ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಭಾನುವಾರ ಬೆಳಿಗ್ಗೆ 11 ಗಂಟೆಗೆ ಕೇಂದ್ರ ತನಿಖಾ ದಳದ (ಸಿಬಿಐ) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ನಂತರ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗೆ ಕರೆದಿದ್ದಾರೆ.
ಪ್ರಕರಣದ ಚಾರ್ಜ್ ಶೀಟ್ನಲ್ಲಿ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಅವರ ಮತ್ತು ಇತರ ಶಂಕಿತರ ವಿರುದ್ಧ ತನಿಖೆ ಇನ್ನೂ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಈ ಹಿಂದೆ ಅಂದರೆ 2022 ಅಕ್ಟೋಬರ್ 17 ರಂದು ಸಿಸೋಡಿಯಾ ಅವರ ಮನೆ ಮತ್ತು ಬ್ಯಾಂಕ್ ಲಾಕರ್ಗಳನ್ನು ಸಹ ಈ ಪ್ರಕರಣದಲ್ಲಿ ಶೋಧಿಸಲಾಗಿತ್ತು. ಇದೀಗ ಮತ್ತೆ ಅವರನ್ನು ವಿಚಾರಣೆಗೆ ಕರೆಯಲಾಗಿದೆ.
“ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿನ ದೊಡ್ಡ ಪಿತೂರಿಯ ಕುರಿತಾದ ಪ್ರಕರಣದ ಹೆಚ್ಚಿನ ತನಿಖೆ ಇನ್ನೂ ಪ್ರಗತಿಯಲ್ಲಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್ರನ್ನು ಮತ್ತೆ ಜೈಲಿಗೆ ಕಳುಹಿಸಲು ಏಕೆ ಬಯಸುತ್ತೀರಿ? ಸಿಬಿಐಗೆ ಸುಪ್ರೀಂ ಪ್ರಶ್ನೆ
ಈ ಬಗ್ಗೆ ಟ್ವೀಟ್ ಮಾಡಿರುವ ಸಿಸೋಡಿಯಾ ಅವರು, ”ನನ್ನ ವಿರುದ್ಧ ಎಷ್ಟೇ ಶೋಧಕಾರ್ಯ ನಡೆಸಿದರೂ ಕೂಡ ಅಧಿಕಾರಿಗಳಿಗೆ ಏನೂ ಕಂಡುಬಂದಿಲ್ಲ. ಆದರೆ ನಾನು ತನಿಖೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ಸಹಕರಿಸಿದ್ದೇನೆ, ಮುಂದೆಯೂ ಸಹಕರಿಸುತ್ತೇನೆ” ಎಂದು ಹೇಳಿದ್ದಾರೆ.
सीबीआई ने कल फिर बुलाया है. मेरे ख़िलाफ़ इन्होंने CBI, ED की पूरी ताक़त लगा रखी है, घर पर रेड, बैंक लॉकर तलाशी, कहीं मेरे ख़िलाफ़ कुछ नहीं मिला
मैंने दिल्ली के बच्चों के लिए अच्छी शिक्षा का इंतज़ाम किया है। ये उसे रोकना चाहते हैं।
मैंने जाँच में हमेशा सहयोग किया है और करूँगा.— Manish Sisodia (@msisodia) February 18, 2023
”ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದಿದ್ದಾರೆ. ಬಿಜೆಪಿಯವರು ನನ್ನ ವಿರುದ್ಧ ಸಿಬಿಐ, ಇಡಿ ಸಂಸ್ಥೆಗಳ ಸಂಪೂರ್ಣ ಅಧಿಕಾರವನ್ನು ಬಳಸಿ, ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ, ಬ್ಯಾಂಕ್ ಲಾಕರ್ಅನ್ನು ಶೋಧಿಸಿದ್ದಾರೆ. ಆದರೆ ಈವರೆಗೂ ನನ್ನ ವಿರುದ್ಧ ಏನೂ ಪತ್ತೆಯಾಗಿಲ್ಲ” ಎಂದು ಮನೀಶ್ ಸಿಸೋಡಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ನಾವು ಕೆಲವು ಯೋಜನೆಗಳ ಮೂಲಕ ಮಕ್ಕಳ ಶಿಕ್ಷಣದ ಬಗ್ಗೆ “ಒಳ್ಳೆಯ ಕೆಲಸ” ಮಾಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಅದರಲ್ಲಿ ಮಧ್ಯ ಪ್ರವೇಶಿಸಲು ಬಯಸುತ್ತದೆ. ಅದನ್ನು ನಾವು ವಿರೋಧ ಮಾಡಿದ್ದೇವೆ ಅದೇ ಕಾರಣಕ್ಕೆ ಕೇಂದ್ರ ನನ್ನ ವಿರುದ್ಧ ಸಿಬಿಐ ಅಧಿಕಾರಿಗಳನ್ನು ಬಿಟ್ಟಿದೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಬಂಧಿತ ಉದ್ಯಮಿಗಳಾದ ವಿಜಯ್ ನಾಯರ್ ಮತ್ತು ಅಭಿಷೇಕ್ ಬೋಯಿನಪಲ್ಲಿ ಸೇರಿದಂತೆ ಏಳು ಜನ ಆರೋಪಿಗಳಾಗಿದ್ದು, 2022ರ ನವೆಂಬರ್ 25ರಂದು ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಇತ್ತೀಚೆಗಷ್ಟೇ ಅಬಕಾರಿ ನೀತಿ ಪ್ರಕರಣದಲ್ಲಿಯೇ ಸಿಬಿಐ ಅಧಿಕಾರಿಗಳು, ತೆಲಂಗಾಣದಲ್ಲಿ ಬಿಆರ್ಎಸ್ ಎಂಎಲ್ಸಿ ಕೆ. ಕವಿತಾ ಅವರ ಮಾಜಿ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಬುಚ್ಚಿಬಾಬು ಗೋರಂಟ್ಲಾ ಅವರನ್ನು ಬಂಧಿಸಿತ್ತು.
Revenge politics