ರೈತರ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಸಂಭವಿಸಿದ ನವರೀತ್ ಸಿಂಗ್ ಅವರ ಸಾವಿನ ಕುರಿತ ತನಿಖೆಯ ವರದಿ ನೀಡುವಂತೆ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ.
ನವರೀತ್ ಸಿಂಗ್ ಅಜ್ಜ ಹರ್ದೀಪ್ ಸಿಂಗ್ ದಿಬ್ಡಿಬಾ “ಟ್ರ್ಯಾಕ್ಟರ್ ಪಲ್ಟಿಯಾಗಿರುವುದರಿಂದ ಆತ ಸಾವನ್ನಪ್ಪಿದ್ದಾನೆ ಎಂಬ ದೆಹಲಿ ಪೊಲೀಸರ ಹೇಳಿಕೆಗೆ ತಕರಾರು ತೆಗೆದಿದ್ದು, ಪೊಲೀಸರ ಗುಂಡು ತಗುಲಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ನವರೀತ್ಸಿಂಗ್ ಚಾಲನೆ ಮಾಡಲಾಗದೇ ಇದ್ದುದರಿಂದ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಇದರಿಂದ ತಲೆಗೆ ಗಾಯವಾಗಿ ಮೃತನಾಗಿದ್ದಾನೆ” ಎಂದು ಆರೋಪಿಸಿದ್ದಾರೆ. ಹಾಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿ ತನಿಖೆ ನಡೆಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತು ತನಿಖೆಯ ಪ್ರಗತಿ ಯಾವ ಹಂತದಲ್ಲಿದೆ ಎಂದು ವರದಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ದೆಹಲಿ ಪೊಲೀಸರು, ದೆಹಲಿ ಸರ್ಕಾರ, ಮತ್ತು ಉತ್ತರ ಪ್ರದೇಶದ ರಾಂಪುರದ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿಗೆ ನೋಟಿಸ್ ನೀಡಿದೆ.
ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರ ಏಕ ನ್ಯಾಯಾಧೀಶರ ನ್ಯಾಯಪೀಠ ಗುರುವಾರ ವಿವರವಾದ ವರದಿ ಬಯಸಿದೆ. ಅಲ್ಲದೆ ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಸಾಕ್ಷ್ಯಚಿತ್ರ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ನಿರ್ದೇಶಿಸಿದೆ. ಅರ್ಜಿದಾರರಿಗೆ ಸ್ಥಿತಿ ವರದಿಯ ಮುಂಗಡ ಪ್ರತಿಯನ್ನು ಒದಗಿಸುವಂತೆ ನಿರ್ದೇಶನ ನೀಡಿದೆ.
ಅರ್ಜಿದಾರ ಡಿಬ್ಡಿಬಾ ಪರ ಹಾಜರಾದ ವಕೀಲೆ ವೃಂದಾ ಗ್ರೋವರ್, “ಪ್ರತ್ಯಕ್ಷದರ್ಶಿ ಸಾಕ್ಷ್ಯ ಮತ್ತು ವೈದ್ಯಕೀಯ ಅಭಿಪ್ರಾಯದ ದೃಢೀಕರಣವು ಸಿಂಗ್ಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂಬುದು ಸ್ಪಷ್ಟಪಡಿಸುತ್ತದೆ. ಅಲ್ಲದೆ ದೆಹಲಿ ಪೊಲೀಸರು ಅಪಘಾತದಿಂದ ಸಾವು ಉಂಟಾಗಿದೆ ಎಂದು ತರಾತುರಿಯ ಘೋಷಣೆ ಮಾಡುವ ಮೊದಲು ಯಾವುದೇ ವಿಚಾರಣೆ ಅಥವಾ ತನಿಖೆ ನಡೆಸಲು ವಿಫಲರಾಗಿದ್ದಾರೆ” ಎಂದು ವಾದಿಸಿದ್ದಾರೆ.
ಗುಂಡೇಟುಗಳಿವೆ ಎಂದು ಪ್ರತಿಪಾದಿಸಿದ ಪ್ರತ್ಯಕ್ಷದರ್ಶಿಗಳು ಇದ್ದಾರೆ. ವೈದ್ಯಕೀಯ ತಜ್ಞರು ಸಹ ಸತ್ತವರ ದೇಹದ ಮೇಲಿನ “ಸೀಳಿರುವ ಗಾಯಗಳು” ಗುಂಡಿನ ಗಾಯದ ಪ್ರತಿಪಾದನೆಗೆ ಅನುಗುಣವಾಗಿರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರೈತರ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಸಂಭವಿಸಿದ ನವರೀತ್ ಸಿಂಗ್ ಅವರ ಸಾವಿನ ಕುರಿತ ದಿ ವೈರ್ ವರದಿಯನ್ನು ಟ್ವೀಟ್ ಮಾಡಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಭಾನುವಾರ ರಾಂಪುರ್ ಜಿಲ್ಲೆಯಲ್ಲಿ ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ಪರೇಡ್ನಲ್ಲಿ ರೈತನ ಸಾವಿನ ಕುರಿತ ಟ್ವೀಟ್: ‘ವೈರ್’ನ ಸಿದ್ದಾರ್ಥ್ ವರದರಾಜನ್ ವಿರುದ್ಧ FIR