ಜಮ್ಮುಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡದ (ಎಸ್ಐಟಿ) ಆರು ಸದಸ್ಯರ ವಿರುದ್ಧ ಜಮ್ಮುಕಾಶ್ಮೀರ ನ್ಯಾಯಾಲಯ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಎಸ್ಐಟಿ ಅಧಿಕಾರಿಗಳು, ನಕಲಿ ಸಾಕ್ಷ್ಯ ಸಿದ್ಧಪಡಿಸಿರುವುದು, ಅಕ್ರಮ ಬಂಧನ, ಸುಳ್ಳು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಕಸ್ಟಡಿಗೆ ಕರೆಯಿಸಿ, ಸಾಕ್ಷಿದಾರರ ಮೇಲೆ ಚಿತ್ರಹಿಂಸೆ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆಂಬ ಆರೋಪ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಎಫ್ಐಆರ್ ದಾಖಲಿಸುವಂತೆ ನಿರ್ದೇಶಿಸಿದೆ.
ಪ್ರಕರಣದ ಸಾಕ್ಷಿದಾರರಾದ ಸಚಿನ್ ಶರ್ಮಾ, ನೀರಜ್ ಶರ್ಮಾ, ಸಾಹಿಲ್ ಶರ್ಮಾರಿಗೆ ವಿಚಾರಣೆ ಹೆಸರಲ್ಲಿ ಹಿಂಸಿಸಲಾಗಿತ್ತು. ಅಲ್ಲದೇ ಕಥುವಾ ಮತ್ತು ಸಾಂಬಾ ಜಿಲ್ಲೆಯ ನಿವಾಸಿಗಳಾದ ಸಾಕ್ಷಿದಾರರು, ವಿಚಾರಣೆ ವೇಳೆ ಜಮ್ಮುವಿನಲ್ಲಿ ನಡೆದ ದಂಗೆಯ ಬಗ್ಗೆ ಡಿಸೆಂಬರ್ ೨೪ ರಂದು ದೂರು ದಾಖಲಿಸಲಾಗಿತ್ತು. ಆದರೂ ಪೊಲೀಸರು ತನಿಖೆ ನಡೆಸಲಿಲ್ಲ ಎಂದು ಹೇಳಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸಾಕ್ಷಿದಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆ ೬ ಅಧಿಕಾರಿಗಳಾದ ರಮೇಶ್ಕುಮಾರ್, ಪಿರ್ಜಾಡಾ ನವೀದ್, ಶತಾಂಬರಿ ಶರ್ಮಾ, ನಿಸಾರ್ ಹುಸೇನ್, ಅಲಿಯಾಸ್ ವಾನಿ, ಕೆವಾಲ್ ಕಿಶೋರ್ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಸಿಆರ್ಸಿಪಿಸಿಯ ಸೆಕ್ಷನ್ ೧೫೬(೩) ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಜಮ್ಮುವಿನ ಎಸ್ಎಸ್ಪಿ, ಆರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ನಿರ್ದೇಶಿಸಿದೆ.