ಇತಿಹಾಸದಲ್ಲೂ ಕೂಡಾ ಸರ್ವಾಧಿಕಾರಿ ಶಕ್ತಿಗಳು ಜನರನ್ನು ತುಳಿಯುತ್ತಿದ್ದವು. ಆದರೆ, ಒಂದು ಸಮಯ ಬಂದಾಗ ಎಲ್ಲ ಜನತೆ ಒಗ್ಗೂಡಿ ಹೋರಾಡಿದ್ದರಿಂದ ಜಯವಾಯಿತು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ದರ್ಶನ್ ಪಾಲ್ ಹೇಳಿದರು.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಮಾತನಾಡಿದ ಅವರು, ನೀವುಗಳು ದೇಶ ಉಳಿಸುವ ಒಂದು ಮಹೋನ್ನತವಾದ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ. ಈಗ ಪ್ರಶ್ನೆ ಚರ್ಚೆ ನಡೆಸುವುದಲ್ಲ, ಬಹುಪಾಲು ಏನು ಮಾಡಬೇಕೆಂಬುದು ನಮಗೆಲ್ಲ ಗೊತ್ತಿದೆ. ಪ್ರಶ್ನೆ ಇರುವುದು ಜನರನ್ನು ಹೇಗೆ ತಮ್ಮ ಮೇಲಿನ ತಾರತಮ್ಯ, ದೌರ್ಜನ್ಯ, ಸರ್ವಾಧಿಕಾರದ ವಿರುದ್ಧ ದನಿಯೆತ್ತುವಂತೆ ಮಾಡುತ್ತೇವೆ ಎಂಬುದು ಎಂದರು.
ನಾನು ಭಾರತದ ವಿಶೇಷವಾಗಿ ಪಂಜಾಬ್ನ ಎಲ್ಲ ರೈತ ಸಂಘಟನೆಗಳು ಮತ್ತು ಪ್ರಗತಿಪರರ ಪರವಾಗಿ ಹಾರೈಸುತ್ತೇನೆ- ಈ ಪ್ರಯತ್ನ ನಿಮ್ಮ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಲಿ. ನಿಮ್ಮ ಸಮಾವೇಶ ದೇಶದಾದ್ಯಂತ ರೈತರು, ಕಾರ್ಮಿಕರು, ತುಳಿತಕ್ಕೊಳಗಾದ ಜನಸಮುದಾಯಗಳೆಲ್ಲ ಒಗ್ಗೂಡಿ ಈ ಸಂಘರ್ಷದಲ್ಲಿ ಗೆಲ್ಲುವ ಪ್ರಯತ್ನಕ್ಕೆ ಒಂದು ಮುನ್ನುಡಿಯಾಗಲಿ ಎಂದು ಹೇಳಿದರು.
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವವರೇ ನೈಜ ದೇಶಪ್ರೇಮಿಗಳು: ಪ್ರೊ. ಬರಗೂರು ರಾಮಚಂದ್ರಪ್ಪ