“ತಮಿಳುನಾಡಿನಲ್ಲಿ ಮೋದಿ (ಬಿಜೆಪಿ) ಗೆಲ್ತಾರೆ ಎಂದು ಭವಿಷ್ಯ ಹೇಳಿದ್ದಕ್ಕೆ ಗಿಣಿ ಶಾಸ್ತ್ರದವನನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗ್ತಿದೆ.
ಹಿಂದುತ್ವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಈ ವಿಡಿಯೋ ಹಂಚಿಕೊಂಡಿದ್ದು, “ಮೋದಿ ಗೆಲ್ತಾರೆ ಅಂದಿದ್ದಕ್ಕೆ ಬಡಪಾಯಿ ಗಿಣಿ ಶಾಸ್ತ್ರದವನನ್ನು ಜೈಲಿಗಟ್ಟಿದ ತಮಿಳುನಾಡು ಸರ್ಕಾರ! ಆದರೆ ಸರ್ವಾಧಿಕಾರಿ ಮಾತ್ರ ಮೋದಿಯೇ!!” ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್ಚೆಕ್ : ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ನಾನುಗೌರಿ.ಕಾಂ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದೆ.
ವಿಡಿಯೋಗೆ ಸಂಬಂಧಿಸಿಂತೆ ಏಪ್ರಿಲ್ 10, 2024ರಂದು ಎಬಿಪಿ ನ್ಯೂಸ್ ಸುದ್ದಿಯೊಂದನ್ನು ಪ್ರಕಟಿಸಿದ್ದು, ಸುದ್ದಿಯಲ್ಲಿ “ರಾಜ್ಯದ ಕಡಲೂರು (ಗುಡಲ್ಲೂರು) ಜಿಲ್ಲೆಯಲ್ಲಿ ಗಿಳಿಯನ್ನು ಬಂಧಿಸಿದಟ್ಟಿದ್ದ ಸೆಲ್ವರಾಜ್ ಎಂಬ ಗಿಣಿ ಶಾಸ್ತ್ರ ಹೇಳುವ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ. ಬಳಿಕ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿದೆ” ಎಂದು ಹೇಳಲಾಗಿದೆ.
“ಗಿಣಿ ಶಾಸ್ತ್ರದ ಸೆಲ್ವರಾಜ್ ಅವರು ಕಡಲೂರು ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿಕೂಟದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಅಭ್ಯರ್ಥಿ ಥಂಗರ್ ಬಾಚನ್ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ಹೇಳಿದ್ದರು. ಈ ಕುರಿತ ವಿಡಿಯೋ ವೈರಲ್ ಆದ ಬಳಿಕ, ಗಿಳಿಯನ್ನು ಬಂಧಿಸಿಟ್ಟಿದ್ದ ಸೆಲ್ವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
“ವಿಡಿಯೋ ವೈರಲ್ ಆದ ನಂತರ ಕಡಲೂರು ಜಿಲ್ಲಾ ಅರಣ್ಯ ಇಲಾಖೆಯು ಹಸಿರು ಗಿಣಿಯನ್ನು ಪಂಜರದಲ್ಲಿ ಬಂಧಿಸಿಟ್ಟಿದ್ದ ಭವಿಷ್ಯ ಹೇಳುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿದೆ” ಎಂದು ಸ್ಪಷ್ಟವಾಗಿ ತಿಳಿಸಿದೆ.
ಏಪ್ರಿಲ್ 10, 2024ರಂದು ಇಂಡಿಯಾ ಟುಡೇ ಪ್ರಕಟಿಸಿದ ಸುದ್ದಿಯಲ್ಲೂ “ಗಿಳಿಗಳನ್ನು ಸೆರೆಯಲ್ಲಿಟ್ಟಿದ್ದಕ್ಕಾಗಿ ತಮಿಳುನಾಡಿನ ಕಡಲೂರಿನಲ್ಲಿ ಭವಿಷ್ಯ ಹೇಳುವವರನ್ನು ಬಂಧಿಸಲಾಗಿದೆ. ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಕಡಲೂರು ಕ್ಷೇತ್ರದ ಅಭ್ಯರ್ಥಿ ಥಂಗರ್ ಬಾಚನ್ ಅವರ ಚುನಾವಣಾ ಗೆಲುವಿನ ಭವಿಷ್ಯ ನುಡಿದ ಸೆಲ್ವರಾಜ್ ಎಂಬ ಭವಿಷ್ಯಕಾರನ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿದ ಜಿಲ್ಲಾ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ.
ವರದಿಗಳ ಪ್ರಕಾರ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ ಕಾರಣ ಎರಡು ಪಂಜರಗಳಲ್ಲಿ ಇರಿಸಲಾಗಿದ್ದ ನಾಲ್ಕು ಗಿಳಿಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇಬ್ಬರು ಜ್ಯೋತಿಷಿ ಸಹೋದರರಿಗೆ ಇಂಥ ತಪ್ಪು ಮುಂದೆ ಮಾಡದಿರಿ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇವಿಷ್ಟು ಮಾತ್ರವಲ್ಲದೆ, ಇನ್ನಿತರ ಎಲ್ಲಾ ಮಾಧ್ಯಮಗಳ ಸುದ್ದಿಗಳಲ್ಲೂ ಗಿಳಿಯನ್ನು ಬಂಧಿಸಿಟ್ಟಿದ್ದಕ್ಕಾಗಿ ಗಿಣಿ ಶಾಸ್ತ್ರದವನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಎಲ್ಲಿಯೂ ಎನ್ಡಿಎ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ ಎಂದಿದ್ದಕ್ಕೆ ಬಂಧಿಸಿದ್ದಾರೆ ಎಂದಿಲ್ಲ. ಹಾಗಾಗಿ. ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕರು ಹೇಳಿದಂತೆ ರಾಜಕೀಯ ಭವಿಷ್ಯ ಹೇಳಿದ್ದಕ್ಕೆ ತಮಿಳುನಾಡಿ ಡಿಎಂಕೆ ಸರ್ಕಾರ ಗಿಣಿ ಶಾಸ್ತ್ರದವರನ್ನೇ ಬಂಧಿಸಿದೆ ಎಂಬುವುದು ಸುಳ್ಳು
ಇದನ್ನೂ ಓದಿ : Fact Check: ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುವುದು ಸುಳ್ಳು