Homeಅಂಕಣಗಳುಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

- Advertisement -
- Advertisement -

ದೆಹಲಿಯ ಗಡಿಗಳಿಗೆ ಲಗ್ಗೆ ಹಾಕಿದ್ದ ರೈತ ಚಳವಳಿಯ ಕತೆ ಇನ್ನೇನು ಮುಗಿದೇ ಹೋಯಿತೆಂದು ಗಹಗಹಿಸಿದ್ದ ಕೇಂದ್ರ ಸರ್ಕಾರ ಮತ್ತು ಅದರ ಮಡಿಲಲ್ಲಿ ಆಡುವ ಜನದ್ರೋಹಿ ಮೀಡಿಯಾದ ಕಪಾಳಕ್ಕೆ ಏಟು ಬಿದ್ದಿದೆ. ಆಳುವವರ ಕುತಂತ್ರ, ಷಡ್ಯಂತ್ರ, ದಮನ ದೌರ್ಜನ್ಯಗಳ ಬೂದಿಯಿಂದ ಫೀನಿಕ್ಸ್ ಹಕ್ಕಿಯಂತೆ ಜಿಗಿದೆದ್ದು ಹಾರಿದೆ ರೈತ ಹೋರಾಟ. ರೈತನ ಹಾದಿಗೆ ಪ್ರಭುತ್ವ ಮುಳ್ಳು ಹಾಸಿದರೆ, ರೈತ ಮುಳ್ಳುಗಳ ಪಕ್ಕದಲ್ಲಿ ಮಣ್ಣು ಚೆಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದಾನೆ.

ಈ ಆಂದೋಲನ ಪಶ್ಚಿಮ ಯುಪಿಯ 2013ರ ಕೋಮು ಧ್ರುವೀಕರಣವನ್ನು ಕರಗಿಸುತ್ತಿರುವ ಸೂಚನೆಗಳಿವೆ. ದೆಹಲಿ ಗಡಿಗಳಲ್ಲಿ ಅದುಮಲಾಗುತ್ತಿರುವ ರೈತರ ಆಂದೋಲನ ಒಳನಾಡುಗಳಿಗೆ ಪಸರಿಸಿ ಪುಟಿದೇಳತೊಡಗಿದೆ. ಒಂದರ ನಂತರ ಮತ್ತೊಂದರಂತೆ ನಡೆಯತೊಡಗಿರುವ ಕಿಸಾನ್ ಮಹಾ ಪಂಚಾಯತ್‌ಗಳಿಗೆ ಭಾರೀ ಸಂಖ್ಯೆಯ ರೈತರು ಹರಿದು ಸೇರುತ್ತಿದ್ದಾರೆ. 1980-90ರ ದಶಕಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್ ಸಮಾವೇಶಗಳಲ್ಲಿ ಕೇಳಿಬರುತ್ತಿದ್ದ ಹರಹರ ಮಹಾದೇವ್-ಅಲ್ಲಾಹು ಅಕ್ಬರ್ ಘೋಷಣೆಗೆ ಹೊಸ ಜೀವ ಸಿಗುವ ಸಾಧ್ಯತೆ ಕಂಡುಬಂದಿದೆ.

ವೇದಿಕೆಗಳ ಮೇಲೆ ಮತ್ತು ಸಭೆಗಳಲ್ಲಿ ಜಾಟ್-ಮುಸ್ಲಿಮ್ ಏಕತೆ ಮತ್ತೆ ಕಾಣತೊಡಗಿದೆ. ಮುಸಲ್ಮಾನ ರೈತರು ರೈತ ಸಮಾವೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಮೋದಿಯವರತ್ತ ತಿರುಗಿದ್ದ ಯುವಜನರಲ್ಲಿ ಭ್ರಮನಿರಸನ ಮತ್ತು ಸಿಟ್ಟು ಹುಟ್ಟಿದೆ. 2013ರಲ್ಲಿ ಆಗಿದ್ದು ತಪ್ಪೆಂಬ ಪಶ್ಚಾತ್ತಾಪ ಪ್ರಕಟವಾಗತೊಡಗಿದೆ. ಹರಿಯಾಣ, ಪಂಜಾಬ್, ಪಶ್ಚಿಮ ಯುಪಿ, ಮಧ್ಯ ಯುಪಿ ರಾಜಸ್ತಾನದಲ್ಲಿ ರೈತ ಆಂದೋಲನ ರಭಸ ಪಡೆಯತೊಡಗಿದೆ..

2013ರಲ್ಲಿ ಮುಝಫರ್‌ನಗರ್-ಶಾಮ್ಲಿಯ ಹಿಂದು-ಮುಸ್ಲಿಮ್ ಕೋಮು ಗಲಭೆಗಳಿಗೆ 60 ಮಂದಿ ಬಲಿಯಾಗಿದ್ದರು. ಈ ಗಲಭೆಗಳು ಅರವತ್ತು ಸಾವಿರಕ್ಕೂ ಹೆಚ್ಚು ಮಂದಿ ಮುಸಲ್ಮಾನರನ್ನು ನಿರಾಶ್ರಿತರ ಶಿಬಿರಗಳ ಸಂಕಟಕ್ಕೆ ತಳ್ಳಿದ್ದವು. ಘಾಜಿಯಾಬಾದ್, ಮೇರಠ್, ಮುಝಫರ್‌ನಗರ್, ಹಸ್ತಿನಾಪುರ, ಮವಾನ, ಶಾಮ್ಲಿ, ಕೈರಾನ, ಬಾಘ್ಪತ್, ಸಹಾರಣಪುರ, ದೇವಬಂದ್ ಉದ್ದಗಲಗಳಿಗೆ ಕೋಮುವಾದಿ ಕನ್ನಾಲಿಗೆ ಚಾಚಿ ಉರಿದಿತ್ತು.

ಕಬ್ಬು ಬೆಳೆಯುವ ಬೆಲ್ಲ- ಸಕ್ಕರೆಯ ಸಿಹಿ ಸೀಮೆ ಪಶ್ಚಿಮಿ ಉತ್ತರಪ್ರದೇಶ. ಗಂಗೆ-ಯಮುನೆಯರ ಹೇರಳ ನೀರುಂಡು ಮಲೆತ ಸದಾ ಹಸಿರಿನ ನಾಡು. ನೆರೆಯ ಹರಿಯಾಣ-ಪಂಜಾಬನ್ನೂ ಮೀರಿಸಿದ ಹಸಿರು ಕ್ರಾಂತಿ ಇಲ್ಲಿ ಜರುಗಿದೆ. ಇಲ್ಲಿನ ಜಾಟರ ಜನಸಂಖ್ಯೆಯ ಪ್ರಮಾಣ ಶೇ.6ರಷ್ಟು ಮಾತ್ರ. ಆದರೂ ಈ ನಾಡನ್ನು ಜಾಟಸೀಮೆ ಎಂದು ಕರೆಯುವುದುಂಟು. ಶೇ. ಏಳರಷ್ಟು ರಜಪೂತರು ಮತ್ತು ಶೇ.4ರಷ್ಟು ಗುಜ್ಜರರು ಇಲ್ಲಿನ ಇತರೆ ಪ್ರಭಾವಿ ಜಾತಿಗಳು.

ಮೋ-ಶಾ ಜೋಡಿಗೆ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಸೀಟುಗಳನ್ನು ಗೆಲ್ಲುವ ಸವಾಲು ಎದುರಾದಾಗ ಅವರು ಆರಿಸಿಕೊಂಡ ನೆಲ ’ಫಲವತ್ತಾದ’ ಪಶ್ಚಿಮ ಯುಪಿ. ಯಾಕೆಂದರೆ, ಇಲ್ಲಿ ಮುಸಲ್ಮಾನರ ಜನಸಂಖ್ಯೆ ಯುಪಿಯಲ್ಲೇ ಅತಿ ಹೆಚ್ಚು. ಹನ್ನೆರಡು ಜಿಲ್ಲೆಗಳಲ್ಲಿ ಮುಸಲ್ಮಾನರ ಶೇಕಡಾವಾರು ಪ್ರಮಾಣ ಶೇ.35ಕ್ಕೂ ಹೆಚ್ಚು. ಬಿಜನೂರ್ ಜಿಲ್ಲೆಯಲ್ಲಿ ಮುಸಲ್ಮಾನರ ಪ್ರಮಾಣ ಶೇ.49.14. ಮೊರಾದಾಬಾದಿನಲ್ಲಿ ಶೇ.45.54, ಅಮರೋಹ ಮತ್ತು ಸಹಾರಣಪುರದಲ್ಲಿ ತಲಾ ಶೇ.29. ಮುಝಫರ್‌ನಗರ್‌ನಲ್ಲಿ ಶೇ.38. ಮೇರಠ್‌ನಲ್ಲಿ ಶೇ.33. ಬಾಘಪತದಲ್ಲಿ ಶೇ.25. ಇಲ್ಲಿನ ಮುಸಲ್ಮಾನರು ಲಾಗಾಯಿತಿನಿಂದ ಚರಣ್ ಸಿಂಗ್ ಅವರ ಭಾರತೀಯ ಲೋಕದಳದ ಬೆಂಬಲಿಗರು. ಚರಣಸಿಂಗ್ ಬದುಕಿರುವ ತನಕ ಜಾಟರು ಮತ್ತು ಮುಸಲ್ಮಾನರೇ ಲೋಕದಳದ ಅಡಿಪಾಯ ಆಗಿದ್ದರು. ಪಶ್ಚಿಮ ಉತ್ತರಪ್ರದೇಶದ ಮುಸಲ್ಮಾನರು ಬಹುತೇಕ ರೈತರು. ಜಾಟ ರೈತರನ್ನು ಬಾಧಿಸುತ್ತಿದ್ದ ಅವೇ ಸಮಸ್ಯೆಗಳು ಮುಸಲ್ಮಾನ ರೈತರನ್ನೂ ಕಾಡಿದ್ದವು.

ಚೌಧರಿ ಚರಣಸಿಂಗ್ ಅವರು ಮಧ್ಯಮವರ್ಗದ ರೈತಾಪಿಗಳನ್ನು ಸಂಘಟಿಸಿ ಬೆಳೆಸಿದ್ದ MAJGAR (ಮುಸ್ಲಿಮ್-ಆಹಿರ್ (ಯಾದವ್)- ಜಾಟ್- ಗುಜ್ಜರ್-ರಜಪೂತ) ಎಂಬ ಸಾಮಾಜಿಕ ಮೈತ್ರಿಕೂಟ ಚೆದುರಿ ಹೋಗಿತ್ತು. ಒಮ್ಮೆ ಬಿಜೆಪಿ, ಮತ್ತೊಮ್ಮೆ ಸಮಾಜವಾದಿ ಪಾರ್ಟಿ, ಕಾಂಗ್ರೆಸ್ಸಿನ ಜೊತೆಗೆ ಚರಣಸಿಂಗ್ ಮಗ ಅಜಿತ್ ಸಿಂಗ್ ಮಾಡಿಕೊಂಡ ಅವಕಾಶವಾದಿ ಚುನಾವಣಾ ಮೈತ್ರಿಗಳು MAJGAR ಮೈತ್ರಿಕೂಟದ ಅಡಿಗಲ್ಲುಗಳನ್ನು ಕದಲಿಸಿಬಿಟ್ಟಿತ್ತು. 2013ರ ಕೋಮು ಗಲಭೆಗಳ ಹಾದಿ ಸಲೀಸಾಗಿತ್ತು. 2009ರಲ್ಲಿ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಐದು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದರು. ಆದರೆ ಮುಸಲ್ಮಾನರು ಅವರಿಂದ ದೂರವಾಗಿದ್ದರು. ಚರಣಸಿಂಗ್ ನಿಧನದ ನಂತರ ಮೊದಲ ಬಾರಿಗೆ ಅವರ ಸೀಮೆಯ ಜಾಟರು ಮತ್ತು ಮುಸಲ್ಮಾನರು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಮತ ಚಲಾಯಿಸಿದ್ದರು.

PC : No Filter

ಮಾಜಿ ಪ್ರಧಾನಿ ಮತ್ತು ರೈತನಾಯಕ ಚೌಧರಿ ಚರಣಸಿಂಗ್ 1985ರಲ್ಲಿ ಪಾರ್ಶ್ವವಾಯುಪೀಡಿತರಾಗಿ ಹಾಸಿಗೆ ಹಿಡಿದವರು 1987ರಲ್ಲಿ ತೀರಿಹೋದರು.

ಭಾರತೀಯ ಕಿಸಾನ್ ಯೂನಿಯನ್ ಮತ್ತು ಮಹೇಂದ್ರಸಿಂಗ್ ಟಿಕೇತ್ ಪಶ್ಚಿಮ ಯುಪಿಯಲ್ಲಿ ಚರಣಸಿಂಗ್ ಮತ್ತು ಅವರ ಪಕ್ಷ ಲೋಕದಳ ತೆರವು ಮಾಡಿದ್ದ ಸ್ಥಾನವನ್ನು ತುಂಬಿದ್ದರು.

ಮಹೇಂದ್ರಸಿಂಗ್ ಟಿಕೇತ್ ಅವರ ಮಕ್ಕಳಿಬ್ಬರು ನರೇಶ್ ಮತ್ತು ರಾಕೇಶ್ ಟಿಕೇತ್. ಪಶ್ಚಿಮ ಉತ್ತರಪ್ರದೇಶದ ಕೋಮುಗಲಭೆಗಳಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಪಾಲ್ಗೊಂಡಿದ್ದುಂಟು. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದು ಹೌದು. ದೆಹಲಿ ಗಡಿಗಳಿಗೆ ಲಗ್ಗೆ ಹಾಕಿ ಕುಳಿತ ರೈತ ಆಂದೋಲನದ ದುರ್ಬಲ ಕೊಂಡಿ ಎಂದೇ ಆರಂಭದ ದಿನಗಳಲ್ಲಿ ರಾಕೇಶ್ ಟಿಕೇತ್ ಅವರನ್ನು ಅನುಮಾನಿಸಲಾಗಿತ್ತು. ಸರ್ಕಾರದ ಪರವಾಗಿ ಯಾವಾಗ ಚಾಪೆ ಸುತ್ತುವರೋ ಎಂಬ ಗುಮಾನಿಯೂ ಅವರ ಕುರಿತು ಇತ್ತು.

ಆದರೆ ಜನವರಿ 26ರ ಗಣರಾಜ್ಯ ದಿನದ ಕೆಂಪುಕೋಟೆಯ ಘಟನಾವಳಿಗಳು ಮತ್ತು ಮರುದಿನ ರೈತರ ಮೇಲೆ ನಡೆದ ಹಿಂಸಾಚಾರ ರಾಕೇಶ್-ನರೇಶ್ ಮಾತ್ರವಲ್ಲದೆ ಇಡೀ ಪಶ್ಚಿಮ ಉತ್ತರಪ್ರದೇಶ ಮತ್ತು ಹರಿಯಾಣದ ಜಾಟರು ಮತ್ತಿತರೆ ರೈತ ಸಮುದಾಯವನ್ನು ಬಿಜೆಪಿ ವಿರುದ್ಧ ತಿರುಗಿಸಿ ನಿಲ್ಲಿಸಿದೆ.

ಜನವರಿ 28ರಂದು ಮುಝಫರ್‌ನಗರ್‌ನಲ್ಲಿ ಜರುಗಿದ ಮೊದಲನೆಯ ಕಿಸಾನ್ ಮಹಾ ಪಂಚಾಯತ್ ಐತಿಹಾಸಿಕ ಎನಿಸಿತು. ಲಕ್ಷೆಪಾದಿಯಾಗಿ ನೆರೆದಿದ್ದ ರೈತರು ಈ ಸಭೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಮುಸ್ಲಿಮ್ ರೈತರು ಪಾಲ್ಗೊಂಡಿದ್ದರು. ಚರಣ್ ಸಿಂಗ್ ಅವರ ಮಗ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ವಿರುದ್ಧ 2019ರ ಲೋಕಸಭಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಕ್ಕೆ ಮತ್ತು 2013ರ ಕೋಮುಗಲಭೆಗಳಲ್ಲಿ ಮುಸಲ್ಮಾನ ಸೋದರರ ಕೈಬಿಟ್ಟಿದ್ದಕ್ಕೆ ತಮ್ಮನ್ನು ಕ್ಷಮಿಸುವಂತೆ ನರೇಶ್ ಟಿಕೇತ್ ವಿನಂತಿಸಿದರು. ನಾಯಕರು ರೈತರಲ್ಲಿ ಹಿಂದು-ಮುಸ್ಲಿಮ್ ಏಕತೆಯನ್ನು ಸಾರಿದರು. ಮಹೇಂದ್ರ ಸಿಂಗ್ ಟಿಕೇತ್ ಅವರ ಬಲಗೈಯಂತೆ ಕೆಲಸ ಮಾಡಿದ್ದ ರೈತ ನಾಯಕ ಗುಲಾಮ್ ಮಹಮ್ಮದ್ ಜೋಲಾಗೆ ಈಗ 85ರ ವಯಸ್ಸು. ತಮ್ಮ ಮಾತಿನ ಸರದಿ ಬಂದಾಗ ಮುಲಾಜಿಲ್ಲದೆ ನೆರೆದಿದ್ದವರ ಮುಖಕ್ಕೆ ಹೊಡೆದಂತೆ ಜೋಲಾ ಹೇಳಿದ್ದರು- ’ಈವರೆಗೆ ನೀವು ಎರಡು ಬಹುದೊಡ್ಡ ತಪ್ಪುಗಳನ್ನು ಮಾಡಿದ್ದೀರಿ. ಒಂದನೆಯದು ನೀವು ಅಜಿತ್ ಸಿಂಗ್ ಅವರನ್ನು ಸೋಲಿಸಿದಿರಿ. ಎರಡನೆಯದಾಗಿ ಮುಸಲ್ಮಾನರನ್ನು ಕೊಂದಿರಿ’. ಜೋಲಾ ಮಾತನ್ನು ಸಭೆ ತಿರಸ್ಕರಿಸಲಿಲ್ಲ, ಅಣಕಿಸಲಿಲ್ಲ. ಬದಲಾಗಿ ಸದ್ದಿಲ್ಲದೆ ಆತ್ಮನಿರೀಕ್ಷೆ ಮಾಡಿಕೊಳ್ಳುತ್ತಿದೆ ಎಂಬಂತೆ ಸದ್ದಿಲ್ಲದೆ ಆಲಿಸಿತು.

ಮಹಾಪಂಚಾಯತ್‌

2013ರ ಕೋಮು ಗಲಭೆಗಳ ನಂತರ ಅವರು ಭಾರತೀಯ ಕಿಸಾನ್ ಯೂನಿಯನ್‌ನಿಂದ ದೂರವಾಗಿ ಭಾರತೀಯ ಕಿಸಾನ್ ಮಜ್ದೂರ್ ಮಂಚ್ ಕಟ್ಟಿಕೊಂಡಿದ್ದರು. ನರೇಶ್ ಕ್ಷಮೆ ಕೋರಿದ ನಂತರ ಅಜಿತ್ ಸಿಂಗ್ ಅವರ ಮಗ ಜಯಂತ್ ಚೌಧರಿ ಮಹಮ್ಮದ್ ಜೋಲಾ ಅವರ ಕಾಲು ಮುಟ್ಟಿ ನಮಸ್ಕರಿಸಿದರು. 60 ಮಂದಿಯನ್ನು ಬಲಿತೆಗೆದುಕೊಂಡು 65 ಸಾವಿರ ಮಂದಿ ಮುಸಲ್ಮಾನರನ್ನು ನಿರಾಶ್ರಿತರನ್ನಾಗಿ ಮಾಡಿದ ಕೋಮುಗಲಭೆಗಳ ಗಾಯಗಳು ಇನ್ನು ಮಾಯುತ್ತವೆ ಎಂಬ ವಿಶ್ವಾಸವನ್ನು ಮಹಮ್ಮದ್ ಜೋಲಾ ವ್ಯಕ್ತಪಡಿಸಿದರು.

ಜನಪರ ಚಳವಳಿಯೊಂದು ತನ್ನ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುವ ಜೊತೆಜೊತೆಗೆ ಜನತಾಂತ್ರಿಕ ಮತ್ತು ಮಾನವೀಯ ಗುಣಗಳ ಮರುಸ್ಥಾಪನೆಗೆ ಸದ್ದಿಲ್ಲದೆ ಕೊಡುಗೆ ನೀಡುತ್ತಿರುತ್ತದೆ. ಆಳುವ ಪಟ್ಟಭದ್ರರು ಮತ್ತು ಅವರೊಂದಿಗೆ ಕೈ ಜೋಡಿಸಿದ ಕಾರ್ಪೊರೇಟ್ ಖೂಳರನ್ನು ಹಾಲಿ ರೈತ ಚಳವಳಿ ಹೆಸರು ಹಿಡಿದು ಕರೆದು ಗುರುತಿಸಿದೆ. ಅದೇ ರೀತಿ ಆಳುವವರ ಮಡಿಲಿನಲ್ಲಿ ಆಡತೊಡಗಿರುವ ಜನದ್ರೋಹಿ ಪತ್ರಿಕೋದ್ಯಮವನ್ನೂ ರೈತ ಚಳವಳಿ ಬೆತ್ತಲೆ ಮಾಡಿದೆ. ಅದನ್ನು ಎದುರಿಸುವ ಬಗೆ ಹೇಗೆಂದು ಸಮಾಜಕ್ಕೆ ಪಾಠ ಹೇಳಿಕೊಡತೊಡಗಿದೆ.


ಇದನ್ನೂ ಓದಿ: ಟೋಲ್ ಪ್ಲಾಜಾ ಮುತ್ತಿಗೆ, ದೇಶಾದ್ಯಂತ ರೈಲು ತಡೆ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...