Homeಕರ್ನಾಟಕಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

ಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

- Advertisement -
- Advertisement -

ಮುಕ್ಕಾಲುಪಾಲು ಅರಣ್ಯದಿಂದ ಆವೃತವಾಗಿರುವ ಉತ್ತರ ಕನ್ನಡ ವಿಸ್ತೀರ್ಣದಲ್ಲಿ ಮೂರು ಗೋವಾ ರಾಜ್ಯಕ್ಕೆ ಸಮನಾಗಿದೆ. ಕರಾವಳಿ, ಮಲೆನಾಡು ಮತ್ತು ಅರೆ ಬಯಲುಸೀಮೆ ಒಳಗೊಂಡ ಈ ಜಿಲ್ಲೆ 10291 ಚ.ಕಿ.ಮೀ ನಷ್ಟು ದೊಡ್ಡದು. ವಾಸ್ತವ್ಯ ಹಾಗೂ ಸಾಗುವಳಿಗೆ ಯೋಗ್ಯವಾದ ಪ್ರದೇಶವಿರುವುದು ಶೇ.10 ರಷ್ಟು ಮಾತ್ರ. ಈ ವಿಶಾಲವಾದ ಜಿಲ್ಲೆಯನ್ನು ಎರಡಾಗಿ ವಿಭಾಗಿಸುವುದು ಆಡಳಿತಾತ್ಮಕವಾಗಿ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ನೈಸರ್ಗಿಕ ನ್ಯಾಯತತ್ವದಂತೆ ಸರಿಯಾದ ಕ್ರಮವೆಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಘಟ್ಟದ ಮೇಲಿನ ಘಟಾನುಘಟಿ ರಾಜಕೀಯ ಪಟುಗಳ ಇಚ್ಛಾಶಕ್ತಿಯ ಕೊರತೆ ಮತ್ತು ಪೆದ್ದುತನದಿಂದ ಜನರು ತೊಂದರೆಗೀಡಾಗಿ ಪರದಾಡುತ್ತಿದ್ದಾರೆ.

ಘಟ್ಟದ ಮೇಲಿನ ಆರು ತಾಲ್ಲೂಕುಗಳನ್ನು ಒಳಗೊಂಡ ’ಕದಂಬ’ ಜಿಲ್ಲೆ ಮತ್ತು ಕರಾವಳಿಯ ಐದು ತಾಲ್ಲೂಕುಗಳ ಜೊತೆ ಜೋಯಿಡ ಸೇರಿಸಿ ಉತ್ತರ ಕನ್ನಡ ಜಿಲ್ಲೆ ರಚನೆ ಮಾಡುವ ಅನಿವಾರ್ಯತೆ ಎದುರಾಗಿ ದಶಕಗಳೇ ಉರುಳಿಹೋಗಿವೆ. ಹಾಗೆ ನೋಡಿದರೆ ಶಿರಸಿಯನ್ನು ಜಿಲ್ಲಾ ಕೇಂದ್ರವಾಗಿಸಿ ಶಿರಸಿ ಜಿಲ್ಲೆ ಮಾಡಬೇಕೆಂಬ ಕೂಗು ಮೂರು ದಶಕಗಳ ಹಿಂದಿನದು. ಭಾವನೆಗಳ ಬಂಧನ, ಅನುಕೂಲತೆ ಸಹಿಸಿಕೊಳ್ಳುವ ಮೂಗರ್ಜಿ ಸ್ವಭಾವ, ಹೋರಾಟದ ಹಠ ಮಾಡದಿರುವುದು ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಶಾಸಕ, ಸಂಸದ, ಸಚಿವರ ಉದಾಸೀನತೆಯಿಂದಾಗಿ ಜಿಲ್ಲೆಯ ಕನಸು ನನಸಾಗಲೇ ಇಲ್ಲ.

ಮೂರ್ನಾಲ್ಕು ತಾಲ್ಲೂಕುಗಳುಳ್ಳ ಉಡುಪಿ, ಹಾವೇರಿ, ಯಾದಗಿರಿಯಂತಹ ಜಿಲ್ಲೆಗಳನ್ನು ಹಿಂದೆ ರಚಿಸಲಾಗಿತ್ತು. ವಿವೇಚನೆ, ವಿವೇಕದಿಂದ ಉತ್ತರ ಕನ್ನಡ ವಿಭಾಗಿಸಿದರೆ ಆರಾರು ತಾಲ್ಲೂಕುಗಳ ಎರಡು ಜಿಲ್ಲೆ ಹುಟ್ಟುಹಾಕಬಹುದು. ಜೋಯಿಡ ಘಟ್ಟದ ಪ್ರದೇಶದಲ್ಲಿದ್ದರೂ, ಅದೂ ಕಾರವಾರಕ್ಕೆ ಹತ್ತಿರದಲ್ಲಿದೆ. ಅದನ್ನು ಶಿರಸಿ ಜಿಲ್ಲೆಗೆ ಸೇರಿಸಿದರೆ ಪ್ರಸ್ತಾವಿತ ಜಿಲ್ಲಾ ಕೇಂದ್ರ ಶಿರಸಿಯಿಂದ ನೂರೈವತ್ತು ಕಿ.ಮೀ ಅಂತರದಲ್ಲಿರುತ್ತದೆ. ಜೊತೆಗೆ ಜೋಯಿಡದ ಸಾಂಸ್ಕೃತಿಕ, ವ್ಯಾವಹಾರಿಕ, ಕೌಟುಂಬಿಕ ಭಾಷಾ ಬಾಂಧವ್ಯ ಹೆಚ್ಚಾಗಿ ಕಾರವಾರದೊಂದಿಗಿದೆ. ಜೋಯಿಡದಲ್ಲಿ ಕೊಂಕಣಿ ಮಾತನಾಡುವ ಮಂದಿಯೇ ಜಾಸ್ತಿ. ಹೀಗಾಗಿ ಕನ್ನಡ ಮಾತನಾಡುವ ಶಿರಸಿ ಸೀಮೆ ಜೊತೆ ಜೋಯಿಡಕ್ಕೆ ಹೊಂದಾಣಿಕೆ ಹಲವು ಕಾರಣದಿಂದ ಸಾಧ್ಯವಾಗದು. ಹಾಗಾಗಿ ಅದನ್ನು ಕರಾವಳಿಯ ಉತ್ತರ ಕನ್ನಡದ ಜೊತೆ ಇಡುವುದೇ ಸೂಕ್ತ.

ಈಚೆಗೆ ದಾಂಡೇಲಿ ತಾಲ್ಲೂಕು ರಚನೆಯಾಗಿದೆ. ಕನ್ನಡದ ಮೊದಲ ರಾಜಧಾನಿ ಎಂಬ ಹೆಗ್ಗಳಿಕೆಯ ಬನವಾಸಿ ತಾಲ್ಲೂಕು ರಚನೆಯ ಹೋರಾಟ ಜೋರಾಗಿದೆ. ಕರಾವಳಿಯ ಗೋಕರ್ಣ ತಾಲ್ಲೂಕು ಮಾಡುವ ಪ್ರಸ್ತಾಪವೂ ಇದೆ. ಈ ಎರಡೂ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದರೆ ಒಟ್ಟು 14 ತಾಲ್ಲೂಕುಗಳಾಗಿ ಎರಡೂ ಜಿಲ್ಲೆಗೆ ತಲಾ ಏಳೇಳು ತಾಲ್ಲೂಕುಗಳು ಸೇರುತ್ತವೆ. ಈ ಭೌಗೋಳಿಕ ಕಾರಣ ಹೊಸ ಜಿಲ್ಲೆಗೆ ಒತ್ತಾಸೆಯಾಗಿ ನಿಂತಿದೆ. ಶಿರಸಿ, ಸಿದ್ಧಾಪುರ, ಮುಂಡಗೋಡ, ಯಲ್ಲಾಪುರ, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕುಗಳಿರುವ ಶಿರಸಿ ಜಿಲ್ಲೆ ಮತ್ತು ಜೋಯಿಡ, ಕಾರವಾರ, ಅಂಕೋಲಾ, ಕುಮುಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ಉತ್ತರ ಕನ್ನಡ (ಕರಾವಳಿ) ಜಿಲ್ಲೆ ರಚನೆ ಮಾಡುವುದರಿಂದ ಅಭಿವೃದ್ಧಿಯೂ ವೇಗ ಪಡೆದುಕೊಳ್ಳುತ್ತದೆ. ಆಡಳಿತಾತ್ಮಕವಾಗಿ ಅಧಿಕಾರಿಗಳ ಕಾರ್ಯಕ್ಷಮತೆ ಎಚ್ಚರ ತಪ್ಪದಂತೆ ನಿಗಾ ವಹಿಸುತ್ತದೆ. ಅವಳಿ ಜಿಲ್ಲಾ ರಚನೆಯಿಂದ ವೈವಿಧ್ಯತೆ, ವೈಶಿಷ್ಟ್ಯತೆ, ಪ್ರಾಕೃತಿಕ ಸೊಬಗಿಗೂ ಭಂಗ ಬರದು. ಉಡುಪಿ ದಕ್ಷಿಣ ಕನ್ನಡದ ಸಂಬಂಧದಂತೆ ಕಾರವಾರ-ಶಿರಸಿ ಜಿಲ್ಲೆಗಳ ನಂಟು ಅನ್ಯೋನ್ಯವಾಗೇ ಇರುತ್ತದೆ.

ಈಗಿನ ಜಿಲ್ಲಾ ಕೇಂದ್ರ ಕಾರವಾರದಿಂದ ಘಟ್ಟದ ಮೇಲಿನ ಎಲ್ಲಾ ತಾಲ್ಲೂಕುಗಳು ತುಂಬಾ ದೂರದಲ್ಲಿದೆ. ಮುಂಡಗೋಡದವರು ಸರ್ಕಾರಿ ಕೆಲಸ, ಕಾರ್ಯಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರಬೇಕೆಂದರೆ ಬರೋಬ್ಬರಿ 140 ಕಿ.ಮೀ ಕ್ರಮಿಸಬೇಕು. ಅವರು ಜಿಲ್ಲಾ ಕೇಂದ್ರ ತಲುಪುವಾಗಲೇ ಅರ್ಧ ದಿನ ಕಳೆದಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಸಿಕ್ಕರೆ ಪುಣ್ಯ. ಮರಳಿ ಮನೆ ಸೇರುವಾಗ ನಡುರಾತ್ರಿ ಆಗಿರುತ್ತದೆ. ಅಧಿಕಾರಿಗಳಿಗೂ ಅಷ್ಟೆ. ಸಭೆ, ಸಮಾಲೋಚನೆ, ತರಬೇತಿ ಎಂದು ಜಿಲ್ಲಾ ಕೇಂದ್ರಕ್ಕೆ ಓಡಾಡಿ ಸ್ಥಳೀಯ ಕೆಲಸ ಕರ್ತವ್ಯ ನಿಭಾಯಿಸಲು ಸಾಧ್ಯವಾಗುವುದಿಲ್ಲ. ವ್ಯರ್ಥ ತಿರುಗಾಟ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಶಾಪದಂತೆ ಕಾಡುತ್ತಲೇ ಇದೆ. ಹೀಗಾಗಿ ವಿಭಜನೆ ಎರಡು ಜಿಲ್ಲೆಗಳ ಪ್ರಗತಿಗೂ ಪೂರಕ. ಎರಡೆರಡು ಆಡಳಿತ ವ್ಯವಸ್ಥೆ, ಎರಡೆರಡು ಅನುದಾನದಿಂದ ಅವಳಿ ಜಿಲ್ಲೆಗಳ ಅಭಿವೃದ್ಧಿ ನಕ್ಷೆಯೇ ಬದಲಾಗಲಿದೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಶಿರಸಿ ಜಿಲ್ಲೆ ಮಾಡುವ ಪ್ರಯತ್ನ ಪಡದಿದ್ದರೂ ಹಲವು ಪ್ರತ್ಯೇಕ ಜಿಲ್ಲಾ ಮಟ್ಟದ ಕಚೇರಿ ಶಿರಸಿಗೆ ತಂದಿದ್ದರು. ಆಗ ಶಿಕ್ಷಣ ಮಂತ್ರಿಯಾಗಿದ್ದರಿಂದ ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಯಾಗಿಸಿ ಉತ್ತರ ಕನ್ನಡದಿಂದ ಬೇರ್ಪಡಿಸಿದ್ದರು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಕಚೇರಿಗಳು ಶಿರಸಿಯಲ್ಲಿದೆ. ಶಿರಸಿಗೆ ಜಿಲ್ಲಾ ಕೇಂದ್ರವಾಗುವ ಅರ್ಹತೆ, ಅನುಕೂಲತೆ ಎರಡೂ ಇದೆ. ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರವಾದರೂ ವಾಣಿಜ್ಯ, ಆರ್ಥಿಕ ಮತ್ತು ರಾಜಕೀಯ ಆಡಂಬೋಲ ಶಿರಸಿಯೇ. ವಾಣಿಜ್ಯ, ಕೃಷಿ, ಸಹಕಾರಿ ಕ್ಷೇತ್ರದ ಬೃಹತ್ ಸಂಸ್ಥೆಗಳು ಶಿರಸಿಯಲ್ಲಿವೆ. ತೋಟಗಾರಿಕೆ, ಅರಣ್ಯ, ಕಾನೂನು ಮಹಾವಿದ್ಯಾಲಯಗಳಿವೆ. ಜಿಲ್ಲಾ ಮಟ್ಟದ ನ್ಯಾಯಾಲಯ, ಕೃಷಿ ಸಂಶೋಧನಾ ಕೇಂದ್ರ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಭಾಗೀಯ ಕಚೇರಿಗಳಿವೆ.

ಜಿಲ್ಲಾ ಕೇಂದ್ರಕ್ಕೆ ಬೇಕಾದ ಹಲವು ಅನುಕೂಲಗಳು, ಸೌಲಭ್ಯಗಳು ಕಟ್ಟಡ ಇನ್ನಿತರ ಸೌಕರ್ಯ ಶಿರಸಿಯಲ್ಲಿದೆ. ಸರ್ಕಾರದ ಅಂಕಿಅಂಶಗಳು ಶಿರಸಿ ಪ್ರತ್ಯೇಕ ಜಿಲ್ಲೆಯ ಪ್ರಸ್ತುತತೆಯನ್ನು ಮನದಟ್ಟು ಮಾಡುತ್ತದೆ. ಹಾಗಂತ ಶಿರಸಿಯ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ದೀರ್ಘ ಕಾಲ ಉತ್ತರ ಕನ್ನಡ ಆಳಿದ ಆರ್.ವಿ. ದೇಶಪಾಂಡೆಯಾಗಲಿ ಈಗ ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಠಾಕುಠೀಕಿಂದ ಓಡಾಡುತ್ತಿರುವ ಶಿವರಾಮ ಹೆಬ್ಬಾರರಾಗಲಿ, ಸಂಸದ ಅನಂತ್ ಕುಮಾರ್ ಹೆಗಡೆಯಾಗಲಿ ಶಿರಸಿ ಜಿಲ್ಲಾ ರಚನೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳ ತ್ರಿಕೋನ ಒಣಪ್ರತಿಷ್ಠೆಯ ಮೋಗಮ್ ಕಾಳದಲ್ಲಿ ಶಿರಸಿ ಜಿಲ್ಲಾ ರಚನೆ ಬೇಡಿಕೆಗೆ ಮಹತ್ವ ಬರುತ್ತಿಲ್ಲ.

ಹೀಗಿದ್ದರೂ ಶಿರಸಿಯಲ್ಲಿ ಜಿಲ್ಲಾ ರಚನೆಯ ಹೋರಾಟ ನಡೆಯುತ್ತಲೇ ಇದೆ. ಕೆಲವು ದಿನಗಳ ಹಿಂದೆ ಕಂದಾಯ ಮಂತ್ರಿಯನ್ನು ಹೋರಾಟ ಸಮಿತಿಯ ನಿಯೋಗ ಭೇಟಿಯಾಗಿ ಇದೇ ಬಜೆಟ್‌ನಲ್ಲಿ ಶಿರಸಿ ಜಿಲ್ಲೆ ರಚನೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸರಣಿ ಪ್ರತಿಭಟನೆಗಳು ಘಟ್ಟದ ಮೇಲೆ ನಡೆಯುತ್ತಿದೆ. ನಿಧಾನಕ್ಕೆ ಜಿಲ್ಲಾ ಬೇಡಿಕೆಯ ಹೋರಾಟ ಹುರಿಗಟ್ಟುತ್ತಿದೆ. ಈ ವರದಿ ಬರೆಯುವ ಹೊತ್ತಿಗೆ ಶಿರಸಿ ಬಾರ್ ಅಸೋಸಿಯೇಶನ್ ಮೂಲಕ ಜಿಲ್ಲಾ ಬೇಡಿಕೆ ಮಂಡಿಸಲು ನಿರ್ಧರಿಸಲಾಗಿದೆ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳಿಗೆ ತಮ್ಮನ್ನು ಆರಿಸಿ ಕಳಿಸಿದವರ ಕೂಗು ಕೇಳಿಸುವುದೇ?


ಇದನ್ನೂ ಓದಿ: ಕುರುಬ ಸಮುದಾಯ ಒಡೆಯುವುದೇ RSS, BJPಯವರ ಉದ್ದೇಶ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಭಿವೃದ್ಧಿಯ ಹೆಸರಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ.
    ಇವತ್ತು, ಉತ್ತರಕನ್ನಡ ವಿಭಿನ್ನವಾಗಿ ನಿಲ್ಲುವುದೇ ಅದರ ವಿಸ್ತಾರ ಮತ್ತು ಎಲ್ಲ ತರಹದ ಭೂ ಪ್ರದೇಶದಿಂದ. ಜಿಲ್ಲೆಯ ವಿಭಜನೆಯಿಂದ ಇನ್ನಷ್ಟು ಕಾಡು ನಾಶ ಮಾಡ್ತಾರೆಯೇ ಹೊರತೂ ಇನ್ನೇನು ಆಗಲ್ಲ…

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...