Homeಮುಖಪುಟನಾನು ಕಂಡತೆ ಸಿನಿಮಾ: ಸಿನಿಯಾನ ಅಂಕಣದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ನಾನು ಕಂಡತೆ ಸಿನಿಮಾ: ಸಿನಿಯಾನ ಅಂಕಣದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಇಂತಹ ಸಂದರ್ಭದಲ್ಲಿ ಎಂತ ಚಿತ್ರಗಳನ್ನು ಮಾಡಬೇಕು? ಯಾವ ಕಥೆಗಳನ್ನು ಹೇಳುವುದು? ನನಗೆ ಸಿಕ್ಕಿರುವ ಉತ್ತರ; ನಮ್ಮ ಕಥೆಗಳು, ನಮ್ಮ ಬದುಕು, ನಮ್ಮ ಭಾಷೆ, ಸಂಸ್ಕೃತಿ, ಪ್ರದೇಶದ ನಮ್ಮೊಳಗೆ ಹುದುಗಿರುವ ಕಥೆಗಳು

- Advertisement -
- Advertisement -

ಸಿನಿಯಾನ:10

| ರಾಜಶೇಖರ್ ಅಕ್ಕಿ |

ಸುಮಾರು ನೂರೈವತ್ತು ವರ್ಷಗಳ ಹಿಂದೆ ಶುರುವಾದ ಸಿನೆಮಾ ತನ್ನ ಸುದೀರ್ಘ ಪಯಣವನ್ನು ಕ್ರಮಿಸಿದೆ. ಕಳೆದ ಅರ್ಧ ಶತಮಾನದಲ್ಲಿ ಇಡೀ ವಿಶ್ವವನ್ನೇ ಪ್ರಭಾವಿಸಿದ ಮಾಧ್ಯಮ ಸಿನೆಮಾ. ನಮ್ಮ ದೇಶದಲ್ಲಂತೂ ಸಿನೆಮಾ ಪ್ರಭಾವ ಎಷ್ಟಿದೆಯೆಂದರೆ, ಇತರ ಹಲವು ದೇಶಗಳ ಸಿನೆಮಾಗಳಲ್ಲಿ ಮಾಡುವಂತೆ ಸಿನೆಮಾಕ್ಕೆ ಸಂಬಂಧವಿಲ್ಲದೇ ಯಾರನ್ನೂ ಚಿತ್ರಗಳಲ್ಲಿ ಕಾಸ್ಟಿಂಗ್ ಮಾಡೋದು ತುಂಬಾ ಕಷ್ಟ. ಏಕೆಂದರೆ ಅವರಿಗೆ ಒಂದು ಸೀನ್ ಮಾಡು ಎಂದ ಕೂಡಲೇ ಯಾವುದೋ ಒಬ್ಬ ನಟನನ್ನು ಅನುಕರಿಸತೊಡಗುತ್ತಾರೆ.

ಇರಲಿ, ಸಿನೆಮಾ ಒಂದು ಮಾಧ್ಯಮ, ಕಥೆ ಹೇಳುವ ಮಾಧ್ಯಮ. ಚಲಿಸುವ ಚಿತ್ರಗಳನ್ನು ಜೋಡಿಸಿ (justaposition) ಕಥೆಯನ್ನು ಹೇಳುವ ನೇರ ಮಾಧ್ಯಮವೇ ಸಿನೆಮಾ. ಹೌದು ಸಿನೆಮಾ ನೇರ. ಬೇರೆಲ್ಲ ಕಥೆ ಹೇಳುವ ಮಾಧ್ಯಮಗಳಲ್ಲಿ ಕಥೆ ಪ್ರೇಕ್ಷಕನ ತಲೆಯಲ್ಲಿ ಮೂಡಿಬರುತ್ತದೆ. ಒಂದು ಕಾದಂಬರಿ ಎಂದರೆ ಅಲ್ಲಿರುವುದು ಹಾಳೆ ಮತ್ತು ಅಕ್ಷರಗಳಷ್ಟೇ, ಆದರೆ ಅದರಿಂದ ಕಥೆ ಮೂಡುವುದು ತಮ್ಮ ತಲೆಯೊಳಗೆ. ನಾಟಕಕ್ಕೆ ಬಂದಾಗ ಸಸ್ಪೆನ್ಷನ್ ಆಫ್ ಡಿಸ್‍ಬಿಲೀಫ್ ಎನ್ನುವ ಪ್ರಕ್ರಿಯೆ ನಮ್ಮ ತಲೆಯೊಳಗೆ ನಡೆಯುತ್ತಿರುತ್ತದೆ. ನಮ್ಮೆದುರಿಗೆ ಕಾಣುತ್ತಿರುವುದು ಮನೆಯ ಸೆಟ್ ಎಂದು ಗೊತ್ತಿದ್ದರೂ, ಚೂರಿ ಹಾಕಿಕೊಂಡು ಸಾಯುತ್ತಿರುವ ನಟನ ಹೊಟ್ಟೆಯಿಂದ ಹೊರಬರುತ್ತಿರುವುದು ಕೆಂಪು ಕರ್ಚೀಫ್ ಎಂದು ಗೊತ್ತಿದ್ದರೂ ನಾವು ಅಲ್ಲಿ ಅಪನಂಬಿಕೆಯಿಂದ ನೋಡುವುದಿಲ್ಲ. ನಟರು ಏನು ಹೇಳಬಯಸುತ್ತಿದ್ದಾರೋ ಅದನ್ನೇ ನಂಬುವ ಪ್ರಯತ್ನ ನಾವು ಮಾಡುತ್ತಿರುತ್ತೇವೆ. ಆದರೆ ಸಿನೆಮಾ ಹಾಗಲ್ಲ. ಪರದೆಯ ಮೇಲೆ ನಡೆಯುವುದೇ ಸತ್ಯ.

ಇನ್ನು ಕಥೆ ಅಂದರೆ ಏನು? ಇದನ್ನು ವಿವರಿಸುವುದೇ ಕಷ್ಟ. ಕಥೆ ಎನ್ನುವುದು ಸಾರ್ವತ್ರಿಕವಾಗಿದ್ದರೂ ಸಿನೆಮಾಗೆ ಬರೆಯುವ ಕಥೆಗೆ ಕೆಲವು ಮಿತಿಗಳಿರುತ್ತವೆ. ಕಥೆಯ ಒಂದು ವ್ಯಾಖ್ಯೆಯನ್ನು ರಚಿಸಲು ನನಗೆ ಸಾಧ್ಯವಾಗಿಲ್ಲ. ಅದಕ್ಕೆ ಪ್ರಾರಂಭ, ಮಧ್ಯ ಮತ್ತು ಅಂತ್ಯವಿರುತ್ತದೆಯೆಂತಲೂ, ಅದರಲ್ಲಿ ಸಂಘರ್ಷವಿರುತ್ತದೆಯೆಂತಲೂ ಮತ್ತು ಅದಕ್ಕೊಂದು ಸ್ಟ್ರಕ್ಷರ್ ಇರುತ್ತದೆಯೆಂದೂ ಹೇಳುತ್ತಿರುತ್ತೇನೆ. ಇವುಗಳಲ್ಲಿ ನಾನು ಹೆಚ್ಚು ಒತ್ತು ನೀಡುವುದು ಸ್ಟ್ರಕ್ಚರ್ ಮೇಲೆಯೇ.

ಜಗತ್ತಿನ ಎಲ್ಲಾ ವಸ್ತುಗಳಿಗೂ ಒಂದು ಸ್ಟ್ರಕ್ಚರ್ ಇರುತ್ತೆ. ಕೆಲವು ವಸ್ತುಗಳ ಸ್ಟ್ರಕ್ಷರ್ ನಾವು ಕಾಣಬಹುದು ಇನ್ನಿತರ ವಸ್ತುಗಳ ಸ್ಟ್ರಕ್ಚರ್ ಕಾಣದೇ ಇರಬಹುದು. ನಮಗೆ ಇಲ್ಲಿ ಬೇಕಿರುವ ಸ್ಟ್ರಕ್ಚರ್ ಎಂದರೆ, ಯಾವುದೇ ಒಂದು ವಸ್ತು ಮನುಷ್ಯನ ಬಳಕೆಗೆ ಬರುತ್ತೆ ಅಂದರೆ ಅದಕ್ಕೆ ಅದರದೇ ಆದ ಸ್ಟ್ರಕ್ಚರ್ ಇರುತ್ತೆ. ಒಂದು ಟೇಬಲ್‍ಗೆ ನಾಲ್ಕು ಕಾಲುಗಳು ಒಂದು ಹಲಗೆಯದ್ದೋ, ಕಟ್ಟಿಗೆಯದ್ದೋ ಟಾಪ್ ಇರುತ್ತೆ, ಕುರ್ಚಿಗೂ ನಾಲ್ಕು ಕಾಲುಗಳು, ಒಂದು ಟಾಪ್ ಜೊತೆಗೆ ಬೆನ್ನೂ ಇರುತ್ತೆ. ಇದು ಅವುಗಳ ಸ್ಟ್ರಕ್ಚರ್. ಕಾಲು, ಟಾಪ್ ಮತ್ತು ಇನ್ನಿತರ ವಸ್ತುಗಳ ಅನುಪಾತವೂ ಸರಿಯಾಗಿರಬೇಕು ಇಲ್ಲದಿದ್ದರೆ ಅದರ ಉದ್ದೇಶಕ್ಕೆ ಅದು ಪೂರಕವಾಗುವುದಿಲ್ಲ; ತನ್ನ ಕಾರ್ಯ ನಿರ್ವಹಿಸಲಾಗುವುದಿಲ್ಲ. ಅದೇ ರೀತಿ ಕತೆಗೂ ತನ್ನದೇ ಆದ ಸ್ಟ್ರಕ್ಚರ್ ಇರುತ್ತೆ. ಆ ಸ್ಟ್ರಕ್ಚರ್ ಕೆಟ್ಟಾಗ ಸಿನೆಮಾ ಪ್ರೇಕ್ಷಕರ ಗಮನವನ್ನು ಹಿಡಿದಿಡಲು ಆಗುವುದಿಲ್ಲ. ಒಂದು ಕುರ್ಚಿಯನ್ನು ಎಷ್ಟೇ ಸುಂದರವಾಗಿ ರಚಿಸಬೇಕೆಂದರೂ ಮೊದಲು ಅದರ ಸ್ಟ್ರಕ್ಚರ್ ಗಟ್ಟಿಗೊಳಿಸಿದ ನಂತರವೇ. ಸಿನೆಮಾ ವಿಷಯದಲ್ಲಿ ಅನೇಕರು ಈ ನಿಟ್ಟಿನಲ್ಲಿ ವಿಫಲರಾಗುತ್ತಾರೆ. ತಮಗಿಷ್ಟವಾದ ಭಾವನೆಗಳು, ವಿಷಯಗಳು, ಪಾತ್ರಗಳು, ಸನ್ನಿವೇಶಗಳನ್ನು ಸುಂದರವಾಗಿ ಬರೆದು ಚಿತ್ರೀಕರಿಸಿದಾಗ ಆ ಸುಂದರತೆಯೇ ಸ್ಟ್ರಕ್ಚರ್‍ಗೆ ಅಡ್ಡಿಯಾಗಿ ಸಿನೆಮಾ ಕುಸಿದು ಬೀಳುವ ಸಾಧ್ಯತೆಯಿರುತ್ತದೆ.

ಗಟ್ಟಿಯಾದ ಸ್ಟ್ರಕ್ಚರ್ ಹೊಂದುವುದು ಹೇಗೆ? ಅನೇಕ ಸಿನೆಮಾ ಪಂಡಿತರು ಅನೇಕ ರೀತಿಯಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕಥೆಯನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹೇಳುವುದು, ಕಥೆಯ ಉದ್ದೇಶವನ್ನು ಸ್ಪಷ್ಟಪಡಿಸುವುದು, ಕಥೆಯ ಪ್ರಮುಖ ಅಂಶಕ್ಕೆ ಪೂರಕವಾಗಿದ್ದನ್ನು ಮಾತ್ರ ಇಟ್ಟುಕೊಂಡು ಮಿಕ್ಕಿದನ್ನು ತೆಗೆದು ಬಿಸಾಕುವುದು, ಹೀಗೆ ಹಲವಾರು ರೀತಿಯಲ್ಲಿ ನಮ್ಮ ನಮ್ಮ ಉತ್ತರವನ್ನು ಕಂಡುಕೊಳ್ಳಬಹುದು.

ಸಿನೆಮಾ ಎಂದರೆ ಬೆಳಕು, ನೆರಳು, ಕನಸು, ವಾಸ್ತವಗಳ ಆಟ ಎಂದು ಪಿ. ಲಂಕೇಶ್ ಹೇಳಿದ್ದ ನೆನಪು. ಕಲೆಯ ಇತರ ಮಾಧ್ಯಮಗಳಲ್ಲೂ ಇವು ಇದ್ದರೂ ಸ್ಪಷ್ಟವಾಗಿ ವ್ಯಕ್ತವಾಗುವುದು ಸಿನೆಮಾದಲ್ಲಿಯೇ. ನಮ್ಮ, ನಮ್ಮ ಸಮಾಜದ ಇತಿಹಾಸ, ವರ್ತಮಾನ ಮತ್ತು ಭವಿಷ್ಯಗಳು, ಕಥೆಗಾರ ಗ್ರಹಿಸಿದಂತೆ ಸಿನೆಮಾದಲ್ಲಿ ಮೂಡಿಬರುತ್ತವೆ. ನಮ್ಮ ಸುತ್ತಲಿನ ಕಥೆಗಳು, ನಮ್ಮ ಕನಸುಗಳೇ ಕಥೆಗೆ ಸ್ಫೂರ್ತಿ. ಅಮೆರಿಕದ ಅಂದರೆ ಹಾಲಿವುಡ್ ಸಿನೆಮಾಗಳನ್ನು ನೋಡಿದರೆ, ಅವುಗಳನ್ನು ಪ್ರಭಾವಿಸುವುದು ಅವರುಗಳ ಕನಸುಗಳು. ಅಮೆರಿಕಾ ಹೊಸ ದೇಶವಾದುದರಿಂದ, ಅಲ್ಲಿರುವ ಎಲ್ಲರೂ ವಲಸಿಗರಾದುದರಿಂದ ಅವರ ಕಲ್ಪನೆಗಳೇ ಅವರ ಚಿತ್ರಗಳನ್ನು ರೂಪಿಸುತ್ತವೆ. ಅದರೊಂದಿಗೆ, ಅನೇಕ ನಿರ್ದೇಶಕರು ತಮ್ಮ ಜೀವನದ ಅನೇಕ ಹುಡುಕಾಟಗಳನ್ನು ಅವರ ಚಿತ್ರಗಳಲ್ಲಿಯೇ ಮಾಡುತ್ತಾರೆ. ಕೆಲವರು ಮನುಕುಲದ ಭವಿಷ್ಯದ ಪ್ರಶ್ನೆಗೆ ಉತ್ತರ ಹುಡುಕಿದರೆ, ಕೆಲವರು ಜೀವನದ ಸಾರ್ಥಕತೆಗೂ, ಕೆಲವರು ಮನುಷ್ಯನ, ಸಮಾಜದ ಕೆಡುಕಿನ, ಒಳ್ಳೇತನದ ಆಳದ ಪ್ರಶ್ನೆಗೆ ಉತ್ತರ ಹುಡುಕಿದರೆ, ಇನ್ನಿತರರು ದೇಶಕಾಲಗಳನ್ನು ಮೀರಲು ಪ್ರಯತ್ನಿಸುತ್ತ ಮನುಷ್ಯನ ಕಲ್ಪನಾಶಕ್ತಿಯನ್ನೇ ಒರೆಗೆ ಹಚ್ಚುತ್ತಾರೆ.

ಇದು ಹಾಲಿವುಡ್. ವಿಶ್ವದ ಎಲ್ಲೆಡೆ ಪ್ರಸಿದ್ಧವಾಗಿರುವ ಹಾಲಿವುಡ್ ಸಿನೆಮಾಗಳಿಗೆ ಕೆಲವು ದೇಶಗಳಲ್ಲಿ ಪ್ರವೇಶವಿಲ್ಲ. (ಈಗ ಇಂಟರ್‍ನೆಟ್ ಬಂದ ಮೇಲೆ ಪರಿಸ್ಥಿತಿ ಬೇರೆ ಆಗಿರಬಹುದು). ಅಂತಹ ಒಂದು ದೇಶ ಇರಾನ್. ವಿಶ್ವದಲ್ಲಿ ಯುರೋಪಿಯನ್ ಮತ್ತು ಹಾಲಿವುಡ್ ಸಿನೆಮಾಗಳ ನಂತರ ಹೆಚ್ಚು ಪ್ರಸಿದ್ಧವಿರುವ ಸಿನೆಮಾಗಳು ಇರಾನಿನ ಸಿನೆಮಾಗಳು. ಹಾಲಿವುಡ್ ಅಲ್ಲಿಗೆ ತಲುಪದಿರುವುದು ಅಲ್ಲಿ ಒಳ್ಳೇ ಪರಿಣಾಮವೇ ಬೀರಿದೆ. ಆ ಚಿತ್ರಗಳು, ಅಲ್ಲಿಯ ನಿರ್ದೇಶಕರಿಗೆ ಅನುಕರಿಸಲು ಯಾವುದೇ ಚಿತ್ರಗಳಿರಲಿಲ್ಲ. ಅಲ್ಲಿಯ ನೋಡುಗರಿಗೂ ತಮ್ಮ ಚಿತ್ರಗಳಿಂದ ಇಂತಹದ್ದೇ ಆದ ನಿರೀಕ್ಷೆಗಳಿರಲಿಲ್ಲ. ಹಾಗಾಗಿ, ಅವರು ತಮ್ಮ ಕಥೆಗಳನ್ನೇ ಹೇಳಲು ಪ್ರಾರಂಭಿಸಿದರು. ಅಲ್ಲಿ ತಾಂತ್ರಿಕತೆ ಪ್ರದರ್ಶನವಿಲ್ಲ, ಸಾಹಸದೃಶ್ಯಗಳಿಲ್ಲ, ಹಾಡುಗಳಿಲ್ಲ, ಕುಣಿತವಿಲ್ಲ, ಸೆನ್ಸಾರ್ ಕಾರಣದಿಂದ ಲೈಂಗಿಕ ದೃಶ್ಯ ಬಿಡಿ, ತಲೆಗೆ ಸ್ಕಾರ್ಫ್ ಹಾಕದ ಮಹಿಳೆಯರಿಲ್ಲ. ಈ ಇತಿಮಿತಿಗಳೇ ಇರಾನಿನ ಸಿನೆಮಾಗೆ ವರದಾನವಾದವು, ಅಥವಾ ಅಲ್ಲಿಯ ನಿರ್ದೇಶಕರು ವರದಾನವಾಗಿ ಬಳಸಿಕೊಂಡು ಇರಾನಿನ ಸಮಾಜವನ್ನು ಜಗತ್ತಿನೆದುರಿಗೆ ತಂದಿಟ್ಟರು.

ಭಾರತದಲ್ಲಿ ಹಾಗಾಗಲಿಲ್ಲ. ನಮ್ಮ ಅನೇಕ ಶ್ರೇಷ್ಠ ನಿರ್ದೇಶಕರು ಪಶ್ಚಿಮದಿಂದ ಪ್ರಭಾವಿತರಾದವರು. ಅದರಿಂದ ಅನೇಕ ಒಳ್ಳೆಯ ಚಿತ್ರಗಳೂ, ಅದಕ್ಕಿಂತ ಹೆಚ್ಚು ಕೆಟ್ಟ ಚಿತ್ರಗಳು ಮೂಡಿ ಬಂದವು. ನಮ್ಮ ಅನೇಕ ಚಿತ್ರಗಳಿಗೆ ಇತರ ಚಿತ್ರಗಳೇ ಸ್ಫೂರ್ತಿ. ಜೀವನವು ಕಲೆಗೆ ಸ್ಫೂರ್ತಿಯಾಗಿ, ಕಲೆಯು ಜೀವನಕ್ಕೆ ಸ್ಫೂರ್ತಿಯಾಗಬೇಕು ಎನ್ನುವುದು ನಮ್ಮ ಚಿತ್ರರಂಗಕ್ಕೆ ಅಷ್ಟು ಅನ್ವಯವಾಗಲಿಲ್ಲ. 50 ಅಥವಾ 60ರ ದಶಕದಲ್ಲಿ ಸಿನೆಮಾಗಳು ಜನಪ್ರಿಯವಾಗತೊಡಗಿದಾಗ ನಮ್ಮ ಸಮಾಜವೇ ಭಿನ್ನವಾಗಿತ್ತು. ಮನರಂಜನೆಯ ಸಾಧನಗಳು ಇದ್ದವಾದರೂ ಸಿನೆಮಾದ ಆಗಮನ ಸಮಾಜದಲ್ಲಿ ಸಂಚಲನ ಮೂಡಿಸಿತು. ಬೆಳ್ಳಿ ಪರದೆಯ ಮೇಲೆ ಚಲಿಸುವ ಚಿತ್ರಗಳನ್ನು ನೋಡುವುದೇ ಮನರಂಜನೆಯಾಗಿತ್ತು, ಅಂತಹ ಸಂದರ್ಭದಲ್ಲಿ ಪೌರಾಣಿಕ, ಸಾಮಾಜಿಕ ಚಿತ್ರಗಳೂ, ಸಕಲಗುಣಸಂಪನ್ನ ನಾಯಕನನ್ನು ದೊಡ್ಡ ಪರದೆಯ ಮೇಲೆ ನೋಡುವುದು ಎಷ್ಟು ಖುಷಿ ಕೊಟ್ಟಿರಬಹುದು ಎನ್ನುವುದು ನಮಗೆ ಈಗ ಊಹಿಸಲೂ ಆಗದು. ಆದರೆ ಆ ಕಾಲಘಟ್ಟ ಮುಗಿದಿದೆ. ಮೊಬೈಲ್ ಪರದೆಯ ಮೇಲೇ ಸಿನೆಮಾ ನೋಡಬಹುದು, ವಿಶ್ವದ ಶ್ರೇಷ್ಠ ಸಾಹಸ ದೃಶ್ಯಗಳನ್ನು ನಮ್ಮ ಕೈಅಳತೆಯಲ್ಲಿವೆ, ಎಲ್ಲಾ ಬಗೆಯ ಚಿತ್ರಗಳ ಶ್ರೇಷ್ಠ ಕೊಡುಗೆಗಳನ್ನು ಬೇಕಾದಾಗ ನೋಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಎಂತ ಚಿತ್ರಗಳನ್ನು ಮಾಡಬೇಕು? ಯಾವ ಕಥೆಗಳನ್ನು ಹೇಳುವುದು? ನನಗೆ ಸಿಕ್ಕಿರುವ ಉತ್ತರ; ನಮ್ಮ ಕಥೆಗಳು, ನಮ್ಮ ಬದುಕು, ನಮ್ಮ ಭಾಷೆ, ಸಂಸ್ಕೃತಿ, ಪ್ರದೇಶದ ನಮ್ಮೊಳಗೆ ಹುದುಗಿರುವ ಕಥೆಗಳು. ಒಳಗಿನಿಂದ ಬಂದ ಕಥೆಗಳಿಗೆ ಯಾವುದೇ ಕಾಂಪಿಟೇಷನ್ ಇರುವುದಿಲ್ಲ.

ಇದನ್ನು ಓದಿರಿ ಪರದೆಯ ಮೇಲೆ ವರ್ಲ್ಡ್ ವಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...