ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಬಣಕ್ಕೆ “ಬಿಲ್ಲು ಮತ್ತು ಬಾಣ”ದ ಚಿಹ್ನೆಯನ್ನು ನೀಡಿಲ್ಲ ಹಾಗಾಗಿ ಅವರು ಹೊಸ ಚಿಹ್ನೆಯನ್ನು ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಸಂಸ್ಥಾಪಕ, ಶರದ್ ಪವಾರ್ ಅವರು, ತಮ್ಮ ಮಿತ್ರ ಉದ್ಧವ್ ಠಾಕ್ರೆ ಅವರಿಗೆ ಸಲಹೆ ನೀಡಿದ್ದು, ”ಇದರಿಂದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಹೊಸ ಚಿಹ್ನೆಯನ್ನು ತೆಗೆದುಕೊಳ್ಳಿ” ಎಂದು ಸೂಚಿಸಿದ್ದಾರೆ.
”ಇದು ಚುನಾವಣಾ ಆಯೋಗದ ನಿರ್ಧಾರವಾಗಿರುವುದರಿಂದ ಒಮ್ಮೆ ನಿರ್ಧಾರ ನೀಡಿದ ನಂತರ ಚರ್ಚೆ ನಡೆಸುವಂತಿಲ್ಲ. ಅವರ ನಿರ್ಧಾರವನ್ನು ಓಪ್ಪಿಕೊಳ್ಳಿ, ಮುಂದೆ ಹೊಸ ಚಿಹ್ನೆಯನ್ನು ಜನರು ಸ್ವೀಕರಿಸುತ್ತಾರೆ. ಹಳೆಯ ಚಿಹ್ನೆಯನ್ನು ಕಳೆದುಕೊಂಡಿರುವುದರಿಂದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಏಕೆಂದರೆ ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ. ಇದು ಮುಂದಿನ 15-30 ದಿನಗಳವರೆಗೆ ಚರ್ಚೆಯಲ್ಲಿ ಉಳಿಯುತ್ತದೆ, ಅಷ್ಟೆ” ಎಂದು ಪವಾರ್ ಹೇಳಿದ್ದಾರೆ.
ಭಾರತದ ಚುನಾವಣಾ ಆಯೋಗವು (ಇಸಿಐ) ಪಕ್ಷದ ಹೆಸರು “ಶಿವಸೇನಾ” ಮತ್ತು ಪಕ್ಷದ ಚಿಹ್ನೆ “ಬಿಲ್ಲು ಮತ್ತು ಬಾಣ” ಅನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಲಾಗುವುದು ಎಂದು ಆದೇಶಿಸಿದ ನಂತರ ಶರದ್ ಪವಾರ್ ಅವರು ತಮ್ಮ ಮಿತ್ರ ಉದ್ಧವ್ ಠಾಕ್ರೆ ಅವರಿಗೆ ಈ ರೀತಿಯ ಮಾತುಗಳನ್ನು ಹೇಳಿದ್ದಾರೆ.
ಇದನ್ನೂ ಓದಿ: ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ: ಚುನಾವಣಾ ಆಯೋಗ ಆದೇಶ
ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಕಾಂಗ್ರೆಸ್ನ ಚಿಹ್ನೆಯನ್ನು ಕಳೆದುಕೊಂಡಿದ್ದನ್ನು ನೆನಪಿಸಿಕೊಂಡ ಪವಾರ್, ”ಜನರು ಕಾಂಗ್ರೆಸ್ನ ಹೊಸ ಚಿಹ್ನೆಯನ್ನು ಸ್ವೀಕರಿಸಿದ ರೀತಿಯಲ್ಲೇ ಉದ್ಧವ್ ಠಾಕ್ರೆ ಬಣದ ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ” ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
”ಇಂದಿರಾ ಗಾಂಧಿ ಕೂಡ ಈ ಪರಿಸ್ಥಿತಿಯನ್ನು ಎದುರಿಸಿದ್ದರು ಎನ್ನುವುದು ನನಗೆ ನೆನಪಿದೆ. ಕಾಂಗ್ರೆಸ್ನಲ್ಲಿ ‘ಒಂದು ನೊಗವಿರುವ ಎರಡು ಎತ್ತುಗಳ’ ಚಿಹ್ನೆ ಇತ್ತು. ನಂತರ ಅದನ್ನು ಕಳೆದುಕೊಂಡು ‘ಕೈ’ಯನ್ನು ಹೊಸ ಚಿಹ್ನೆಯಾಗಿ ಅಳವಡಿಸಿಕೊಂಡರು. ಜನರು ಅದನ್ನು ಒಪ್ಪಿಕೊಂಡರು. ಅದೇ ರೀತಿ ಜನರು ಉದ್ಧವ್ ಠಾಕ್ರೆ ಬಣದ ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ” ಎಂದು ಪವಾರ್ ಹೇಳಿದರು.
ಭಾರತದ ಚುನಾವಣಾ ಆಯೋಗ ಶುಕ್ರವಾರ ನೀಡಿರುವ ಈ ಆದೇಶದಿಂದ ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಹಿನ್ನಡೆಯಾಗಿದೆ. ಪಕ್ಷದ ಹೆಸರು “ಶಿವಸೇನಾ” ಮತ್ತು “ಬಿಲ್ಲು ಮತ್ತು ಬಾಣ” ಚಿಹ್ನೆಯನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ನೀಡಿದೆ.
ಈ ಆದೇಶವನ್ನು ಶಿಂಧೆ ಬಣ ಸ್ವಾಗತಿಸಿದರೆ, ಉದ್ಧವ್ ಠಾಕ್ರೆ ಬಣವು ಚುನಾವಣಾ ಆಯೋಗದ ನಿರ್ಧಾರವನ್ನು ”ಪ್ರಜಾಪ್ರಭುತ್ವದ ಕೊಲೆ” ಎಂದು ಬಣ್ಣಿಸಿದೆ. ಈ ಬಗ್ಗೆ ತಾವು ಸುಪ್ರೀಂ ಕೋರ್ಟ್ಗೆ ಹೋಗುವುದಾಗಿ ಹೇಳಿದೆ. ”ಭಾರತದ ಚುನಾವಣಾ ಆಯೋಗವು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ” ಎಂದು ಉದ್ಧವ್ ಠಾಕ್ರೆ ಬಣವು ಆರೋಪಿಸಿದೆ.