ತಳ್ಳುಗಾಡಿಯಲ್ಲಿದ್ದ ನೂರಾರು ಮೊಟ್ಟೆಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿವೆ. ಕುಪಿತಗೊಂಡ 14 ವರ್ಷದ ಬಾಲಕನೊಬ್ಬ ಇಬ್ಬರು ಅಧಿಕಾರಿಗಳನ್ನು ಪ್ರಶ್ನಿಸುತ್ತಿರುವ 30 ಸೆಕೆಂಡ್ಗಳ ವಿಡಿಯೋವೊಂದು ವೈರಲ್ ಆಗಿದ್ದು ನೋಡುಗರ ಮನಕರಗಿಸುವಂತಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ 100 ರೂ ಲಂಚ ಕೊಡದ ಕಾರಣಕ್ಕೆ ಮೊಟ್ಟೆ ಮಾರುತ್ತಿದ್ದ ಬಾಲಕನ ತಳ್ಳುಗಾಡಿಯನ್ನು ಕೆಡವಿದ ಅಧಿಕಾರಿಗಳ ಅಮಾನವೀಯ ವರ್ತನೆಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಹೆಚ್ಚುತ್ತಿರುವ ಕರೊನಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಲೆಫ್ಟ್ -ರೈಟ್ ನಿಯಮ ಜಾರಿಗೊಳಿಸಿದೆ. ಅದರಂತೆ ಒಂದು ದಿನ ಸಂಪೂರ್ಣವಾಗಿ ಎಡಬದಿಯಲ್ಲಿ ಮಾತ್ರ ಮಾರಬೇಕು ಮತ್ತು ಮರುದಿನ ಬಲಬದಿಯಲ್ಲಿ ಮಾತ್ರ ಮಾರಟ ಮಾಡಬೇಕಿದೆ. ಇದನ್ನು ಉಲ್ಲಂಘಿಸಿದ ಆರೋಪದಲ್ಲಿ ತಳ್ಳುಗಾಡಿಯಲ್ಲಿ ಮೊಟ್ಟೆ ಮಾರುತ್ತಿದ್ದ 14 ವರ್ಷದ ಯುವಕನಿಂದ ಸ್ಥಳೀಯ ಅಧಿಕಾರಿಗಳು 100 ರೂ ಲಂಚ ಕೇಳಿದ್ದಾರೆ. ವ್ಯಾಪಾರ ಕುಸಿತದಿಂದ ಲಂಚ ಕೊಡಲು ಯುವಕ ನಿರಾಕರಿಸಿದ್ದರಿಂದ ಇಡೀ ತಳ್ಳುಗಾಡಿಯನ್ನೇ ಕೆಡವಿ ನೂರಾರು ಮೊಟ್ಟೆಗಳನ್ನು ನಾಶಪಡಿಸಿರುವ ಅಮಾನವೀಯ ಘಟನೆ ಜರುಗಿದೆ.
Civic officials in Indore allegedly overturned egg cart of a small boy. The officials had warned that the egg cart would be seized if he did not leave the spot @ChouhanShivraj @OfficeOfKNath @INCIndia @INCMP @GargiRawat @RajputAditi @ndtvindia @ndtv pic.twitter.com/PnuqeLrbJh
— Anurag Dwary (@Anurag_Dwary) July 23, 2020
ಲಾಕ್ಡೌನ್ ಆರಂಭವಾದಾಗಿನಿಂದ ನನ್ನ ವ್ಯಾಪಾರ ಕುಸಿದಿದೆ. ಹಳೆ ಸಾಲವನ್ನೇ ನಾನು ಇನ್ನೂ ತೀರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಮೊಟ್ಟೆಗಳನ್ನು ನಾಶಪಡಿಸಿ ನನ್ನ ಬದುಕನ್ನು ಹಾಳು ಮಾಡಿದ್ದಾರೆ ಎಂದು ಯುವಕ ಕಣ್ಣೀರಾಗಿದ್ದಾನೆ.
ಈ ಲೆಫ್ಟ್ -ರೈಟ್ ನಿಯಮವನ್ನು ಬಿಜೆಪಿಯ ಹಿರಿಯ ಮುಖಂಡ ಭನ್ವಾರ್ ಸಿಂಗ್ ಶೇಖಾವತ್ ಸೇರಿದಂತೆ ಹಲವು ನಾಯಕರು ವಿರೋಧಿಸಿದ್ದಾರೆ. ಮಹೇಂದ್ರ ಹೋರ್ದಿಯ ಎಂಬ ಶಾಸಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಗೆ ಪತ್ರ ಬರೆದು ನಿಯಮ ರದ್ದುಗೊಳಿಸಲು ಕೋರಿದ್ದಾರೆ.
ಯುವಕನ ತಳ್ಳುಗಾಡಿ ಕೆಡವಿದ ಪ್ರಕರಣ ತೀವ್ರ ರೂಪ ಪಡೆದುಕೊಂಡಿದ್ದು, ಆ ಯುವಕನಿಗೆ ಸ್ಥಳೀಯ ಸಂಸ್ಥೆ ಪರಿಹಾರ ಕಟ್ಟಿಕೊಡಬೇಕು. ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡಬಾರದು. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಶಾಸಕ ಸಂಜಯ್ ಶುಕ್ಲಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಒಳಗೆ ಜನರಿದ್ದರೂ ಮನೆ ಬಾಗಿಲುಗಳನ್ನೇ ಸೀಲ್ಡೌನ್ ಮಾಡಿದ ಬಿಬಿಎಂಪಿ: ಜನಾಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಆಯುಕ್ತ