ಶಾಲೆಗಳಲ್ಲಿ ಕ್ರಿಸ್ಮಸ್ ಆಚರಣೆಗೆ ಹಿಂದುತ್ವ ಗುಂಪುಗಳು ಅಡ್ಡಿಪಡಿಸುತ್ತಿವೆ ಎಂಬ ಆರೋಪದ ಕುರಿತು ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಭಾನುವಾರ (ಡಿ.22) ಪ್ರತಿಕ್ರಿಯಿಸಿದ್ದು, ಶಿಕ್ಷಣ ಸಂಸ್ಥೆಗಳು ಕೋಮುವಾದದ ಪ್ರಯೋಗ ಶಾಲೆಗಳಾಗಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಘ ಪರಿವಾರ ನಡೆಸುತ್ತಿರುವ ಶಾಲೆಗಳು ಹಾಗೂ ಹಿಂದೂಗಳ ಆಡಳಿತ ಮಂಡಳಿಯನ್ನು ಹೊಂದಿರುವ ಖಾಸಗಿ ಶಾಲೆಯೊಂದು ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಸ್ಥಗಿತಗೊಳಿಸಿವೆ ಎಂದು ಸಿಪಿಐ(ಎಂ)ನ ಮುಖವಾಣಿಯಾದ ‘ದೇಶಾಭಿಮಾನಿ’ ಪತ್ರಿಕೆಯಲ್ಲಿ ಆರೋಪಿಸಲಾಗಿತ್ತು. ಆದರೆ, ಈ ಆರೋಪವನ್ನು ಶಾಲೆಗಳು ಹಾಗೂ ಅವುಗಳ ಆಡಳಿತ ಮಂಡಳಿಗಳು ನಿರಾಕರಿಸಿದ್ದವು.
ಅತ್ಯಧಿಕ ಮಟ್ಟದ ಪ್ರಜಾಸತ್ತಾತ್ಮಕ ಜಾಗೃತಿ ಹಾಗೂ ಸುದೀರ್ಘ ಕಾಲದ ಜಾತ್ಯತೀತ ಪರಂಪರೆ ಇರುವ ಕೇರಳದಲ್ಲಿ ಇಂತಹ ಕ್ರಮಗಳು ಈ ಹಿಂದೆಂದೂ ಕೇಳಿ ಬಂದಿರಲಿಲ್ಲ ಎಂದು ಹೇಳಿರುವ ಕೇರಳ ಸರ್ಕಾರ, ಈ ಆರೋಪಗಳ ಕುರಿತು ತುರ್ತು ತನಿಖೆಗೆ ಆದೇಶಿಸಿದೆ.
ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಅಥವಾ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಜನರನ್ನು ವಿಭಜಿಸುವ ಉತ್ತರ ಭಾರತದ ಮಾದರಿಯನ್ನು ಪರಿಚಯಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳು ಮಕ್ಕಳು ಕಲಿಯುವ ಹಾಗೂ ಒಟ್ಟಾಗಿ ಬೆಳೆಯುವ ತಾಣಗಳಾಗಿವೆ. ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ವಿಭಜನಾತ್ಮಕ ಪರಿಕಲ್ಪನೆಯನ್ನು ಬಿತ್ತಲು ಯತ್ನಿಸುವುದು ಸ್ವೀಕಾರಾರ್ಹವಲ್ಲ ಎಂದು ಎಚ್ಚರಿಸಿದ್ದಾರೆ.
ಓಣಂ, ಕ್ರಿಸ್ಮಸ್ ಹಾಗೂ ಈದ್ ಅನ್ನು ರಾಜ್ಯದ ಶಾಲೆಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದರಿಂದ ಮಕ್ಕಳು ಪರಸ್ಪರ ಗೌರವ, ಪ್ರೀತಿ ಮತ್ತು ಸಹಜೀವನವನ್ನು ಕಲಿಯಲು ಸಹಾಯಕವಾಗಿದೆ ಎಂದೂ ಅವರು ಹೇಳಿದ್ದಾರೆ.


