ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೊಲ್ಲಾಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇಶದ ಗಮನ ಸೆಳೆದಿದ್ದ ಶಿರಿಷಾ (ಬರ್ರೆಲಕ್ಕ) ಏನಾದ್ರು?. ಸೋತ್ರಾ, ಗೆದ್ರಾ? ಎಂಬ ಕುತೂಹಲ ನಿಮಗೆಲ್ಲರಿಗೂ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಯೂಟ್ಯೂಬ್ನಲ್ಲಿ ‘ಬರ್ರೆಲಕ್ಕ’ ಎಂದು ಖ್ಯಾತಿ ಪಡೆದಿದ್ದ ಕರ್ನೆ ಶಿರಿಷಾ ಕೊಲ್ಲಾಪುರದಲ್ಲಿ 5,754 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೂಪಲ್ಲಿ ಕೃಷ್ಣರಾವ್ ಅವರು ಬಿಆರ್ಎಸ್ ಶಾಸಕ ಬೀರಂ ಹರ್ಷವರ್ಧನ್ ರೆಡ್ಡಿ ಅವರಿಗಿಂತ ಸುಮಾರು 29,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಆಕೆಯೇ ಹೇಳಿಕೊಂಡಂತೆ ಎಮ್ಮೆ ಕಾಯುತ್ತಿದ್ದ ಹುಡುಗಿ ಬರ್ರೆಲಕ್ಕ ಘಟಾನುಘಟಿ ರಾಜಕೀಯ ನಾಯಕರನ್ನು ಎದುರು ಹಾಕಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ಸಾಮಾಜಿಕ ಜಾಲಗಳಲ್ಲಿ ಮತ್ತು ಆಕೆ ಮತ ಯಾಚನೆಗೆ ತೆರಳುತ್ತಿದ್ದಾಗ ಸಿಗುತ್ತಿದ್ದ ಅಪಾರ ಜನ ಬೆಂಬಲ, ಬರ್ರೆಲಕ್ಕ ಗೆಲ್ಲೋದು ಖಚಿತ ಎಂಬಂತೆ ಮಾಡಿತ್ತು. ಆದರೆ, ಸಾಮಾಜಿಕ ಜಾಲತಾಣದ ಬರ್ರೆಲಕ್ಕರ ಜನಪ್ರಿಯತೆ ಮತಗಳಾಗಿ ಬದಲಾಗಿಲ್ಲ.
ಯಾರು ಈ ಬರ್ರೆಲಕ್ಕ ?
ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮರಿಕಲ್ ಗ್ರಾಮದ ಕರ್ನೆ ಶಿರಿಷಾ ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆರಂಭದಲ್ಲಿ, ಎಷ್ಟೇ ಡಿಗ್ರಿ ಓದಿದರೂ ಸರ್ಕಾರಿ ನೌಕರಿ ಸಿಗುತ್ತಿಲ್ಲ ಎಂದು ಕೊರಗುವ ವಿಡಿಯೋ ಮೂಲಕ ಶಿರಿಷಾ ಸುದ್ದಿಯಾಗಿದ್ದರು. ಅಲ್ಲದೆ ರಾಜಕೀಯ ವ್ಯವಸ್ಥೆಯನ್ನು ಛೇಡಿಸುವ ವಿಡಿಯೋ ಮೂಲಕ ಆಕೆ ಭಾರೀ ಖ್ಯಾತಿ ಗಳಿಸಿದ್ದರು. ಟಿವಿ, ಯೂಟ್ಯೂಬ್ ಸಂದರ್ಶನಗಳ ಮೂಲಕವೂ ಸುದ್ದಿಯಾಗಿದ್ದರು. ಟ್ರೋಲ್ ಪೇಜ್ಗಳ ಕೂಡ ಆಕೆಗೆ ಹೆಚ್ಚಿನ ಪ್ರಚಾರ ಕೊಟ್ಟಿತ್ತು.
ತನ್ನ ಕುಟುಂಬಸ್ಥರ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ, ಭದ್ರತೆ ಒದಗಿಸುವಂತೆ ಬರ್ರೆಲಕ್ಕ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಬರ್ರೆಲಕ್ಕಳ ಕುಟುಂಬಕ್ಕೆ ಗನ್ ಮ್ಯಾನ್ ಭದ್ರತೆ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ವಿಧಾನಸಭಾ ಚುನಾವಣೆಯ ಸಂದರ್ಭ ನಿರುದ್ಯೋಗಿಗಳ ಪರ ಧ್ವನಿಯೆತ್ತಿ ಬರ್ರೆಲಕ್ಕ ಗಮನಸೆಳೆದಿದ್ದರು. ನಿರೋದ್ಯೋಗ ವಿಚಾರವನ್ನೇ ತನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿದ್ದರು. ಇದು ಕೊಲ್ಲಾಪುರ ರಾಜಕೀಯದಲ್ಲಿ ಭಾರೀ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತ್ತು. ಬರ್ರೆಲಕ್ಕರ ಹವಾ ಕಂಡು ಕಾಂಗ್ರೆಸ್, ಬಿಆರ್ಎಸ್ ಮತ್ತು ಬಿಜೆಪಿಯ ಘಟಾನುಘಟಿ ಅಭ್ಯರ್ಥಿಗಳು ಬೆವರಿದ್ದರು.
ಬರ್ರೆಲಕ್ಕಗೆ ಮಹಿಳೆಯರು, ಯುವಜನರು ಭಾರೀ ಬೆಂಬಲ ವ್ಯಕ್ತಪಡಿಸಿದ್ದರು. ಆಕೆಯ ಚುನಾವಣಾ ಪ್ರಚಾರಕ್ಕಾಗಿ ಕ್ರಾಂತಿ ಗೀತೆಯನ್ನೂ ಮಾಡಲಾಗಿತ್ತು. ಪುದುಚೇರಿ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಮಲ್ಲಾಡಿ ಕೃಷ್ಣ ರಾವ್ ಅವರು ಬರ್ರೆಲಕ್ಕಳ ಚುನಾವಣಾ ಕರ್ಚಿಗೆ ಲಕ್ಷಾಂತರ ರೂಪಾಯಿ ದೇಣಿಗೆಯನ್ನೂ ನೀಡಿದ್ದರು. ಆದರೆ, ಇದ್ಯಾವುದೂ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಿಲ್ಲ. ಬರ್ರೆಲಕ್ಕ ಚುನಾವಣಾ ಸಮರದಲ್ಲಿ ಸೋಲು ಕಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಬಟ್ಟೆ ವ್ಯಾಪಾರಿ ಈಗ ರಾಜಸ್ಥಾನದ ಶಾಸಕ