ಎಲ್ಲವೂ ನಡೆದಿದೆ. ಶ್ರೀ ಕಸ್ತೂರಿರಂಗನ್ ಸಮಿತಿ ಮಾತ್ರ ಇದರಲ್ಲಿ ನಮಗೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ, ಹಳೆಯ ಶಿಕ್ಷಣ ನೀತಿ ಸುಮಾರು 30ವರ್ಷ ಹಳೆಯದಾಗಿದ್ದು ಅದು ಇಂದಿನ ಸ್ಥಿತಿಗತಿಗೆ ಅನುಕೂಲವಾಗಿಲ್ಲದೆ ಇದ್ದುದರಿಂದ ಹೊಸ ಚಿಂತನೆಯ ಅವಶ್ಯಕತೆಯನ್ನು ಮನಗಂಡು, ಸರಕಾರದ ಆದೇಶದಂತೆ,ನೀತಿ ರೂಪಿಸಲಾಗಿದೆ ಮತ್ತು ಇದಕ್ಕೆ ಜನರು ತಮ್ಮ ತಿದ್ದುಪಡಿ ತಿಳಿಸಬಹುದಾಗಿದೆ ಎಂದು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ.

ನಮ್ಮ ಶಿಕ್ಷಣ ನೀತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಏನು ಕಲಿಯುತ್ತಿದ್ದಾರೆ, ನಿಜವಾಗಿ ಕಲಿಯುತ್ತಿದ್ದಾರೋ ಅಥವಾ ಶಾಲಾ-ಕಾಲೇಜಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಬೇಕಾದ ಅಂಕ ಗಳಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೋ ಎಂಬುದು ಚರ್ಚಾಸ್ಪದ ವಿಷಯ. ಈಗಿನ ಕಾಲದ ಪರೀಕ್ಷೆ ಫಲಿತಾಂಶಗಳನ್ನು ನೋಡಿದರೆ ನಾವು ನಿಜವಾಗಿ “ಮಾರ್ಕ್ಸ್”ವಾದಿಗಳಾಗುತ್ತಿರುವುದು ಎದ್ದು ಕಾಣುತ್ತದೆ. ನೂರಕ್ಕೆ ನೂರು ಅಂಕದಿಂದಲೂ ಮಕ್ಕಳು ಮತ್ತು ಅವರು ಪೋಷಕರು ಸಂತೋಷಪಡುತ್ತಿಲ್ಲ. 99.9% ಅಂಕ ಪಡೆದ ವಿದ್ಯಾರ್ಥಿಗಳು ಅಳುತ್ತಿರುವ ದೃಶ್ಯ ಮಾಧ್ಯಮದಲ್ಲಿ ಕಾಣಬಹುದಾಗಿದೆ. ದೆಹಲಿಯಲ್ಲಿ 95% ಅಂಕ ಗಳಿಸಿದ ಎರಡನೆಯ ಪಿಯು ವಿದ್ಯಾರ್ಥಿಗಳಿಗೆ ಅಲ್ಲಿಯ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ದೊರಕುತ್ತಿಲ್ಲ. ಬೇರೆ ನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕಲಿಯುವ ವಿಷಯ ಮಕ್ಕಳ ತಲೆಗೆ ಹೋಗುತ್ತಿದೆಯೇ, ಅವರು ನಿಜವಾಗಿ ಕಲಿತು ಜಾಣರಾಗುತ್ತಿದ್ದಾರೆಯೇ ಎಂಬ ಸಂದೇಹ ಸ್ವಾಭಾವಿಕವಾಗಿ ಮೂಡುತ್ತದೆ.

ಜಾಣತನ ಎಂದರೆ ಏನು? ಇಂಗ್ಲೀಷಿನಲ್ಲಿ ಇದನ್ನು ಇಂಟೆಲಿಜೆನ್ಸ್ ಎನ್ನುತ್ತಾರೆ. ಇದರಲ್ಲಿ ಹಲವಾರು ವಿಧಗಳಿವೆ. ಆದರೆ ನಾವು ಮುಖ್ಯವಾಗಿ ಕಲಿಸುವುದು ಮತ್ತು ಪರೀಕ್ಷಿಸುವುದು ಮೂರು-ನಾಲ್ಕು ಮಾತ್ರ. ಭಾಷಾ ಜ್ಞಾನ, ತರ್ಕಶಾಸ್ತ್ರ ಹಾಗೂ ಗಣಿತಜ್ಞಾನ, ಇವಿಷ್ಟು ವಿಷಯದ ಮೇಲೆ ನಮ್ಮ ಮಕ್ಕಳ ಜಾಣತನ (ಐ.ಕ್ಯೂ.) ಅಳೆಯಲಾಗುತ್ತದೆ. ಹಾರ್ವರ್ಡ್ ಶಿಕ್ಷಣ ತಜ್ಞ ಪ್ರಾಧ್ಯಾಪಕ ಹಾವರ್ಡ್ ಗಾರ್ಡನರ್ ಎಂಬುವರು ಒಟ್ಟು ಎಂಟು ವಿಧವಾದ ಜಾಣತನಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಮೇಲೆ ತಿಳಿಸಿದ ಮೂರು-ನಾಲ್ಕು ಜಾಣತನಗಳ ಜೊತೆಗೆ ದೈಹಿಕ ಕೈನೆಸ್ಥೆಟಿಕ್ಸ್, ಸ್ಪೇಷಿಯಲ್ ಕೈನೆಸ್ಥೆಟಿಕ್ಸ್, ಸಂಗೀತ, ಪರಸ್ಪರ ಸಂವಹನ(ಇಂಟರ್ ಪರ್ಸನಲ್) ಕಲೆ, ಆತ್ಮಾವಲೋಕನ(ಇಂಟ್ರಾ ಪರ್ಸನಲ್)ಕಲೆ ಮತ್ತು ನೈಸರ್ಗಿಕ ಜಾಣತನವನ್ನೂ ಸೇರಿಸಿದ್ದಾರೆ.

ಹಾವರ್ಡ್ ಗಾರ್ಡನರ್

ಸ್ಪೇಷಿಯಲ್ ಕೈನೆಸ್ಥೆಟಿಕ್ಸ್ ಎಂದರೆ ಜಗತ್ತನ್ನು ತ್ರಿಪರಿಮಾಣ(ಉದ್ದ-ಅಗಲ-ಎತ್ತರ)ದಲ್ಲಿ ಕಾಣುವ, ಅರಿತುಕೊಳ್ಳುವ ಕಲೆ. ಸಂಗೀತ ಜ್ಞಾನ ಐಚ್ಛಿಕ ವಿಷಯವಾಗಿದ್ದು ಇದು ಎಲ್ಲರಿಗೂ ಅನ್ವಯಿಸುವ ವಿಷಯ ಎಂದು ಯಾರೂ ಪರಿಗಣಿಸಿಲ್ಲ. ಕೇಳುವ ಕಿವಿ ಇರಲು ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ ಎಂಬ ಹಾಡು ನೆನಪಿರಬಹುದು. ಸಂಗೀತ ಲಯಬದ್ಧ. ಸಂಗೀತಕ್ಕೂ ಗಣಿತಕ್ಕೂ ಹತ್ತಿರದ ಸಂಬಂಧವಿದೆ. ಕರ್ನಾಟಕ/ಹಿಂದುಸ್ತಾನಿಯಾಗಲೀ, ಪಾಶ್ಚಾತ್ಯವಾಗಲೀ ಇದನ್ನು ಬರೆಯುವಾಗ ಗಣಿತದ ಅಕ್ಷರಗಳನ್ನು ಬಳಸುವುದನ್ನು ನೀವು ಕಾಣಬಹುದು. ಸಂಗೀತ ಬಲ್ಲವರಿಗೆ ಗಣಿತ ಸುಲಭವಾಗಿ ಅರ್ಥವಾಗುತ್ತದೆ.

ಇಂದಿನ ಜಗತ್ತಿನಲ್ಲಿ ತನ್ನನ್ನು ತಾನು ಅರಿತುಕೊಳ್ಳುವುದು ಎಷ್ಟೊಂದು ಮುಖ್ಯ. ಅದೇ ರೀತಿ ಪರಸ್ಪರ ಅರಿವು, ಸಮಾಜದ ಬಗ್ಗೆ ಅನುಭೂತಿ ಇವುಗಳ ಅವಶ್ಯಕತೆಯನ್ನು ಸ್ವಲ್ಪ ಮಟ್ಟಿಗೆ ನಮ್ಮ ಶಿಕ್ಷಣ ನೀತಿ ಈಗಾಗಲೇ ಗ್ರಹಿಸಿ, ಕೇಂದ್ರದ ಸಿಬಿಎಸ್ಇ ಪಠ್ಯಕ್ರಮದಲ್ಲಿ ಇವುಗಳ ಬಗ್ಗೆ ಒಂದಿಷ್ಟು ಉಲ್ಲೇಖವಿದೆ. ಆದರೆ ರಾಜ್ಯ ಶಿಕ್ಷಣ ನೀತಿಯಲ್ಲಿ ಇನ್ನೂ ಕಾಣುತ್ತಿಲ್ಲ ಮತ್ತು ಅವು ಶಿಕ್ಷಣದ ಮುಖ್ಯವಾಹಿನಿಗೆ ಬಂದಿಲ್ಲ. ಅದೇ ರೀತಿಯಲ್ಲಿ ದೈಹಿಕ ಕೈನೆಸ್ಥೆಟಿಕ್ಸ್ ಎಂದರೆ ದೇಹದ ಅಂಗಾಂಗಗಳನ್ನು ಬಳಸಿ ತನ್ನ ಒಳ ಅನಿಸಿಕೆಯನ್ನು ಇತರರಿಗೆ ತಿಳಿಸುವುದು; ಮುಖ್ಯವಾಗಿ ನೃತ್ಯ. ಇದೂ ಸಹ ಶಿಕ್ಷಣದ ಮುಖ್ಯವಾಹಿನಿಗೆ ಬಂದಿಲ್ಲ.

ನೈಸರ್ಗಿಕ ಜ್ಞಾನ. ಇದು ದೈವದತ್ತವಾಗಿ ಬಂದಿದ್ದು, ಇದನ್ನು ಮಕ್ಕಳಿಗೆ ತಾವಾಗಿಯೇ ವೃದ್ಧಿಸಿಕೊಳ್ಳಲು ಅವಕಾಶ ಕೊಡುವುದನ್ನು ಬಿಟ್ಟು, ನಾವು ಅದನ್ನು ಮೊಟಕುಗೊಳಿಸುವ ಪ್ರಯತ್ನವನ್ನೇ ಹೆಚ್ಚಾಗಿ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿಗೆ ಹೇಳಬೇಕಂದರೆ ನನ್ನ ಓರ್ವ ಮಿತ್ರರ ವೈಯುಕ್ತಿಕ ಅನುಭವ ಹಂಚಿಕೊಳ್ಳಬೇಕಾಗುತ್ತದೆ.

ವೃತ್ತಿಯಲ್ಲಿ ಸರಕಾರಿ ವೈದ್ಯರಾದ ಅವರು ತಾವಾಗಿಯೇ ಗ್ರಾಮೀಣ ಪ್ರದೇಶಕ್ಕೆ ಹಾಕಿಸಿಕೊಂಡು ಹೆಗ್ಗಡದೇವನ ಕೋಟೆಯ ಕಾಡಿನ ಬುಡಕಟ್ಟು ಜನಾಂಗದ ಹಾದಿಯೊಂದರಲ್ಲಿ ಕೆಲಸ ಪ್ರಾರಂಭಿಸಿದರು. ಅಲ್ಲಿಯ ಜನರಿಗೆ ಈ ಇಂಗ್ಲಿಷ್ ವೈದ್ಯರ ಅವಶ್ಯಕತೆ ಇರಲಿಲ್ಲ, ಹಾಗಾಗಿ ಇವರಿಗೆ ಮಾಡಲು ಕೆಲಸವಿರಲಿಲ್ಲ. ಸುಮ್ಮನೆ ಕುಳಿತು ಏನು ಮಾಡುವುದು ಎಂದು ಅಲ್ಲಿದ್ದ ಮಕ್ಕಳನ್ನು ಒಟ್ಟುಗೂಡಿಸಿ ಶಾಲೆ ಪ್ರಾರಂಭಿಸಲು ಪ್ರಯತ್ನ ಮಾಡಿದರು. ಎಂದೂ ಶಾಲೆಯನ್ನೇ ಕಾಣದ ಮಕ್ಕಳು ಆರರಿಂದ ಹದಿನಾಲ್ಕು ವಯಸ್ಸಿನವರಾಗಿದ್ದು, ಎಲ್ಲರಿಗೂ ಒಟ್ಟಾಗಿ ಕಲಿಸುವ ವಿಷಯ ಏನೆಂದು ಇವರಿಗೆ ತಕ್ಷಣ ಹೊಳೆಯಲಿಲ್ಲ. ಅವರಿಗೆ ಕನ್ನಡವಾಗಲೀ, ಇಂಗ್ಲೀಷ್ ಭಾಷೆಯಾಗಲೀ, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ವಿಜ್ಞಾನ, ಗಣಿತವಾಗಲೀ ಹೇಗೆ ಮತ್ತು ಎಲ್ಲಿಂದ ಪ್ರಾರಂಭಿಸಬೇಕು ಎಂಬುದು ಇವರಿಗೆ ಸ್ಪಷ್ಟವಾಗಿರಲಿಲ್ಲ. ಕೊನೆಗೆ ಎಲ್ಲರೂ ಹೋಗಿ ಬೇರೆ ಬೇರೆ ಗಿಡದಿಂದ ಬೇರೆ ಬೇರೆ ತರಹದ ಎಲೆಗಳನ್ನು ಆಯ್ದು ತನ್ನಿ, ಯಾರು ಹೆಚ್ಚಿನ ಎಲೆ ತರುತ್ತಾರೋ ಅವರಿಗೆ ಏನೋ ಬಹುಮಾನ ಇದೆ ಎಂದು ಹೇಳಿದರು. ಸಂತೋಷದಿಂದ ಓಡಿ ಹೋದ ಮಕ್ಕಳು ಸ್ವಲ್ಪ ಸಮಯದ ನಂತರ ತಮ್ಮ ತಮ್ಮ ಶಕ್ತ್ಯಾನುಸಾರ ಎಲೆಗಳನ್ನು ತಂದು ಕೊಟ್ಟರು. ಅದರಲ್ಲಿ ಒಂದು ಹನ್ನೆರಡು ವರ್ಷದ ಹುಡುಗ ನೂರಕ್ಕೂ ಹೆಚ್ಚು ತರಹದ ಎಲೆ ಸಂಗ್ರಹಿಸಿದ್ದು, ಆ ಎಲೆಗಳು ಯಾವ ಗಿಡದ್ದು, ಅದಕ್ಕೆ ಅವರ ಆಡುಭಾಷೆಯಲ್ಲಿ ಏನೆಂದು ಹೆಸರು, ಅದರಲ್ಲಿ ಯಾವಾಗ ಯಾವ ರೀತಿಯ ಹೂವು, ಹಣ್ಣು, ಕಾಯಿ ಬಿಡುತ್ತದೆ, ಆ ಗಿಡಕ್ಕೆ ಯಾವ ಯಾವ ಹಕ್ಕಿಗಳು ಯಾವ ಕಾಲದಲ್ಲಿ ಬರುತ್ತವೆ ಎಲ್ಲವನ್ನೂ ವಿವರಿಸಿದ. ಇದುವೇ ನೈಸರ್ಗಿಕ ಜಾಣತನ. ಎಂದೂ ಶಾಲೆಗೆ ಹೋಗದ ಅವನ ನೈಸರ್ಗಿಕ ಜ್ಞಾನ ಯಾವ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗೂ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಇದನ್ನು ಅಳೆಯುವ ಯಂತ್ರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬರಬೇಕು.

ನಮ್ಮ ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳ ಭಾಷಾ ಜ್ಞಾನ, ತರ್ಕ/ಗಣಿತ, ಇವನ್ನು ಐ.ಕ್ಯೂ. ಎಂದು ಅಳೆದು ಇವನು ಜಾಣ, ಇವನು ದಡ್ಡ, ಇವನು ಮೂರ್ಖ, ಇವನು ಮುಠ್ಠಾಳ ಮುಂತಾದ ಹಣೆಪಟ್ಟಿ ಕಟ್ಟುತ್ತೇವೆ. ಎಂದು ಶಾಲೆಗೆ ಹೋಗದ ನೂರಾರು ಸಸ್ಯಗಳ ಜ್ಞಾನ ಸ್ವಯಂ ಸಂಪಾದಿಸಿದ ಹನ್ನೆರಡು ವರ್ಷದ ಬಾಲಕ ಮೇಧಾವಿಯೋ, ಜಾಣನೋ, ದಡ್ಡನೋ ನೀವೇ ಯೋಚಿಸಿ. ಕೆಲವು ವರ್ಷದ ಹಿಂದೆ ಕೇಂದ್ರ ಸರಕಾರ ಜಾರಿಗೆ ತಂದ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಪ್ರಕಾರ ಎಂಟನೆಯ ತರಗತಿ ಉತ್ತೀರ್ಣರಾಗದ ಮಕ್ಕಳು ಆಟೋ ಚಾಲಕ ಪರವಾನಗಿ ಪಡೆಯಲು ಅನರ್ಹ ಎಂದು ಘೋಷಿಸಿತು. ಈ ಹುಡುಗ ಬಡತನದಿಂದಾಗಿ ಶಾಲೆ ಮುಂದುವರಿಸಲಾಗದೇ, ನಗರಕ್ಕೆ ಬಂದು, ತನ್ನ ಕುಟುಂಬವನ್ನು ರಕ್ಷಿಸಲು, ಆಟೋ ಚಾಲಕನಾಗಿ ದುಡಿಯಲು ಮುಂದಾದಾಗ, ನೀನು ಶಾಲೆಯಲ್ಲಿ  ಎಂಟು ವರ್ಷ ಕನ್ನಡ, ಇಂಗ್ಲೀಷ್, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ವಿಜ್ಞಾನ, ಗಣಿತ ಕಲಿಯಲಿಲ್ಲ ಎಂದು ಸರಕಾರದ ಶಿಕ್ಷಣ ನೀತಿ ಅವನ ಜೀವನಾವಕಾಶ ಕಿತ್ತುಕೊಳ್ಳುವುದು ನ್ಯಾಯವೇ? ಆತ್ಮಾವಲೋಕನ ಶಕ್ತಿಯುಳ್ಳ ಎಷ್ಟೋ ಮಹಾಪುರುಷರು ನಮ್ಮ ಭಾರತದಲ್ಲಿ ಸಾಧು-ಸಂತರಾಗಿ,  ಜ್ಞಾನಿಗಳಾಗಿ ಜಗತ್ತಿಗೇ ದಾರಿ ತೋರಿಸಿದ್ದಾರೆ. ತಮ್ಮ ಸಂಗೀತ-ನೃತ್ಯ ಕಲೆಯಿಂದ ಕೋಟ್ಯಾಂತರ ಜನರನ್ನು ರಂಜಿಸಿ ಅವರ ಜೀವನದಲ್ಲಿ ಆನಂದವನ್ನು ತುಂಬಿದ್ದಾರೆ. ಪರಸ್ಪರ ಸಂವಹನ ಕಲೆಯುಳ್ಳ ಜನರು ಎಷ್ಟೋ ಜಗಳ-ಕದನಗಳನ್ನು ಮಧ್ಯಸ್ತಿಕೆ ವಹಿಸಿ ತಡೆದಿದ್ದಾರೆ. ತ್ರಿಪರಿಮಾಣದಲ್ಲಿ ಯೋಚಿಸುವ ಶಕ್ತಿಯುಳ್ಳ ಎಷ್ಟೋ ಕಲಾವಿದರು ಶಿಲ್ಪಕಲೆ, ವಿನ್ಯಾಸದಿಂದ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ಇವರೆಲ್ಲ ಎಂಟನೆಯ ತರಗತಿಯಲ್ಲಿ ಉತ್ತೀರ್ಣರಾಗಿಲ್ಲ ಎಂದು ಇವರನ್ನು ಜೀವನದ ಮುಖ್ಯ ವಾಹಿನಿಯಿಂದ ವಂಚಿತಗೊಳಿಸುವುದು ಸರಿಯಾದ ಶಿಕ್ಷಣ ನೀತಿಯೇ? ಖಂಡಿತಾ ಅಲ್ಲ.

ಪ್ರಾಧ್ಯಾಪಕ ಹಾವರ್ಡ್ ಗಾರ್ಡನರ್ ಹೇಳಿರುವ ಎಂಟು ಜಾಣತನಗಳ ಪೈಕಿ ಮಕ್ಕಳಿಗೆ ಇಷ್ಟವಾದ ಯಾವುದೇ ಮೂರನ್ನು ಆಯ್ದುಕೊಂಡು ಶಾಲೆ/ಕಾಲೇಜು ದಾಟಲು, ಜೀವನದ ಮುಖ್ಯ ವಾಹಿನಿಗೆ ಸೇರಿ ಸಮಾಜಕ್ಕೆ ಬೇಕಾದಂತಹ ವ್ಯಕ್ತಿಯಾಗಲು ನಮ್ಮ ಶಿಕ್ಷಣ ನೀತಿ ಅನುವು ಮಾಡಿಕೊಡಬಲ್ಲದೇ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...