Homeಕರ್ನಾಟಕಆರೋಪಿಗಳನ್ನು ಗುರುತಿಸಿದ ಹಲವು ಸಾಕ್ಷಿಗಳು: ಈ ತಿಂಗಳ ಗೌರಿ ಲಂಕೇಶ್ ಹತ್ಯಾ ಪ್ರಕರಣ ವಿಚಾರಣಾ ವರದಿ

ಆರೋಪಿಗಳನ್ನು ಗುರುತಿಸಿದ ಹಲವು ಸಾಕ್ಷಿಗಳು: ಈ ತಿಂಗಳ ಗೌರಿ ಲಂಕೇಶ್ ಹತ್ಯಾ ಪ್ರಕರಣ ವಿಚಾರಣಾ ವರದಿ

- Advertisement -
- Advertisement -

ಗೌರಿ ಲಂಕೇಶ್ ಹತ್ಯಾ ಪ್ರಕರಣದ ವಿಚಾರಣೆಯು ಫೆಬ್ರವರಿ 14 ರಿಂದ 17 ರವರೆಗೆ ನಡೆಯಿತು. ಒಟ್ಟು 7 ಸಾಕ್ಷಿಗಳ ಹೇಳಿಕೆ ಮತ್ತು ಪಾಟಿ ಸವಾಲುಗಳು ನಡೆದರೆ, ಕಳೆದ ತಿಂಗಳು ಅಪೂರ್ಣವಾಗಿದ್ದ ಸಾಕ್ಷಿ ರಾಜ ಕುಮಾರರ ಪಾಟಿ ಸವಾಲನ್ನು ಈ ಬಾರಿ ಮುಂದುವರೆಸಲಾಯಿತು.

ಕಳೆದ ತಿಂಗಳು ಪೀಠದಲ್ಲಿದ್ದ ನ್ಯಾ. ರಾಮಚಂದ್ರ ಹುದ್ದಾರ್ ಅವರು ಹೈಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆದದ್ದರಿಂದ, ಈಗ ಆ ಪೀಠದಲ್ಲಿ ನ್ಯಾ. ಮುರಳೀಧರ ಪೈ ಅವರು ಅಧಿಕಾರ ವಹಿಸಿಕೊಂಡಿದ್ದಾರೆ

ಎಸ್.ಆರ್. ವಿರೇಂದ್ರ ಪ್ರಸಾದ, ಪೋಲೀಸ್ ನಿರೀಕ್ಷಕರು, ಚನ್ನರಾಯಪಟ್ಟಣ

ಇವರು 2017 ರ ಸೆಪ್ಟೆಂಬರ್ ಅವಧಿಯಲ್ಲಿ ಬೆಂಗಳೂರಿನ ಚಂದ್ರಾ ಲೇ ಔಟ್ ಠಾಣೆಯ ನಿರೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಸೆಪ್ಟೆಂಬರ್ 6, 2017 ರಂದು ಎಸಿಪಿ ಪ್ರಕಾಶ್ ಅವರ ಆದೇಶದ ಮೇರೆಗೆ ಗೌರಿ ಲಂಕೇಶ್ ಮನೆಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಸಿಸಿಟಿವಿ ಕ್ಯಾಮಾರಾದ ದೃಶ್ಯಾವಳಿಗಳಿದ್ದ ಡಿವಿಆರ್ ಇತ್ಯಾದಿಗಳನ್ನು ಸಂಗ್ರಹಿಸಿ ಅದನ್ನು ಬೆಂಗಳೂರಿನ ಮೆಗ್ರಾಥ್ ರಸ್ತೆಯಲ್ಲಿರುವ ಐಎಫ್ಎಫ್ ಲ್ಯಾಬಿಗೆ ಕೊಟ್ಟು ಬಂದಿದ್ದರ ಬಗ್ಗೆ ಸಾಕ್ಷಿ ನುಡಿದರು. ಈ ಪ್ರಕ್ರಿಯೆಯನ್ನು ನಡೆಸಲು ಪಡೆದುಕೊಳ್ಳಬೇಕಾದ ನೋಟೀಸು, ಪಂಚರ ಸಾಕ್ಷಿ, ಮತ್ತು ಅಂದು ಸಂಜೆ ತಜ್ಞರು ವಸ್ತುಗಳನ್ನು ಹಿಂತಿರುಗಿಸಿದಾಗ ಅದಕ್ಕೆ ಸಾಕ್ಷಿಗಳಾದ ಪಂಚರು.. ಇತ್ಯಾದಿಗಳ ಬಗ್ಗೆ ಸಾಕ್ಷಿ ನುಡಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷ್ಯಗಳನ್ನು ತನಿಖೆಗೆ ಮತ್ತು ಪರಿಶೋಧನೆಗೆ ಕೊಡುವಾಗ ಅನುಸರಿಸಿರುವ ಪ್ರಕ್ರಿಯೆಯಲ್ಲಿ ಲೋಪಗಳಿವೆಯೆಂದು ಆರೋಪಿಸಿ ಕೆಲವು ಪ್ರಶ್ನೆಗಳನ್ನು ಕೇಳಿದರು. ಹಾಗೂ ಸುಳ್ಳು ಸಾಕ್ಷಿ ನೀಡುತ್ತಿರುವುದಾಗಿ ಆರೋಪಿಸಿದರು. ಸಾಕ್ಷಿಯು ಅದನ್ನು ನಿರಾಕರಿಸಿದರು.

ಸುರೇಶ್ ಎಂ. ಎನ್ – ಅಬಕಾರಿ ನಿರೀಕ್ಷಕರು – ಉಡುಪಿ

ಇವರು 2018 ರಲ್ಲಿ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಅಬಕಾರಿ ನಿರೀಕ್ಷಕರಾಗಿದ್ದರು.

ಇವರನ್ನು 2018 ರ ಆಗಸ್ಟ್ 3 ರಂದು ಪಂಚರಾಗಿ ಪೊಲೀಸ್ ತನಿಖೆಗೆ ಸಹಕರಿಸಬೇಕೆಂದು ಅವರ ಮೇಲಧಿಕಾರಿಗಳು ಸೂಚಿಸಿದಂತೆ ಪಂಚರಾಗಿ ತಾವು ಸಾಕ್ಷಿಯಾದದ್ದನ್ನು ಹೇಳಿಕೆ ನೀಡಿದರು. ಅಂದು ಪೋಲಿಸ್ ತನಿಖಾಧಿಕಾರಿಗಳ ಜೊತೆಗೆ ಆರೋಪಿ ಸುರೇಶ್ ಜೊತೆಗೂಡಿ ಮಾಗಡಿ ರಸ್ತೆಯ ತಾವರೆಕೆರೆ ಹೋಬಳಿ ತಿಪ್ಪಗೊಂಡನಹಳ್ಳಿಯ ಬಳಿ ಯಲ್ಲಪ್ಪನಹಳ್ಳಿಯ ಅರ್ಕಾವತಿ ಸೇತುವೆ ಬಳಿ ಹೋದುದಾಗಿ ತಿಳಿಸಿದರು.

ಅಲ್ಲಿ ವಾಹನಗಳನ್ನು ನಿಲ್ಲಿಸಿ ಆರೋಪಿ ತೋರಿಸಿದ ಕುರುಚಲು ಪೊದೆಗಳ ಬಳಿ ಹುಡುಕಾಡಿದಾಗ ಪ್ಲಾಸ್ಟಿಕ್ ಕವರಿನಲ್ಲಿ ಇನ್ನಷ್ಟು ಸುತ್ತಿಟ್ಟಿರುವ ಪ್ಲಾಸ್ಟಿಕ್ ಕವರ್ ಗಳು, ಜಿಪ್ ಇರುವ ಬ್ಯಾಗು ಇತ್ಯಾದಿ ಸಿಕ್ಕವು. ಅದನ್ನು ತಮ್ಮ ಸಮಕ್ಷಮದಲ್ಲಿ ಪೊಲೀಸರು ತೆರೆದು ನೋಡಿದಾಗ ಅದರಲ್ಲಿ ವಾಹನದ ನಂಬರ್ ಪ್ಲೇಟಿನ ಚೂರುಗಳು, ಮೂರು ಟೂತ್ ಬ್ರಶ್ ಮತ್ತು ಬಾಚಣಿಗೆಗಳು ದೊರೆತವು. ಮತ್ತೊಂದರಲ್ಲಿ ಗಂಡಸರ ತುಂಬುತೋಳಿನ ಶರ್ಟು ಹಾಗೂ ಮಣ್ಣಿನೊಂದಿಗೆ ಕೂಡಿದ ಸುಟ್ಟ ಪ್ಲಾಸ್ಟಿಕ್ ಕವರ್ ದೊರೆಯಿತೆಂದು ಹೇಳಿದರು. ಆ ನಂತರ ಅವನ್ನು ತಮ್ಮ ಸಮಕ್ಷಮದಲ್ಲಿ ಸಿಲ್ ಮಾಡಿ ವಾಪಸ್ ಎಸಐಟಿ ಕಚೇರಿಗೆ ಬಂದುದಾಗಿ ತಿಳಿಸಿದರು. ಅಲ್ಲದೆ ಆರೋಪಿ ಸುರೇಶ್ ಅವರನ್ನು ವಿಡಿಯೋ ಕಾನ್ಫರೆನ್ಸಿನಲ್ಲಿ ಗುರುತಿಸಿದರು

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯು ಹೇಳುತ್ತಿರುವ ಜಾಗ, ವಶಪಡಿಸಿಕೊಂಡ ವಸ್ತುಗಳ ವಿವರಗಳು ತಾಳೆಯಾಗದಿರುವ ಬಗ್ಗೆ ಪ್ರಶ್ನಿಸಿದರು. ಮತ್ತು ಮಹಜರು ವರದಿಯನ್ನು ಟೈಪಿಸಲು ಬಳಸಿದ ಪ್ರಿಂಟರಿನ ಕಂಪನಿಯ ವಿವರಗಳನ್ನು ಕೇಳಿದಾಗ ಅವು ತಮಗೆ ನೆನಪಿಲ್ಲ ಎಂದು ಸಾಕ್ಷಿ ಉತ್ತರಿಸಿದರು. ಹಾಗೂ ತಾನು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂಬ ಆರೋಪಿ ಪರ ವಕೀಲರ ಆರೋಪವನ್ನು ನಿರಾಕರಿಸಿದರು.

ರಂಗನಾಥ್ – ಕ್ಯಾಬ್ ಚಾಲಕ- ಸೀಗೆಹಳ್ಳಿ, ಬೆಂಗಳೂರು

ಇವರು 2017 ರಲ್ಲಿ ಸೀಗೇಹಳ್ಳಿಯಲ್ಲಿ ವಾಸವಾಗಿದ್ದ ಮನೆಯ ಪಕ್ಕದಲ್ಲೇ ಸುರೇಶ್ ಅವರು ಕುಟುಂಬದ ಜೊತೆ ವಾಸವಿದ್ದುದಾಗಿ ಹೇಳಿದರು.

2017 ರ ಅಕ್ಟೊಬರ್ ನಲ್ಲಿ ಒಮ್ಮೆ ಸುರೇಶ್ ಅವರ ಮನೆಗೆ ಸ್ಪ್ಲೆಂಡರ್ ಬೈಕಿನಲ್ಲಿ ಇಬ್ಬರು ಆಸಾಮಿಗಳು ಬಂದಿದ್ದನ್ನು ನೋಡಿದ್ದಾಗಿ ಸಾಕ್ಷಿ ನುಡಿದರು. ಆನಂತರ 2018 ರ ಆಗಸ್ಟ್ 8 ರಂದು ಪೊಲೀಸರು ಸುರೇಶ್ ಅವರ ಮನೆಗೆ ಯಾರಾದರೂ ಹೊಸಬರು ಬಂದಿದ್ದರೆ ಎಂದು ಕೇಳಿದಾಗ ಇಬ್ಬರು ಹೊಸಬರು ಬಂದಿದ್ದನ್ನು ಹೇಳಿದುದಾಗಿ ಹೇಳಿಕೆ ನೀಡಿದರು. ನಂತರ ಅದೇ ಹೇಳಿಕೆಯನ್ನು ಅವರು ಎಸಐಟಿ ಮುಂದೆಯೂ ಆ ನಂತರ ಆಗಸ್ಟ್ 30 ರಂದು ನ್ಯಾಯಾಲಯದಲ್ಲೂ ಹೇಳಿದುದಾಗಿ ಹೇಳಿದರು. ಆ ನಂತರ ನ್ಯಾಯಾಲಯದ ಆದೇಶದ ಮೇರೆಗೆ ಆ ಇಬ್ಬರು ಯಾರೆಂಬುದನ್ನು ಗುರುತಿಸಲು ಪರಪ್ಪನ ಅಗ್ರಹಾರಕ್ಕೆ ಹೋಗಿ, ಅಲ್ಲಿ ತಹಶೀಲ್ದಾರ್ ಅವರ ಸಮಕ್ಷಮದಲ್ಲಿ ತಮ್ಮ ಮುಂದೆ ಹಾಜರಾದ ಹಲವು ಆರೋಪಿಗಳಲ್ಲಿ ಅಂದು ಸುರೇಶ್ ಮನೆಗೆ ಬಂದದ್ದು ಯಾರು ಎಂಬುದನ್ನು ಗುರುತಿಸಿದ್ದಾಗಿ ನುಡಿದರು. ಈ ಸಾಕ್ಷಿಯ ಮುಖ್ಯ ವಿಚಾರಣೆಯನ್ನು ಮುಂದೂಡಲಾಯಿತು ..

ಸುಕುಮಾರ್- ನಿವೃತ್ತ ಪಿಎಸ್ಐ – ಬೇಗೂರು.

ಇವರು 1998-2020 ರ ವರೆಗೆ ಗುಪ್ತವಾರ್ತೆ ಕಚೇರಿಯಲ್ಲಿ ಕೆಲಸ ನಿರ್ವಹಿಸಿರುತ್ತಾರೆ. 2017 ರ ಸೆಪ್ಟೆಂಬರ್ 7 ರಂದು ಮೇಲಧಿಕಾರಿಗಳ ಆದೇಶದ ಮೇರೆಗೆ ಗೌರಿ ಲಂಕೇಶ್ ಮನೆಯೆದುರು ತಪಾಸಣೆಯ ಕೆಲಸಕ್ಕೆ ಅಧಿಕಾರಿಯ ಮುಂದೆ ಹಾಜರಾಗುತ್ತಾರೆ. ಹಾಗೂ ಅಂದು ಸಂಜೆ ಐದು ಗಂಟೆಯಿಂದ ಗೌರಿಯವರ ಮನೆಯ ಹೊರ ಆವರಣದಲ್ಲಿ ತಪಾಸಣೆ ಮಾಡಿದಾಗ ಫೈರಿಂಗ್ ಆದ ಮೂರು ಗುಂಡುಗಳು ಪತ್ತೆಯಾದವು ಎಂದು ಹೇಳಿಕೆ ನೀಡಿದರು. ಹಾಗೂ ಆ ನಂತರ 2018 ರ ಆಗಸ್ಟ್ 18 ರಂದು ಆರೋಪಿ ಭರತ್ ಕುರ್ನಿಯವರು ನೀಡಿದ ಮಾಹಿತಿಯ ಮೇರೆಗೆ ಮೇಲಾಧಿಕಾರಿಯ ಆದೇಶದಂತೆ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಬೆಳಗಾವಿಯ ಕಿಣಯೆ ಗ್ರಾಮದ ಸರ್ವೇ ನಂಬರ್ 100/2 ಜಮೀನಿಗೆ ಹೋಗಿರುತ್ತಾರೆ. ಅಲ್ಲಿ ಮೇಲಧಿಕಾರಿಗಳ ಆದೇಶದಂತೆ ಕುರುಚಲು ಗಿಡಗಳಿಂದ ಕೂಡಿದ್ದ ಪ್ರದೇಶವನ್ನು ಸಮತಟ್ಟು ಗೊಳಿಸಿ ಫೈರ್ ಮಾಡಲಾದ ಕಾಟ್ರಿಡ್ಜ್ ಗಳನ್ನೂ ಹುಡುಕಿದಾಗಿಯೂ, ಆದರೆ ಮಳೆ ಬರುತ್ತಿದ್ದರಿಂದ ಏನೂ ಸಿಗಲಿಲ್ಲವೆಂದು ಹೇಳಿಕೆ ನೀಡಿದರು.

ಸತೀಶ್ ಹೆಚ್.ಬಿ. – ಪ್ರಥಮ ದರ್ಜೆ ಸಹಾಯಕ- ನಾಗಸಂದ್ರ

2018 ರಲ್ಲಿ ಸತೀಶ್ ಅವರು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. 2018 ರ ಜೂನ್ 4 ರಂದು ಕಚೇರಿಯು ಕೊಟ್ಟ ಸೂಚನೆಯ ಮೇರೆಗೆ ಎಸಐಟಿ ಕಛೇರಿಗೆ ಪಂಚರಾಗಿ ಪೊಲೀಸ್ ತನಿಖೆಗೆ ಸಹಕರಿಸಲು ಹೋಗಿದ್ದಾಗಿ ಹೇಳಿದರು. ಅಲ್ಲಿ ಆರೋಪಿ ಸುಜಿತ್ ಕುಮಾರ್ ಮತ್ತು ಪೋಲಿಸ್ ಸಿಬ್ಬಂದಿಗಳ ಜೊತೆ ಮೆಟ್ರೋ ಮನುವನದ ಬಳಿ ಆದಿಚುಂಚನಗಿರಿ ಕಾಂಪ್ಲೆಕ್ಸ್ ಎದುರು ಇದ್ದ ಪಾರ್ಕಿನ ಬಳಿ ಆರೋಪಿಯ ಮಾಹಿತಿ ಮೇರೆಗೆ ನಿಲ್ಲಿಸಲಾಯಿತು. ಆ ಪಾರ್ಕಿನಲ್ಲಿ ಇದ್ದ ಬೆಂಚೊಂದನ್ನು ತೋರಿಸಿ ತಾನು ಮತ್ತು ನವೀನ್ ಕುಮಾರ್ ಇಲ್ಲಿ ಕೂತು ಗೌರೀ ಲಂಕೇಶ್ ಹತ್ಯೆ ಸಂಚು ರೂಪಿಸಿದೆವು ಎಂದು ಹೇಳಿದರು.

ಏಕೆ ಎಂದು ಕೇಳಿದಾಗ ಗೌರಿ ಲಂಕೇಶರು ಹಿಂದೂ ದೇವತೆಗಳನ್ನು ಅವಹೇಳನ ಮಾಡುತ್ತಿದ್ದರು ಆದ್ದರಿಂದ ಎಂದು ಸುಜಿತ್ ಹೇಳಿದುದಾಗಿ ಸಾಕ್ಷಿಯು ಹೇಳಿಕೆಯನ್ನು ನೀಡಿದರು

ಅವೆಲ್ಲವನ್ನು ಅದೇ ಜಾಗದಲ್ಲಿ ಟೈಪ್ ಮಾಡಿ ಸುಜಿತ್ ಕುಮಾರ್ ಗೆ ಸಹಿ ಮಾಡಲು ಹೇಳಿದಾಗ ಅವರು ಸಹಿ ಮಾಡಲು ನಿರಾಕರಿಸಿದುದಾಗಿಯೂ ಸಾಕ್ಷ್ಯ ನುಡಿದರು.

ಹಾಗೂ ಸುಜಿತ್ ಕುಮಾರ್ ಅವರನ್ನು ವಿಡಿಯೋ ಕಾನ್ಫರೆನ್ಸಿನಲ್ಲಿ ಗುರುತಿಸಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯು ಮಹಜರು ನಡೆದ ಸ್ಥಳಕ್ಕೆ ಹೋದ ವಾಹನ, ಪಾರ್ಕಿನ ಹಾಗೂ ಬೆಂಚಿನ ವಿವರ, ಚೆಕ್ಕು ಬಂದಿ ಮತ್ತು ಹೇಳಿಕೆಯನ್ನು ಟೈಪಿಸಲಾದ ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ಗಳ ನಿಖರ ವಿವರಗಳ ಪ್ರಶ್ನೆ ಕೇಳಿದಾಗ ಕೆಲವು ಮರೆತಿದೆ ಎಂದು ಸಾಕ್ಷಿ ಉತ್ತರ ನೀಡಿದರು. ತಾವು ಸುಳ್ಳು ಸಾಕ್ಷ್ಯ ನುಡಿಯುತ್ತಿಲ್ಲವೆಂದು ಹೇಳಿದರು ಮತ್ತು ಸುಜಿತ್ ಅವರ ಫೋಟೋವನ್ನು ಪೊಲೀಸರು ತೋರಿಸಿದ್ದರಿಂದ ಗುರುತಿಸಲು ಸಾಧ್ಯವಾಗಿದೆ ಎಂಬುದನ್ನು ನಿರಾಕರಿಸಿದರು.

ಶಿವಾನಂದ ಮಾಳಗಿ – ಹೋಟೆಲ್ ಉದ್ಯೋಗಿ – ಬೆಳಗಾವಿ

ಇವರು ಬೆಳಗಾವಿಯ ಮುಖ್ಯ ಬಸ್ ನಿಲ್ದಾಣದ ಎದುರಿರುವ ಹೋಟೆಲ್ ಸ್ವೀಕಾರ್ ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. 2018 ರ ಮೇ 29 ರಂದು ಆರೋಪಿ ಮನೋಹರ್ ಜೊತೆಗೆ ಪೊಲೀಸ್ ಸಿಬ್ಬಂದಿಗಳು ಮತ್ತು ಇಬ್ಬರು ಪಂಚರು ತಮ್ಮ ಹೋಟೆಲ್ ಗೆ ಬಂದರೆಂದು, ಪೊಲೀಸರು ಅಲ್ಲಿ ಕುಳಿತು ಸ್ವಲ್ಪ ಹೊತ್ತು ಮಾತನಾಡುವುದಾಗಿ ಹೇಳಿದರು. ಆ ಸಮಯದಲ್ಲಿ ತಾನು ಪಕ್ಕದಲ್ಲೇ ಇದ್ದು ಆರೋಪಿ ಮನೋಹರ್ ಅವರು ಒಂದು ವರ್ಷದ ಕೆಳಗೆ ತಾನೂ, ಬಾಬಾ ಸಾಹೇಬ್ ಮತ್ತು ದಾದಾ ಸಾಹೇಬ್ ಅವರು ಇದೆ ಹೋಟೆಲಿನ ಫ್ಯಾಮ್ಮಿಲಿ ಸೆಕ್ಷನ್ ನಲ್ಲಿ ಕುಳಿತು ಗೌರಿ ಲಂಕೇಶ್ ಹತ್ಯೆಯ ವಿಚಾರದ ಬಗ್ಗೆ ಮಾತಾಡಿದ್ದಾಗಿ ಹೇಳಿದರೆಂದು ಸಾಕ್ಷ್ಯ ನುಡಿದರು. ಮತ್ತು ಅದರ ಬಗ್ಗೆ ಪೊಲೀಸರು ಅಲ್ಲೇ ತಯಾರು ಮಾಡಿದ ಹೇಳಿಕೆಗೆ ತಾನು ಸಹಿ ಹಾಕಿದ್ದಾಗಿ ಹೇಳಿ ಆ ಹೇಳಿಕೆಯನ್ನು ಮತ್ತು ಸಹಿಯನ್ನು ಗುರುತಿಸಿದರು. ಮತ್ತು ವಿಡಿಯೋ ಕಾನ್ಫರೆನ್ಸಿನಲ್ಲಿ ಮನೋಹರ್ ಅವರನ್ನು ಗುರುತಿಸಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ‘ಹೋಟೆಲಿನ ಸ್ಥಳ ವಿವರಗಳ ಬಗ್ಗೆ ಹಾಗೂ ಸಾಕ್ಷಿಯು ಯಾವಾಗಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಪೋಲೀಸರ ಚಿತಾವಣೆ ಮೇರೆಗೆ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೀರಾ ಮತ್ತು ಇಲ್ಲಿಗೆ ಬರುವ ಮುಂಚೆ ಪೊಲೀಸವು ತೋರಿಸಿದ ಫೋಟೋ ನೋಡಿ ಮನೋಹರ್ ಅವರನ್ನು ಗುರುತು ಹಿಡಿದಿದ್ದೀರಾ’ ಎಂದು ಪ್ರಶ್ನಿಸಿದರು. ಆರೋಪಿ ಪರ ವಕೀಲರ ಆರೋಪವನ್ನು ಸಾಕ್ಷಿಯು ನಿರಾಕರಿಸಿದರು.

ವಿಶ್ವನಾಥ- ಗಾರೆ ಕೆಲಸ – ಬಿಜಾಪುರ

ಇವರು 2018 ರ ಮೇ 25 ರಂದು ಬಿಜಾಪುರದ ಗ್ಯಾಂಗೋಡಿ ಎನ್ನುವ ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿಗೆ ಬಂದಿದ್ದ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಪಂಚನಾಮೆಗೆ ಸಹಕರಿಸಬೇಕೆಂದು ಕೇಳಿಕೊಂಡರು. ಪೊಲೀಸರೊಂದಿಗೆ ಅಲ್ಲಿ ಇದ್ದ ಒಂದು ಮನೆಯ ಬಳಿ ಹೋದೆವು. ಅದು ಬೀಗ ಹಾಕಿತ್ತು. ಪಕ್ಕದ ಮನೆಯವರು ಕೇಳಿ ತಂದುಕೊಟ್ಟರು. ನನ್ನ ಸಮಕ್ಷಮದಲ್ಲಿ ಮನೆಯ ಬೀಗವನ್ನು ತೆರೆದು ಒಳಹೋದೆವು. ಅಲ್ಲಿದ್ದ ಒಂದು ಗುರುತಿನ ಕಾರ್ಡ್, ಒಂದು ಪಾಸ್ ಪೋರ್ಟ್ ಮತ್ತು ಮತ್ತು ಒಂದು ಡೈರಿಯನ್ನು ವಶಪಡಿಸಿಕೊಂಡರು. ಅವೆಲ್ಲವನ್ನು ಅಲ್ಲೇ ಬರೆದುಕೊಂಡು ನನ್ನ ಸಹಿ ಹಾಕಿಸಿಕೊಂಡರು ಎಂದು ಹೇಳಿಕೆ ನೀಡಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಹಾಗೂ ಅವರ ಮೇಲೆ ಎರಡು ಕ್ರಮಿನಲ್ ಕೇಸು ಬಾಕಿ ಇರುವ ಬಗ್ಗೆ ಕೇಳಿದರು. ಪೊಲೀಸರೊಂದಿಗೆ ಒಳ್ಳೆಯ ಸಂಬಂಧಗಳನ್ನು ಇಟ್ಟುಕೊಳ್ಳುವ ಸಲುವಾಗಿಯೇ ಪೊಲೀಸರು ಹೇಳಿದಂತೆ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೀರೆಂದು ಆರೋಪಿಸಿದರು. ಸಾಕ್ಷಿಯೂ ಅದನ್ನು ನಿರಾಕರಿಸಿದರು.

ರಾಜ್ ಕುಮಾರ್

ಇವರ ಪಾಟಿ ಸವಾಲು ಹೋದ ತಿಂಗಳು ಅರ್ಧಕ್ಕೆ ನಿಂತಿತ್ತು. ಈ ಸಾಕ್ಷಿಯು 2018 ರ ಮೇ 21 ರಂದು ಆರೋಪಿ ಸುಜಿತ್ ಕುಮಾರ್ ಬಂಧನದ ನಂತರ ಅವರು ಕೊಟ್ಟ ಮಾಹಿತಿಯ ಮೇರೆಗೆ ಇತರ ಆರೋಪಿಗಳನ್ನು ದಾವಣಗೆರೆಯಲ್ಲಿ ಬಂಧಿಸಲು ಪೊಲೀಸರೊಂದಿಗೆ ಪಂಚರಾಗಿ ಭಾಗವಹಿಸಲು ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಿಂದ ಪೋಲೀಸರ ಕೋರಿಕೆಯ ಮೇರೆಗೆ ಜೊತೆಗೆ ಹೊರಟು ಬಂದಿದ್ದರು. ದಾವಣಗೆರೆಯಲ್ಲಿ ಸುಜಿತ್ ಮಾಹಿತಿ ಮೇರೆಗೆ ಆರೋಪಿ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಮನೋಹರ್ ಯಡವೇ ಅವರನ್ನು ಬಂಧಿಸಿ ಅವರ ಬಳಿ ಇದ್ದ ಸಾಮಾನುಗಳನ್ನು ವಶಪಡಿಸಿಕೊಂಡಿದ್ದರ ಬಗ್ಗೆ ಕಳೆದ ತಿಂಗಳು ಸಾಕ್ಷ್ಯ ಹೇಳಿದ್ದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯಿದ ವಶಪಡಿಸಿಕೊಂಡ ಎಲ್ಲಾ ವಸ್ತುಗಳ ಬಗ್ಗೆ ನಿಖರ ವಿವರಗಳನ್ನು ಕೇಳಿದರು. ಕೆಲವನ್ನು ಸಾಕ್ಷಿಯು ಹೇಳಲಾಗಲಿಲ್ಲ. ಕೆಲವು ನೆನಪಿಲ್ಲ ಎಂದು ಹೇಳಿದರು. ಪೊಲೀಸರೊಂದಿಗೆ ತಮಗಿರುವ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಸುಳ್ಳು ಸಾಕ್ಷ್ಯ ನುಡಿಯುತ್ತಿದೀರಾ ಎಂದು ಆರೋಪಿ ಪರ ವಕೀಲರು ಮಾಡಿದ ಆರೋಪವನ್ನು ಸಾಕ್ಷಿಯು ನಿರಾಕರಿಸಿದರು.

ಮುಂದಿನ ವಿಚಾರಣೆ ಮಾರ್ಚ್ 13 ರಿಂದ ನಡೆಯಲಿದೆ.

ಈ ವರದಿಯನ್ನು, ಕೋರ್ಟ್ ವೆಬ್ ಸೈಟಿನಲ್ಲಿರುವ ಸಾಕ್ಷಿಗಳ deposition ಗಳನ್ನೂ ಮತ್ತು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿ ಪಿ. ಮತ್ತು ಸರ್ಕಾರಿ ವಕೀಲರಾದ ಬಾಲನ್ ಅವರು ಕೊಟ್ಟ ಮಾಹಿತಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

– ಶಿವಸುಂದರ್

ಇದನ್ನೂ ಓದಿ: ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದುವರಿದ ಭಾಗ: ನ್ಯಾಯಾಧೀಶ ವರ್ಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...