ವಿಧಾನ ಪರಿಷತ್ನ ಸಭಾಪತಿಯಾಗಿದ್ದ ಕಾಂಗ್ರೆಸ್ನ ಪ್ರತಾಪ ಚಂದ್ರ ಶೆಟ್ಟಿ ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ಫೆಬ್ರವರಿ 9 ರ ಮಂಗಳವಾರದಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಭಾಪತಿ ಸ್ಥಾನಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.
ಸೋಮವಾರ (ಇಂದು) ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ಪರಿಷತ್ನ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಎಂ.ಟಿ.ಬಿ. ನಾಗರಾಜ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಜೆಡಿಎಸ್ ಸದಸ್ಯರಾದ ಅಪ್ಪಾಜಿಗೌಡ, ಎಚ್.ಎಂ.ರಮೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!
ಇತ್ತ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ಸಭಾಪತಿ ಸ್ಥಾನದ ಚುನಾವಣೆಗೆ ನಿಲ್ಲಿಸಿದೆ. ನಸೀರ್ ಅಹ್ಮರ್ ಅವರು ಇಂದು ನಾಮಪತ್ರವನ್ನು ಸಲ್ಲಿಸಿದ್ದು ಈ ವೇಳೆ ಶಾಸಕ ಜಮೀರ್ ಅಹ್ಮದ್, ಕಾಂಗ್ರೆಸ್ ನಾಯಕ ಬಿಕೆ ಹರಿ ಪ್ರಸಾದ್ ಹಲವರು ಜತೆಗಿದ್ದರು.
ಬಿಜೆಪಿಯೊಂದಿಗೆ ಯಾವುದೆ ಮೈತ್ರಿಯಿಲ್ಲ ಎಂದು ಹೇಳುತ್ತಲೆ ಬಂದಿದ್ದ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿಯನ್ನು ವಚನ ಭ್ರಷ್ಟ ಎಂದು ಪದೇ ಪದೇ ಹೇಳುತ್ತಿದ್ದ ಯಡಿಯೂರಪ್ಪ ಮತ್ತೊಮ್ಮೆ ಪರಸ್ಪರ ಅಧೀಕೃತವಾಗಿ ಮೈತ್ರಿ ಮಾಡಿಕೊಂಡಿದ್ದಾರೆ.
ಈ ಮೈತ್ರಿಯು ಕೇವಲ ಪರಿಷತ್ನ ಸಭಾಪತಿ ಚುನಾವಣೆ ಮಾತ್ರ ಸೀಮಿತ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಕೃಷಿ ಕಾನೂನಿನ ಬಗ್ಗೆ ಮಾತನಾಡುತ್ತಾ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ್ದಾರೆ.
ಇತ್ತಿಚೆಗಷ್ಟೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಕುಮಾರಸ್ವಾಮಿ ವಿರುದ್ದ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅದನ್ನು ಖಂಡಿಸಿದ್ದರು. ಅಲ್ಲದೆ ಕುಮಾರಸ್ವಾಮಿಯ ಹುಟ್ಟುಹಬ್ಬಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರು ಶುಭಾಶಯ ಕೋರಿ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ: ‘ಅಧಿಕಾರಸ್ಥರು ರೈತರ ಶಾಂತಿಯುತ ಪ್ರತಿಭಟನೆಯನ್ನು ಗೌರವಿಸಬೇಕು’: ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗ