Homeಮುಖಪುಟಗುಲ್ಜಾರ್ ಅವರ ಪದ್ಯಗಳು

ಗುಲ್ಜಾರ್ ಅವರ ಪದ್ಯಗಳು

- Advertisement -
- Advertisement -

1.

ಯಾವ ಹೊಲದಿಂದ ರೈತನಿಗೆ ರೊಟ್ಟಿಯ ಅದೃಷ್ಟವಿಲ್ಲವೋ
ಆ ಹೊಲದ ಗೋಧಿಯ ತೆನೆಗಳನ್ನು
ಹುಡುಕಿ ಹುಡುಕಿ ಸುಟ್ಟುಬಿಡಿ

ಅಲ್ಲಮ ಇಕ್ಬಾಲ್

ಯಾರಾದರೂ ಹೋಗಿ ’ಅಲ್ಲಮ’ನಿಗೆ ಸುದ್ದಿ ಮುಟ್ಟಿಸಿ
ಯಾವ ಹೊಲದಿಂದ ರೈತನ ಮನೆಯ
ಹೊಟ್ಟೆ ತುಂಬಲಿಲ್ಲವೋ
ಯಾರೂ ಆ ಹೊಲಕ್ಕೆ ಹೋಗಿ ಬೆಂಕಿ ಹಚ್ಚಲಿಲ್ಲ
ಯಾರೂ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ
ಯಾವ ಕ್ರಾಂತಿಯ ಘೋಷಣೆಗಳೂ ಮೊಳಗಲಿಲ್ಲ.

ಶವಯಾತ್ರೆಗಳು ಹೊರಟಿವೆ
ಹಳ್ಳಿಗಳ ಮನೆಮನೆಯಿಂದ
ಪ್ರತಿ ಮೆರವಣಿಗೆಯೂ ಅನ್ನದಾತರದು
ಸಾಲದ ಹಂಗಿಗೆ ಧಿಕ್ಕಾರ ಹೇಳಿ ಅಮರರಾದ ಹುತಾತ್ಮರದು.

ಅಲ್ಲಮ – ಪ್ರಸಿದ್ಧ ಉರ್ದು ಕವಿ, ಅಲ್ಲಮ ಮೊಹಮ್ಮದ್ ಇಕ್ಬಾಲ್

***

2.

ಯಾರು ಈ ಮೂಕ?
ಎಷ್ಟೊಂದು ಕೆಮ್ಮುತ್ತಾನೆ?
ಪ್ರತೀ ಬಾರಿ ಕೆಮ್ಮಿದಾಗಲೂ
ಸಹಸ್ರಾರು ಶಬ್ದಗಳು.
ಬೇಸತ್ತು ಹೋಗಿದ್ದಾರೆ
ಊರು ಸ್ವಚ್ಛ ಮಾಡುವ
ಗುತ್ತಿಗೆ ತೆಗೆದುಕೊಂಡವರು.

ಚೌಕಿನಲ್ಲಿ ಜನ ಮಾತಾಡುತ್ತಿದ್ದರು
ಅವನು ಕವಿಯಂತೆ,

ಯಾರೋ ಪ್ರಶ್ನೆ ಕೇಳಿ
ಉತ್ತರ ಕೊಡುವುದಕ್ಕಿಂತ ಮುಂಚೆ
ಕತ್ತರಿಸಿಬಿಟ್ಟಿದ್ದಾರೆ ಅವನ
ನಾಲಿಗೆ.

***

3.

ಭಗವಂತ- 1

ನಾನು,
ಗೋಡೆಯ ಈ ಬದಿಯಲ್ಲಿದ್ದೇನೆ.
ಇಲ್ಲಿ ಬಿಸಿಲು ಬೀಳುತ್ತದೆ
ಹಸಿರು ಹಾಡುತ್ತದೆ.
ಎಲೆಗಳ ಮೇಲೆ
ಇಬ್ಬನಿ ಸವಾರಿ ಮಾಡುತ್ತದೆ,
ಸೋಮಾರಿ ಮಂಜು
ಠಿಕಾಣಿ ಹಾಕಿದರೆ
ಟೊಂಗೆಯ ಮೇಲೆ ಕುಳಿತು
ಗಂಟೆಗಟ್ಟಲೆ ತೂಕಡಿಸುತ್ತದೆ.

ಮಳೆ
ಹರೆಯದ ಹುಡುಗಿಯಂತೆ
ಕುಣಿದಾಡುತ್ತ ಬಂದು
ಕೈಚಾಚುತ್ತಿದ್ದಂತೆಯೇ
ಜಾರಿ ಹೋಗುತ್ತದೆ.
ಬಂದ ಪ್ರತಿ ಮಾಸವೂ
ಮೋಸ ಮಾಡದೇ
ಕಚಗುಳಿಯಿಡುತ್ತದೆ.

ಆದರೆ
ಈ ಹಸೀ ಗೋಡೆಯ
ಆ ಬದಿಯಲ್ಲಿ
ಯಾಕಿಷ್ಟು ನೀರವ ಮೌನ?
ಯಾರವರು?
ಸದ್ದು ಮಾಡದೇ
ಸುಮ್ಮನೇ ಕುಳಿತು
ಗೋಡೆಗೆ ಕಿವಿ ಹಚ್ಚಿರುವವರು?

***

4.

ಭಗವಂತ- 2

ಇಡೀ ಆಕಾಶ ಸುತ್ತಿ
ನೀನು ರಚಿಸಿರುವ ವ್ಯೂಹವನ್ನೊಮ್ಮೆ
ಜಾಗರೂಕತೆಯಿಂದ ಗಮನಿಸಿದೆ.

ಕಪ್ಪು ಮನೆಯಲ್ಲಿ
ಸೂರ್ಯನನ್ನು ಇಟ್ಟು
ನನ್ನ ಸೈನ್ಯವನ್ನು ಕಂಗೆಡಿಸಬೇಕೆಂದು
ಲೆಕ್ಕ ಹಾಕಿದ್ದಿಯಲ್ಲವೆ?
ನಾನು, ಒಂದು ಸಣ್ಣ ದೀಪ ಹಚ್ಚಿ
ನನ್ನ ದಾರಿ ಹುಡುಕಿಕೊಂಡೆ.

ನೀನು, ಸಮುದ್ರವನ್ನೆತ್ತಿ
ನನ್ನ ಮುಖದ ಮೇಲೆ ಅಪ್ಪಳಿಸಿದೆ.
ನಾನು ನಂಬಿಕೆಯ
ದೋಣಿಯನ್ನೇರಿ ಪಾರಾಗಿಬಿಟ್ಟೆ.

ನೀನು, ಕಾಲವನ್ನು
ಆಟದ ಅಂಗಳಕ್ಕಿಳಿಸಿ
ತೋಳು ಮೇಲಿರಿಸಿದೆ.
ನಾನು ಕಾಲವನ್ನು
ತುಂಡು ತುಂಡು ಮಾಡಿ
ಕ್ಷಣಗಳಲ್ಲಿ ಬದುಕುವುದನ್ನು
ರೂಢಿ ಮಾಡಿಕೊಂಡೆ.

ಕೆಲ ಚಮತ್ಕಾರಗಳನ್ನು ಮಾಡಿ
ನನ್ನ ಅಭಿಮಾನವನ್ನು ಕೊಲ್ಲಲು
ನೀನು ಶತಪ್ರಯತ್ನ ಮಾಡಿದೆ.
ನನ್ನ ಒಬ್ಬ ಸಣ್ಣ ಸೈನಿಕ ಮುಂದೆ ಬಂದು
ನಿನ್ನ ಅಸ್ತಿತ್ವಕ್ಕೇ ಸವಾಲು ಹಾಕಿದ.

ಸಾವನ್ನು ಎದುರು ನಿಲ್ಲಿಸಿ
ನನ್ನ ಆಟ ಮುಗಿಸಲು
ನೀನು ಹೊಂಚು ಹಾಕಿದೆ.
ದೇಹವನ್ನು ಪಣಕ್ಕಿಟ್ಟು
ನಾನು ಆತ್ಮ ಉಳಿಸಿಕೊಂಡೆ.

ಇಡೀ ಆಕಾಶ ಸುತ್ತಿ
ಮತ್ತೊಂದಿಷ್ಟು ಸಂಚು ಕಲಿತು ಬಾ
ನನ್ನ ಸೋಲಿಸುವುದು
ಅಷ್ಟು ಸುಲಭವಲ್ಲ ಭಗವಂತ.

***

5.

ಭಗವಂತ- 3

ಕಳೆದ ಬಾರಿ
ಭೆಟ್ಟಿಯಾದಾಗ ನೀನು
ಒಂದು ಭಯಂಕರ ಯುದ್ಧದಲ್ಲಿ
ಮಗ್ನನಾಗಿದ್ದೆ.
ಹೊಸ ಹೊಸ ಆಯುಧಗಳ
ಹೊಳಪಿಗೆ ತುಂಬ ಖುಷಿಯಾಗಿದ್ದೆ.
ಅದಕ್ಕೂ ಮೊದಲು
ಹಸಿವಿನಿಂದ ಸತ್ತ ಮಕ್ಕಳ
ಹೆಣಗಳನ್ನ ಹೂಳುವಾಗ
ನಿನ್ನ ನೋಡಿದ್ದೆ.
ಮತ್ತೊಮ್ಮೆ
ಭೂಮಿಯನ್ನು ನಡುಗಿಸಿ
ಇಡೀ ಊರಿಗೆ ಊರನ್ನೇ
ನೆಲಸಮ ಮಾಡಿ
ಇನ್ನೊಂದು ಕಡೆ
ಕೈ ಝಾಡಿಸಿಕೊಂಡು ಹೋಗುವಾಗ
ನಿನ್ನ ನೋಡಿದ್ದೆ.

ಸುತ್ತಮುತ್ತಲಿನ ನಕ್ಷತ್ರಗಳ ಮೇಲೆ
ಧೂಳು ಹಾರಿಸುತ್ತಾ
ಆಕಾಶದಿಂದ ಇಳಿದು ಬರುವಾಗಲೂ
ನಿನ್ನ ನೋಡಿದ್ದೆ.
ಬೇರೆ ಬೇರೆ ವಿಶ್ವಗಳ
ಆಕಾಶಗಳನ್ನು ಹಾಳುಗೆಡವಿ
ಉನ್ಮಾದದಿಂದ ನೀನು
ನೆಲಕ್ಕಿಳಿದು ಬರುತ್ತಿದ್ದರೆ
ಭೂಮಿ ನಡುಗುತ್ತದೆ
ಸಮುದ್ರ ಉಕ್ಕುತ್ತದೆ
ಆಗ ತುಂಬ ಇರ್ರಾಟಿಕ್ ಆಗಿ ಕಾಣಿಸುತ್ತಿ.

ನಿನ್ನ ಊರಿನಲ್ಲಿ ಎಂತೆಂಥವರ
ಸಹವಾಸದಲ್ಲಿರುತ್ತೀಯೋ ಏನೋ
ನನಗಂತೂ ಒಂದೂ ಗೊತ್ತಾಗುತ್ತಿಲ್ಲ.

***

6.

ಈಗ ನನಗೆ ರೂಢಿಯಾಗಿಬಿಟ್ಟಿದೆ.
ಪ್ರತೀಬಾರಿ ರಸ್ತೆ ದಾಟುವಾಗಲೂ
ಒಮ್ಮೆ ಆಕಾಶದತ್ತ ತಲೆ ಎತ್ತಿ ನೋಡಿ
ಖಾತ್ರಿ ಮಾಡಿಕೊಳ್ಳುತ್ತೇನೆ.
ಉರಿಯುತ್ತ, ಆರುತ್ತ
ಮಾರ್ಸ್, ಮರ್ಕ್ಯುರಿ, ವೀನಸ್ ಮುಂತಾದ
ಸೊಕ್ಕಿನ ಶ್ರೀಮಂತರು, ಆಕಾಶದಲ್ಲಿ
ಡೌಲಿನಿಂದ ಮೆರೆದಾಡುತ್ತಿರುತ್ತಾರೆ.

ಕಳೆದ ವಾರವಷ್ಟೇ,
ಬೇಕಾಬಿಟ್ಟಿಯಾಗಿ ಹಾರಾಡುತ್ತಿದ
ನಮ್ಮದೇ ಊರಿನ
ಉಡಾಳ ಕಾಮೆಟ್ ’ಲೇವಿ ಶೂಮಾಕರ್’
ಜ್ಯುಪಿಟರ್‌ನ ಎದೆಗೆ
ಬಲವಾಗಿ ಢಿಕ್ಕಿ ಹೊಡೆದಿದ್ದ.

ಬೆಂಕಿಯ ತುಣುಕುಗಳು
ಸಾವಿರಾರು ಮೈಲಿ ಚಿಮ್ಮಿ ಹೋಗಿದ್ದವು.
ನೀವೇ ಹೇಳಿ
ಜ್ಯುಪಿಟರ್‌ನ ಗಾಯ ಮಾಯಲು
ಎಷ್ಟು ಶತಮಾನಗಳು ಬೇಕಾಗಬಹುದು.

***

7.

ಒಂದಿಷ್ಟು ತಲೆ ಬೋಳಿಸಿದ ದನಿಗಳು
ಮೇಲಿಂದ ಮೇಲೆ
ದೇವರಮನೆಯ ಹಿತ್ತಲಿಗೆ ಬಂದು
ಇಟ್ಟಿಗೆಯ ಗೋಡೆಗೆ ಒರಗಿ
ಕಲ್ಲಾಗಿರುವ ಕಿವಿಗಳ ಮೇಲೆ,
ತಮ್ಮ ತುಟಿಗಳನ್ನಿಟ್ಟು
ಮನುಷ್ಯ ಜಾತಿಯ ಪೀಳಿಗೆಯನ್ನು
ತಮ್ಮ ಮಡಿಲಲ್ಲಿ ಹಾಕಿ
ನಿಶ್ಚಿಂತೆಯಿಂದ ಹೋಗಿ ಗೋರಿಯಲ್ಲಿ ಅಡ್ಡಾಗಿರುವ
ಒಬ್ಬ ಮುದುಕ ದೇವರಿಗೆ ಸಂತಾಪ ಹೇಳುತ್ತವೆ!!

***

8.

ಈ ದೃಶ್ಯವನ್ನು ಮೊದಲೂ ನೋಡಿದ್ದೆ.
ಬಂದೂಕನ್ನು ಎದೆಗೆ ನಾಟಿಸಿಕೊಂಡ
ಸೈನಿಕರ ದಂಡು
ಮತ್ತು ಎದುರಿಗೆ
ಎದೆ ಸೆಟೆಸಿ, ಘೋಷಣೆ ಕೂಗುತ್ತಿದ್ದ
ಜನಸಮೂಹ.
ಬಹುಶಃ ಅದು 1919ರ ವರ್ಷ
ಅಮೃತಸರ್‌ನ ಜಲಿಯನ್‌ವಾಲಾ ಬಾಗ್.

ಅಥವಾ 1936ರ
ಲಾಹೋರ್‌ನ ಒಂದು ಬೀದಿಯ ದೃಶ್ಯ,
ಸ್ವತಂತ್ರ ಹೋರಾಟದ ವರ್ಷಾಚರಣೆಯ
ಮಾರನೆಯ ರಾತ್ರಿ.

ಈ ಚಿತ್ರಗಳಲ್ಲಿ
ಎಷ್ಟು ಸಾಮ್ಯತೆ ಇದೆ ನೋಡಿ
ಇದರಲ್ಲಿನ ಜನರು,
ಅವರ ಮುಖದಲ್ಲಿನ ನೋವು,
ಎದೆಯಲ್ಲಿನ ಸಿಟ್ಟು,
ಆ ಹರೆಯ, ಆ ಭಾವನೆಗಳು
ಯಾವದೂ ನನಗೆ
ಅನಿಸುವುದಿಲ್ಲ ಅಪರಿಚಿತ.

ಅದು 1942ರ ವರ್ಷ ಇರಬಹುದು
ಅಲಹಾಬಾದ್‌ನ
ಒಂದು ಚೌಕದ ನಟ್ಟನಡುವೆ,
ಜನಸಾಗರವನ್ನು ಸುತ್ತುವರಿದಿದ್ದ
ಬ್ರಿಟಿಷ್ ಸೈನಿಕರು
ಅವರ ಕೈಯಲ್ಲಿ ಮತ್ತೆ ಅದೇ ಬಂದೂಕು
ಎದುರಿಗೆ ಮತ್ತೆ ಅದೇ ಜನ
ಅದೇ ಘೋಷಣೆಗಳು
ಅದೇ ಬಿಗಿದ ಮುಷ್ಟಿಗಳು,
ಅವತ್ತೂ ಜನರ ಕೈಯಲ್ಲಿ ಅದೇ ಧ್ವಜ.

ಇಂದೂ ಕೂಡ ಬಂದೂಕು
ಬೆಂಕಿ ಉಗುಳಿತು, ಜನ ಹಾಗೆ ಸತ್ತರು
ಮತ್ತೆ ಅದೇ ರಕ್ತ ಬೀದಿಯ ಮೇಲೆಲ್ಲ.
ಹೌದು, ಅದೇ ಚೌಕದ ನಟ್ಟನಡುವೆ
ಕಬ್ಬಿಣ, ಕಾಂಕ್ರೀಟುಗಳ ಕಾಡಿನಲ್ಲಿ.

ಮೊದಲೇನೋ ಇಲ್ಲೊಂದು
ಬ್ರಿಟಿಷ್ ಅಧಿಕಾರಿಯ ಮೂರ್ತಿ ಇತ್ತಂತೆ
ಇವತ್ತು ಗಾಂಧಿಯ ಮೂರ್ತಿ ಇದೆ
ಆದರೆ ಇದು
1992ರ ವರ್ಷ.
ನನಗೆ
ಯಾವದೂ ಅನಿಸುವುದಿಲ್ಲ ಅಪರಿಚಿತ.

***

9.

ದೇವರೆ,
ಪ್ರಾರ್ಥನೆ ಮಾಡುವಾಗ
ನಾನು ಆಕಳಿಸಿದ್ದನ್ನು ನೋಡಿ
ನಿನಗೆ ಸಿಟ್ಟು ಬಂದಿರಬೇಕಲ್ಲ?
ಈ ಕಾಟಾಚಾರ ಮಾಡಿ ಮಾಡಿ
ಬೇಜಾರಾಗಿಬಿಟ್ಟಿದೆ ನನಗಂತೂ.

ಬುದ್ಧಿ ಬಂದಾಗಿನಿಂದ
ಇದನ್ನೇ ಕೇಳುತ್ತಿದ್ದೇನೆ ನಾನು,
ಹಗಲು ರಾತ್ರಿ ಅವನ ದಯೆ,
ಒಳ್ಳೆಯದು ಕೆಟ್ಟದ್ದು ಎಲ್ಲ
ಅವನ ಕೈಯಲ್ಲೇ ಇದೆ.
ಪ್ರಾರ್ಥನೆ ಮಾಡು!

ಒಳ್ಳೆ ಗ್ರಹಚಾರ ಇದು.
ವಿಚಿತ್ರ ಸುಳ್ಳಿನ ಸಂಭಾಷಣೆ
ಅದೂ ಒಂದೇ ಕಡೆಯಿಂದ.
ಹೀಗೆ ಗುದ್ದಾಡುವುದಾದರೂ
ಯಾರೊಂದಿಗೆ?
ಅವನ ಮುಖ ಅಷ್ಟೇ ಅಲ್ಲ
ಅಸ್ತಿತ್ವವನ್ನೂ ಕೂಡ
ನಾವು
ಕಲ್ಪಿಸಿಕೊಳ್ಳಬೇಕಷ್ಟೆ.

***

10.

ತಂಗಳು ಉಸಿರಿಗೆ
ಜಾಗ ಕೊಡಬೇಡ ಎದೆಯಲ್ಲಿ,
ಉಸಿರು ದೀರ್ಘವಾದಷ್ಟು
ಸರಾಗವಂತೆ
ಸರ್ಪಗಳಿಗೆ ಬದುಕು.
ಇಂಥದೇ ಒಂದು ಉಸಿರು
ಒಮ್ಮೆ ಕಚ್ಚಿತ್ತು
ಕ್ಲಿಯೋಪಾತ್ರಾಳ ನಗೆಯನ್ನು.

ನನ್ನ ತುಟಿ ಮೇಲೊಮ್ಮೆ
ನಿನ್ನ ತುಟಿಗಳನ್ನಿಟ್ಟು
ಭುಸುಗುಟ್ಟಿಬಿಡು ಗೆಳತಿ.

ವಿಷ ಕುಡಿಯುವುದು
ಅಭ್ಯಾಸವಾಗಿಬಿಟ್ಟಿದೆ ನನಗೆ.

***

11.

ಒಬ್ಬ ಹಳ್ಳಿಯ ಹುಡುಗ
ತಲೆಯ ಮೇಲೆ
ಬೆಲ್ಲದ ಪೆಂಟಿಯನ್ನು ಹೊತ್ತು
ಹೊಲದಂಚಿನಲ್ಲಿ ನಡೆಯುತ್ತಾ
ಎಲ್ಲೋ ಹೋಗುತ್ತಿದ್ದಾನೆ.

ಬಿಸಿಲು ಏರಿದಂತೆಲ್ಲಾ
ಬೆಲ್ಲ ಕರಗಿ
ಹರಿಯತೊಡಗಿದೆ.

ಮುಗ್ಧ ಹಳ್ಳಿಯ ಹುಡುಗ
ಹಣೆಯಿಂದ
ಇಳಿಯುತ್ತಿರುವ
ಸಿಹಿ ರಸವನ್ನ
ಗಾಬರಿಯಿಂದ ಚಪ್ಪರಿಸುತ್ತಿದ್ದಾನೆ.

ನಾನೇ
ಆ ಹಳ್ಳಿಯ ಹುಡುಗ

ಯಾರು ನನ್ನ ತಲೆಯ ಮೇಲೆ
ಟಾಗೋರರ ಕವಿತೆಗಳ
ಗಂಟು ಇಟ್ಟದ್ದು?

***

12.

ಒಂದು ಹುಣ್ಣಿಮೆಯ ಸಂಜೆ
ಲಾಹೋರ್‌ನ ಸಣ್ಣಸಣ್ಣ ಗಲ್ಲಿಗಳಲ್ಲೆಲ್ಲ
ಅಮಾವಾಸ್ಯೆಯ ಭೀತಿ.

ಚಂದ್ರ
ಅವಸರದಿಂದ ಓಡುತ್ತಾ
ಜೈಲಿನ ಎತ್ತರದ ಗೋಡೆಗಳನ್ನ
ಕಮಾಂಡೊಗಳ ಥರ ಹಾರಿ
ಕತ್ತಲ ಸೆಲ್‌ನೊಳಗೆ ಪ್ರತ್ಯಕ್ಷನಾಗಿದ್ದಾನೆ.
ಒಂದಿಷ್ಟೂ ಸದ್ದಿಲ್ಲ
ಒಂದು ಹುಳಕ್ಕೂ ಗೊತ್ತಿಲ್ಲ.

ಚಂದ್ರ
ಫೈಜ್‌ನ ಭೆಟ್ಟಿಗೆ ಬಂದಿದ್ದಾನೆ.
ಒಂದೇ ಒಂದು ಹಾಡಿಗಾಗಿ
ಮನವಿ ಮಾಡಿಕೊಳ್ಳಲು.

ಕಾಲನ ನಾಡಿ ಮಿಡಿಯಬೇಕೆಂದರೆ
ಮತ್ತೆ ಫೈಜ್ ಹಾಡಲೇಬೇಕು.

***

ಗುಲ್ಜಾರ್
ಸಂಪೂರಣ್ ಸಿಂಗ ಕಾರ್ಲಾ, ಗುಲ್ಜಾರ್ ಅವರ ಮೂಲ ಹೆಸರು. ಉರ್ದುವಿನಲ್ಲಿ ಕವಿತೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಹಿಂದಿ ಸಿನಿಮಾಗಳಿಗೆ ಚಿತ್ರಗೀತೆಗಳನ್ನು ಬರೆದು, ಸಿನಿಪ್ರೇಮಿಗಳ ನಡುವೆ ಮನೆಮಾತಾಗಿದ್ದಾರೆ. ಅನುವಾದಕರೂ ಅಗಿರುವ ಗುಲ್ಜಾರ್ ಅವರಿಗೆ 2024ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು.

ಚಿದಂಬರ ನರೇಂದ್ರ

ಕನ್ನಡಕ್ಕೆ:ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪ್ರಜಾಪ್ರಭುತ್ವ ಜಗತ್ತಿನ ನಾಯಕರು, ಸಾರ್ವಭೌಮ ರಾಷ್ಟ್ರದ ನಾಯಕನನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯ’: ಖಮೇನಿ ಹತ್ಯೆಗೆ ಪ್ರಿಯಾಂಕ ಗಾಂಧಿ ಖಂಡನೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. "ಪ್ರಜಾಪ್ರಭುತ್ವ ಜಗತ್ತಿನ ನಾಯಕರು ಎಂದು ಕರೆಯಲ್ಪಡುವವರು" ಸಾರ್ವಭೌಮ ರಾಷ್ಟ್ರದ ನಾಯಕತ್ವವನ್ನು ಗುರಿಯಾಗಿಸಿಕೊಂಡು...

ದುಬೈ-ಅಬುಧಾಬಿ ಮೇಲೆ ದಾಳಿ; ಇರಾನ್‌ಗೆ ಯುಎಇ ಎಚ್ಚರಿಕೆ

ಇರಾನ್ ತನ್ನ ನೆರೆಹೊರೆಯವರನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಯುಎಇ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಶ್ ಎಚ್ಚರಿಕೆ ನೀಡಿದ್ದಾರೆ. "ಗಲ್ಫ್ ರಾಷ್ಟ್ರಗಳ ವಿರುದ್ಧ ಇರಾನ್ ಆಕ್ರಮಣವು ತಪ್ಪು ಲೆಕ್ಕಾಚಾರವಾಗಿದೆ. ಇದೇ ಬೆಳವಣಿಗೆ ನಿರ್ಣಾಯಕ ಹಂತದಲ್ಲಿ ಇರಾನ್...

ಇರಾನ್‌ ಹಂಗಾಮಿ ಸರ್ವೋಚ್ಚ ನಾಯಕರಾಗಿ ಅಯಾತೊಲ್ಲ ಅಲಿರೆಝಾ ಅರಾಫಿ ನೇಮಕ

ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಹಿನ್ನೆಲೆ, ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಝಾ ಅರಾಫಿ ಅವರು ಇರಾನ್‌ನ ಹಂಗಾಮಿ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ-ಸಂಯೋಜಿತ...

ಖಮೇನಿ ಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನೆ; ಶ್ರೀನಗರದಲ್ಲಿ ಇಂಟರ್‌ನೆಟ್ ಸ್ತಬ್ಧ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ಕಾಶ್ಮೀರದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ. ಶ್ರೀನಗರದಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ಗುಂಪು (UNMOGIP) ಪ್ರಧಾನ ಕಚೇರಿಯ ಮುಂದೆ ದೊಡ್ಡ ಜನಸಮೂಹ ಜಮಾಯಿಸಿತ್ತು....

ಅಮೆರಿಕಾ-ಇಸ್ರೇಲ್ ‘ಪುಂಡ ರಾಷ್ಟ್ರಗಳು’; ಇರಾನ್ ಮೇಲಿನ ದಾಳಿ ಖಂಡಿಸಿದ ಕೇರಳ ಸಿಎಂ; ಅನಿವಾಸಿ ಭಾರತೀಯರ ಆತಂಕ ಪರಿಹರಿಸಲು ಕೇಂದ್ರಕ್ಕೆ ಮನವಿ

ತಿರುವನಂತಪುರಂ: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಹಲವಾರು ಅನಿವಾಸಿ ಭಾರತೀಯರ ಆತಂಕವನ್ನು ಪರಿಹರಿಸಲು ಕೇಂದ್ರವು ತಕ್ಷಣ...

ಅಮೆರಿಕ-ಇಸ್ರೇಲಿ ಮಿಲಿಟರಿ ದಾಳಿಯಲ್ಲಿ ‘ಇರಾನ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಹತ್ಯೆ; ಇರಾನ್ ಮಾಧ್ಯಮಗಳ ವರದಿ 

ಟೆಹ್ರಾನ್: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸಾವಿ ಸಾವನ್ನಪ್ಪಿದ್ದಾರೆ ಎಂದು ದೇಶದ ಸರ್ಕಾರಿ ಸ್ವಾಮ್ಯದ ಐಆರ್‌ಐಬಿ ಟಿವಿ ಭಾನುವಾರ ವರದಿ ಮಾಡಿದೆ. ಟೆಹ್ರಾನ್ ಮೇಲಿನ ದಾಳಿಯಲ್ಲಿ...

ಕರಾಚಿ| ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ ಘರ್ಷಣೆ : ಕನಿಷ್ಠ 9 ಸಾವು

ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ದೂತಾವಾಸದ ಬಳಿ ಭಾನುವಾರ (ಮಾ.1) ಇರಾನ್ ಪರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆ ಉಂಟಾಗಿ ಕನಿಷ್ಠ ಒಂಭತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. "ನಾವು ಕನಿಷ್ಠ ಎಂಟು...

ಇರಾನ್-ಇಸ್ರೇಲ್ ಯುದ್ಧ: ಭಾರತ ತಕ್ಷಣದ ಆರ್ಥಿಕ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ; ವರದಿ

ಫೆಬ್ರವರಿ 28, 2026 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮುಷ್ಕರದ ನಂತರ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ತೀವ್ರ ಏರಿಕೆಯು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಅಪಾಯಗಳನ್ನು ತೀವ್ರಗೊಳಿಸಿದೆ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ತಕ್ಷಣದ...

ಮಹಾರಾಷ್ಟ್ರ: ನಾಗ್ಪುರದ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ, 17ಸಾವು, 18 ಜನರಿಗೆ ಗಂಭೀರ ಗಾಯ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (ನಾಗ್ಪುರ...

ಮಧ್ಯಪ್ರಾಚ್ಯ ಉದ್ವಿಗ್ನತೆ: ಯುದ್ಧ ಪೀಡಿತ ಸ್ಥಳಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸ್ಥಳಾಂತರಿಸಲು ತುರ್ತು ಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್, ಯುಎಇ, ಇರಾನ್ ಮತ್ತು ಕತಾರ್ ಸೇರಿದಂತೆ ಪೀಡಿತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸಿಸುವ ಕನ್ನಡಿಗರ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ...