Homeಮುಖಪುಟಗುಲ್ಜಾರ್ ಅವರ ಪದ್ಯಗಳು

ಗುಲ್ಜಾರ್ ಅವರ ಪದ್ಯಗಳು

- Advertisement -
- Advertisement -

1.

ಯಾವ ಹೊಲದಿಂದ ರೈತನಿಗೆ ರೊಟ್ಟಿಯ ಅದೃಷ್ಟವಿಲ್ಲವೋ
ಆ ಹೊಲದ ಗೋಧಿಯ ತೆನೆಗಳನ್ನು
ಹುಡುಕಿ ಹುಡುಕಿ ಸುಟ್ಟುಬಿಡಿ

ಅಲ್ಲಮ ಇಕ್ಬಾಲ್

ಯಾರಾದರೂ ಹೋಗಿ ’ಅಲ್ಲಮ’ನಿಗೆ ಸುದ್ದಿ ಮುಟ್ಟಿಸಿ
ಯಾವ ಹೊಲದಿಂದ ರೈತನ ಮನೆಯ
ಹೊಟ್ಟೆ ತುಂಬಲಿಲ್ಲವೋ
ಯಾರೂ ಆ ಹೊಲಕ್ಕೆ ಹೋಗಿ ಬೆಂಕಿ ಹಚ್ಚಲಿಲ್ಲ
ಯಾರೂ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ
ಯಾವ ಕ್ರಾಂತಿಯ ಘೋಷಣೆಗಳೂ ಮೊಳಗಲಿಲ್ಲ.

ಶವಯಾತ್ರೆಗಳು ಹೊರಟಿವೆ
ಹಳ್ಳಿಗಳ ಮನೆಮನೆಯಿಂದ
ಪ್ರತಿ ಮೆರವಣಿಗೆಯೂ ಅನ್ನದಾತರದು
ಸಾಲದ ಹಂಗಿಗೆ ಧಿಕ್ಕಾರ ಹೇಳಿ ಅಮರರಾದ ಹುತಾತ್ಮರದು.

ಅಲ್ಲಮ – ಪ್ರಸಿದ್ಧ ಉರ್ದು ಕವಿ, ಅಲ್ಲಮ ಮೊಹಮ್ಮದ್ ಇಕ್ಬಾಲ್

***

2.

ಯಾರು ಈ ಮೂಕ?
ಎಷ್ಟೊಂದು ಕೆಮ್ಮುತ್ತಾನೆ?
ಪ್ರತೀ ಬಾರಿ ಕೆಮ್ಮಿದಾಗಲೂ
ಸಹಸ್ರಾರು ಶಬ್ದಗಳು.
ಬೇಸತ್ತು ಹೋಗಿದ್ದಾರೆ
ಊರು ಸ್ವಚ್ಛ ಮಾಡುವ
ಗುತ್ತಿಗೆ ತೆಗೆದುಕೊಂಡವರು.

ಚೌಕಿನಲ್ಲಿ ಜನ ಮಾತಾಡುತ್ತಿದ್ದರು
ಅವನು ಕವಿಯಂತೆ,

ಯಾರೋ ಪ್ರಶ್ನೆ ಕೇಳಿ
ಉತ್ತರ ಕೊಡುವುದಕ್ಕಿಂತ ಮುಂಚೆ
ಕತ್ತರಿಸಿಬಿಟ್ಟಿದ್ದಾರೆ ಅವನ
ನಾಲಿಗೆ.

***

3.

ಭಗವಂತ- 1

ನಾನು,
ಗೋಡೆಯ ಈ ಬದಿಯಲ್ಲಿದ್ದೇನೆ.
ಇಲ್ಲಿ ಬಿಸಿಲು ಬೀಳುತ್ತದೆ
ಹಸಿರು ಹಾಡುತ್ತದೆ.
ಎಲೆಗಳ ಮೇಲೆ
ಇಬ್ಬನಿ ಸವಾರಿ ಮಾಡುತ್ತದೆ,
ಸೋಮಾರಿ ಮಂಜು
ಠಿಕಾಣಿ ಹಾಕಿದರೆ
ಟೊಂಗೆಯ ಮೇಲೆ ಕುಳಿತು
ಗಂಟೆಗಟ್ಟಲೆ ತೂಕಡಿಸುತ್ತದೆ.

ಮಳೆ
ಹರೆಯದ ಹುಡುಗಿಯಂತೆ
ಕುಣಿದಾಡುತ್ತ ಬಂದು
ಕೈಚಾಚುತ್ತಿದ್ದಂತೆಯೇ
ಜಾರಿ ಹೋಗುತ್ತದೆ.
ಬಂದ ಪ್ರತಿ ಮಾಸವೂ
ಮೋಸ ಮಾಡದೇ
ಕಚಗುಳಿಯಿಡುತ್ತದೆ.

ಆದರೆ
ಈ ಹಸೀ ಗೋಡೆಯ
ಆ ಬದಿಯಲ್ಲಿ
ಯಾಕಿಷ್ಟು ನೀರವ ಮೌನ?
ಯಾರವರು?
ಸದ್ದು ಮಾಡದೇ
ಸುಮ್ಮನೇ ಕುಳಿತು
ಗೋಡೆಗೆ ಕಿವಿ ಹಚ್ಚಿರುವವರು?

***

4.

ಭಗವಂತ- 2

ಇಡೀ ಆಕಾಶ ಸುತ್ತಿ
ನೀನು ರಚಿಸಿರುವ ವ್ಯೂಹವನ್ನೊಮ್ಮೆ
ಜಾಗರೂಕತೆಯಿಂದ ಗಮನಿಸಿದೆ.

ಕಪ್ಪು ಮನೆಯಲ್ಲಿ
ಸೂರ್ಯನನ್ನು ಇಟ್ಟು
ನನ್ನ ಸೈನ್ಯವನ್ನು ಕಂಗೆಡಿಸಬೇಕೆಂದು
ಲೆಕ್ಕ ಹಾಕಿದ್ದಿಯಲ್ಲವೆ?
ನಾನು, ಒಂದು ಸಣ್ಣ ದೀಪ ಹಚ್ಚಿ
ನನ್ನ ದಾರಿ ಹುಡುಕಿಕೊಂಡೆ.

ನೀನು, ಸಮುದ್ರವನ್ನೆತ್ತಿ
ನನ್ನ ಮುಖದ ಮೇಲೆ ಅಪ್ಪಳಿಸಿದೆ.
ನಾನು ನಂಬಿಕೆಯ
ದೋಣಿಯನ್ನೇರಿ ಪಾರಾಗಿಬಿಟ್ಟೆ.

ನೀನು, ಕಾಲವನ್ನು
ಆಟದ ಅಂಗಳಕ್ಕಿಳಿಸಿ
ತೋಳು ಮೇಲಿರಿಸಿದೆ.
ನಾನು ಕಾಲವನ್ನು
ತುಂಡು ತುಂಡು ಮಾಡಿ
ಕ್ಷಣಗಳಲ್ಲಿ ಬದುಕುವುದನ್ನು
ರೂಢಿ ಮಾಡಿಕೊಂಡೆ.

ಕೆಲ ಚಮತ್ಕಾರಗಳನ್ನು ಮಾಡಿ
ನನ್ನ ಅಭಿಮಾನವನ್ನು ಕೊಲ್ಲಲು
ನೀನು ಶತಪ್ರಯತ್ನ ಮಾಡಿದೆ.
ನನ್ನ ಒಬ್ಬ ಸಣ್ಣ ಸೈನಿಕ ಮುಂದೆ ಬಂದು
ನಿನ್ನ ಅಸ್ತಿತ್ವಕ್ಕೇ ಸವಾಲು ಹಾಕಿದ.

ಸಾವನ್ನು ಎದುರು ನಿಲ್ಲಿಸಿ
ನನ್ನ ಆಟ ಮುಗಿಸಲು
ನೀನು ಹೊಂಚು ಹಾಕಿದೆ.
ದೇಹವನ್ನು ಪಣಕ್ಕಿಟ್ಟು
ನಾನು ಆತ್ಮ ಉಳಿಸಿಕೊಂಡೆ.

ಇಡೀ ಆಕಾಶ ಸುತ್ತಿ
ಮತ್ತೊಂದಿಷ್ಟು ಸಂಚು ಕಲಿತು ಬಾ
ನನ್ನ ಸೋಲಿಸುವುದು
ಅಷ್ಟು ಸುಲಭವಲ್ಲ ಭಗವಂತ.

***

5.

ಭಗವಂತ- 3

ಕಳೆದ ಬಾರಿ
ಭೆಟ್ಟಿಯಾದಾಗ ನೀನು
ಒಂದು ಭಯಂಕರ ಯುದ್ಧದಲ್ಲಿ
ಮಗ್ನನಾಗಿದ್ದೆ.
ಹೊಸ ಹೊಸ ಆಯುಧಗಳ
ಹೊಳಪಿಗೆ ತುಂಬ ಖುಷಿಯಾಗಿದ್ದೆ.
ಅದಕ್ಕೂ ಮೊದಲು
ಹಸಿವಿನಿಂದ ಸತ್ತ ಮಕ್ಕಳ
ಹೆಣಗಳನ್ನ ಹೂಳುವಾಗ
ನಿನ್ನ ನೋಡಿದ್ದೆ.
ಮತ್ತೊಮ್ಮೆ
ಭೂಮಿಯನ್ನು ನಡುಗಿಸಿ
ಇಡೀ ಊರಿಗೆ ಊರನ್ನೇ
ನೆಲಸಮ ಮಾಡಿ
ಇನ್ನೊಂದು ಕಡೆ
ಕೈ ಝಾಡಿಸಿಕೊಂಡು ಹೋಗುವಾಗ
ನಿನ್ನ ನೋಡಿದ್ದೆ.

ಸುತ್ತಮುತ್ತಲಿನ ನಕ್ಷತ್ರಗಳ ಮೇಲೆ
ಧೂಳು ಹಾರಿಸುತ್ತಾ
ಆಕಾಶದಿಂದ ಇಳಿದು ಬರುವಾಗಲೂ
ನಿನ್ನ ನೋಡಿದ್ದೆ.
ಬೇರೆ ಬೇರೆ ವಿಶ್ವಗಳ
ಆಕಾಶಗಳನ್ನು ಹಾಳುಗೆಡವಿ
ಉನ್ಮಾದದಿಂದ ನೀನು
ನೆಲಕ್ಕಿಳಿದು ಬರುತ್ತಿದ್ದರೆ
ಭೂಮಿ ನಡುಗುತ್ತದೆ
ಸಮುದ್ರ ಉಕ್ಕುತ್ತದೆ
ಆಗ ತುಂಬ ಇರ್ರಾಟಿಕ್ ಆಗಿ ಕಾಣಿಸುತ್ತಿ.

ನಿನ್ನ ಊರಿನಲ್ಲಿ ಎಂತೆಂಥವರ
ಸಹವಾಸದಲ್ಲಿರುತ್ತೀಯೋ ಏನೋ
ನನಗಂತೂ ಒಂದೂ ಗೊತ್ತಾಗುತ್ತಿಲ್ಲ.

***

6.

ಈಗ ನನಗೆ ರೂಢಿಯಾಗಿಬಿಟ್ಟಿದೆ.
ಪ್ರತೀಬಾರಿ ರಸ್ತೆ ದಾಟುವಾಗಲೂ
ಒಮ್ಮೆ ಆಕಾಶದತ್ತ ತಲೆ ಎತ್ತಿ ನೋಡಿ
ಖಾತ್ರಿ ಮಾಡಿಕೊಳ್ಳುತ್ತೇನೆ.
ಉರಿಯುತ್ತ, ಆರುತ್ತ
ಮಾರ್ಸ್, ಮರ್ಕ್ಯುರಿ, ವೀನಸ್ ಮುಂತಾದ
ಸೊಕ್ಕಿನ ಶ್ರೀಮಂತರು, ಆಕಾಶದಲ್ಲಿ
ಡೌಲಿನಿಂದ ಮೆರೆದಾಡುತ್ತಿರುತ್ತಾರೆ.

ಕಳೆದ ವಾರವಷ್ಟೇ,
ಬೇಕಾಬಿಟ್ಟಿಯಾಗಿ ಹಾರಾಡುತ್ತಿದ
ನಮ್ಮದೇ ಊರಿನ
ಉಡಾಳ ಕಾಮೆಟ್ ’ಲೇವಿ ಶೂಮಾಕರ್’
ಜ್ಯುಪಿಟರ್‌ನ ಎದೆಗೆ
ಬಲವಾಗಿ ಢಿಕ್ಕಿ ಹೊಡೆದಿದ್ದ.

ಬೆಂಕಿಯ ತುಣುಕುಗಳು
ಸಾವಿರಾರು ಮೈಲಿ ಚಿಮ್ಮಿ ಹೋಗಿದ್ದವು.
ನೀವೇ ಹೇಳಿ
ಜ್ಯುಪಿಟರ್‌ನ ಗಾಯ ಮಾಯಲು
ಎಷ್ಟು ಶತಮಾನಗಳು ಬೇಕಾಗಬಹುದು.

***

7.

ಒಂದಿಷ್ಟು ತಲೆ ಬೋಳಿಸಿದ ದನಿಗಳು
ಮೇಲಿಂದ ಮೇಲೆ
ದೇವರಮನೆಯ ಹಿತ್ತಲಿಗೆ ಬಂದು
ಇಟ್ಟಿಗೆಯ ಗೋಡೆಗೆ ಒರಗಿ
ಕಲ್ಲಾಗಿರುವ ಕಿವಿಗಳ ಮೇಲೆ,
ತಮ್ಮ ತುಟಿಗಳನ್ನಿಟ್ಟು
ಮನುಷ್ಯ ಜಾತಿಯ ಪೀಳಿಗೆಯನ್ನು
ತಮ್ಮ ಮಡಿಲಲ್ಲಿ ಹಾಕಿ
ನಿಶ್ಚಿಂತೆಯಿಂದ ಹೋಗಿ ಗೋರಿಯಲ್ಲಿ ಅಡ್ಡಾಗಿರುವ
ಒಬ್ಬ ಮುದುಕ ದೇವರಿಗೆ ಸಂತಾಪ ಹೇಳುತ್ತವೆ!!

***

8.

ಈ ದೃಶ್ಯವನ್ನು ಮೊದಲೂ ನೋಡಿದ್ದೆ.
ಬಂದೂಕನ್ನು ಎದೆಗೆ ನಾಟಿಸಿಕೊಂಡ
ಸೈನಿಕರ ದಂಡು
ಮತ್ತು ಎದುರಿಗೆ
ಎದೆ ಸೆಟೆಸಿ, ಘೋಷಣೆ ಕೂಗುತ್ತಿದ್ದ
ಜನಸಮೂಹ.
ಬಹುಶಃ ಅದು 1919ರ ವರ್ಷ
ಅಮೃತಸರ್‌ನ ಜಲಿಯನ್‌ವಾಲಾ ಬಾಗ್.

ಅಥವಾ 1936ರ
ಲಾಹೋರ್‌ನ ಒಂದು ಬೀದಿಯ ದೃಶ್ಯ,
ಸ್ವತಂತ್ರ ಹೋರಾಟದ ವರ್ಷಾಚರಣೆಯ
ಮಾರನೆಯ ರಾತ್ರಿ.

ಈ ಚಿತ್ರಗಳಲ್ಲಿ
ಎಷ್ಟು ಸಾಮ್ಯತೆ ಇದೆ ನೋಡಿ
ಇದರಲ್ಲಿನ ಜನರು,
ಅವರ ಮುಖದಲ್ಲಿನ ನೋವು,
ಎದೆಯಲ್ಲಿನ ಸಿಟ್ಟು,
ಆ ಹರೆಯ, ಆ ಭಾವನೆಗಳು
ಯಾವದೂ ನನಗೆ
ಅನಿಸುವುದಿಲ್ಲ ಅಪರಿಚಿತ.

ಅದು 1942ರ ವರ್ಷ ಇರಬಹುದು
ಅಲಹಾಬಾದ್‌ನ
ಒಂದು ಚೌಕದ ನಟ್ಟನಡುವೆ,
ಜನಸಾಗರವನ್ನು ಸುತ್ತುವರಿದಿದ್ದ
ಬ್ರಿಟಿಷ್ ಸೈನಿಕರು
ಅವರ ಕೈಯಲ್ಲಿ ಮತ್ತೆ ಅದೇ ಬಂದೂಕು
ಎದುರಿಗೆ ಮತ್ತೆ ಅದೇ ಜನ
ಅದೇ ಘೋಷಣೆಗಳು
ಅದೇ ಬಿಗಿದ ಮುಷ್ಟಿಗಳು,
ಅವತ್ತೂ ಜನರ ಕೈಯಲ್ಲಿ ಅದೇ ಧ್ವಜ.

ಇಂದೂ ಕೂಡ ಬಂದೂಕು
ಬೆಂಕಿ ಉಗುಳಿತು, ಜನ ಹಾಗೆ ಸತ್ತರು
ಮತ್ತೆ ಅದೇ ರಕ್ತ ಬೀದಿಯ ಮೇಲೆಲ್ಲ.
ಹೌದು, ಅದೇ ಚೌಕದ ನಟ್ಟನಡುವೆ
ಕಬ್ಬಿಣ, ಕಾಂಕ್ರೀಟುಗಳ ಕಾಡಿನಲ್ಲಿ.

ಮೊದಲೇನೋ ಇಲ್ಲೊಂದು
ಬ್ರಿಟಿಷ್ ಅಧಿಕಾರಿಯ ಮೂರ್ತಿ ಇತ್ತಂತೆ
ಇವತ್ತು ಗಾಂಧಿಯ ಮೂರ್ತಿ ಇದೆ
ಆದರೆ ಇದು
1992ರ ವರ್ಷ.
ನನಗೆ
ಯಾವದೂ ಅನಿಸುವುದಿಲ್ಲ ಅಪರಿಚಿತ.

***

9.

ದೇವರೆ,
ಪ್ರಾರ್ಥನೆ ಮಾಡುವಾಗ
ನಾನು ಆಕಳಿಸಿದ್ದನ್ನು ನೋಡಿ
ನಿನಗೆ ಸಿಟ್ಟು ಬಂದಿರಬೇಕಲ್ಲ?
ಈ ಕಾಟಾಚಾರ ಮಾಡಿ ಮಾಡಿ
ಬೇಜಾರಾಗಿಬಿಟ್ಟಿದೆ ನನಗಂತೂ.

ಬುದ್ಧಿ ಬಂದಾಗಿನಿಂದ
ಇದನ್ನೇ ಕೇಳುತ್ತಿದ್ದೇನೆ ನಾನು,
ಹಗಲು ರಾತ್ರಿ ಅವನ ದಯೆ,
ಒಳ್ಳೆಯದು ಕೆಟ್ಟದ್ದು ಎಲ್ಲ
ಅವನ ಕೈಯಲ್ಲೇ ಇದೆ.
ಪ್ರಾರ್ಥನೆ ಮಾಡು!

ಒಳ್ಳೆ ಗ್ರಹಚಾರ ಇದು.
ವಿಚಿತ್ರ ಸುಳ್ಳಿನ ಸಂಭಾಷಣೆ
ಅದೂ ಒಂದೇ ಕಡೆಯಿಂದ.
ಹೀಗೆ ಗುದ್ದಾಡುವುದಾದರೂ
ಯಾರೊಂದಿಗೆ?
ಅವನ ಮುಖ ಅಷ್ಟೇ ಅಲ್ಲ
ಅಸ್ತಿತ್ವವನ್ನೂ ಕೂಡ
ನಾವು
ಕಲ್ಪಿಸಿಕೊಳ್ಳಬೇಕಷ್ಟೆ.

***

10.

ತಂಗಳು ಉಸಿರಿಗೆ
ಜಾಗ ಕೊಡಬೇಡ ಎದೆಯಲ್ಲಿ,
ಉಸಿರು ದೀರ್ಘವಾದಷ್ಟು
ಸರಾಗವಂತೆ
ಸರ್ಪಗಳಿಗೆ ಬದುಕು.
ಇಂಥದೇ ಒಂದು ಉಸಿರು
ಒಮ್ಮೆ ಕಚ್ಚಿತ್ತು
ಕ್ಲಿಯೋಪಾತ್ರಾಳ ನಗೆಯನ್ನು.

ನನ್ನ ತುಟಿ ಮೇಲೊಮ್ಮೆ
ನಿನ್ನ ತುಟಿಗಳನ್ನಿಟ್ಟು
ಭುಸುಗುಟ್ಟಿಬಿಡು ಗೆಳತಿ.

ವಿಷ ಕುಡಿಯುವುದು
ಅಭ್ಯಾಸವಾಗಿಬಿಟ್ಟಿದೆ ನನಗೆ.

***

11.

ಒಬ್ಬ ಹಳ್ಳಿಯ ಹುಡುಗ
ತಲೆಯ ಮೇಲೆ
ಬೆಲ್ಲದ ಪೆಂಟಿಯನ್ನು ಹೊತ್ತು
ಹೊಲದಂಚಿನಲ್ಲಿ ನಡೆಯುತ್ತಾ
ಎಲ್ಲೋ ಹೋಗುತ್ತಿದ್ದಾನೆ.

ಬಿಸಿಲು ಏರಿದಂತೆಲ್ಲಾ
ಬೆಲ್ಲ ಕರಗಿ
ಹರಿಯತೊಡಗಿದೆ.

ಮುಗ್ಧ ಹಳ್ಳಿಯ ಹುಡುಗ
ಹಣೆಯಿಂದ
ಇಳಿಯುತ್ತಿರುವ
ಸಿಹಿ ರಸವನ್ನ
ಗಾಬರಿಯಿಂದ ಚಪ್ಪರಿಸುತ್ತಿದ್ದಾನೆ.

ನಾನೇ
ಆ ಹಳ್ಳಿಯ ಹುಡುಗ

ಯಾರು ನನ್ನ ತಲೆಯ ಮೇಲೆ
ಟಾಗೋರರ ಕವಿತೆಗಳ
ಗಂಟು ಇಟ್ಟದ್ದು?

***

12.

ಒಂದು ಹುಣ್ಣಿಮೆಯ ಸಂಜೆ
ಲಾಹೋರ್‌ನ ಸಣ್ಣಸಣ್ಣ ಗಲ್ಲಿಗಳಲ್ಲೆಲ್ಲ
ಅಮಾವಾಸ್ಯೆಯ ಭೀತಿ.

ಚಂದ್ರ
ಅವಸರದಿಂದ ಓಡುತ್ತಾ
ಜೈಲಿನ ಎತ್ತರದ ಗೋಡೆಗಳನ್ನ
ಕಮಾಂಡೊಗಳ ಥರ ಹಾರಿ
ಕತ್ತಲ ಸೆಲ್‌ನೊಳಗೆ ಪ್ರತ್ಯಕ್ಷನಾಗಿದ್ದಾನೆ.
ಒಂದಿಷ್ಟೂ ಸದ್ದಿಲ್ಲ
ಒಂದು ಹುಳಕ್ಕೂ ಗೊತ್ತಿಲ್ಲ.

ಚಂದ್ರ
ಫೈಜ್‌ನ ಭೆಟ್ಟಿಗೆ ಬಂದಿದ್ದಾನೆ.
ಒಂದೇ ಒಂದು ಹಾಡಿಗಾಗಿ
ಮನವಿ ಮಾಡಿಕೊಳ್ಳಲು.

ಕಾಲನ ನಾಡಿ ಮಿಡಿಯಬೇಕೆಂದರೆ
ಮತ್ತೆ ಫೈಜ್ ಹಾಡಲೇಬೇಕು.

***

ಗುಲ್ಜಾರ್
ಸಂಪೂರಣ್ ಸಿಂಗ ಕಾರ್ಲಾ, ಗುಲ್ಜಾರ್ ಅವರ ಮೂಲ ಹೆಸರು. ಉರ್ದುವಿನಲ್ಲಿ ಕವಿತೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಹಿಂದಿ ಸಿನಿಮಾಗಳಿಗೆ ಚಿತ್ರಗೀತೆಗಳನ್ನು ಬರೆದು, ಸಿನಿಪ್ರೇಮಿಗಳ ನಡುವೆ ಮನೆಮಾತಾಗಿದ್ದಾರೆ. ಅನುವಾದಕರೂ ಅಗಿರುವ ಗುಲ್ಜಾರ್ ಅವರಿಗೆ 2024ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು.

ಚಿದಂಬರ ನರೇಂದ್ರ

ಕನ್ನಡಕ್ಕೆ:ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಲಿಸುತ್ತಿದ್ದ ವ್ಯಾನ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ರಸ್ತೆಗೆ ಎಸೆದ ಪ್ರಕರಣ : ಇಬ್ಬರ ಬಂಧನ

ಚಲಿಸುತ್ತಿದ್ದ ವ್ಯಾನ್‌ನಲ್ಲಿ 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ನಂತರ ಆಕೆಯನ್ನು ರಸ್ತೆಗೆ ಎಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್‌ನಲ್ಲಿ ನಡೆದಿದ್ದು, ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು...

ವಶಪಡಿಸಿಕೊಂಡ 200 ಕೆ.ಜಿ ಗಾಂಜಾ ಇಲಿಗಳು ತಿಂದಿವೆ ಎಂದ ಪೊಲೀಸರು : ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್

ಮೂರು ವರ್ಷಗಳ ಹಿಂದೆ ಜಾರ್ಖಂಡ್ ಪೊಲೀಸರು ವಾಹನವೊಂದನ್ನು ತಡೆದು, ಅದರಿಂದ ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದರು. 2024ರಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವಾಗ, ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು....

ಗಿಗ್ ಕಾರ್ಮಿಕರಿಂದ ಮತ್ತೆ ಮುಷ್ಕರ : ಹೊಸ ವರ್ಷದ ಸಂಜೆ ಆಹಾರ, ದಿನಸಿ ವಿತರಣೆಯಲ್ಲಿ ವ್ಯತ್ಯಯ ಸಾಧ್ಯತೆ

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ದೇಶದ ವಿವಿಧ ನಗರಗಳಲ್ಲಿ ಮುಷ್ಕರ ನಡೆಸಿರುವ ಗಿಗ್‌ ಕಾರ್ಮಿಕರು, ಹೊಸ ವರ್ಷದ ಸಂಜೆಯಾದ ಇಂದು (ಡಿ.31) ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ನ್ಯಾಯಯುತ ಮತ್ತು...

ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ಲೋಕೋ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಢ-ಪಿಪಲ್ಕೋಟಿ ಜಲ ವಿದ್ಯುತ್ ಯೋಜನೆಯ ಸುರಂಗದ ಪಿಪಲ್ಕೋಟಿ ಸುರಂಗದೊಳಗೆ ಮಂಗಳವಾರ ಸಂಜೆ ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಲೋಕೋ ರೈಲು, ಸರಕು ರೈಲಿಗೆ ಡಿಕ್ಕಿ ಹೊಡೆದು ಸುಮಾರು...

ವಿಬಿ-ಜಿ ರಾಮ್‌ ಜಿ ಕಾಯ್ದೆ ವಿರುದ್ಧ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ : ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲು ಆಗ್ರಹ

ನರೇಗಾ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್‌ ಜಿ ಕಾಯ್ದೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದರ ಅನುಷ್ಠಾನ ತಡೆ ಹಿಡಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳವಾರ (ಡಿ.30)...

ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ವಿರೋಧಿಸಿ ಪ್ರತಿಭಟನೆ; ಧಾರವಾಡ ಕೃಷಿ ವಿವಿ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ರದ್ದು

ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮಕ್ಕೆ ಹಿಂದುತ್ವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ದಲಿತ ಸಂಘಟನೆ ಹಾಗೂ ಕೃಷಿ ವಿವಿ ಬೋರ್ಡ್ ಸದಸ್ಯರು ವಿವಿ...

ಯುಪಿ: ತಂದೆ ಮತ್ತು ಮಾನಸಿಕ ಅಸ್ವಸ್ಥ ಮಗಳನ್ನು ಐದು ವರ್ಷ ಕೋಣೆಯಲ್ಲಿ ಕೂಡಿ ಹಾಕಿದ ಸೇವಕ ದಂಪತಿ: ತಂದೆ ಸಾವು, ಅಸ್ಥಿಪಂಜರದಂತೆ ಪತ್ತೆಯಾದ ಮಗಳು

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ಮತ್ತು ಅವರ ಮಾನಸಿಕ ಅಸ್ವಸ್ಥ ಮಗಳನ್ನು ಅವರ ಆರೈಕೆದಾರರು ಐದು ವರ್ಷಗಳ ಕಾಲ ಬಂಧಿಯಾಗಿಟ್ಟು ಚಿತ್ರಹಿಂಸೆ ನೀಡಿ, ಆ ವ್ಯಕ್ತಿಯ ಸಾವಿಗೆ ಕಾರಣವಾದ...

ಈಶಾನ್ಯ ಭಾರತ ನಾಗರಿಕರ ವಿರುದ್ಧದ ಜನಾಂಗೀಯ ಹಿಂಸಾಚಾರ: ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಈಶಾನ್ಯ ರಾಜ್ಯಗಳು ಮತ್ತು ಇತರ ಗಡಿ ಪ್ರದೇಶಗಳ ನಾಗರಿಕರ ಮೇಲಿನ ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರವನ್ನು ತಡೆಗಟ್ಟುವಲ್ಲಿ, ಪ್ರತಿಕ್ರಿಯಿಸುವಲ್ಲಿ ನಿರಂತರ ಸಾಂವಿಧಾನಿಕ ವೈಫಲ್ಯವನ್ನು ಪರಿಹರಿಸಲು ನ್ಯಾಯಾಂಗ ಹಸ್ತಕ್ಷೇಪವನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ...

ಎಸ್‌ಐಆರ್‌ ದೊಡ್ಡ ಹಗರಣ : ನೈಜ ಮತದಾರರನ್ನು ಕೈಬಿಟ್ಟರೆ ಚು.ಆಯೋಗದ ಕಚೇರಿಗೆ ಘೇರಾವ್ : ಮಮತಾ ಬ್ಯಾನರ್ಜಿ ಎಚ್ಚರಿಕೆ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂತಿಮ ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೆ, ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಘೇರಾವ್ ಹಾಕುವುದಾಗಿ...

ಬೀದಿ ನಾಯಿ ಎಣಿಕೆ ಕಾರ್ಯಕ್ಕೆ ಶಾಲಾ ಶಿಕ್ಷಕರನ್ನು ನಿಯೋಜಿಸಿಲ್ಲ: ದೆಹಲಿ ಸರ್ಕಾರದ ಸ್ಪಷ್ಟನೆ

ನಗರದಲ್ಲಿ ಬೀದಿ ನಾಯಿಗಳ ಎಣಿಕೆಗೆ ಯಾವುದೇ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ. ಶಿಕ್ಷಕರಿಗೆ ಜನಗಣತಿ ಸಂಬಂಧಿತ ಕರ್ತವ್ಯಗಳಿಗೆ ಮಾತ್ರ ನಿಯೋಜಿಸಲಾಗಿದೆ. ಬೀದಿ ನಾಯಿ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳಿಗೆ...